ಮರಾಠರ ನಾಡಲ್ಲಿ ಕನ್ನಡ ಡಿಂಡಿಮ: ಮಹಾರಾಷ್ಟ್ರದಲ್ಲಿ ‘ಹೊರನಾಡು ಕನ್ನಡ ಸಂಘಗಳ ಮಹಾಮೇಳ’

By Suvarna NewsFirst Published Dec 15, 2019, 11:03 AM IST
Highlights

ಅಕ್ಕಲಕೋಟೆಯಲ್ಲಿ ಕಾರ್ಯಕ್ರಮ| ಹೊರನಾಡಿನಿಂದ 400, ಒಳನಾಡಿನಿಂದ 100 ಪ್ರತಿನಿಧಿಗಳ ಆಗಮನ ನಿರೀಕ್ಷೆ|21ರಿಂದ ಹೊರನಾಡು ಕನ್ನಡ ಸಂಘಗಳ ಮಹಾಮೇಳ|

ಬಸವರಾಜ ಹಿರೇಮಠ 

ಧಾರವಾಡ(ಡಿ.15): ಕರ್ನಾಟಕದ ಹೊರಗೆ ಹಾಗೂ ಭಾರತದ ಬೇರೆ- ಬೇರೆ ರಾಜ್ಯಗಳಲ್ಲಿರುವ ಕನ್ನಡಿಗರ ಸಂಘಟನೆ ಬಲಪಡಿಸುವುದು ಹಾಗೂ ಅವರ ತೊಡಕು, ತೊಂದರೆಗಳನ್ನು ಅರಿತು ಅವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ‘ಹೊರನಾಡು ಕನ್ನಡ ಸಂಘಗಳ ಮಹಾಮೇಳ’ ಈ ಬಾರಿ ಮಹಾರಾಷ್ಟ್ರದ ಅಕ್ಕಲಕೋಟೆಯಲ್ಲಿ ಆಯೋಜನೆಯಾಗಿದೆ. 

ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯ ಹಿನ್ನೆಲೆ ಕಳೆದ ಬಾರಿ ಊಟಿಯಲ್ಲಿ ನಡೆಯಬೇಕಿದ್ದ 8ನೇ ‘ಹೊರನಾಡು ಕನ್ನಡ ಸಂಘಗಳ ಮಹಾಮೇಳ’ವು ಸಾಧ್ಯವಾಗಲಿಲ್ಲ. ಇದೀಗ ಡಿ. 21 ಹಾಗೂ 22 ರಂದು ಅಕ್ಕಲಕೋಟ್‌ನ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದಲ್ಲಿ 8ನೇ ಮೇಳವನ್ನು ಸಂಘಟಿಸಲಾಗಿದ್ದು, ಈಗಾಗಲೇ ಎಲ್ಲ ಸಿದ್ಥತೆಗಳು ನಡೆಯುತ್ತಿವೆ. 

ಏತಕ್ಕಾಗಿ ಈ ಮೇಳ?:

