
ಚಿಕ್ಕಬಳ್ಳಾಪುರ: 2028 ಕ್ಕೆ ರಾಜ್ಯದಲ್ಲಿ ನಮ್ಮದೇ ಸರ್ಕಾರ ಬರಲಿದ್ದು, ನಮ್ಮ ಅವಧಿಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳನ್ನು ಸರ್ವಾಂಗೀಣ ಅಭಿವೃದ್ದಿಪಡಿಸಿ 22 ಸಾವಿರ ಮನೆಗಳನ್ನು ಕಟ್ಟಿ ಬಡವರಿಗೆ ನೀಡಲಿಲ್ಲ ಎಂದರೆ ನಾನು ರಾಜಕೀಯದಲ್ಲಿಯೇ ಇರುವುದಿಲ್ಲ, ನಿವೃತ್ತಿ ಆಗುವೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
ನಗರದ ಸಂಸದರ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಸಚಿವನಾಗಿದ್ದ ಅವಧಿಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 22 ಸಾವಿರ ನಿವೇಶನಗಳನ್ನು ಬಡವರಿಗೆ ನಿವೇಶನ ರಹಿತರ ಬಡವರಿಗೆ ಹಂಚಲಾಗಿತ್ತು. ಇದು ರಾಜ್ಯದಲ್ಲಿಯೇ ಮಾದರಿಯಾದ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ನಂತರ ಬಂದವರು ಇದನ್ನು ಮೂಲೆಗುಂಪು ಮಾಡಿದ್ದರು. ಈಗ ನಮ್ಮ ಕೆಲವನ್ನು ತಮ್ಮ ಕೆಲಸವೆಂದು ಬಿಂಬಿಸಿಕೊಳ್ಳಳು ಹೊರಟಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹೆಸರು ಹೇಳದೆ ಕಾಲೆಳೆದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ರಾಜ್ಯಕಾರಣಕ್ಕೆ ವಾಪಸಾಗುವುದು ಖಚಿತ. ಅಂತೆಯೇ ಮನೆಗಳನ್ನು ಕಟ್ಟಿಸಿಕೊಡುವುದೂ ಖಚಿತವೇ ಆಗಿದೆ.ದೇಶದಲ್ಲಿ ಇನ್ನೂ 20 ವರ್ಷ ಎನ್ಡಿಎ ಅಧಿಕಾರದಲ್ಲಿ ಇರಲಿದೆ. ಕಾಂಗ್ರೆಸ್ ಒಂದು ಪಕ್ಷವಾಗಿ ಎಲ್ಲಿರಲಿದೆ ಎಂಬುದನ್ನು ಆ ಪಕ್ಷದ ಮುಖಂಡರನ್ನು ಕೇಳಿ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ವೋಟ್ ಚೋರಿ ಆಗಿದೆ. ಇದನ್ನು ಸರಿಪಡಿಸಿ ಎಂದು ಚುನಾವಣಾ ಆಯೋಗವನ್ನು ಮೊದಲಿಗೆ ಕೇಳಿದ್ದು ಇದೇ ಕಾಂಗ್ರೆಸ್ ಮುಖಂಡರೇ ಆಗಿದ್ದಾರೆ. ಇದನ್ನು ಮನಗಂಡು ಕೇಂದ್ರ ಸರ್ಕಾರ ಎಸ್ಐಆರ್ ಜಾರಿಗೆ ತಂದಿದೆ. ಇದನ್ನು ಸ್ವಾಗತಿಸುವ ಬದಲಿಗೆ ಈಗ ದೂರುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ಸತ್ತವರ ಹೆಸರನ್ನು ತೆಗೆಯಬೇಕೋ ಬೇಡವೋ? 10 ವರ್ಷದಿಂದಲೂ ಸತ್ತವರನ್ನು ಪಟ್ಟಿಯಲ್ಲಿಟ್ಟುಕೊಂಡಿದ್ದರೆ ಹೇಗೆ?, ಡೂಪ್ಲಿಕೇಷನ್ ತೆಗೆಯಬೇಕೋ ಬೇಡವೋ, ಬಾಂಗ್ಲಾದೇಶದಲ್ಲಿರುವರು ಇಲ್ಲಿದ್ದರೆ ಅವರ ಹೆಸರು ತೆಗೆಯಬೇಕೋ ಬೇಡವೋ ಎಂದು ಪ್ರಶ್ನಿಸಿದರು.
