Puneeth Rajkumar Statue: ಮನೆಯ ಅಂಗಳದಲ್ಲಿ ಅಪ್ಪು ಪುತ್ಥಳಿ ಸ್ಥಾಪಿಸಿದ ರೈತ ದಂಪತಿ

By Kannadaprabha NewsFirst Published Dec 28, 2021, 9:16 AM IST
Highlights

ಒಮ್ಮೆಯಾದರೂ ನಟ ಪುನೀತ್‌ ರಾಜಕುಮಾರ್‌ ಅವರನ್ನು ನೋಡುವ ಆಸೆಯಿತ್ತು. ಆದರೆ, ಅವರ ಅಕಾಲಿಕ ನಿಧನದಿಂದ ಸಾಧ್ಯವಾಗಿಲ್ಲ. ಹೀಗಾಗಿಯೇ ಮನೆಯಂಗಳದಲ್ಲಿ ಪುನೀತ್‌ ರಾಜಕುಮಾರ್‌ ಅವರ ಕಂಚಿನ ಪುತ್ಥಳಿ ಸ್ಥಾಪಿಸಿದ್ದೇವೆ.
 

ಕೂಡ್ಲಿಗಿ (ಡಿ.28): ಒಮ್ಮೆಯಾದರೂ ನಟ ಪುನೀತ್‌ ರಾಜಕುಮಾರ್‌ (Puneeth Rajkumar) ಅವರನ್ನು ನೋಡುವ ಆಸೆಯಿತ್ತು. ಆದರೆ, ಅವರ ಅಕಾಲಿಕ ನಿಧನದಿಂದ ಸಾಧ್ಯವಾಗಿಲ್ಲ. ಹೀಗಾಗಿಯೇ ಮನೆಯಂಗಳದಲ್ಲಿ ಪುನೀತ್‌ ರಾಜಕುಮಾರ್‌ ಅವರ ಕಂಚಿನ ಪುತ್ಥಳಿ (Statue) ಸ್ಥಾಪಿಸಿದ್ದೇವೆ. ಕೂಡ್ಲಿಗಿ ತಾಲೂಕಿನ ಸಿದ್ದಾಪುರ ವಡ್ಡರಹಟ್ಟಿ ಗ್ರಾಮದ ರೈತ ದಂಪತಿ ಆರ್‌.ಟಿ. ನಾಗರಾಜ ಮತ್ತು ಅವರ ಪತ್ನಿ ಮಲ್ಲಮ್ಮ ಅಭಿಮಾನದಿಂದ ಹೇಳಿದ ಮಾತಿದು.

ಈ ದಂಪತಿ ತಮ್ಮ ಮನೆಯಂಗಳದಲ್ಲೇ ಪುನೀತ್‌ ರಾಜ್‌ಕುಮಾರ್ ಅವರ ಕಂಚಿನ ಪುತ್ಥಳಿ ಸ್ಥಾಪಿಸಿದ್ದು, ಭಾನುವಾರ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಅದನ್ನು ಅನಾವರಣಗೊಳಿಸಿದರು. ಮಾಜಿ ಶಾಸಕ ಕೆ.ವಿ. ರವೀಂದ್ರನಾಥ ಬಾಬು ಮತ್ತು ಕೆಪಿಸಿಸಿ ಸದಸ್ಯ ಲೋಕೇಶ್‌ ವಿ. ನಾಯಕ ಭಾನುವಾರ ಪುತ್ಥಳಿ ಅನಾವರಣಗೊಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಭಿಮಾನಿ ಆರ್‌.ಟಿ. ನಾಗರಾಜ, ಮಲ್ಲಮ್ಮ, ಡಾ. ಸೋಮಶೇಖರ್‌ ನಾಯ್ಕ, ಡಾ. ಪ್ರದೀಪ್‌, ಡಾ.ಪ್ರವೀಣಕುಮಾರ್‌, ಸಿಪಿಐ ಹನುಮಂತಪ್ಪ, ಬಜ್ಜಿ ಹನುಮಂತಪ್ಪ, ಗ್ರಾಪಂ ಸದಸ್ಯ ಬುಡ್ಡರಡ್ಡಿ ಸೇರಿದಂತೆ ಹಲವು ಮುಖಂಡರು, ಪುನೀತ ಅಭಿಮಾನಿಗಳಿದ್ದರು. ಸುಮಾರು 50 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಕಂಚಿನ ಪುತ್ಥಳಿಯ ವಿಚಾರ ಸಾಮಾಜಿಕ ಜಾಲತಾಣದಲ್ಲೂ ವೈರಲ್‌ (Viral) ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಅವರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

