ನಿವೃತ್ತ ಸರ್ಕಾರಿ ನೌಕರರೇ ಇವರ ಟಾರ್ಗೆಟ್: ಪಂಚವಟಿ ಮಲ್ಟಿಸ್ಟೇಟ್ ಕೋ ಅಪರೇಟೀವ್ ಕ್ರೆಡಿಟ್ ಸೊಸೈಟಿಯಿಂದ ವಂಚನೆ

By Govindaraj SFirst Published Jan 27, 2023, 7:56 PM IST
Highlights

ಹಗಲು ಕಂಡ ಬಾವಿಗೆ ರಾತ್ರಿ ಬೀಳೋದು ಎಂಬ ಗಾದೆಗೆ ಇವರೇ ಉದಾಹರಣೆ. ಅವರೆಲ್ಲ ಸರ್ಕಾರಿ ಕೆಲಸದಲ್ಲಿ ಇದ್ದು, ನಿವೃತ್ತಿ ಪಡೆದವರು. ಹೆಚ್ಚಿನ ಬಡ್ಡಿ ಬರುತ್ತೆ ಅಂತಾ ಅದೊಂದು ಕೋ ಅಪರೇಟೀವ್ ಕ್ರೆಡಿಟ್ ಸೊಸೈಟಿ ಹಣವನ್ನ ಠೇವಣಿಯಾಗಿ ಇಟ್ಟಿದ್ರು.

ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ಜ.27): ಹಗಲು ಕಂಡ ಬಾವಿಗೆ ರಾತ್ರಿ ಬೀಳೋದು ಎಂಬ ಗಾದೆಗೆ ಇವರೇ ಉದಾಹರಣೆ. ಅವರೆಲ್ಲ ಸರ್ಕಾರಿ ಕೆಲಸದಲ್ಲಿ ಇದ್ದು, ನಿವೃತ್ತಿ ಪಡೆದವರು. ಹೆಚ್ಚಿನ ಬಡ್ಡಿ ಬರುತ್ತೆ ಅಂತಾ ಅದೊಂದು ಕೋ ಅಪರೇಟೀವ್ ಕ್ರೆಡಿಟ್ ಸೊಸೈಟಿ ಹಣವನ್ನ ಠೇವಣಿಯಾಗಿ ಇಟ್ಟಿದ್ರು. ಆದರೆ ಇದೀಗ ಠೇವಣಿಯೂ ಇಲ್ಲ,  ಬಡ್ಡಿಯೂ ಇಲ್ಲದಂತಾಗಿದೆ‌. ವಂಚನೆಗೆ ಒಳಗಾದ ಷೇರುದಾರು ಇಟ್ಟ ಠೇವಣಿ ಹಣಕ್ಕಾಗಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಠೇವಣಿದಾರರಿಗೆ ಬ್ಯಾಂಕ್‌ನಿಂದ ದೋಖಾ, ಠೇವಣಿಯೂ ಇಲ್ಲ, ಬಡ್ಡಿಯೂ ಇಲ್ಲ. ಹೌದು! ಅಧಿಕ ಬಡ್ಡಿ ಆಸೆ ತೋರಿಸಿ ನೂರಾರು ಜನರಿಂದ ಠೇವಣಿ ಪಡೆದು, ಬಡ್ಡಿಯೂ ಇಲ್ಲದೆ, ಠೇವಣಿಯನ್ನೂ ನೀಡದೆ ವಂಚಿಸಿರುವ ಮತ್ತೊಂದು ಪ್ರಕರಣ ರಾಮನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 

