Karnataka monsoon: ಮುಂಗಾರು ಮಳೆ ಮಂದ​ಗತಿ, ರೈತರ ಸ್ಥಿತಿ ಅಧೋ​ಗತಿ!

By Kannadaprabha NewsFirst Published Jun 11, 2023, 10:16 AM IST
Highlights

ಕಳೆದೆರಡು ವರ್ಷದಿಂದ ನಿರಂತರವಾಗಿ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ಕಷ್ಟ-ನಷ್ಟಅನುಭವಿಸಿದ್ದ ರೈತರು ಇದೀಗ ಜೂನ್‌ ಆರಂಭಗೊಂಡರೂ ಕಣ್ಮರೆಯಾಗಿರುವ ಮಳೆಯಿಂದಾಗಿ ಬಿತ್ತನೆ ಕಾರ್ಯ ಅರಂಭಿಸದೇ ಮುಗಿಲು ನೋಡುವ ಪರಿಸ್ಥಿತಿಯಲ್ಲಿದ್ದಾರೆ.

ಹೊನ್ನಾಳಿ (ಜೂ.11) : ಕಳೆದೆರಡು ವರ್ಷದಿಂದ ನಿರಂತರವಾಗಿ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ಕಷ್ಟ-ನಷ್ಟಅನುಭವಿಸಿದ್ದ ರೈತರು ಇದೀಗ ಜೂನ್‌ ಆರಂಭಗೊಂಡರೂ ಕಣ್ಮರೆಯಾಗಿರುವ ಮಳೆಯಿಂದಾಗಿ ಬಿತ್ತನೆ ಕಾರ್ಯ ಅರಂಭಿಸದೇ ಮುಗಿಲು ನೋಡುವ ಪರಿಸ್ಥಿತಿಯಲ್ಲಿದ್ದಾರೆ.

ಕೊಳವೆ ಬಾವಿಗಳಲ್ಲೂ ನಿಧಾನವಾಗಿ ಆಂತರ್ಜಲ ಕೊರತೆಯಾಗುತ್ತಿದ್ದು ಇನ್ನೊಂದೆಡೆ ಅಸಮರ್ಪಕ ವಿದ್ಯುತ್‌ ಪೂರೈಕೆ ಕಾರಣ ಕೊಳವೆ ಬಾವಿ ಭರವಸೆಯ ಮೇಲೂ ಬಿತ್ತನೆ ಮಾಡಲು ಹಿಂದೇಟು ಹಾಕುವಂತಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಕೂಡ ಮಳೆ ಬಿದ್ದ ನಂತರವಷ್ಟೇ ಬಿತ್ತನೆ ಮಾಡುವುದು ಉತ್ತಮ ಎಂದು ಹೇಳುತ್ತಿ​ದ್ದು, ಈ ಕುರಿತು ಮಾತನಾಡಿದ ಹೊನ್ನಾಳಿ ತಾಲೂಕು ಸಹಾಯಕ ಕೃಷಿ ಅಧಿಕಾರಿ ಪ್ರತಿಮಾ ಅವರು ಈಗಾಗಲೇ ಅವಳಿ ತಾಲೂಕುಗಳ 6 ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಲ್ಲಿ ಬಿತ್ತನೆ ಬೀಜಗಳ ವಿತರಿಸಲು ಕ್ರಮಕೊಳ್ಳಲಾಗಿದೆ. ಜೊತೆಗೆ ರೈತರು ಅಧಿಕೃತ ಕಂಪನಿಗಳ ಬಿತ್ತನೆ ಬೀಜ ಖರೀದಿ ಮಾಡಬೇಕು. ಹಾಗೂ ರಶೀದಿಗಳನ್ನು ಪಡೆಯಬೇ​ಕು. ನಕಲಿ ಅಥವಾ ಕಳೆಪೆ ಬಿತ್ತನೆ ಬೀಜಗಳ ಬಗ್ಗೆ ಎಚ್ಚರವಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

