
ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ 17ನೇ ಶತಮಾನಕ್ಕೆ ಸೇರಿದ ಅತ್ಯಂತ ಅಪರೂಪದ ಶಿಲಾಶಾಸನವೊಂದು ಪತ್ತೆಯಾಗಿದ್ದು, ಇತಿಹಾಸ ಪ್ರೇಮಿಗಳು ಹಾಗೂ ಸಂಶೋಧಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸ್ಥಳೀಯ ಇತಿಹಾಸವನ್ನು ಪುನರ್ ನಿರ್ಮಿಸುವ ದೃಷ್ಟಿಯಿಂದ ಈ ಶಾಸನವು ಅತ್ಯಂತ ಮಹತ್ವದ ಮತ್ತು ಮೌಲ್ಯಯುತ ದಾಖಲೆಯಾಗಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಿಂದ ಸುಮಾರು 1.5 ಕಿ.ಮೀ ದೂರದಲ್ಲಿರುವ ವೀರಾಂಜನೇಯ ಕ್ಯಾಂಪ್ಗೆ ಹೊಂದಿಕೊಂಡಿರುವ ಸಿದ್ದನಗೌಡ ಎಂಬುವವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಬುಧವಾರ ಈ ಶಾಸನ ಪತ್ತೆಯಾಗಿದೆ. ಜಮೀನಿನಲ್ಲಿದ್ದ ದೊಡ್ಡದೊಂದು ಹಾಸು ಬಂಡೆಯ ಮೇಲೆ ಈ ಐತಿಹಾಸಿಕ ದಾಖಲೆಯನ್ನು ಕೆತ್ತಲಾಗಿದೆ. ಬಂಡೆಯ ಮೇಲೆ ಸುಂದರವಾದ ನಂದಿ ಮೂರ್ತಿಯ ಶಿಲ್ಪವನ್ನು ಕೆತ್ತಲಾಗಿದ್ದು, ಆ ಶಿಲ್ಪದ ಸುತ್ತಲೂ ಹಾಗೂ ಕೆಳಭಾಗದಲ್ಲಿ 8 ಸಾಲುಗಳಿರುವ ಸುದೀರ್ಘ ಶಾಸನವನ್ನು ಬರೆಯಲಾಗಿದೆ.
ಈ ಶಾಸನದ ಲಿಪಿಯ ವಿಕಾಸ ಮತ್ತು ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು 17ನೇ ಶತಮಾನಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಜ್ಞರು ಪ್ರಾಥಮಿಕ ಅಂದಾಜು ಮಾಡಿದ್ದಾರೆ. ಆ ಕಾಲಘಟ್ಟದಲ್ಲಿ ಬಳ್ಳಾರಿ ಮತ್ತು ಕುರುಗೋಡು ಸುತ್ತಮುತ್ತಲಿನ ಭಾಗಗಳಲ್ಲಿ ಆಳ್ವಿಕೆ ನಡೆಸುತ್ತಿದ್ದ ಸ್ಥಳೀಯ ಪಾಳೆಗಾರರ ರಾಜವಂಶ ಅಥವಾ ಅವರ ಆಡಳಿತಾವಧಿಗೆ ಈ ಶಾಸನವು ಸಂಬಂಧಿಸಿರಬಹುದು ಎಂದು ಹೇಳಲಾಗಿದೆ.
ಈ ಕುರಿತು ಮೈಸೂರು ಪ್ರಾಚ್ಯವಸ್ತು ಇಲಾಖೆಯ ಸಹಾಯಕ ಅಧೀಕ್ಷಕರು ಹಾಗೂ ಶಾಸನ ತಜ್ಞರಾದ ಅನಿಲಕುಮಾರ್ ಅವರು ಮಾತನಾಡಿ, ಸದ್ಯ ಮಣ್ಣಿನಲ್ಲಿ ಹೂತುಹೋಗಿರುವ ಇಂತಹ ಹಳೆಯ ಶಾಸನಗಳನ್ನು ಸಂಪೂರ್ಣವಾಗಿ ಹೊರತೆಗೆದು, ಸ್ವಚ್ಛಗೊಳಿಸಿ ಆಳವಾದ ಅಧ್ಯಯನಕ್ಕೆ ಒಳಪಡಿಸಿದರೆ, ಈ ಭಾಗದ ಸ್ಥಳೀಯ ಇತಿಹಾಸ, ಸಂಸ್ಕೃತಿ ಮತ್ತು ಅಂದಿನ ಆಡಳಿತ ವ್ಯವಸ್ಥೆಯ ಕುರಿತು ಮತ್ತಷ್ಟು ರೋಚಕ ಹಾಗೂ ಮಹತ್ವದ ಮಾಹಿತಿಗಳು ಬೆಳಕಿಗೆ ಬರಲಿವೆ ಎಂದು ತಿಳಿಸಿದ್ದಾರೆ.
ತಮ್ಮ ಗ್ರಾಮದ ಜಮೀನಿನಲ್ಲಿ ಪತ್ತೆಯಾಗಿರುವ ಈ ಅಪರೂಪದ ಐತಿಹಾಸಿಕ ಸಂಕೇತವನ್ನು ಸಂರಕ್ಷಿಸಬೇಕು ಎಂಬ ಧ್ವನಿ ಈಗ ಸ್ಥಳೀಯವಾಗಿ ಬಲವಾಗಿ ಕೇಳಿಬರುತ್ತಿದೆ. ಈ ಶಾಸನವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ಅಡಗಿರುವ ಇತಿಹಾಸದ ಸತ್ಯಗಳನ್ನು ಸಾರ್ವಜನಿಕರ ಮುಂದೆ ತರಲು ಜಿಲ್ಲಾಡಳಿತ, ಪುರಾತತ್ವ ಇಲಾಖೆ ಹಾಗೂ ಸ್ಥಳೀಯ ಸರ್ಕಾರ ತಕ್ಷಣವೇ ಮುಂದಾಗಬೇಕು ಎಂದು ಗ್ರಾಮದ ಪ್ರಮುಖರಾದ ಎರಿಸ್ವಾಮಿ, ಶ್ರೀನಿವಾಸ, ಸೋಮಶೇಖರ್, ಸಿದ್ದನಗೌಡ, ಗಾದಿಲಿಂಗನಗೌಡ ಮತ್ತು ಗಣೇಶ್ ಜಂಟಿಯಾಗಿ ಒತ್ತಾಯಿಸಿದ್ದಾರೆ. ಇತಿಹಾಸದ ಕೊಂಡಿಯಾಗಿರುವ ಈ ಶಾಸನವು ಮುಂದಿನ ದಿನಗಳಲ್ಲಿ ಕುರುಗೋಡು ತಾಲೂಕಿನ ಸಾಂಸ್ಕೃತಿಕ ಹಿನ್ನೆಲೆಗೆ ಹೊಸ ಆಯಾಮ ನೀಡುವ ಸಾಧ್ಯತೆ ದಟ್ಟವಾಗಿದೆ.