ಅಂದಹಾಗೆ ರಾಮನಗರ ಐಜೂರು ನಗರದಲ್ಲಿರುವ ಪಂಚವಟಿ ಮಲ್ಟಿ ಸ್ಟೇಟ್ ಕೋ ಆಪರೇಟೀವ್ ಕ್ರೆಡಿಟ್ ಸೊಸೈಟಿಯಿಂದ ಮಹಾ ದೋಖಾ ನಡೆದಿದ್ದು, ಠೇವಣಿಯಿಟ್ಟ ಸಾಕಷ್ಟು ಮಂದಿ ಕಂಗಲಾಗಿದ್ದು, ರಾಮನಗರದ ಸೆನ್ ಠಾಣೆಯಲ್ಲಿ ದೂರು ನೀಡಿದ್ದು, ಸೋಸೈಟಿಯ 8 ಮಂದಿ ವಿರುದ್ದ ಎಫ್ ಐ ಆರ್ ಕೂಡ ದಾಖಲಾಗಿದೆ. ಅಂದಹಾಗೆ ಸೊಸೈಟಿಯ ಕಾರ್ಯದರ್ಶಿ ಎನ್ನಲಾದ ಬೈರಲಿಂಗಯ್ಯ ಎಂಬಾತ ನಿವೃತ್ತಿ ಸರ್ಕಾರಿ ಅಧಿಕಾರಿಗಳಿಗೆ ಗಾಳ ಹಾಕಿ, ನಮ್ಮ ಬ್ಯಾಂಕ್ ನಲ್ಲಿ ಹಣವಿಟ್ಟರೇ ಬೇರೆ ಬ್ಯಾಂಕ್ ಗಳಿಗಿಂತ ಅಧಿಕ ಬಡ್ಡಿ ಕೊಡಿಸುವುದಾಗಿ ನಂಬಿಸಿದ್ದಾನೆ. ಹೀಗಾಗಿ ಸಾಕಷ್ಟು ಬಂದಿ ಲಕ್ಷ ಲಕ್ಷ ಹಣವನ್ನು ಸೋಸೈಟಿಯಲ್ಲಿ ಠೇವಣಿ ಇಟ್ಟಿದ್ದಾರೆ. 

ರಾಜಕಾರಣದಲ್ಲಿ ನಿಯತ್ತು ಮತ್ತು ನೀತಿ ಒಂದೇ ಇರಬೇಕು: ಸಿದ್ದುಗೆ ಟಾಂಗ್‌ ಕೊಟ್ಟ ಸಿ.ಟಿ.ರವಿ

ಪ್ರಾರಂಭದಲ್ಲಿ ಕೆಲ ತಿಂಗಳುಗಳ ಕಾಲ ಬಡ್ಡಿಯೂ ಕೂಡ ಸಂದಾಯವಾಗಿದೆ. ಆದರೆ ಬಾಂಡ್ ಮೆಚ್ಯುರಿಟಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತಮ್ಮ ಠೇವಣಿ ಹಣವನ್ನು ವಾಪಾಸ್ ನೀಡುವಂತೆ ಬ್ಯಾಂಕ್ ನಲ್ಲಿ ಮನವಿ ನೀಡಿದ್ರೆ ಬ್ಯಾಂಕ್ ಸಿಬ್ಬಂದಿಗಳು ಸಬೂಬು ಹೇಳಿದ್ದಾರೆ. ಹೀಗಾಗಿ ಕೇಂದ್ರ ಕಚೇರಿ ಎನ್ನಲಾದ ಬೆಂಗಳೂರಿನ ರಾಜಾಜಿನಗರದ ಕಚೇರಿ ಹೋಗಿ ವಿಚಾರಿಸಿದ್ರು ಅಲ್ಲಿಯೂ ಕೂಡ ಕಚೇರಿ ಬಂದ್ ಆಗಿದೆ. ಈ ಹೀಗಾಗಿ ಠೇವಣಿದಾರರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ಬ್ಯಾಂಕ್ ನ ಅಧ್ಯಕ್ಷ ರಾಜು, ಕಾರ್ಯದರ್ಶಿ ಬೈರಲಿಂಗಯ್ಯ, ನಿರ್ದೇಶಕ ಹರೀಶ್, ಲಿಂಗರಾಜು, ಸುರೇಶ್, ಬಸವಚಾರ್, ಚಂದ್ರಶೇಖರ್ ಸೇರಿದಂತೆ ಎಂಟು ಜನರ ವಿರುದ್ದ ಎಫ್ ಐ ಆರ್ ದಾಖಲಾಗಿದೆ. 

