ಲಕ್ಷ್ಮೇಶ್ವರ: ಗೊಜನೂರ ಗುಡ್ಡಕ್ಕೆ ಬೆಂಕಿ ಆರಿಸಲು ಹರಸಾಹಸ

By Kannadaprabha NewsFirst Published Mar 11, 2021, 12:57 PM IST
Highlights

3 ಗಂಟೆಗೂ ಹೆಚ್ಚು ಕಾಲ ಶ್ರಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ| ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗುಡ್ಡ|  ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಕ್ಕೆ ಕೈ ಜೋಡಿದ ಸ್ಥಳೀಯರು, ಶಾಲೆಯ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು| 

ಲಕ್ಷ್ಮೇಶ್ವರ(ಮಾ.11): ತಾಲೂಕಿನ ಗೊಜನೂರ ಗುಡ್ಡಕ್ಕೆ ಮಂಗಳವಾರ ಮಧ್ಯಾಹ್ನ ಹೊತ್ತಿಕೊಂಡ ಆಕಸ್ಮಿಕ ಬೆಂಕಿಗೆ ಗುಡ್ಡ ಪ್ರದೇಶದಲ್ಲಿನ ಕುರುಚಲು ಅರಣ್ಯ ಸಂಪತ್ತು ಸುಟ್ಟು ಕರಕಲಾಗಿದೆ.

ಗುಡ್ಡದ ಸರಗಿನಲ್ಲಿ ಜನವಸತಿ ಪ್ರದೇಶ, ಮೊರಾರ್ಜಿ ವಸತಿ ಶಾಲೆ, ಸರ್ಕಾರಿ ಪ್ರೌಢಶಾಲೆ ಇದೆ. ಗುಡ್ಡದ ಮೇಲೆ ಗಾಳಿ ವಿದ್ಯುತ್‌ ಇದೆ. ಬೆಂಕಿ ಆವರಿಸುತ್ತಿದ್ದಂತೆಯೇ ಗ್ರಾಮಸ್ಥರು, ವಿದ್ಯಾರ್ಥಿಗಳು, ಶಿಕ್ಷಕರು ಆತಂಕ್ಕೀಡಾದರು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಗದಗ: ಕಪ್ಪತ್ತಗುಡ್ಡದ ಸಸ್ಯ ಆಹುತಿ ಪಡೆಯುತ್ತಿರುವ ಬೆಂಕಿ..!

ವಿಸ್ತಾರವಾದ ಗುಡ್ಡ ಪ್ರದೇಶದಲ್ಲಿನ ಕುರುಚಲು ಗಿಡಗಂಟಿ, ಹುಲ್ಲಿಗೆ ಬೆಂಕಿ ಆವರಿಸಿತು. ಜೋರಾದ ಗಾಳಿ, ಗುಡ್ಡ ಪ್ರದೇಶದ ಮೇಲೆ ವಾಹನ ಹೋಗಲಾಗದ್ದರಿಂದ ಸಿಬ್ಬಂದಿ ಗುಡ್ಡದ ಮೇಲೆ ಹತ್ತಿ ನೀರು, ಮರದ ಟೊಂಗೆ ಬಳಸಿ 3 ಗಂಟೆಗೂ ಹೆಚ್ಚು ಕಾಲ ಶ್ರಮಿಸಿ ಬೆಂಕಿ ನಂದಿಸಿದರು. ಅವರ ಕಾರ್ಯಕ್ಕೆ ಸ್ಥಳೀಯರು, ಶಾಲೆಯ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕೈ ಜೋಡಿದರು.

ಅಗ್ನಿಶಾಮಕ ಠಾಣಾಧಿಕಾರಿ ಎಸ್‌.ವೈ. ಪಾಟೀಲ ನೇತೃತ್ವದಲ್ಲಿ ಸಿಬ್ಬಂದಿ ಕೆ.ಎನ್‌. ಹೊಸರಿತ್ತಿ, ಎಸ್‌.ಎಸ್‌. ಅಮರಗೋಳ, ಎಸ್‌.ಎಸ್‌. ಶಿರಹಟ್ಟಿ, ಎಸ್‌.ಕೆ. ಕುಲಕರ್ಣಿ ಅವರು 3 ವಾಹನಗಳನ್ನು ಬಳಸಿ ಬೆಂಕಿ ನಂದಿಸುವ ಮೂಲಕ ಹಾನಿ ತಪ್ಪಿಸಿದ್ದಾರೆ.
 

click me!