Ashwini Puneeth Rajkumar: ಅಪ್ಪು ಸಿನಿಮಾ ಸಲುವಾಗಿ ಪಡೆದ ಮುಂಗಡ ಹಣವನ್ನು ಹಿಂತಿರುಗಿಸಿದ ಪತ್ನಿ!

ನಾನೊಬ್ಬ ರೈತನಾಗಿದ್ದು, ಪುನೀತ್‌ ರಾಜಕುಮಾರ ಅವರ ಕಟ್ಟಾಅಭಿಮನಿ. ಅವರನ್ನು ಜೀವನದಲ್ಲಿ ಒಮ್ಮೆ ನೋಡುವ ಅಸೆಯಿತ್ತು ಆದರೆ, ಆಸೆ ಕೈಗೂಡಲಿಲ್ಲ. ಹೀಗಾಗಿ ಅವರನ್ನು ನಿತ್ಯ ನೋಡುವ ಉದ್ದೇಶದಿಂದ ನಮ್ಮ ಮನೆಯ ಮುಂದೆಯೇ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಿಕೊಂಡಿದ್ದೇನೆ.
ಆರ್‌.ಟಿ. ನಾಗರಾಜ ಪುನೀತ್‌ ಅಭಿಮಾನಿ

ಪವರ್‌ ಸ್ಟಾರ್‌ ಪುನೀತ್‌ ರಾಜ್ ಕುಮಾರ್  ಇಲ್ಲ ಎಂಬ ಸಂಗತಿ ಇನ್ನು ಜನರ ಮನದಿಂದ ಮಾಸಿಲ್ಲ. ಅವರ ನೆನಪಿನಲ್ಲಿ ಇಂದಿಗು ಕಾರ್ಯಕ್ರಮ, ಅನ್ನದಾಸೋಹ, ನೇತ್ರದಾನ , ಗೀತ ಗಾಯನ‌ ನಡೆಯುತ್ತಲೇ ಇದೆ. ದಾವಣಗೆರೆ ಜಿಲ್ಲೆ ಹೆಬ್ಬಾಳ ಗ್ರಾಮದಲ್ಲಿ ಅಪ್ಪುವಿನ ಪುತ್ತಳಿ ಅನಾವರಣಗೊಂಡಿದೆ. ಗ್ರಾಮದ ಹೆಬ್ಬಾಳ್ ರುದ್ರೇಶ್ವರ ಸ್ಬಾಮೀ‌ ಮಠದಿಂದ ಸ್ವಲ್ಪ ದೂರದ  ವೃತ್ತದಲ್ಲಿ ಅಪ್ಪು ಪುತ್ತಳಿ ಪ್ರತಿಷ್ಠಾಪಿಸಲಾಗಿದೆ. ಪುತ್ಥಳಿ ಅನಾವರಣವನ್ನು ಇಡೀ ಗ್ರಾಮ ಹಬ್ಬದ ರೀತಿ ಸಂಭ್ರಮಿಸಿದೆ.  ಪುತ್ಥಳಿ ಅನಾವರಣ ಒಂದು ಕಡೆಯಾದ್ರೆ ನೇತ್ರದಾನಕ್ಕೆ ಅರ್ಜಿ ಸ್ವೀಕಾರ, ಯುವಕರಿಂದ ರಕ್ತದಾನ ಹೀಗೆ ಹತ್ತಾರು ರೀತಿಯಲ್ಲಿ ಅಪ್ಪು ಹೆಸರ ಧ್ಯಾನಿಸುತ್ತಿದ್ದಾರೆ..

