ದಾವಣಗೆರೆ: 1 ಕೋಟಿಗೆ ಜಮೀನು ಮಾರಿದ್ದ ವರ್ತಕನ ವಾಹನ ಅಡ್ಡಗಟ್ಟಿ ₹38 ಲಕ್ಷ ದರೋಡೆ! ಹಣದ ಚೀಲವೆಂದು ಬಟ್ಟೆಗಂಟು ಹೊತ್ತೊಯ್ದರು!

Published : Mar 28, 2026, 03:40 PM IST
Money

ಸಾರಾಂಶ

ಹೊನ್ನಾಳಿ ಬಳಿ ಜಮೀನು ಮಾರಾಟದ ಹಣದೊಂದಿಗೆ ಸಾಗುತ್ತಿದ್ದ ವರ್ತಕನ ಓಮಿನಿ ವಾಹನವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಹಲ್ಲೆ ನಡೆಸಿ ₹38 ಲಕ್ಷ ದರೋಡೆಮಾಡಿದ್ದಾರೆ. ಘಟನೆಯ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಹೊನ್ನಾಳಿ: ಜಮೀನು ಮಾರಾಟ ಮಾಡಿದ ಹಣದೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಓಮಿನಿ ವಾಹನ ತಡೆದು, ಹಲ್ಲೆ ನಡೆಸಿ ₹38 ಲಕ್ಷ ನಗದು, ಮೊಬೈಲ್‌ ದರೋಡೆ ಮಾಡಿರುವ ಘಟನೆ ಹೊನ್ನಾಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಗಡಿಭಾಗದ ಅರಕೆರೆ ಎ.ಕೆ. ಕಾಲೋನಿ ಸಮೀಪ ಶುಕ್ರವಾರ ಮುಂಜಾನೆ 4 ಗಂಟೆ ಹೊತ್ತಿಗೆ ನಡೆದಿದೆ. ಈ ಬಗ್ಗೆ ಹೊನ್ನಾಳಿ ಪೊಲೀಸ್‌ ಠಾಣೆಯ ಪಿಎಸ್‌ಐ ನಿರ್ಮಲ ದೂರು ದಾಖಲಿಸಿಕೊಂಡಿದ್ದಾರೆ.

ಭದ್ರಾವತಿ ತಾಲೂಕಿನ ಮೈದೊಳಲು ಮಲ್ಲಾಪುರ ಗ್ರಾಮದ ಕಿರಾಣಿ ವರ್ತಕ ಮಾಲತೇಶ್ ಹಣ ಕಳೆದುಕೊಂಡ ದುರ್ದೈವಿ. ಮೂಲತಃ ಹೊನ್ನಾಳಿ ತಾ. ಹೊಸಹಳ್ಳಿಯ 2ನೇ ಕ್ಯಾಂಪ್‌ ಸ್ವಂತ ಊರಾಗಿದ್ದು, ಹಲವಾರು ವರ್ಷದಿಂದ ಮೈದೊಳಲು ಮಲ್ಲಾಪುರದಲ್ಲಿ ನೆಲೆಸಿದ್ದಾರೆ.

10.58 ಎಕರೆ ಜಮೀನು ಮಾರಿದ್ದರಿಂದ ₹1.21 ಕೋಟಿ ಬಂದಿತ್ತು

ಹೊಸಪೇಟೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೇರ ಗ್ರಾಮದಲ್ಲಿದ್ದ ತನ್ನ 10 ಎಕರೆ 58 ಸೆಂಟ್ಸ್ ಜಮೀನನ್ನು ಮಾಲತೇಶ್‌ ಹೊಸಪೇಟೆಯ ಡಾಕ್ಟರ್ ಒಬ್ಬರಿಗೆ ಮಾರಾಟ ಮಾಡಿದ್ದರು. ಜಮೀನು ಮಾರಾಟದ ₹1.21 ಕೋಟಿ ಹಣವನ್ನು ಮರಿಯಮ್ಮನಹಳ್ಳಿಯಲ್ಲಿ ಪಡೆದುಕೊಂಡಿದ್ದ ಮಾಲತೇಶ್‌ ಅವರು, ಹೊಸಪೇಟೆಯ ಬಾಬುಲಾಲ್ ಹತ್ತಿರ ತಾವು ಮಾಡಿದ್ದ ₹36 ಲಕ್ಷ ಸಾಲಕ್ಕೆ ಹಣ ಪಾವತಿ ಮಾಡಿದ್ದಾರೆ.

