ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಪೌರ ಕಾರ್ಮಿಕರಿಗೆ ಕಿಟ್‌ ವಿತರಣೆ

By Kannadaprabha NewsFirst Published May 2, 2020, 10:59 AM IST
Highlights

ಸಿದ್ದರಾಮಯ್ಯ ಸೂಚನೆ ಮೇರೆಗೆ ಕ್ಷೇತ್ರದ 114 ಹಳ್ಳಿಗಳಲ್ಲಿ ಊಟದ ವ್ಯವಸ್ಥೆ ಮಾಡಿದ್ದೇವೆ| ಬಾದಾಮಿ, ಗುಳೇದಗುಡ್ಡ, ಕೆರೂರ ಪಟ್ಟಣಗಳ ಸಾವಿರಾರು ಕುಟುಂಬಗಳಿಗೆ ಆಹಾರ ಕಿಟ್‌ ವಿತರಣೆ| ಗೋವಾದಲ್ಲಿನ ಸಾವಿರ ಕುಟುಂಬಗಳಿಗೆ ಆಹಾರ ಕಿಟ್‌ ಕಳಿಸಿಕೊಟ್ಟಿದ್ದೇವೆ ಎಂದ ಸಿದ್ದರಾಮಯ್ಯ ಅವರ ಅಭಿಮಾನಿಗಳು|

ಗುಳೇದಗುಡ್ಡ(ಮೇ.02): ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಅಭಿಮಾನಿ ಬಳಗದ ವತಿಯಿಂದ ಮುಖಂಡರಾದ ಹೊಳಬಸು ಶೆಟ್ಟರ, ಸಂಜಯ ಬರಗುಂಡಿ ಅವರ ನೇತೃತ್ವದಲ್ಲಿ ಪುರಸಭೆಯ ಪೌರ ಕಾರ್ಮಿಕರಿಗೆ ಅಗತ್ಯ ದಿನಸಿ ವಸ್ತುಗಳ ಕಿಟ್‌ನ್ನು ವಿತರಿಸಲಾಯಿತು.

ಮುಖಂಡರಾದ ಹೊಳಬಸು ಶೆಟ್ಟರ ಮಾತನಾಡಿ, ಇಡೀ ವಿಶ್ವವೇ ಕೊರೋನಾಕ್ಕೆ ನಲುಗಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿತ್ಯ ಪಟ್ಟಣವನ್ನು ಸ್ವಚ್ಛವಾಗಿಸುವಲ್ಲಿ ಪೌರ ಕಾರ್ಮಿಕರ ಶ್ರಮ ಸಾಕಷ್ಟಿದೆ. ಅವರ ಕುಟುಂಬಕ್ಕೆ ನೆರವಾಗಲೆಂದು ಈ ಆಹಾರ ಕಿಟ್‌ ವಿತರಿಸಿದ್ದೇವೆ. ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಕ್ಷೇತ್ರದ 114 ಹಳ್ಳಿಗಳಲ್ಲಿ ಊಟದ ವ್ಯವಸ್ಥೆ ಮಾಡಿದ್ದೇವೆ. ಅಷ್ಟೇ ಅಲ್ಲದೇ ಬಾದಾಮಿ, ಗುಳೇದಗುಡ್ಡ, ಕೆರೂರ ಪಟ್ಟಣಗಳ ಸಾವಿರಾರು ಕುಟುಂಬಗಳಿಗೆ ಆಹಾರ ಕಿಟ್‌ ವಿತರಿಸಿದ್ದೇವೆ. 2 ಲಕ್ಷ ಮಾಸ್ಕ್‌ ವಿತರಿಸಿದ್ದೇವೆ. ಅದರ ಜೊತೆಗೆ ಗೋವಾದಲ್ಲಿನ ಸಾವಿರ ಕುಟುಂಬಗಳಿಗೆ ಆಹಾರ ಕಿಟ್‌ ಕಳಿಸಿಕೊಟ್ಟಿದ್ದೇವೆ ಎಂದು ಹೇಳಿದರು.

ಕೊರೋನಾ ಸೋಂಕಿ​ತರ ಪತ್ತೆಗೆ ಬದಲಿ ​ಮಾರ್ಗ: ಇಲ್ಲಿದೆ ಮಾಸ್ಟರ್‌ ಪ್ಲಾನ್‌..!

ಮುಖಂಡ ಸಂಜಯ ಬರಗುಂಡಿ ಮಾತನಾಡಿ, ಕೊರೋನಾ ವಿರುದ್ಧ ಹೋರಾಡುತ್ತಿರುವ ಪೌರ ಕಾರ್ಮಿಕರು, ಪೊಲೀಸ್‌ ಇಲಾಖೆ ಆರೋಗ್ಯ ಇಲಾಖೆ, ತಾಲೂಕು ಆಡಳಿತದ ಕಾರ್ಯ ಶ್ಲಾಘನೀಯವಾದುದು. ಅವರಿಗೆ ಸಹಕಾರ ನೀಡುತ್ತ, ಸರಕಾರದ ನಿಯಮಗಳನ್ನು ಪಾಲನೆ ಮಾಡಿ, ಭಾರತವನ್ನು ಕೊರೋನಾ ಮುಕ್ತವನ್ನಾಗಿ ಮಾಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಗೌಡರ, ಜುಗಲಕಿಶೋರ ಭಟ್ಟಡ, ಗೋಪಾಲ ಭಟ್ಟಡ,ಶಿವನಯ್ಯ ಮಳ್ಳಿಮಠ, ಪುರಸಭೆ ಸದಸ್ಯ ಶ್ಯಾಮ ಮೇಡಿ, ಅಂಬು ಕವಡಿಮಟ್ಟಿ, ಬಾಬು ಬೊಂಬಲೇಕರ,ಈರಣ್ಣ ಹವೇಲಿ, ಮಹಾಂತೇಶ ಲಕ್ಕುಂಡಿ, ಹನಮಂತ ಗೌಡರ, ಪ್ರದೀಪ ಕಂಚ್ಯಾಣಿ, ವಿನೋದ ಗಾಜಿ, ಸಾಗರ ಕೊಣ್ಣುರ, ಪುರಸಭೆ ಮುಖ್ಯಾಧಿ​ಕಾರಿ ರವೀಂದ್ರ ಅಂಗಡಿ, ರಮೇಶ ಪದಕಿ ಇತರರು ಇದ್ದರು.
 

click me!