ಮಮತಾ ಬ್ಯಾನರ್ಜಿ ಅವರನ್ನು ನಾನು ಮೊದಮೊದಲು ಹೋರಾಟಗಾರ್ತಿ ಎಂದುಕೊಂಡಿದ್ದೆ. ಆಕೆ ಬಾಂಗ್ಲಾ ದೇಶದವರಿಗೆ ಗೇಟ್ ತೆರೆದುಬಿಡುವುದಾ? ಕೇಂದ್ರ ಸರ್ಕಾರ ಎಲ್ಲಾ ಕಡೆ ಬಾರ್ಡರ್ ಹಾಕಿದರೆ ಈಕೆ ಎಲ್ಲಾ ಕಡೆ ಗೇಟ್ ತೆಗೆಯುತ್ತಿದ್ದಾರೆ. ಭಾರತಕ್ಕೆ ಬಂದವರಿಗೆ ಬೋಗಸ್ ಆಧಾರ್, ರೇಷನ್, ಓಟರ್ ಕಾರ್ಡ್ ಮಾಡಿಸಿ, ಚುನಾವಣೆ ಗೆಲ್ಲುತ್ತಾ ಬಂದಿದ್ದಾರೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಬಾಂಗ್ಲಾ ನುಸುಳುಕೋರರಿದ್ದಾರೆ. ಬಾಂಗ್ಲಾ ಪಾಕಿಸ್ತಾನ ವಿಭಾಗ ಆಗಲು ಕಾರಣ ಏನು ಕಾರಣ? ಸ್ವಾತಂತ್ರ್ಯ ಬಂದಾಗ ಭಾರತದಲ್ಲಿ ಮುಸ್ಲಿಂರ ಸಂಖ್ಯೆ 4 ಕೋಟಿ, ಈಗ 25 ಕೋಟಿ ಆಗಿದ್ದಾರೆ. ಇದಕ್ಕೆ ಏನು ಕಾರಣ?. ಪಾಕಿಸ್ಥಾನದಲ್ಲಿ ಉಳಿದಿದ್ದ ಹಿಂದುಗಳನ್ನು ಬಲವಂತವಾಗಿ ಮತಾಂತರ ಮಾಡಿದರು ಎಂಬುದನ್ನು ಕಾಂಗ್ರೆಸ್ ಅರಿಯಬೇಕು. ಓಟ್ ಬ್ಯಾಂಕ್ಗಾಗಿ ಭಾರತದ ಭದ್ರತೆಯನ್ನೇ ಅಪಾಯಕ್ಕೆ ತಳ್ಳಿದ್ದೀರಿ? ಹೀಗಾಗಿ ಎಸ್ಐಆರ್ ಇಂತವನ್ನೆಲ್ಲಾ ಸರಿಪಡಿಸುತ್ತಿದೆ ಎಂದರು.
ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ರಾಜ್ಯ ಕಾಂಗ್ರೆಸ್ನಂತಹ ಭ್ರಷ್ಟ ಸರ್ಕಾರವನ್ನು ಕಂಡಿಲ್ಲ. ರಾಜ್ಯ ಗುತ್ತಿಗೆದಾರರ ಸಂಘವೇ ಈ ಬಗ್ಗೆ ಆರೋಪಿಸಿದೆ. ಚಿಕ್ಕಬಳ್ಳಾಪುರ ನಗರಸಭೆಯಲ್ಲಿಯೇ ನೋಡಿ 2023ರಲ್ಲಿ ರಾಷ್ಟ್ರೋತ್ಥಾನದಿಂದ ತಂದಿದ್ದ 40 ಕೋಟಿ ಅನುದಾನದ ಅಭಿವೃದ್ಧಿಗೆ ಟೆಂಡರ್ ಕರೆದಿದ್ದದರೆ ಈವರೆಗೆ ಅಂತಿಮಗೊಳಿಸಿಲ್ಲ, ಗುತ್ತಿಗೆದಾರರಿಗೆ ಗುತ್ತಿಗೆ ಕೊಟ್ಟಿಲ್ಲ, ಯಾರು ಹೆಚ್ಚುಕೊಡುತ್ತಾರೋ ಅವರಿಗೆ ಶೋಧ ನಡೆದಿದೆ. ಮಂಚೇನಹಳ್ಳಿಯಿಂದ ಚಿಕ್ಕಬಳ್ಳಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು 270 ಕೋಟಿ ತಂದಿದ್ದೆ. ಅದೇ ವಿಡಿಯೋ ಬಳಸಿಕೊಂಡು ಇದನ್ನು ನಾನು ತಂದಿದ್ದೇನೆ ಎಂದು ವಿಡಿಯೋ ಹಾಕಿಕೊಳ್ಳುತ್ತಿದ್ದಾರೆ. ಜನಪ್ರತಿನಿಧಿಗೆ ಇದಕ್ಕಿಂತ ಆತ್ಮವಂಚನೆ ಬೇಕಾ? ರಸ್ತೆ ಅಗಲೀಕರಣದಲ್ಲಿ ಬೇಕಾದವರು ಬಿಟ್ಟುಕೊಳ್ಳಿ, ಬೇಡದವರು ತೆಗೆದುಹಾಕಿ ಎಂದು ಹೇಳುತ್ತಿದ್ದಾರಂತೆ ಹೀಗೆಲ್ಲಾ ಮಾಡಲು ಬರುತ್ತಾ ಎಂದು ಖಾರವಾಗಿ ಪ್ರಶ್ನಿಸಿದರು.