Puneeth Rajkumar Eye Donation: ಅಪ್ಪು ನಿಧನದ ಬಳಿಕ 400 ಜನ ನೇತ್ರದಾನ

ಹೆಬ್ಬಾಳು  ಗ್ರಾಮದ ಪುನೀತ್‌ ಅಭಿಮಾನಿಗಳು, ಅಪ್ಪು ಸ್ಮರಣಾರ್ಥ ಪುತ್ಥಳಿಯೊಂದನ್ನು ಸ್ಥಾಪಿಸಲು ಬಯಸಿದ್ರು. ಗ್ರಾಮಸ್ಥರೆಲ್ಲ ಸಹಕಾರದಿಂದ ಪುನೀತ್‌ ಪ್ರತಿಮೆ ಪ್ರತಿಷ್ಠಾಪನೆಗೊಂಡಿತು. ಈ ಕಾರ್ಯಕ್ಕೆ ಸ್ಥಳೀಯ  ಶ್ರೀ ಮಹಾಂತ ರುದ್ರಯೋಗಿ ಸ್ವಾಮೀಜಿ ಸಾನಿಧ್ಯವಹಿಸಿ ಕೈ ಜೋಡಿಸಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ‌.  ಕಲ್ಲಿನ ಈ ಆಕರ್ಷಣೀಯ ಪುತ್ತಳಿ ಅರಳಿದ್ದು ಉತ್ತರ ಪ್ರದೇಶ ಕಲಾವಿದ ವಿಪಿನ್‌ ಬಾದುರಿ ಕೈಯಲ್ಲಿ. ಸಾಗರದ ಬಳಿ ಯಾವುದೋ ಒಂದು ಕಲಾಕೃತಿ ರಚಿಸುತ್ತಿದ್ದರು. ಹೆಬ್ಬಾಳಿನ ರಮೇಶ ಸೇರಿದಂತೆ ಇತರರು ಅವರನ್ನು ಸಂಪರ್ಕಿಸಿ ಪುನೀತ್‌ ಪುತ್ಥಳಿ ರಚನೆಗೆ ಮನವಿ ಮಾಡಿದ್ರು. ಒಂದೇ ಮಾತಿಗೆ ಒಪ್ಪಿಕೊಂಡ ಕಲಾವಿದ, ನಿಗದಿತ ಸಮಯಕ್ಕಿಂತ ಮೊದಲೇ ಪುತ್ಥಳಿಯನ್ನು ರಚಿಸಿದ್ರು. ಪುತ್ಥಳಿಗೆ ಅಂದಾಜು 90 ಸಾವಿರ ರೂಪಾಯಿ ಸೇರಿ ಪ್ರತಿಷ್ಠಾಪನೆ ಹಾಗೂ ಅನಾವರಣ ಕಾರ್ಯಕ್ರಮಕ್ಕೆ ಒಟ್ಟು 2.5  ಲಕ್ಷ ರೂಪಾಯಿ ವೆಚ್ಚವಾಗಿದೆ.

ಈ ಪ್ರಪಂಚದಲ್ಲಿ ಕೊನೆಗೆ ಉಳಿಯುವುದು ಒಳ್ಳೆಯತನವೊಂದೆ ಎಂಬುದಕ್ಕೆ ಪವರ್‌ ಸ್ಟಾರ್‌ ಪುನೀತ್‌ ಸಾಕ್ಷಿಯಾಗಿದ್ದಾರೆ. ಬಲಗೈಯಿಂದ ಕೊಟ್ಟ ದಾನ ಎಡಗೈಗೂ ಗೊತ್ತಾಗಬಾರದು ಎಂಬಂತೆ ಅಪ್ಪು ಮಾಡಿದ ದಾನ-ಧರ್ಮ ಹಾಗೂ ಸಮಾಜಮುಖಿ ಕೆಲಸಗಳು ಜನಮಾನಸದಲ್ಲಿ ಅಮರವಾಗಿವೆ.  ಅಪ್ಪು ಸದಾ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಜೀವಂತವಾಗಿದ್ದಾರೆ ಎಂಬುದಕ್ಕೆ ಈ ಕಾರ್ಯಕ್ರಮಗಳೇ ಸಾಕ್ಷಿ.

click me!