ಬಳಿಕ ರಿಜೆಸ್ಟ್ರೇಷನ್ ಇತರೆ ಖರ್ಚುಗಳನ್ನು ಕಳೆದು ಉಳಿದಿದ್ದ ₹76 ಲಕ್ಷಗಳನ್ನು ಮಾಲತೇಶ್‌ ಪ್ರತ್ಯೇಕ ಚೀಲಗಳಲ್ಲಿ ಗಂಟುಕಟ್ಟಿಕೊಂಡಿದ್ದರು. ಒಂದು ಚೀಲದಲ್ಲಿ ₹38 ಲಕ್ಷ ಹಾಗೂ ಮತ್ತೊಂದು ಚೀಲದಲ್ಲಿ ₹36 ಲಕ್ಷ ಹಾಗೂ ತನ್ನ ಜೇಬಿನಲ್ಲಿ ₹2 ಲಕ್ಷ ಇಟ್ಟುಕೊಂಡಿದ್ದರು. ಬಳಿಕ ಮೈದೊಳಲು ಮಲ್ಲಾಪುರದ ಸ್ನೇಹಿತ ಮಾನಾಚಾರಿ ಜತೆ ಓಮಿನಿಯಲ್ಲಿ ಹರಪನಹಳ್ಳಿ, ಹರಿಹರ ಮಾರ್ಗವಾಗಿ ಬರುತ್ತಿದ್ದರು. ಈ ವೇಳೆ ಮಲೇಬೆನ್ನೂರು ಬಳಿ ಹಿಂದಿನಿಂದ ಬರುತ್ತಿದ್ದ ಬೂದು (ಗ್ರೇ) ಬಣ್ಣದ ಕಾರು ವರ್ತಕ ಮಾಲತೇಶ್‌ ಇದ್ದ ಓಮಿನಿ ವಾಹನಕ್ಕೆ ಉಜ್ಜಿಕೊಂಡು ಸಾಗಿದೆ.

ಈ ಘಟನೆಯಿಂದ ಮಾಲತೇಶ ಹಾಗೂ ಮಾನಾಚಾರಿ ಭಯಗೊಂಡು ತಮ್ಮ ವಾಹನವನ್ನು ಮತ್ತಷ್ಟು ಜೋರಾಗಿ ಚಾಲನೆ ಮಾಡಿದ್ದಾರೆ. ಆಗ ಬೂದು ಬಣ್ಣದ ಕಾರು ಮತ್ತೆ ಜೋರಾಗಿ ಬಂದು ಒಮಿನಿ ವಾಹನಕ್ಕೆ ಅಡ್ಡಗಟ್ಟಿ ನಿಲ್ಲಿಸಿ, ಕಾರಿನಲ್ಲಿದ್ದ ನಾಲ್ವರು ಬಂದು ತಮ್ಮೊಂದಿಗೆ ವ್ಯಾಜ್ಯ ತೆಗೆದಿದ್ದಾರೆ. ನಮ್ಮ ಕಾರಿಗೆ ಉಜ್ಜಿಕೊಂಡು ಬಂದಿದ್ದಿರಾ, ಒಮಿನಿಯಿಂದ ಕೆಳಗೆ ಇಳಿಯಿರಿ ಎಂದು ಮಾಲತೇಶ ಹಾಗೂ ಮಾನಾಚಾರಿ ಅವರಿಗೆ ಹೆದರಿಸಿದ್ದಾರೆ. ಇಬ್ಬರೂ ಓಮಿನಿಯಿಂದ ಹೊರಬರುತ್ತಿದ್ದಂತೆ ಹಲ್ಲೆ ನಡೆಸಿ, ಹಣ ಮತ್ತಿತರ ವಸ್ತುಗಳನ್ನು ದರೋಡೆ ಮಾಡಿದ್ದಾರೆ. ಘಟನೆ ಬಗ್ಗೆ ವರ್ತಕ ಮಾಲತೇಶ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಣದ ಚೀಲವೆಂದು ತಿಳಿದು ಬಟ್ಟೆಗಂಟು ಹೊತ್ತೊಯ್ದರು!