 PM-Kisan Samman: ಕೇಂದ್ರದಿಂದ ಜಿಲ್ಲೆಯ ರೈತರಿಗೆ 267 ಕೋಟಿ ರೂ. : ಶೋಭಾ ಕರಂದ್ಲಾಜೆ

ಈ ಬಾರಿ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಎಲ್ಲಾ ಬೆಳೆಗಳ ಬಿತ್ತನೆ ಗುರಿ ನಿಗ​ದಿ​ಪ​ಡಿ​ಸಿ​ದೆ. ಭತ್ತ ಹೊನ್ನಾಳಿಯಲ್ಲಿ 10,150 ಹೆಕ್ಟೇರ್‌, ನ್ಯಾಮತಿ 2890 ಹೆಕ್ಟೇರ್‌, ಮೆಕ್ಕೇಜೋಳ ಹೊನ್ನಾಳಿ-13,000 ಹೆಕ್ಟೇರ್‌, ನ್ಯಾಮತಿ-13,650 ಹೆಕ್ಟೇರ್‌, ತೊಗರಿ ಹೊ​ನ್ನಾಳಿ-750 ಹೆಕ್ಟೇರ್‌, ನ್ಯಾಮತಿ-490 ಹೆಕ್ಟೇರ್‌, ಶೇಂಗಾ ಹೊನ್ನಾಳಿ-1270 ಹೆಕ್ಟೇರ್‌, ನ್ಯಾಮ​ತಿ 1850 ಹೆಕ್ಚೇರ್‌, ಹತ್ತಿ ಹೊನ್ನಾಳಿ-1150 ಹೆಕ್ಟೇರ್‌, ನ್ಯಾಮತಿ-750 ಹೆಕ್ಟೇರ್‌, ರಾಗಿ ಹೊನ್ನಾಳಿ- 550 ಹೆಕ್ಟೇರ್‌ ನ್ಯಾಮತಿ 100 ಹೆಕ್ಟೇರ್‌, ಇತರೆ ಬೆಳೆಗಳು ಹೊನ್ನಾಳಿ 1120 ಹೆಕ್ಟೇರ್‌, ನ್ಯಾಮತಿ-1265 ಹೆಕ್ಟೇ​ರ್‌ ಪ್ರದೇಶಗಳಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಅಧಿ​ಕಾ​ರಿ​ಗ​ಳು ಮಾಹಿತಿ ನೀಡಿದ್ದಾರೆ.

ಒಟ್ಟು ನಿಗದಿಯಾಗಿರುವ ಬಿತ್ತನೆ ಗುರಿ ಹೊನ್ನಾಳಿ ತಾಲೂಕಿನಲ್ಲಿ 27,990 ಹೆಕ್ಟೇರ್‌ ಹಾಗೂ ನ್ಯಾಮತಿ ತಾಲೂಕಿನಲ್ಲಿ 20,995 ಹೆಕ್ಟೇರ್‌. ಮುಂಗಾರು ಮಳೆಯ ಅಭಾವ ಎದುರಾಗಿರುವ ಕಾರಣ ನೀರಿನ ಸೌಲಭ್ಯವಿರುವ ಕೆಲವೆಡೆ 50 ಎಕರೆ ಪ್ರದೇಶದಲ್ಲಿ ಮಾತ್ರ ಮೆಕ್ಕೆಜೋಳ ಬಿತ್ತನೆಯಾಗಿದ್ದರೆ 20 ಎಕರೆಯಲ್ಲಿ ಹತ್ತಿ, 40 ಎಕರೆಯಲ್ಲಿ ಶೇಂಗಾ ಬಿತ್ತನೆಯಾಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಮಳೆ ಕೊರತೆಯಿಂದಾಗಿ ಬಿತ್ತನೆ ಕಾರ್ಯ ತೀವ್ರ ಹಿನ್ನಡೆ ಅನು​ಭ​ವಿ​ಸಿದ್ದು, ರೈತ​ರನ್ನು ಚಿಂತೆ​ಗೀಡು ಮಾಡಿ​ದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ 14ನೇ ಕಂತು ಯಾವಾಗ ಸಿಗುತ್ತೆ? ಈ ಯೋಜನೆ ಸೇರ್ಪಡೆ ಹೇಗೆ,ಅಗತ್ಯ ದಾಖಲೆಗಳು ಯಾವುವು?

ತಾಲೂಕು - ಬಿತ್ತನೆ ಗುರಿ

  • ಹೊನ್ನಾಳಿ - 27,990 ಹೆಕ್ಟೇರ್‌
  • ನ್ಯಾಮತಿ - 20,995 ಹೆಕ್ಟೇರ್‌
click me!