ಶಿರಸಿ: ಈ ಗ್ರಾಮ​ಗ​ಳಲ್ಲಿ 2 ದಿನ ಬಿಟ್ಟು ದೀಪಾ​ವ​ಳಿ ಗೋವಿನ ಪೂಜೆ..!

By Kannadaprabha NewsFirst Published Nov 4, 2021, 2:32 PM IST
Highlights

*  ಸುಮಾರು 2 ಸಾವಿರ ಮನೆಗಳಲ್ಲಿ ಹೆಚ್ಚು ಪಾಡ್ಯದ ದಿನ ದೀಪಾವಳಿ ಆಚ​ರ​ಣೆ
*  ಮುರೇಗಾರಿನಲ್ಲಿ ಹಬ್ಬದ ಗೋಪೂಜೆಯೇ ಇಲ್ಲ
*  ಈ ಗ್ರಾಮಗಳ ಹೆಚ್ಚು ಪಾಡ್ಯದ ದೀಪಾವಳಿಯ ಹಿಂದೆ ವಿಶೇಷ ಕಥೆ
 

ಮಂಜುನಾಥ ಸಾಯೀಮನೆ

ಶಿರಸಿ(ನ.04):  ನಾಡಿನೆಲ್ಲೆಡೆ(Karnataka) ದೀಪಾವಳಿಯ(Deepavali) ಸಂಭ್ರಮ ಜೋರಾಗಿದೆ. ಆದರೆ, ತಾಲೂಕಿನ ಅಗಸಾಲ, ಬೊಮ್ನಳ್ಳಿ, ಬಿಸಲಕೊಪ್ಪ, ಬಕ್ಕಳ ನಾಲ್ಕು ಗ್ರಾಮಗಳಲ್ಲಿ(Villages) ದೀಪಾವಳಿಯ ಪಾಡ್ಯದ ಸಂಭ್ರಮವನ್ನು ಭಾನುವಾರ ಆಚರಿಸಲಾಗುತ್ತಿದೆ!

ಹೌದು, ಹೆಚ್ಚು ಪಾಡ್ಯ ಹಬ್ಬ ಆಚರಣೆ ಎಂಬ ವಿಶೇಷ ಸಂಪ್ರದಾಯ(Special Tradition) ಗ್ರಾಮಗಳಲ್ಲಿದ್ದು, ಇಲ್ಲಿ ಹಬ್ಬದ(Festival) ಆಚರಣೆ ಎರಡು ದಿನ ತಡವಾಗಿ ಅಂದರೆ ಪ್ರತಿ ವರ್ಷ ತದಿಗೆಯಂದು ನಡೆಯುತ್ತದೆ.
ಸುಮಾರು 2 ಸಾವಿರ ಮನೆಗಳಲ್ಲಿ ಪಾಡ್ಯದ ಬದಲು ತದಿಗೆ ದಿನ ದೀಪಾವಳಿ ಆಚರಿಸುತ್ತಾರೆ. ಅದಕ್ಕೆ ಹೆಚ್ಚು ಪಾಡ್ಯ ಎಂದು ಕರೆಯುತ್ತಾರೆ. ಒಂದೊಮ್ಮೆ ಹೆಚ್ಚು ಪಾಡ್ಯ ಸೋಮವಾರ ಅಥವಾ ಶನಿವಾರ ಬಂದರೆ ಅಂದು ಆಚರಣೆ ಮಾಡದೇ ಮತ್ತೂ ಒಂದು ದಿನ ತಡವಾಗಿ, ಮಾರನೇ ದಿನ ಆಚರಿಸಲಾಗುತ್ತಿದೆ.

Deepavali| ಪಟಾಕಿ ಬೆಲೆ ಭಾರೀ ಏರಿಕೆ, ಜನರ ಕಿಸೆಗೆ ಬೆಂಕಿ..!

ಕಾರ​ಣ​ವೇ​ನು?

ಈ ಗ್ರಾಮಗಳ ಹೆಚ್ಚು ಪಾಡ್ಯದ ದೀಪಾವಳಿಯ ಹಿಂದೆ ವಿಶೇಷ ಕಥೆ ಇದೆ. ಮಲೆನಾಡಿನ ದೀಪಾವಳಿಯಲ್ಲಿ ಗೋಪೂಜೆಯೇ(Cow Pooja) ಪ್ರಧಾನ. ಹಳ್ಳಿಗಳಲ್ಲಿ ಈ ವೇಳೆ ಬೆಟ್ಟಬೇಣಗಳಲ್ಲಿ ಹುಲುಸಾಗಿ ಹುಲ್ಲೂ ಬೆಳೆದಿರುತ್ತದೆ. ಹೀಗಾಗಿ, ಆಕಳುಗಳನ್ನು(Cow) ಮೇಯಲು ಬಿಡುತ್ತಾರೆ. ಸಂಜೆಯಾಗುತ್ತಿದ್ದಂತೆಯೇ ತಾವಾಗಿಯೇ ಅವು ಮನೆಯ ಕಡೆ ಧಾವಿಸುತ್ತವೆ. ಇದೇ ರೀತಿ ಒಮ್ಮೆ ಮೇಯಲು ಬಿಟ್ಟಆಕಳು ಸಂಜೆ ವಾಪಸಾಗದೇ ಇದ್ದ ಕಾರಣ ಮಾರನೇ ದಿನ ಗೋಪೂಜೆ ಆಚರಣೆ ನಡೆದಿರಲಿಲ್ಲ. ಒಂದೆರಡು ದಿನ ತಡವಾಗಿ ಅವು ವಾಪಸಾದ ಬಳಿಕ ಗೋಪೂಜೆ ನಡೆಸಿ ಹಬ್ಬ ಪೂರ್ಣಗೊಳಿಸಿರುವ ಸಾಧ್ಯತೆ ಇದೆ. ಮುಂದೆ ಈ ಆಚರಣೆಯೇ ಜಾರಿಗೆ ಬಂದು ಪ್ರತಿ ವರ್ಷವೂ ಹೆಚ್ಚು ಪಾಡ್ಯ (ತದಿಗೆ)ಯಂದೇ ಹಬ್ಬ ಆಚರಿಸುತ್ತ ಬಂದಿರಬಹುದು ಎನ್ನುತ್ತಾರೆ ಈ ಗ್ರಾಮಗಳ ಹಿರಿಯರು. ಅಲ್ಲದೇ, ಯಲ್ಲಾಪುರ(Yellapur) ತಾಲೂಕಿನ ಕೆಲವೆಡೆಯೂ ಹೆಚ್ಚು ಪಾಡ್ಯದಂದೇ ಗೋಪೂಜೆ ನಡೆಸಲಾಗುತ್ತಿದೆ.