ದರೋಡೆ ಕೋರರಿಂದ ತಪ್ಪಿಸಿಕೊಳ್ಳಲು ಮಾಲತೇಶ ಹಾಗೂ ಮಾನಾಚಾರಿ ಸ್ವಲ್ಪ ದೂರ ಓಡಿಹೋಗುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ನಾಲ್ವರು ದರೋಡೆಕೋರರೂ ಒಮಿನಿ ವಾಹನದ ಬಳಿ ಬಂದು ₹38 ಲಕ್ಷವಿದ್ದ ಚೀಲ ಹಾಗೂ ಬಟ್ಟೆ, ಭೂದಾಖಲೆಗಳಿದ್ದ ಮತ್ತೊಂದು ಚೀವವನ್ನು ಹಣದ ಚೀಲವೆಂದು ತಿಳಿದು ಎತ್ತಿಕೊಂಡು ಪರಾರಿಯಾಗಿದ್ದಾರೆ. ದರೋಡೆಕೋರರು ತೆರಳಿದ ತಕ್ಷಣ ತಮ್ಮ ವಾಹನ ಬಳಿ ಬಂದು ನೋಡಿದಾಗ ಒಮಿನಿಯ ಸೀಟ್ ಕೆಳಗೆ ₹36 ಲಕ್ಷವಿದ್ದ ಚೀಲ ಮಾತ್ರ ಬಿದ್ದಿತ್ತು. ಅನಂತರ ಮಲೇಬೆನ್ನೂರಿನ ಬಂಧುಗಳ ಮನೆಗೆ ತೆರಳಿ ಕಳ್ಳರಿಂದ ಬಚಾವಾದ ಹಣವನ್ನಿಟ್ಟು ಹೊನ್ನಾಳಿ ಪೊಲೀಸ್‌ ಠಾಣೆಗೆ ಬಂದು ಮಾಲತೇಶ ಪೊಲೀಸರಿಗೆ ತಿಳಿಸಿ, ದೂರು ದಾಖಲು ಮಾಡಿದ್ದಾರೆ.

ಎಸ್ಪಿ ಭೇಟಿಃ

ಒಮಿನಿ ವಾಹನವನ್ನು ಅಡ್ಡಗಟ್ಟಿ ₹38 ಲಕ್ಷ ದರೋಡೆ ಘಟನೆ ತಿಳಿದ ತಕ್ಷಣ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಹಾಗೂ ಚನ್ನಗಿರಿ ಡಿವೈಎಸ್ಪಿ ರುದ್ರೇಶ್ ಉಜ್ಜಿನಕೊಪ್ಪ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಈ ಸಂದರ್ಭ ಪತ್ರಿಕೆಯೊಂದಿಗೆ ಮಾತನಾಡಿದ ಎಸ್ಪಿ ಎಚ್.ಟಿ.ಶೇಖರ್ ಅವರು, ದರೋಡೆಕೋರರ ಪತ್ತೆಗೆ ಚನ್ನಗಿರಿ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದೇವೆ. ಶೀಘ್ರವೇ ದರೋಡೆಕೋರರನ್ನು ಬಂಧಿಸುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹೊನ್ನಾಳಿ ಇನ್ ಚಾರ್ಚ್ ಸಿಪಿಐ ರವಿ, ಇತರೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು.

PREV
Read more Articles on
click me!

Recommended Stories

ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭಕ್ಕೆ ಕ್ಷಣಗಣನೆ: ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್!
ಸ್ವಾಮೀಜಿ, ಫಾದರ್, ಮೌಲ್ವಿ ಸಮ್ಮುಖದಲ್ಲಿ ಡಿಕೆ ಶಿವಕುಮಾರ್ ಪ್ರಮಾವಚನ, ಸರ್ಕಾರದಿಂದ ಆಹ್ವಾನ