' ಬಡವರ ಮಕ್ಕಳಿಗೆ ಉಚಿತ ಬಸ್‌ಪಾಸ್‌ '

By Kannadaprabha NewsFirst Published Apr 8, 2021, 11:24 AM IST
Highlights

ಕೂಲಿ ಕಾರ್ಮಿಕರು ಹಾಗೂ ರೈತರ ಮಕ್ಕಳಿಗೆ ಅನುಕೂಲತೆ ಒದಗಿಸಿಕೊಡುವ ನಿಟ್ಟಿನಲ್ಲಿ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ. 

 ಮಧುಗಿರಿ (ಏ.08):  ಜಿಲ್ಲೆಯ ಬಡವರ, ಕೂಲಿಕಾರ್ಮಿಕರ ಹಾಗೂ ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ಬಸ್‌ ಪಾಸ್‌ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ತಿಳಿಸಿದರು.

ಮಧುಗಿರಿ ಪಟ್ಟಣದ ಸ್ವಗೃಹದಲ್ಲಿ ಬುಧವಾರ ವಿಎಸ್‌ಎಸ್‌ಎನ್‌ ಕಾರ್ಯದರ್ಶಿಯಾಗಿ ಟಿ.ವಿ.ಎಸ್‌.ಮಂಜುನಾಥ್‌ ಅವರನ್ನು ನೇಮಿಸಿದ ಹಿನ್ನೆಲೆಯಲ್ಲಿ ತುರುವೇಕೆರೆ, ಗಂಜಲಗುಂಟೆ, ವಿಎಸ್‌ಎಸ್‌ಎನ್‌ ಮತ್ತು ಕಾಂಗ್ರೆಸ್‌ ಪಕ್ಷದ ಮುಖಂಡರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ತುಮಕೂರು ಜಿಲ್ಲೆಯಲ್ಲಿ ರೈತರಿಗೆ ಮತ್ತು ಅತಿ ಸಣ್ಣ ರೈತರಿಗೆ ಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆದ ರೈತರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಲಿದೆ. ಕಾರಣ ಮೀಟರ್‌ ಬಡ್ಡಿ ಹಾವಳಿಯಿಂದ ಪಾರಾಗಿ ರೈತರು ಅಭಿವೃದ್ಧಿ ಹೊಂದಲು ಡಿಸಿಸಿ ಬ್ಯಾಂಕ್‌ ನೆರವಾಗಲಿದೆ.

ಮುಂದಿನ ದಿನಗಳಲ್ಲಿ ಎಲ್ಲ ರೈತರಿಗೂ ಸಾಲ ನೀಡಲಾಗುವುದು. ಡಿಸಿಸಿ ಬ್ಯಾಂಕ್‌ ವತಿಯಿಂದ ಈಗಾಗಲೇ ಮೃತಪಟ್ಟರೈತರ ಕುಟುಂಬದ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುಲಾಗುತ್ತಿದ್ದು, ಕೊರೋನಾ ಹಿನ್ನೆಲೆಯಲ್ಲಿ ಜಿಲ್ಲೆಯ 50 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಹತ್ತು ಸಾವಿರ ರುಗಳವರೆಗೂ ಸಾಲ ನೀಡಲಾಗಿದ್ದು ಬಡವರು, ರೈತರು ಹಾಗೂ ಕೂಲಿಕಾರ್ಮಿಕರು ಪಡೆದ ಸಾಲವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ತಮ್ಮ ಜೀವನ ಮಟ್ಟಸುಧಾರಿಸಿಕೊಳ್ಳುವಂತೆ ಸಲಹೆ ನೀಡಿದರು.

ಯಾರೇ ಸಾಲ ಪಡೆದರು ಅದನ್ನು ಸದುಪಯೋಗ ಪಡಿಸಿಕೊಂಡು ಸಮಯಕ್ಕೆ ಸರಿಯಾಗಿ ಪಡೆದ ಸಾಲವನ್ನು ಮರು ಪಾವತಿ ಮಾಡುವುದು ಸಾಲ ಪಡೆದವರ ಕರ್ತವ್ಯವಾಗಿದ್ದು ಕಾರ್ಯದರ್ಶಿಗಳು ಆ ನಿಟ್ಟಿನಲ್ಲಿ ಸಾಲ ನೀಡುವ ಮತ್ತು ಮರುಪಾವತಿ ಬಗ್ಗೆ ಮುತುವರ್ಜಿ ವಹಿಸಬೇಕು. ವಿಎಸ್‌ಎಸ್‌ಎನ್‌ ಸಂಘಗಳ ಅಭ್ಯುದಯ್ಕಕೆ ಪ್ರಮಾಣಿಕವಾಗಿ ಶ್ರಮಿಸಬೇಕು ಎಂದರು.

click me!