ಅಕಾಲಿಕ ಮಳೆ: ಕೋಟ್ಯಂತರ ರುಪಾಯಿ ಬೆಳೆ ಹಾನಿ, ಸಂಕಷ್ಟದಲ್ಲಿ ರೈತ!

By Kannadaprabha NewsFirst Published Apr 9, 2020, 8:22 AM IST
Highlights

ಬತ್ತ, ಬಾಳೆ, ಮಾವು ಸೇರಿದಂತೆ ಕಟಾವಿಗೆ ಬಂದಿರುವ ಬೆಳೆ ಹಾನಿ|ಮಾರುಕಟ್ಟೆಯೂ ಇಲ್ಲ, ಬೆಳೆಯೂ ಇಲ್ಲ ಎನ್ನುವಂತಾಗಿದೆ|ತೋಟಗಾರಿಕೆ ಬೆಳೆ ಬಹುತೇಕ ಹಾನಿ|
 

ಕೊಪ್ಪಳ(ಏ.09): ಜಿಲ್ಲಾದ್ಯಂತ ಅಕಾಲಿಕ ಮಳೆ ಮತ್ತು ಬಿರುಗಾಳಿಯ ಅವಾಂತರದಿಂದ ಮಂಗಳವಾರ ಕೋಟ್ಯಂತರ ರುಪಾಯಿ ಮೌಲ್ಯದ ಬೆಳೆ ಹಾಳಾಗಿದೆ. ಅದರಲ್ಲೂ ಕಟಾವಿಗೆ ಬಂದಿದ್ದ ಬತ್ತ, ಬಾಳೆ ಹಾಗೂ ಮಾವು ಅಪಾರ ಪ್ರಮಾಣದ ಹಾನಿ ಮಾಡಿದೆ.

ತಾಲೂಕಿನ ಕಾತರಕಿ ಗ್ರಾಮದ ಶೇಖರಯ್ಯ ಅವರ ತೋಟದಲ್ಲಿ ಬೆಳೆದಿದ್ದ 5 ಎಕರೆ ಬಾಳೆ ಬೆಳೆ ಸಂಪೂರ್ಣ ಹಾಳಾಗಿ ಹೋಗಿದೆ. ಗುಳದಳ್ಳಿ ಗ್ರಾಮದಲ್ಲಿ ಗುಡದಪ್ಪ ದೊಡ್ಡಮನಿ ಅವರ ಬಾಳೆಯೂ ಹಾಳಾಗಿ ಹೋಗಿದೆ. ಕಾರಟಗಿ, ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶ ವ್ಯಾಪ್ತಿಯಲ್ಲಿ ಕಟಾವಿಗೆ ಬಂದಿದ್ದ ಬತ್ತ ಸಂಪೂರ್ಣ ನೆಲಕ್ಕೆ ಬಿದ್ದು ಹೋಗಿದೆ.

ಕಾಲುವೆಗೆ ಮೃತ ತಂದೆಯ ಪಿಂಡ ಬಿಡಲು ಹೋಗಿದ್ದ ಪುತ್ರ ನಾಪತ್ತೆ

ಅಕಾಲಿಕ ಮಳೆಯ ಅವಾಂತರ:

ತಾವರಗೇರಾ- ಮಂಗಳವಾರ ಮಧ್ಯಾಹ್ನ 1.30 ರಿಂದ 2-30ರ ವರೆಗೆ ಬಿದ್ದ ಮಳೆ ಪಟ್ಟಣದ ಜನರನ್ನು ಬೆಚ್ಚಿ ಬೀಳುವಂತೆ ಮಾಡಿತು. ಮಿಂಚು, ಗುಡುಗಿನಿಂದ ಕೂಡಿದ ಆಲಿಕಲ್ಲು ಮಳೆ, ನಂತರ ಬೀಸಿದ ಬಿರುಗಾಳಿ ಜನರನ್ನು ತಲ್ಲಣಗೊಳಿಸಿತು. ಈ ಮಳೆಯಿಂದ ಕುರುಬರ ಬಡಾವಣೆಯಲ್ಲಿ ದೊಡ್ಡಮರ ಮುರಿದು ಬಿದ್ದಿದೆ. ಪೊಲೀಸ್‌ ಠಾಣೆಯಲ್ಲಿ ಬೇವಿನ ಮರ ಮುರಿದು ಬಿದ್ದಿದೆ. ಬಸವಣ್ಣ  ಕ್ಯಾಂಪಿನಲ್ಲಿ ವಿದ್ಯುತ್‌ ಕಂಬ ಮುರಿದು ಕೋತಿಯೊಂದು ಸತ್ತಿದೆ. ಸಿಂಧನೂರ ರಸ್ತೆಯಲ್ಲಿಯ ಫಯಾಜ್‌ ಹಾಗೂ ಮೆಹೆಬೂಬ್‌ ಎಂಬ ವ್ಯಕ್ತಿಗಳಿಗೆ ಸೇರಿದ ಗ್ಯಾರೇಜಿನ ಎಲ್ಲ ತಗಡುಗಳು ಮಳೆ, ಗಾಳಿಗೆ ಹಾರಿ ಹೋಗಿವೆ.

ಇನ್ನು ಬಜಾರದಲ್ಲಿ ಕಳಕಪ್ಪ ಉಪ್ಪಳ ಅವರ ಅಂಗಡಿಯ ಮೇಲಿನ ಕೋಣೆಯ ಎಲ್ಲ ತಗಡುಗಳು ಕಿತ್ತಿ ಹೋಗಿದ್ದು, ಅದರಲ್ಲಿ ಇದ್ದ ಹೊಸ ಬಟ್ಟೆಗಳು ಮಳೆನೀರಿಗೆ ನೆನೆದು ಹಾಳಾಗಿವೆ. ಅಶೋಕ ಕಲಾಲ ಅವರ ಮನೆಯ ಮೇಲಿನ ತಗಡು ಕಿತ್ತು ಹಾರಿ ಹೋಗಿವೆ.

ಹೀಗೆ ಅನೇಕ ಅವಾಂತರಗಳನ್ನು ಈ ಅಕಾಲಿಕ ಮಳೆ, ಗಾಳಿಯಿಂದ ಉಂಟಾಗಿದೆ. ಆದರೆ, ಈ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ರೈತರು ತಮ್ಮ ಹೊಲಗಳಲ್ಲಿ ಕೆಲಸ ಪ್ರಾರಂಭಿಸಲು ಮಳೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.
 

click me!