ರ್ನಾಟಕದ ಹೊರಗಿರುವ ಕನ್ನಡಿಗರು ಕರ್ನಾಟಕ ಹಾಗೂ ಕನ್ನಡದ ಪ್ರತಿನಿಧಿಗಳು. ತಾವಿದ್ದ ಸ್ಥಳದಲ್ಲಿಯೇ ದಶಕಗಳಿಂದ ಕನ್ನಡಿಗರ ಸಂಘಟನೆ ಕಟ್ಟಿಕೊಂಡು ತಮ್ಮ ಮಾತೃಭಾಷೆಗಾಗಿ ಶ್ರಮಿಸುತ್ತಿದ್ದಾರೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಆ ಸಂಘಗಳ ಬಗ್ಗೆ ಕಿಂಚಿತ್ ಗಮನ ಹರಿಸಿಲ್ಲ. ಅವರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಈ ಹಿನ್ನೆಲೆ ಡಾ. ಪಾಟೀಲ ಪುಟ್ಟಪ್ಪ ಅವರ ನೇತೃತ್ವದ ಕರ್ನಾಟಕ ವಿದ್ಯಾವರ್ಧಕ ಸಂಘವು 2010ರಿಂದ ‘ಹೊರನಾಡು ಕನ್ನಡ ಸಂಘಗಳ ಮಹಾಮೇಳ’ ಆಯೋಜಿಸುತ್ತಿದ್ದು, ನಡೆದ ಎಲ್ಲ ಏಳೂ ಮೇಳಗಳು ಯಶಸ್ವಿಯಾಗಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೇಳವನ್ನು ನಮ್ಮಲ್ಲಿ ನಡೆಸಿ ಎಂದು ದೇಶದ ಬೇರೆ ಬೇರೆ ರಾಜ್ಯಗಳ ಸಂಘಗಳು ಸಂಘವನ್ನು ದುಂಬಾಲು ಬೀಳುತ್ತಿದ್ದು, ಇದೀಗ ಅಕ್ಕಲಕೋಟೆಯಲ್ಲಿ ಮೇಳ ಅದ್ಧೂರಿಯಾಗಿ ನಡೆಯಲು ಬೇಕಾದ ಎಲ್ಲ ತಯಾರಿಗಳು ನಡೆದಿವೆ. ಗಡಿನಾಡಿನ ಭಾಗದಲ್ಲಿ ಶೈಕ್ಷಣಿಕ ಮತ್ತು ಔದ್ಯೋಗಿಕ ವಿಚಾರವಾಗಿ ಕನ್ನಡಿಗರನ್ನು ಕೇಂದ್ರೀಕರಿಸುವುದು, ಕರ್ನಾಟಕ ಹಾಗೂ ಮಹಾರಾಷ್ಟ್ರದ ಬಾಂಧವ್ಯ ಹೆಚ್ಚಿಸುವುದು, ವ್ಯವಹಾರಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿಕವಾಗಿ ಮಹಾರಾಷ್ಟ್ರದೊಂದಿಗೆ ಸಾಕಷ್ಟು ಸಂಬಂಧವಿದೆ. ಅದನ್ನು ವೃದ್ಧಿಗೊಳಿಸುವುದರ ಜತೆಗೆ ಅಖಿಲ ಭಾರತ ಮಟ್ಟದಲ್ಲಿ ಕನ್ನಡ ಸಂಘಗಳ, ಕನ್ನಡಿಗರ ಸಮಸ್ಯೆಗಳ ಬಗ್ಗೆ ಚರ್ಚೆ ಹಾಗೂ ಅವುಗಳಿಗೆ ಪರಿಹಾರ ಒದಗಿಸುವುದೇ ಈ ಮೇಳದ ಉದ್ದೇಶವಾಗಿದ್ದು, ಈ ಕುರಿತಾಗಿಯೇ ಗೋಷ್ಠಿಗಳನ್ನು ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಮಾಹಿತಿ ನೀಡಿದ್ದಾರೆ. 

ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಕುರಿತ ಮಹಾಜನ ವರದಿ ಕುರಿತ ವಿಚಾರಣೆ ಸುಪ್ರಿಂ ಕೋಟ್ ನರ್ಲ್ಲಿದ್ದು, ಆದಷ್ಟು ಶೀಘ್ರ ನ್ಯಾಯದಾನ ಆಗಬೇಕೆಂಬ ಉದ್ದೇಶವೂ ಮೇಳದ್ದಾಗಿದೆ ಎಂದ ಅವರು, ಮೇಳದಲ್ಲಿ ದೆಹಲಿ, ಮಧ್ಯಪ್ರದೇಶ, ಗುಜರಾತ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ರಾಜ್ಯಗಳ ಕನ್ನಡ ಸಂಘಗಳಿಂದ 400 ಪ್ರತಿನಿಧಿಗಳು ಆಗಮಿಸಲಿದ್ದಾರೆ. 