ರಾಮನಗರ ಜಿಲ್ಲೆಯಲ್ಲಿಯೇ ಸಾಕಷ್ಟು ಜನರಿಗೆ ಈ ರೀತಿ ದೋಖಾವಾಗಿದ್ದು, ಪಂಚವಟಿ ಮಲ್ಟಿ ಸ್ಟೇಟ್ ಕೋ ಅಪರೇಟೀವ್ ಸೊಸೈಟಿ ಭಾರತ ಸರ್ಕಾರದಿಂದ ಅನುಮತಿ ಪಡೆದಿದೆ ಎಂದು ಸಹಾ ನಂಬಿಸಿದ್ದಾರೆ. ಸುಮಾರು 11 ಮಂದಿ ಠೇವಣಿದಾರರು ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ. ಕೇಲವ ಠೇವಣಿ ಮಾತ್ರ ಕಟ್ಟಿಸಿಕೊಳ್ಳದೇ ಕೆಲವಷ್ಟು ಕೆಲವಷ್ಟು ಷೇರುಗಳನ್ನು ಕೂಡ ಖರೀದಿಸುವಂತೆ ಕೂಡ ಒತ್ತಡ ಹಾಕಿ ಷೇರುಗಳನ್ನು ಕೂಡ ಮಾರಾಟ ಮಾಡಿ ಹಣವನ್ನು ಕಟ್ಟಿಸಿಕೊಂಡಿದ್ದಾರೆ. ಜೊತೆ ಆರ್ ಡಿ ಕೂಡ ಕಟ್ಟಿಸಿಕೊಂಡಿದ್ದಾರೆ. ಆದರೆ ಇದುವರೆಗೂ ಯಾವುದನ್ನೂ ಕೂಡ ವಾಪಾಸ್ ಕೊಟ್ಟಿಲ್ಲ. 

ನಾನು ಪಕ್ಷಾಂತರಿಯಾದರೆ ಏಳು ಪಕ್ಷ ಬದಲಿಸಿರುವ ಸಿದ್ದರಾಮಯ್ಯ ಯಾರು?: ಪ್ರಮೋದ್ ಮಧ‍್ವರಾಜ್

ಇನ್ನು ಇದು ಹೆಸರಿಗೆ ತಕ್ಕಂತೆ ಮಲ್ಪಿ ಸ್ಟೇಟ್ ವಂಚನೆ ಆಗಿರುವ ಸಾಧ್ಯ ಎಂದು ಪೊಲೀಸರು ಅಂದಾಜಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಈಗಾಗಲೇ ಶಾಖೆಗಳನ್ನು ತೆರೆದು ಮುಚ್ಚಲಾಗಿದೆ ಎಂದು ತಿಳಿದು ಬಂದಿದ್ದು, ಹೊರರಾಜ್ಯಗಳಲ್ಲಿಯೂ ಸಹ ಇದೇ ರೀತಿ ಗ್ರಾಹಕರಿಗೆ ವಂಚನೆ ಮಾಡಿರುವ ಸಾಧ್ಯತೆಯಿದ್ದು ಈ ನಿಟ್ಟಿನಲ್ಲೂ ಕೂಡ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಒಟ್ಟಾರೆ ನಿವೃತ್ತ ಅಧಿಕಾರಿಗಳನ್ನೇ ಯಾಮಾರಿಸಿ ಹಣವನ್ನ ಕಟ್ಟಿಸಿಕೊಂಡು ವಾಪಾಸ್ ನೀಡದೇ ಬ್ಯಾಂಕ್ ನಿಂದ ದೋಖಾ ಮಾಡಲಾಗಿದ್ದು, ಪೊಲೀಸರ ವಿಚಾರಣೆ ನಂತರವಷ್ಟೇ ಮತ್ತಷ್ಟು ಸತ್ಯ ಸತ್ಯತೆ ತಿಳಿದು ಬರಲಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

click me!