ರಾಜ್ಯದಲ್ಲಿ ಕೆಲವೆಡೆ ಮಳೆಯಾಗಲಿದೆ. ಇನ್ನೂ ಕೆಲವೆಡೆ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರು (ನ.04): ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ನ.7ರವರೆಗೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನ.4 ಹಾಗೂ 7ರಂದು ಅಲ್ಲಲ್ಲಿ ತುಂತುರು ಮಳೆ ಬೀಳಲಿದೆ. ನ.5 ಮತ್ತು 6ರಂದು ಪುನಃ ಇದೇ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಸುರಿಯಬಹುದು. ತಾಪಮಾನ ಹೆಚ್ಚಿರುವ ಕಾರಣ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ನ. 7ರವರೆಗೂ ಒಣ ಹವೆಯ ವಾತಾವರಣ ಮುಂದುವರಿಯಲಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನ.4, 5 ಮತ್ತು 6ರಂದು ಕೆಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಲಕ್ಷಣಗಳಿದ್ದರೆ, ನ.7ರಂದು ಇದೇ ಭಾಗದಲ್ಲಿ ಅಲ್ಲಲ್ಲಿ ತುಂತುರು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
2 ದಿನ ರಾಜ್ಯದಲ್ಲಿ ಭಾರಿ ಹಿಂಗಾರು ಮಳೆ : ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ .
ರಾಜ್ಯದಲ್ಲಿ ನ.3ರ ಬೆಳಗ್ಗೆ 8.30ಕ್ಕೆ ಕೊನೆಯಾದ ಹಿಂದಿನ 24 ಗಂಟೆಯಲ್ಲಿ ಕೊಡಗು ಜಿಲ್ಲೆಯ ಭಾಗಮಂಡಲ ಮತ್ತು ಚಾಮರಾಜನಗರದ ಬಂಡಿಪುರ ತಲಾ 2 ಸೆಂ.ಮೀ, ಕೊಡಗಿನ ವಿರಾಜಪೇಟೆ ಮತ್ತು ಕುಶಾಲನಗರ, ಹಾಸನದ ಕೂಕನೂರು ಮತ್ತು ಮೈಸೂರಿನಲ್ಲಿ ತಲಾ ಒಂದು ಸೆಂ.ಮೀ ಮಳೆ ಬಿದ್ದಿದೆ.
ರಾಜ್ಯದ ಬಹುತೇಕ ಕಡೆಗಳಲ್ಲಿ ತಾಪಮಾನ ಹೆಚ್ಚಿದೆ. ಬೀದರ್ನಲ್ಲಿ ಕನಿಷ್ಠ 15.4 ಡಿಗ್ರಿಸೆಲ್ಸಿಯಸ್ ದಾಖಲಾಗಿದೆ.