ಹೊಸಪೇಟೆ ಬಳಿ ಭೀಕರ ಅಪಘಾತ: ಇಬ್ಬರು ಅಧಿಕಾರಿಗಳು ಸೇರಿ ನಾಲ್ವರ ದುರ್ಮರಣ

By Kannadaprabha NewsFirst Published Apr 2, 2021, 9:16 AM IST
Highlights

ತಿಪಟೂರಿನಿಂದ ಕುಷ್ಟಗಿ ಕಡೆಗೆ ಬರುತ್ತಿದ್ದ ಇನ್ನೋವಾ ಕಾರು| ಬಾಗಲಕೋಟೆಯ ಕೃಷ್ಣ ಜಲಭಾಗ್ಯ ನಿಗಮ ಕಚೇರಿಯಲ್ಲಿ ಕೆಲಸ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ಅಧಿಕಾರಿಗಳಿದ್ದ ಕಾರು| ಈ ಸಂಬಂಧ ಮರಿಯಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಹೊಸಪೇಟೆ(ಏ.02): ತಾಲೂಕಿನ ಹಾರುವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಗುರುವಾರ ನಡೆದ ಭೀಕರ ಅಪಘಾತದಲ್ಲಿ ಎರಡು ಇನ್ನೋವಾ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಅಧಿಕಾರಿಗಳು ಸೇರಿ ನಾಲ್ವರು ಮೃತಪಟ್ಟಿದ್ದು, ಆರು ಜನ ಗಂಭೀರ ಗಾಯಗೊಂಡಿದ್ದಾರೆ.

ಕೇಂದ್ರ ಜಲ ಆಯೋಗದ ಅಧಿಕಾರಿಗಳಾದ ಬೆಂಗಳೂರು ಮೂಲದ ಎನ್‌. ಕೋದಂಡ ರಾಮಸ್ವಾಮಿ (55), ಜಿತೇಂದ್ರ ಪನ್ವರ್‌ (50), ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೂಲದ ಕಾವ್ಯಾ (35) ಮತ್ತು ಬಾಲಕ ಶರಣ ಬಸವ (10) ಮೃತಪಟ್ಟಿದ್ದಾರೆ. ಜಲ ಆಯೋಗದ ಅಧಿಕಾರಿಗಳ ಕಾರಿನ ಚಾಲಕ ಮತ್ತು ಇನ್ನೊಂದು ಕಾರಿನಲ್ಲಿದ್ದ ಐವರು ಗಾಯಗೊಂಡಿದ್ದು, ಗಾಯಾಳುಗಳನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳ್ಳಾರಿ ವಿಮ್ಸ್‌ಗೆ ಕಳುಹಿಸಲಾಯಿತು.

ಚಿಂಚೋಳಿ: ಶವಸಂಸ್ಕಾರಕ್ಕೆ ಹೊರಟಿದ್ದ ಟ್ರ್ಯಾಕ್ಟರ್ ಪಲ್ಟಿ, ಓರ್ವ ಮಹಿಳೆ ಸಾವು, 18 ಮಂದಿಗೆ ಗಾಯ

ಘಟನೆ ವಿವರ:

ತಿಪಟೂರಿನಿಂದ ಕುಷ್ಟಗಿ ಕಡೆಗೆ ಬರುತ್ತಿದ್ದ ಇನ್ನೋವಾ ಕಾರಿನ ಟೈಯರ್‌ ಬಸ್ಟ್‌ ಆಗಿ ಡಿವೈಡರ್‌ ಮೇಲೆ ಎಗರಿ, ಬಾಗಲಕೋಟೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಬಾಗಲಕೋಟೆಯ ಕೃಷ್ಣ ಜಲಭಾಗ್ಯ ನಿಗಮ ಕಚೇರಿಯಲ್ಲಿ ಕೆಲಸ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ಕಾರಿನಲ್ಲಿ ಚಾಲಕ ಸೇರಿ ಮೂವರಿದ್ದರು. ಈ ಕಾರಿನಲ್ಲಿದ್ದ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ತಿಪಟೂರಿನಿಂದ ಬರುತ್ತಿದ್ದ ಕಾರಿನಲ್ಲಿ ಏಳು ಜನ ಪ್ರಯಾಣಿಸುತ್ತಿದ್ದರು. ಇದರಲ್ಲಿ ಇಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!