ರಾಜ್ಯದಿಂದ ಅಂದಾಜು 100 ಕನ್ನಡಿಗರು ಇರುತ್ತಾರೆ. ಕನ್ನಡಮ್ಮನ ಮೆರವಣಿಗೆ ಸೇರಿದಂತೆ ಸಮಾರಂಭದ ಉದ್ಘಾಟನೆ ಹಾಗೂ ವಿವಿಧ ಗೋಷ್ಠಿಗಳು ಇರುತ್ತವೆ. ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷರಾದ ಜನಮೇಜಯರಾಜೆ ವಿಜ ಯಸಿಂಹರಾಜೆ ಭೋಸಲೆ ಅವರು ಮೇಳಕ್ಕೆ ಚಾಲನೆ ನೀಡಲಿದ್ದು, ಸೊಲ್ಲಾಪೂರ ಲೋಕಸಭಾ ಸದಸ್ಯ ಜಯಸಿದ್ದೇಶ್ವರ ಸ್ವಾಮೀಜಿ ಹಾಗೂ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. 

15 ರೊಳಗೆ ನೋಂದಣಿಗೆ ಮನವಿ: 

ಕರ್ನಾಟಕ ವಿದ್ಯಾವರ್ಧಕ ಸಂಘವು ಅಖಿಲ ಭಾರತ ಹೊರನಾಡು ಕನ್ನಡ ಸಂಘಗಳ ಪ್ರತಿನಿಧಿಗಳ 8ನೇ ಮಹಾಮೇಳವನ್ನು ನಡೆಸುತ್ತಿದ್ದು, ಭಾಗವಹಿಸುವ ಸಂಘದ ಸದಸ್ಯರು ಡಿ. 15ರೊಳಗೆ ಹೆಸರು ನೀಡಬೇಕು. ಈ ಬಾರಿ ಹೊಸಬರಿಗೆ ಪ್ರಾಶಸ್ತ್ಯ ನೀಡಲಾಗುತ್ತಿದ್ದು ಮಾಹಿತಿಗೆ ದೂ. 0836- 2440283, 2436176 ಸಂಪರ್ಕಿಸಲು ಸಂಘದ ಪ್ರಕಟಣೆ ತಿಳಿಸಿದೆ.

ನಿರ್ಣಯ ಅನುಷ್ಠಾನವಾಗಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದಂತೆಯೇ ‘ಹೊರನಾಡು ಕನ್ನಡ ಸಂಘಗಳ ಮಹಾಮೇಳ’ದಲ್ಲೂ ಹೊರನಾಡಿನಲ್ಲಿ ಕನ್ನಡಿಗರ ಅಳಿವು- ಉಳಿವಿನ ಹಿನ್ನೆಲೆ ಪ್ರತಿ ಮೇಳದಲ್ಲೂ ಸರ್ವಾನುಮತದಿಂದ ಗೊತ್ತುವಳಿ, ನಿರ್ಣಯಗಳನ್ನು ಮಂಡನೆಯಾಗುತ್ತವೆ. ಅವುಗಳು ಸರ್ಕಾರಕ್ಕೂ ತಲುಪುತ್ತವೆ. ಆದರೆ, ಅನುಷ್ಠಾನ ಮಾತ್ರ ಆಗದೇ ಇರುವುದು ಹೊರನಾಡು ಸಂಘಗಳಿಗೆ ಬೇಸರ ಮೂಡಿಸಿದೆ. ಇದೀಗ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರವಾದರೂ 8ನೇ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಅನುಷ್ಠಾನ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡ ಬೇಕು ಎಂಬುದು ಸಂಘದ ಆಶಯ.

ಮಹಾಮೇಳಗಳ ವಿವರ 

ಸಮ್ಮೇಳನ  ನಡೆದ ಸ್ಥಳ 

1ನೇ ಸಮ್ಮೇಳನ ಧಾರವಾಡ 
2ನೇ ಸಮ್ಮೇಳನ ಕಾಶಿ(ವಾರಣಾಸಿ) 
3ನೇ ಸಮ್ಮೇಳನ ಮುಂಬೈ, ಡೊಂಬಿವಲಿ 
4ನೇ ಸಮ್ಮೇಳನ ವಡೋದರಾ, ಗುಜರಾತ 
5ನೇ ಸಮ್ಮೇಳನ ದೆಹಲಿ 
6ನೇ ಸಮ್ಮೇಳನ ಅಮರಕಂಟಕ, ಮ.ಪ್ರ. 
7ನೇ ಸಮ್ಮೇಳನ ಹೈದರಾಬಾದ 
8ನೇ ಸಮ್ಮೇಳನ ಅಕ್ಕಲಕೋಟೆ 
 

click me!