ಹೆಚ್ಚು ಪಾಡ್ಯ ಆಚರಣೆಯ ಹಿಂದೆ ಇನ್ನೊಂದು ಕಾರಣದ ಸಾಧ್ಯತೆ ಬಗ್ಗೆ ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹಬ್ಬ ಎಂದರೆ ನೆಂಟರಿಷ್ಟರೆಲ್ಲ ಒಂದೆಡೆ ಸೇರಿ ಸಂತಸ ಹಂಚಿಕೊಳ್ಳಬೇಕು ಎಂಬ ಆಸೆ ಸಹಜ. ಆದರೆ, ನಾಡಿನೆಲ್ಲೆಡೆ ಒಂದೇ ದಿನದಂದು ಹಬ್ಬ ನಡೆದರೆ ನೆಂಟರ ಮನೆಗೆ ತೆರಳಲು ಸಾಧ್ಯವಿಲ್ಲ. ನೆಂಟರಿಷ್ಟರಿಗೂ ತಮ್ಮ ಮನೆಯಲ್ಲಿ ಹಬ್ಬ ಆಚರಿಸಬೇಕಿರುವುದರಿಂದ ಅವರಿಗೂ ಬರಲು ಸಾಧ್ಯವಿಲ್ಲ. ಇದರ ಬದಲು, ಹಬ್ಬದ ದಿನದಂದು ನೆಂಟರ ಮನೆಗೆ ತೆರಳಿ, ಹೆಚ್ಚು ಪಾಡ್ಯದ ದಿನ ತಾವು ಹಬ್ಬ ಆಚರಿಸಿ, ನೆಂಟರು ಮಿತ್ರರನ್ನು ಆಹ್ವಾನಿಸುವ ಪದ್ಧತಿ ಬೆಳೆದುಬಂದಿದೆ ಎನ್ನುತ್ತಾರೆ.

ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀ ಪೂಜೆಯ ಮಹತ್ವ, ವೈಶಿಷ್ಟ್ಯತೆ ಬಗ್ಗೆ ತಿಳಿದುಕೊಳ್ಳಿ

ಮುರೇಗಾರಿನಲ್ಲಿ ಹಬ್ಬದ ಗೋಪೂಜೆಯೇ ಇಲ್ಲ!

ತಾಲೂಕಿನ ಸಾಲ್ಕಣಿ ಬಳಿಯ ಮುರೇಗಾರ ಗ್ರಾಮದಲ್ಲಿ ದೀಪಾವಳಿಯ ವೇಳೆ ಗೋಪೂಜೆ ಆಚರಣೆಯನ್ನೇ ಮಾಡಲಾಗುವುದಿಲ್ಲ!

ಗ್ರಾಮದ ಪ್ರಮುಖರು ಹೇಳುವಂತೆ, ಗ್ರಾಮದ ಇತಿಹಾಸದಲ್ಲಿ ಮೇಯಲು ಬಿಟ್ಟ ಆಕಳನ್ನು ಹುಲಿ ಹಿಡಿದ ಕಾರಣಕ್ಕೋ ಅಥವಾ ಇನ್ಯಾವುದೋ ಕಾರಣದಿಂದ ವಾಪಸಾಗಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ದೀಪಾವಳಿ ದಿನಗಳಲ್ಲಿ ಗೋಪೂಜೆ ಆಚರಣೆಯನ್ನೇ ಬಿಟ್ಟಿರಬಹುದು ಎನ್ನುತ್ತಾರೆ !

ಹೆಚ್ಚು ಪಾಡ್ಯ ಆಚರಣೆಯಿಂದ ಅನುಕೂಲವಾಗಿದೆ. ಇದರಿಂದಾಗಿ ಹಬ್ಬದ ಸಂತಸ ಇನ್ನಷ್ಟು ಹೆಚ್ಚಿದಂತಾಗಿದೆ ಎಂದು ನ್ಯಾಯವಾದಿ ಸದಾನಂದ ಭಟ್‌ ನಿಡಗೋಡ ತಿಳಿಸಿದ್ದಾರೆ. 
 

click me!