ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾದರಿಯ ‘ಹಿಂದ’ ಸಂಘಟನೆ ಸ್ಥಾಪಿಸುವ ಸುಳಿವು ನೀಡಿದ ಈಶ್ವರಪ್ಪ..!

By Girish GoudarFirst Published Apr 30, 2024, 4:53 PM IST
Highlights

ಚುನಾವಣೆ ಬಳಿಕ ಪುನಃ ಹಿಂದುಳಿದವರು ಮತ್ತು ದಲಿತರನ್ನು ಒಟ್ಟುಗೂಡಿಸುವ ಮತ್ತು ಅವರಿಗೆ ಅಧಿಕಾರ ನೀಡುವ ಪ್ರಯತ್ನ ನಡೆಸಲು ‘ಹಿಂದ’ ಸಂಘಟನೆಯನ್ನು ಹುಟ್ಟು ಹಾಕುವ ಚಿಂತನೆ ನಡೆಸಿರುವುದಾಗಿ ತಿಳಿಸಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ

ಶಿವಮೊಗ್ಗ(ಏ.30):  ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ ಬಿಜೆಪಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಕೆ.ಎಸ್‌. ಈಶ್ವರಪ್ಪ ಅವರು ಪುನಃ ಇಂತಹದೇ ಸಂಘಟನೆಯನ್ನು ಹುಟ್ಟು ಹಾಕುವ ಪ್ರಸ್ತಾಪ ಮಾಡಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ಅವರು, ಚುನಾವಣೆ ಬಳಿಕ ಪುನಃ ಹಿಂದುಳಿದವರು ಮತ್ತು ದಲಿತರನ್ನು ಒಟ್ಟುಗೂಡಿಸುವ ಮತ್ತು ಅವರಿಗೆ ಅಧಿಕಾರ ನೀಡುವ ಪ್ರಯತ್ನ ನಡೆಸಲು ‘ಹಿಂದ’ ಸಂಘಟನೆಯನ್ನು ಹುಟ್ಟು ಹಾಕುವ ಚಿಂತನೆ ನಡೆಸಿರುವುದಾಗಿ ತಿಳಿಸಿದರು.

ಚುನಾವಣೆ ಬಳಿಕ ಇಡೀ ರಾಜ್ಯಾದ್ಯಂತ ಸುತ್ತಿ, ವಿವಿಧ ಜಾತಿ, ಸಂಘಟನೆಯ ನಾಯಕರನ್ನು ಭೇಟಿ ಮಾಡಿ, ಚರ್ಚಿಸಿ ಸಂಘಟನೆಯನ್ನು ಹುಟ್ಟು ಹಾಕಲು ಚಿಂತನೆಯಿದೆ. ಇದು ಯಾವ ಸ್ವರೂಪದಲ್ಲಿ ಇರಬೇಕು ಎಂಬುದನ್ನು ಆ ನಂತರವೇ ನಿರ್ಧರಿಸಲಾಗುವುದು. ಇಂತಹ ಸಂಘಟನೆ ಅನಿವಾರ್ಯ ಎಂಬುದರ ಬಗ್ಗೆ ಎಲ್ಲರೂ ಹೇಳುತ್ತಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪ ಗೂಂಡಾಗಿರಿ ರಾಜಕಾರಣ ವಿರುದ್ಧ ಜನ ತೊಡೆತಟ್ಟಿದ್ದಾರೆ: ಕೆ.ಎಸ್.ಈಶ್ವರಪ್ಪ

ಈ ಹಿಂದೆ ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಿನಲ್ಲಿ ಸಂಘಟನೆ ಕಟ್ಟಿ ಬೆಳೆಸಿದ್ದೆ. ಆದರೆ ಯಡಿಯೂರಪ್ಪನವರು ಕೇಂದ್ರದ ನಾಯಕ ಅಮಿತ್ ಶಾ ಅವರಿಗೆ ತಪ್ಪು ಮಾಹಿತಿ ನೀಡಿ ಇದನ್ನು ವಿಸರ್ಜನೆ ಮಾಡಿಸುವಲ್ಲಿ ಯಶಸ್ವಿಯಾದರು. ನಾನು ಎಲ್ಲಿ ಮುಖ್ಯಮಂತ್ರಿಯಾಗಿ ಬಿಡುತ್ತೇನೆಯೋ ಎಂಬ ಹೆದರಿಕೆ ಅವರಲ್ಲಿ ಇತ್ತು ಎಂದು ಕಾಣುತ್ತದೆ ಎಂದು ವ್ಯಂಗ್ಯವಾಡಿದರಲ್ಲದೆ, ಆಗ ನಾನು ಇದಕ್ಕೆ ಒಪ್ಪಬಾರದಿತ್ತು ಎಂದು ಈಗ ಅನಿಸುತ್ತಿದೆ. ಆದರೆ ಅದು ಆಗಿ ಹೋದ ವಿಚಾರ. ಈಗ ಸಂಘಟನೆಗೆ ಮರು ಜೀವ ನೀಡುತ್ತೇನೆ ಎಂದರು.

ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ. ನಾ. ಶ್ರೀನಿವಾಸ್ ಅವರು ಅಧಿಕಾರ ಎಲ್ಲವೂ ಕೇವಲ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೇ ಬೇಕಾ? ಸಾಮಾನ್ಯರಿಗೆ ಬೇಡವಾ? ಹಿಂದುಳಿದವರಲ್ಲಿ ಈಡಿಗ ಮತ್ತು ಕುರುಬರಿಗೆ ಸ್ವಲ್ಪವಾದರೂ ಅಧಿಕಾರ ಸಿಕ್ಕಿದೆ. ಉಳಿದಂತೆ ಇರುವ ಸಣ್ಣಪುಟ್ಟ ಹಿಂದುಳಿದ ಜಾತಿಗಳಿಗೆ ಇದುವರೆಗೆ ಏನೂ ಸಿಕ್ಕಿಲ್ಲ. ಅವರಿಗೆ ರಾಜಕೀಯ ಅಧಿಕಾರ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಈಶ್ವರಪ್ಪ ಅವರು ಈ ಸಮುದಾಯದ ನಾಯಕರಾಗಿ ಹೊರ ಹೊಮ್ಮಬೇಕು. ಎಲ್ಲರಿಗೂ ನ್ಯಾಯ ಕೊಡಿಸುವಂತಾಗಬೇಕು ಎಂದು ಹೇಳಿದ್ದಾರೆ. 

click me!