ನಾನು ಬಹಳ ಕಷ್ಟಪಟ್ಟು ಚಿಮುಲ್ ಸ್ಥಾಪನೆ ಆಗುವಂತೆ ನೋಡಿಕೊಂಡಿದ್ದೇನೆ. ಆದರೆ ಚಿಮುಲ್ ಇದ್ದಾಗ ಬರೀ ಭ್ರಷ್ಟಾಚಾರವೇ ತುಂಬಿತ್ತು. ಹಾಲು ಉತ್ಪಾದಕರ ಕಷ್ಟ ನನಗೆ ಗೊತ್ತಿದೆ. ನಮ್ಮ ತಾಯಿ ಮುಂಜಾನೆ 4 ಗಂಟೆಗೆ ಎದ್ದು ಹಾಲು ಕರೆಯುತ್ತಿದ್ದರು. ಇಂತಹ ಪವಿತ್ರವಾದ ಸ್ಥಳಕ್ಕೆ ಭ್ರಷ್ಟಾಚಾರಿಗಳನ್ನು ಗೆಲ್ಲಿಸಬಾರದು, ಸೇವಾಮನೋಭಾವ ಇರುವ ಕೆ.ವಿ.ನಾಗರಾಜ್, ಸುನಂದಮ್ಮ ಸೇರಿದಂತೆ ಎನ್ಡಿಎ ಅಭ್ಯರ್ಥಿಗಳಿಗೆ ನಿಮ್ಮ ಆಶೀರ್ವಾದ ಮಾಡಿ ಆರಿಸಿಕಳಿಸಿ ಎಂದು ಎಲ್ಲಾ ಡೆಲಿಗೇಟ್ಸ್ಗೆ ಮನವಿ ಮಾಡಿದರು.
ಚಿಮುಲ್ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಇಬ್ಬರೂ ಕಾಂಗ್ರೆಸ್ ಪಕ್ಷದವರೇ ಇರುವುದರಿಂದ ಯಾರಿಗೂ ನನ್ನ ಬೆಂಬಲವಿಲ್ಲ. ಇಲ್ಲಿ ಎನ್ಡಿಎ ಅಭ್ಯರ್ಥಿ ಹಾಕುಲು ಸಾಧ್ಯವಾಗಿಲ್ಲ. ಕೋಚಿಮುಲ್ ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂದು ಕೇಳಿದ್ದೇನೆ. ಹಣ ಕೊಟ್ಟು ಗೆಲ್ಲುವರು ಹಣ ಮಾಡಲು ಬರುತ್ತಾರೆ.ಇಂತಹವರನ್ನು ದೂರವಿಡಿ ಎಂದರು.
ಎತ್ತಿನಹೊಳೆ ರಾಜಕಾರಣಿಗಳು ಹಣದ ಹೊಳೆ ಹರಿಸುವ ಯೋಜನೆ ಎಂಬುದು ಈಗ ನನಗೆ ಅರ್ಥವಾಗುತ್ತಿದೆ. ಕುಮಾರಣ್ಣ ನನಗೆ ಆಗಲೇ ಹೇಳಿದ್ದರು. ನಾನಾಗ ಅಲ್ಲೇ ಕಾಂಗ್ರೆಸ್ನಲ್ಲೇ ಇದ್ದೆ ಅಲ್ಲವೆ? 8 ಸಾವಿರ ಕೋಟಿಯಿಂದ ಪ್ರಾರಂಭವಾಗಿದ್ದು, ಈಗ 28 ಸಾವಿರ ಕೋಟಿಗೆ ಮುಟ್ಟಿದೆ. ಇನ್ನೂ ಅದು ಸಕಲೇಶಪುರದಲ್ಲಿಯೇ ಇದೆ. ಚಿಕ್ಕಬಳ್ಳಾಪುರಕ್ಕೆ ಬರಲು ಇನ್ನೆಷ್ಟು ಕೋಟಿ ಬೇಕೋ? ಮೊದಲು ಡಿಸೈನ್ ಮಾಡಿದ್ದು ಕೋಲಾರ ಚಿಕ್ಕಬಳ್ಳಾಪುರಕ್ಕೆ ಮಾತ್ರ. ಆ ಮೇಲೆ ಬರಬರುತ್ತಾ ಎಷ್ಟೋ ಜಿಲ್ಲೆಗಳನ್ನು ಸೇರಿಸಲಾಗಿ ಯೋಜನೆಯಲ್ಲಿ ನಾವೇ ಕೊನೇ ಭಾಗದಲ್ಲಿದ್ದೇವೆ? ನಮಗೆ ನೀರು ಬರುತ್ತಾ? ಎಂದು ಪ್ರಶ್ನಿಸಿದ ಅವರು ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿದ್ದಿದ್ದರೆ ನೂರಕ್ಕೆ ನೂರು ನೀರು ತರುವಂತೆ ಮಾಡುತ್ತಿದ್ದೆವು ಎಂದರು.