ಬೇಸಿಗೆಯಲ್ಲಿ ಮಣ್ಣಿನ ಮಡಿಕೆಗಳಲ್ಲಿಟ್ಟ ನೀರು ಆರೋಗ್ಯಕ್ಕೆ ಬೆಸ್ಟ್

Published : May 02, 2024, 11:37 AM IST
ಬೇಸಿಗೆಯಲ್ಲಿ ಮಣ್ಣಿನ ಮಡಿಕೆಗಳಲ್ಲಿಟ್ಟ ನೀರು ಆರೋಗ್ಯಕ್ಕೆ ಬೆಸ್ಟ್

ಸಾರಾಂಶ

ಆಧುನಿಕತೆ ಭರಾಟೆಯಲ್ಲಿ ಹಿಂದಿನ ಕಾಲದ ಅನೇಕ ವಸ್ತುಗಳು ಮೂಲೆ ಗುಂಪಾಗುತ್ತಿರುವ ಇಂದಿನ ದಿನಗಳಲ್ಲಿ ಮಣ್ಣಿನ ಮಡಿಕೆ ರೂಪ ಬದಲಾಯಿಸಿಕೊಂಡು ಮಾರುಕಟ್ಟೆಯ ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಬೇಡಿಕೆಯಲ್ಲಿದೆ.

ಸೂಲಿಬೆಲೆ: ಆಧುನಿಕತೆ ಭರಾಟೆಯಲ್ಲಿ ಹಿಂದಿನ ಕಾಲದ ಅನೇಕ ವಸ್ತುಗಳು ಮೂಲೆ ಗುಂಪಾಗುತ್ತಿರುವ ಇಂದಿನ ದಿನಗಳಲ್ಲಿ ಮಣ್ಣಿನ ಮಡಿಕೆ ರೂಪ ಬದಲಾಯಿಸಿಕೊಂಡು ಮಾರುಕಟ್ಟೆಯ ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಬೇಡಿಕೆಯಲ್ಲಿದೆ.

ಪ್ರಸಕ್ತ ವರ್ಷದಲ್ಲಿ ಇನ್ನೂ ಮಳೆಯಾಗದೆ, ಬಿಸಿಲ ದಗೆ, ಸೆಖೆ ಹೆಚ್ಚುತ್ತಿದ್ದು ಬಹುತೇಕರು ಬಡವರ ಪ್ರಿಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಣ್ಣಿನ ಮಡಿಕೆಗೆ ಮೊರೆ ಹೋಗುತ್ತಿದ್ದು, ಬೀದಿ ಬದಿಗಳಲ್ಲಿ ಯಥೇಚ್ಚವಾಗಿ ಮಾರಾಟವಾಗುತ್ತಿದೆ. ಆಧುನಿಕತೆಗೆ ತಕ್ಕಂತೆ ಕುಂಬಾರ ಸಹ ತನ್ನ ಮಣ್ಣಿನ ವಸ್ತುಗಳ ರೂಪ ಬದಲಾಯಿಸಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅಣಿಗೊಳಿಸಿದ್ದು, ಬೇಸಿಗೆ ದಾಹ ತೀರಿಸುವಲ್ಲಿ ಮುಖ್ಯ ಪಾತ್ರ ವಹಿಸಿವೆ. ಜನರು ಮಡಿಕೆ ನೀರು ಆರೋಗ್ಯಕ್ಕೆ ಪೂರಕ ಎಂದು ಅರಿತು ಮಣ್ಣಿನ ಮಡಿಕೆ ಉಪಯೋಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಣ್ಣಿನ ಮಡಿಕೆಗಳು ಇತ್ತೀಚೆಗೆ ಬೇಡಿಕೆ ಕಳೆದುಕೊಂಡರು ಬೇಸಿಗೆಯಲ್ಲಿ ಮಾತ್ರ ಮಡಿಕೆಗಳು ಮಾರುಕಟ್ಟೆಯಲ್ಲಿ ಅಸ್ತಿತ್ವವನ್ನ ಉಳಿಸಿಕೊಂಡಿವೆ. ಅಲ್ಲದೆ, ಅಡುಗೆ ಪರಿಕರಗಳಿಗೂ ಮತ್ತೆ ಮಣ್ಣಿನ ಮಡಿಕೆಗಳನ್ನು ಬಳಸುತ್ತಿರುವುದು ಗಮನಾರ್ಹ. ಆದರೂ ಮಡಿಕೆ ತಯಾರಿಸುವವರ ಬದುಕುಗಳು ಮಾತ್ರ ಹಸನಾಗಲಿಲ್ಲ ಎಂಬ ಕೊರಗು ಕಾಡುತ್ತಿದೆ.

