ಧಾರವಾಡ ಪ್ರತ್ಯೇಕ ಪಾಲಿಕೆಗೆ ನಡೆದಿದೆ ಪ್ರಯತ್ನ: ಜೋಶಿ

By Kannadaprabha NewsFirst Published Oct 4, 2022, 11:57 AM IST
Highlights
  • ಧಾರವಾಡ ಪ್ರತ್ಯೇಕ ಪಾಲಿಕೆಗೆ ನಡೆದಿದೆ ಪ್ರಯತ್ನ
  • ಹೋರಾಟ ವೇದಿಕೆಗೆ ಉತ್ತರಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಧಾರವಾಡ (ಅ.4) :  ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ನೀಡುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ರಾಜಕೀಯ ಮಟ್ಟದಲ್ಲಿ ತೀವ್ರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಧಾರವಾಡ ಜಿಲ್ಲೆಯ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಜಿಲ್ಲಾಧಿಕಾರಿ ಸೂಚನೆ

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಯ ಗಣ್ಯರ ಅಹವಾಲಿಗೆ ಉತ್ತರಿಸಿದ ಅವರು, ಕಳೆದ ಒಂದು ವರ್ಷಗಳಿಂದಲೂ ಇಲ್ಲಿನ ನಾಗರಿಕರು ನಡೆಸುತ್ತಿರುವ ಹೋರಾಟ ತಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ಸರ್ಕಾರಿ ಮಟ್ಟದಲ್ಲಿ ಪರಿಶೀಲನೆಯೂ ನಡೆದಿದೆ. ಧಾರವಾಡದ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ನಗರಾಭಿವೃದ್ಧಿ ಖಾತೆ ಕಾರ್ಯದರ್ಶಿ ಅಜಯ ನಾಗಭೂಷಣ ಮತ್ತು ಅಧಿಕಾರಿಗಳ ಮೂಲಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೂ ಸಹ ಪ್ರತ್ಯೇಕ ಪಾಲಿಕೆ ರಚಿಸುವ ಹಾಗೂ ಕಾರ್ಯಗತ ಆಗುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಒಟ್ಟಾರೆ ವೈಜ್ಞಾನಿಕವಾಗಿ ಅವರು ಸಲ್ಲಿಸಬಹುದಾದ ವರದಿಯ ಆಧಾರದ ಮೇಲೆ ಮುಂದಿನ ನಿರ್ಧಾರ ಅವಲಂಬಿತ ಎಂದರು.

ಪ್ರತ್ಯೇಕ ಪಾಲಿಕೆ ರಚನೆಗೆ ಬೇಕಾದ ಎಲ್ಲ ಅರ್ಹತೆಗಳು ಧಾರವಾಡಕ್ಕೆ ಇವೆ ಎಂಬ ಅಂಶವನ್ನು ಸಚಿವರ ಗಮನಕ್ಕೆ ತಂದಾಗ, ಇದರ ಜತೆಗೆ ಸಂಬಂಧಿ​ಸಿದ ಜನ ಪ್ರತಿನಿ​ಗಳ ಸಹಮತವೂ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮೇಯರ್‌ ಈರೇಶ ಅಂಚಟಗೇರಿ ಮತ್ತಿತರರೊಂದಿಗೆ ಚರ್ಚಿಸುವುದಾಗಿ ಸಚಿವರು ಹೇಳಿದರು. ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಯ ವಿಷಯದಲ್ಲಿ ತಾವು ಧನಾತ್ಮಕ ವಿಚಾರ ಹೊಂದಿರುವುದಾಗಿ ತಿಳಿಸಿದರು.

ಸಚಿವರ ಭೇಟಿಗೂ ಮೊದಲು ಹೋರಾಟ ವೇದಿಕೆಯ ಗಣ್ಯರು ಶಾಸಕ ಅರವಿಂದ ಬೆಲ್ಲದ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚೆ ಒಂದು ಗಂಟೆ ಚರ್ಚೆ ನಡೆಸಿದರು. ಗಣ್ಯರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಶಾಸಕರು ಪ್ರತ್ಯೇಕ ಪಾಲಿಕೆ ನಿರ್ಮಿಸುವ ನಿಟ್ಟಿನಲ್ಲಿ ತಾವು ಕಳೆದ ಮೂರು ವರ್ಷಗಳಿಂದ ಕಾರ್ಯ ಪ್ರವೃತ್ತರಾಗಿದ್ದಾಗಿಯೂ ತಿಳಿಸಿದರು,. ಈ ಬಗ್ಗೆ ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವುದಾಗಿಯೂ ಬೆಲ್ಲದ ತಿಳಿಸಿದರು.

ರಾಹುಲ್ ಗಾಂಧಿಯನ್ನು ಯಾರು ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಹೋರಾಟ ವೇದಿಕೆಯ ಗೌರವಾಧ್ಯಕ್ಷ ವೆಂಕಟೇಶ ಮಾಚಕನೂರು, ಅಧ್ಯಕ್ಷ ಮನೋಜ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಂ.ಬಿ. ಕಟ್ಟಿ, ಕಾರ್ಯದರ್ಶಿ ವಿಠ್ಠಲ ಕಮ್ಮಾರ, ಸಂಘಟನಾ ಕಾರ್ಯದರ್ಶಿ ಜಿ.ಎಸ್‌. ಬ್ಯಾಡಗಿ, ಚೆನ್ನಬಸವ ಕರಡೆಣ್ಣನವರ, ಕೋಶಾಧ್ಯಕ್ಷ ಶಂಕರ ನೀರಾವರಿ ಇದ್ದರು.

click me!