ನಿವೇಶನ ರಹಿತರಿಗೆ ಶೀಘ್ರ ನಿವೇಶನ ಹಂಚುವ ಕಾರ್ಯಕ್ಕೆ ಚಾಲನೆ : ಟಿ.ಬಿ. ಜಯಚಂದ್ರ

By Kannadaprabha NewsFirst Published Jan 13, 2024, 10:53 AM IST
Highlights

  ಶಿರಾ ತಾಲೂಕಿನಲ್ಲಿ ನಿವೇಶನ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹೇಳಿದರು.

  ಶಿರಾ :  ಶಿರಾ ನಗರ ಸೇರಿದಂತೆ ತಾಲೂಕಿನಲ್ಲಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ನೀಡುವ ಉದ್ದೇಶದಿಂದ ನಾನು 2018ರಲ್ಲಿ ಸಚಿವನಾಗಿದ್ದ ಸಂದರ್ಭದಲ್ಲಿ ಪೂರ್ವತಯಾರಿ ಮಾಡಲಾಗಿತ್ತು. ಆದರೆ ಚುನಾವಣೆಯಲ್ಲಿ ಪರಾಭವಗೊಂಡ ಕಾರಣ ನಿವೇಶನ ನೀಡಲಾಗಿರಲಿಲ್ಲ. ಈಗ ತಾಲೂಕಿನಲ್ಲಿ ನಿವೇಶನ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹೇಳಿದರು.

ನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಸುಮಾರು ವರ್ಷಗಳಿಂದ ಶಿರಾ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬಡ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮರಿಚೀಕೆಯಾಗಿದೆ. ನಾನು ನಾಗಿದ್ದ ಸಂದರ್ಭದಲ್ಲಿ ಸುಮಾರು 18000ಕ್ಕೂ ಹೆಚ್ಚು ನಿವೇಶನ ಹಂಚಿಕೆ ಮಾಡಲು ಎಲ್ಲಾ ರೀತಿಯ ಪೂರ್ವತಯಾರಿ ಮಾಡಿದ್ದು ಕೆಲ ತಾಂತ್ರಿಕ ಕಾರಣಗಳಿಂದ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗಲಿಲ್ಲ. ಈಗ ಮತ್ತೂಮ್ಮೆ ಕ್ಷೇತ್ರಾದ್ಯಂತ ನಿವೇಶನ ಹಂಚಿಕೆ ಕಾರ್ಯಕ್ಕೆ ವೇಗ ನೀಡಿದ್ದು ಈಗಾಗಲೇ ತಹಸೀಲ್ದಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಇವರ ಸಮ್ಮುಖದಲ್ಲಿ ಪಿಡಿಒ, ಕಂದಾಯ ನಿರೀಕ್ಷಕರು, ನಗರಸಭೆ ಅಧ್ಯಕ್ಷರು, ಆಯುಕ್ತರು, ಸದಸ್ಯರು, ಸರ್ವೇಯರ್ಗಳ ಸಭೆ ನಡೆಸಿ ಈ ಹಿಂದೆ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಗುರುತಿಸಲಾಗಿದ್ದ ಜಮೀನುಗಳಲ್ಲಿ ನಿವೇಶನ ಹಂಚಿಕೆ ಮಾಡಲು ಕಾರ್ಯಪ್ರವೃತ್ತರಾಗುವಂತೆ ಸೂಚಿಸಲಾಗಿದೆ.

ಕೆಲ ಹಳ್ಳಿಗಳಲ್ಲಿ ಇರುವ ಕಾನೂನು ತೊಡಕುಗಳ ಸಮಸ್ಯೆಗೆ ಬದಲಿ ಜಾಗದ ವ್ಯವಸ್ಥೆ ಅಥವಾ ಅಲ್ಲಿರುವ ಸಮಸ್ಯೆಯನ್ನು ಬಗೆಹರಿಸಿ ನಿವೇಶನ ಹಂಚಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ಶಿರಾ ನಗರ ಹಾಗೂ ತಾಲೂಕಿನ ಹಲವು ಗ್ರಾಮಗಳಲ್ಲಿ ಹಲವಾರು ನಿವೇಶನ ರಹಿತರಿದ್ದಾರೆ. ಅವರಿಗೆ ಶೀಘ್ರ ನಿವೇಶನ ನೀಡುವ ಕೆಲಸವಾಗಬೇಕು. ಇದಕ್ಕೆ ಅಧಿಕಾರಿಗಳು ತಮ್ಮ ಕೆಲವನ್ನು ಶೀಘ್ರಗತಿಯಲ್ಲಿ ಮಾಡುವುದರ ಜೊತೆಗೆ ಅರ್ಹ ಫಲಾನುಭವಿಗಳನ್ನು ನಿಯಮಾನುಸಾರ ಆಯ್ಕೆ ಮಾಡಬೇಕು. ಹಾಗೂ ಶಿರಾ ನಗರಸಭೆ ಮತ್ತು ಶಿರಾ ಯೋಜನಾ ಪ್ರಾಧಿಕಾರದಲ್ಲಿ ಕೆಲಸಗಳು ವೇಗವಾಗಿ ಆಗುತ್ತಿಲ್ಲ. ಸಾರ್ವಜನಿಕರಿಗೆ ಅಧಿಕಾರಿಗಳು, ಸಿಬ್ಬಂದಿ ಸ್ಪಂದಿಸಿ ಕೆಲಸ ಮಾಡಬೇಕಿದೆ. ನಿವೇಶನಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹರಿಗೂ ನಿವೇಶನ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು, ತಹಸೀಲ್ದಾರ್ ದತ್ತಾತ್ರೇಯ, ನಗರಸಭಾ ಪೌರಾಯುಕ್ತ ರುದ್ರೇಶ್, ಆಶ್ರಯ ಸಮಿತಿ ಸದಸ್ಯರಾದ ನೂರುದ್ದೀನ್, ಜಯಲಕ್ಷ್ಮೀ, ವಾಜರಹಳ್ಳಿ ರಮೇಶ್, ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.

click me!