ಗ್ರಾಮೀಣ ಭಾಗದ ಬಹುತೇಕ ಮನೆಗಳಲ್ಲಿ ಮನೆ ಹಿರಿಯರು ಆಗಲೂ ಈಗಲೂ ಪ್ರಿಡ್ಜ್ ನೀರು ಬಳಸುವುದು ಕಡಿಮೆ. ಪ್ರತಿ ಬೇಸಿಕೆಯಲ್ಲೂ ಹೊಸ ಮಡಿಕೆ ತಂದು ನೀರಿಟ್ಟುಕೊಂಡೇ ಕುಡಿಯುವುದನ್ನು ಬಿಟ್ಟಿಲ್ಲ. ಕೇವಲ ೨ರಿಂದ ೩ ತಿಂಗಳ ಕಾಲ ಮಣ್ಣಿನ ಮಡಿಕೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡೋ ಎಂಬಂತಾಗಿದೆ.

ದಿನೇದಿನೇ ಬಿಸಿಲಿನ ದಗೆ ಹೆಚ್ಚಾಗುತ್ತಿದ್ದು ಇದೀಗ ಬಡವರ ಪ್ರಿಡ್ಜ್ ಮಣ್ಣಿನ ಮಡಿಕೆ ಸಹಕಾರಿಯಾಗಿದೆ. ವಿದ್ಯುತ್‌ ಚಿಂತೆಯಿಲ್ಲ, ಆರೋಗ್ಯದ ಸಮಸ್ಯೆಯಿಲ್ಲ, ಆರೋಗ್ಯ ತಜ್ಞರು ಮಡಿಕೆ ನೀರನ್ನು ಬೆಂಬಲಿಸುತ್ತಾರೆ. ಮತ್ತೆ ಹಳೆಯ ಪಳಯುಳಿಕೆಗಳೇ ಚಿಗುರೊಡೆಯುತ್ತಿವೆ. ಮಣ್ಣಿನ ಮಡಿಕೆಗಳನ್ನು ಹೆಚ್ಚು ಹೆಚ್ಚು ಬಳಸುತ್ತಿರುವುದರಿಮದ ಕಂಬಾರ ವೃತ್ತಿಗೆ ಮರು ಜೀವ ಬಂದಾಂತಾಗಿದೆ.

ಗ್ರಾಮೀಣ ಪ್ರದೇಶ ಮತ್ತು ಹಳ್ಳಿಗಳಿಗೆ ಸಿಮೀತವಾಗಿರದೆ ಮಣ್ಣಿನ ಮಡಿಕೆ ಉಪಯೋಗ ಮಾಡ್ರನ್‌ ಮಡಿಕೆಗಳಾಗಿ ಮಾಡಿ ನಗರ ಪ್ರದೇಶದಲ್ಲೂ ತಮ್ಮ ಛಾಪು ಮೂಡಿಸಿವೆ. ಕೆಲವರು ಕುಂಬಾರ ವೃತ್ತಿಯನ್ನು ಬಿಟ್ಟರೂ ಕೆಲ ಕುಟುಂಬಗಳು ಅದೇ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿವೆ. ಗುಡಿ ಕೈಗಾರಿಕೆ ಕುಂಬಾರ ವೃತ್ತಿಗೆ ಸರ್ಕಾರದ ಪ್ರೋತ್ಸಾಹ ಅವಶ್ಯವಾಗಿದೆ. ಕುಂಬಾರ ಸಮುದಾಯ ಉಳಿಯಬೇಕಾದರೆ ವೃತ್ತಿ ಅವಲಂಬಿತರಿಗೆ ಸರ್ಕಾರ ವಾರ್ಷಿಕ ಪ್ರೋತ್ಸಾಹ ಧನ ಘೋಷಿಸಬೇಕು ಎಂಬುದು ಅವರ ಮನವಿ.

