
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆ ಇತಿಹಾಸ ಸಂಶೋಧಕರ ಪಾಲಿನ ಅಕ್ಷಯ ಪಾತ್ರೆಯಾಗುತ್ತಲೇ ಇದೆ. ಮೌರ್ಯ ಸಾಮ್ರಾಜ್ಯದ ಕುರುಹುಗಳನ್ನು ಹೊಂದಿರುವ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಇದೀಗ ಮತ್ತೊಂದು ಅಪರೂಪದ ಬಂಡೆಗಲ್ಲು ಶಾಸನ ಪತ್ತೆಯಾಗಿದ್ದು, ಇತಿಹಾಸ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.
ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ಸುಕ್ರದಪ್ಪನ ಬೆಟ್ಟದ ಹೊಲದಲ್ಲಿ ಈ ಹೊಸ ಬಂಡೆಗಲ್ಲು ಶಾಸನ ಪತ್ತೆಯಾಗಿದೆ. ವಿಶೇಷವೆಂದರೆ, ಇದೇ ನಿಟ್ಟೂರು ಗ್ರಾಮವು ಈ ಹಿಂದೆ ಪತ್ತೆಯಾಗಿದ್ದ ಪ್ರಖ್ಯಾತ 'ಅಶೋಕ ಶಿಲಾಶಾಸನ'ದಿಂದಾಗಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಈಗ ಪತ್ತೆಯಾಗಿರುವ ಹೊಸ ಶಾಸನವು ಅಶೋಕ ಶಿಲಾಶಾಸನವಿರುವ ಸ್ಥಳದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ ಎಂಬುದು ಗಮನಾರ್ಹ.
ಹೊಲದಲ್ಲಿರುವ ಬಂಡೆಯೊಂದರ ಮೇಲೆ ಪ್ರಾಚೀನ ಲಿಪಿಯಲ್ಲಿ ಏಳು ಸಾಲುಗಳನ್ನು ಬರೆಯಲಾಗಿದೆ. ಶಾಸನದ ಲಿಪಿ ಮತ್ತು ಸ್ವರೂಪವನ್ನು ಗಮನಿಸಿದರೆ, ಇದು 7ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದಿಂದ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ ಇತಿಹಾಸವಾಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಈ ಪ್ರದೇಶವು ಮೌರ್ಯರ ಕಾಲದ ಆಳ್ವಿಕೆಯ ವ್ಯಾಪ್ತಿಗೆ ಒಳಪಟ್ಟಿರುವುದರಿಂದ, ಈ ಶಾಸನವು ಹಲವು ಮಹತ್ವದ ಐತಿಹಾಸಿಕ ಕೊಂಡಿಗಳನ್ನು ಬೆಸೆಯುವ ಸಾಧ್ಯತೆಯಿದೆ.
ಧಾರವಾಡದ ಖ್ಯಾತ ಲಿಪಿತಜ್ಞ ಮಾರುತಿ ಭಜಂತ್ರಿ ನೇತೃತ್ವದ ತಂಡವು ಈ ಬಂಡೆಗಲ್ಲು ಶಾಸನವನ್ನು ಪತ್ತೆಹಚ್ಚಿದೆ. ಪ್ರಸ್ತುತ ಗಂಗಾವತಿಯ ಇತಿಹಾಸ ಸಂಶೋಧಕ ಶರಣಬಸಪ್ಪ ಕೋಲ್ಕಾರ್ ಅವರ ಮಾರ್ಗದರ್ಶನದಲ್ಲಿ ಈ ಶಾಸನದ ಲಿಪಿಯನ್ನು ಓದುವ ಮತ್ತು ಅದರ ಕಾಲಘಟ್ಟವನ್ನು ನಿಖರವಾಗಿ ಗುರುತಿಸುವ ಅಧ್ಯಯನ ನಡೆಯುತ್ತಿದೆ.
ನಿಟ್ಟೂರು ಪ್ರದೇಶವು ಮೌರ್ಯರು, ಚಾಲುಕ್ಯರು ಮತ್ತು ರಾಷ್ಟ್ರಕೂಟರ ಸಂಸ್ಕೃತಿಗಳ ಸಂಗಮವಾಗಿರುವುದರಿಂದ, ಈ ಹೊಸ ಶಾಸನವು ಅಂದಿನ ಕಾಲದ ಸಾಮಾಜಿಕ, ರಾಜಕೀಯ ಅಥವಾ ಧಾರ್ಮಿಕ ಸ್ಥಿತಿಗತಿಗಳ ಮೇಲೆ ಹೊಸ ಬೆಳಕು ಚೆಲ್ಲುವ ನಿರೀಕ್ಷೆಯಿದೆ. ಈ ಶಾಸನ ಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲ ಗ್ರಾಮಸ್ಥರು ಬೆಟ್ಟದ ಹೊಲಕ್ಕೆ ಬಂದು ಶಾಸನವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.