ಗ್ರಾಮೀಣ ಪ್ರದೇಶದಲ್ಲಿ ಮನುಜ ಹುಟ್ಟಿನಿಂದ ಸಾವಿನವರೆಗೂ ಕುಂಬಾರರ ವಸ್ತುಗಳು ಬೇಕೆ ಬೇಕಾಗಿವೆ. ಸಂಪ್ರದಾಯಗಳು ಇನ್ನು ಜೀವಂತವಾಗಿವೆ. ಗ್ರಾಮೀಣ ಭಾಗದಲ್ಲಿ ಅನೇಕ ಕುಟುಂಬಗಳು ಅಡುಗೆ ಮಾಡುವ ಪರಿಕರಗಳಾಗಿ ಮಣ್ಣಿನ ಮಡಿಕೆಗಳನ್ನು ಬಳಸುತ್ತಿದ್ದರು ಕಾಲಕ್ರಮೇಣ ಬದಲಾವಣೆ ಗಾಳಿಗೆ ಸಿಲುಕಿ ಇಂದು ಅಡುಗೆ ಮನೆಯಿಂದ ಮಣ್ಣಿನ ಮಡಿಕೆಗಳು ನಾಪತ್ತೆಯಾಗಿದ್ದರೂ ಮತ್ತೆ ತಲೆಯತ್ತುತ್ತಿವೆ.

 ಗ್ರಾಮೀಣ ಭಾಗದಲ್ಲಿ ಮಡಿಕೆಗಳಲ್ಲೇ ರಾಗಿ ಮುದ್ದೆ ಮಾಡಲಾಗುತ್ತಿತ್ತು. ಇದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದಿತ್ತು. ಬದಲಾವಣೆಯ ಭರಾಟೆಯಲ್ಲಿ ಸ್ಟೀಲ್ ಪಾತ್ರೆಗಳು ತಾಂಡವಾಡುತ್ತಿದೆ. ಯುವ ಪೀಳಿಗೆ ಮಣ್ಣಿನ ಮಡಿಕೆಗೆ ಪ್ರಾಮುಖ್ಯತೆ ನೀಡಬೇಕು.

-ದೇವಿದಾಸ್ ಸುಬ್ರಾಯ್ ಶೇಠ್, ಶಿಕ್ಷಣ ತಜ್ಞರು

ಕುಂಬಾರಿಕೆ ಕುಲ ಕಸುಬು ಉಳಿಯಬೇಕಾದರೆ ಸರ್ಕಾರ ಸಮುದಾಯವನ್ನು ಗುರುತಿಸಿ ಕುಂಬಾರರ ಕುಟುಂಬಗಳಿಗೆ ಉಚಿತ ಆರೋಗ್ಯ ವಿಮೆ, ಸಾಲ ಸೌಲಭ್ಯ ಪ್ರೋತ್ಸಾಹ ಧನ ಸಹಾಯ ನೀಡಬೇಕು.

-ಎಂ.ಆರ್.ಉಮೇಶ್, ಸಾಮಾಜಿಕ ಹೋರಾಟಗಾರರು, ಸೂಲಿಬೆಲೆ

ಪರಂಪರೆಯಿಂದ ಮಣ್ಣಿನ ಮಡಿಕೆ ತಯಾರಿಸಿಯೇ ಬದುಕು ಕಟ್ಟಿಕೊಂಡಿದ್ದೇವೆ. ಆದರೆ ಕಾಲಕ್ರಮೇಣ ಮಡಿಕೆಗಳ ಬೇಡಿಕೆ ಕಡಿಮೆಯಾಗಿ ಬದುಕು ದುಸ್ತರವಾಗಿದೆ. ಬದಕಲು ಪರ್ಯಾಯ ಮಾರ್ಗಗಳು ಕಂಡುಕೊಳ್ಳಲಾಗಿದೆ. ದೂರದ ಅರಸೀಕೆರೆ, ತುರುವೆಕರೆಗಳಿಂದ ಮಡಿಕೆ, ಕುಡಿಕೆ ಕೊಂಡು ತಂದು ಮಾರುತ್ತೇವೆ.

-ಮುನಿಯಮ್ಮ, ಮಡಿಕೆ ಮಾರಾಟಗಾರರು, ಹೊಸಕೋಟೆ

PREV
Read more Articles on
click me!

Recommended Stories

ಸಿದ್ದರಾಮಯ್ಯನವರದ್ದು ಅತಿಯಾಯ್ತು: ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಯತ್ನಾಳ ವಾಗ್ದಾಳಿ
ಕಾಕ್ರೋಚ್​ ಜನತಾ ಪಕ್ಷ: ಬೆಂಗಳೂರಿಗೆ ನೋ ಎಂಟ್ರಿ- ಗುಪ್ತಚರ ಇಲಾಖೆ ಶಾಕಿಂಗ್​ ವರದಿಯಲ್ಲಿ ಏನಿದೆ