ಚಿಕ್ಕಬಳ್ಳಾಪುರದಲ್ಲಿ ಕೋರ್ಟ್‌, 2 ಆಸ್ಪತ್ರೆ ಸೀಲ್‌ಡೌನ್‌..!

By Kannadaprabha NewsFirst Published Jun 25, 2020, 9:53 AM IST
Highlights

ಕೊರೋನಾ ಮಹಾಮಾರಿ ಮಂಗಳವಾರ ತನ್ನ ಪೈಶಾಚಿಕತೆ ಮೆರೆದಿದ್ದು, ಒಂದು ನ್ಯಾಯಾಲಯ, ಒಂದು ಆಯುರ್ವೇದಿಕ್‌ ಆಸ್ಪತ್ರೆ, ಮತ್ತೊಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಚಿಕ್ಕಬಳ್ಳಾಪುರ(ಜೂ.25): ಕೊರೋನಾ ಮಹಾಮಾರಿ ಮಂಗಳವಾರ ತನ್ನ ಪೈಶಾಚಿಕತೆ ಮೆರೆದಿದ್ದು, ಒಂದು ನ್ಯಾಯಾಲಯ, ಒಂದು ಆಯುರ್ವೇದಿಕ್‌ ಆಸ್ಪತ್ರೆ, ಮತ್ತೊಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸೀಲ್‌ಡೌನ್‌ ಮಾಡಲಾಗಿದೆ. ಇಬ್ಬರು ವೈದ್ಯರು ಮತ್ತು ಒಬ್ಬ ನ್ಯಾಯಾಲಯ ಸಿಬ್ಬಂದಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇದೀಗ ಕೊರೋನ ಆತಂಕ ತೀವ್ರರೂಪ ತಾಳಿದೆ.

ಕೊರೋನ ಸೋಂಕು ಆರಂಭವಾದಾಗಲಿಂದಲೂ ಸೀಮಿತ ಪ್ರದೇಶದಲ್ಲಿ ಮಾತ್ರ ಸೋಂಕು ಪತ್ತೆಯಾಗಿ, ನಂತರ ಅವರ ಪ್ರಾಥಮಿಕ ಸಂಪರ್ಕಿಗಳಿಗೆ ಮಾತ್ರ ಕಾಣಿಸುತ್ತಿತ್ತು. ಆದರೆ ಇದೀಗ ತನ್ನ ಕಬಂಧ ಬಾಹುಗಳನ್ನು ಕೊರೋನ ವಾರಿಯರ್ಸ್‌ರತ್ತಲೇ ತಿರುಗಿಸಿರುವ ಪರಿಣಾಮ ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗುತ್ತಿದೆ.

ಬಾಗೇಪಲ್ಲಿ ನ್ಯಾಯಾಲಯ ಸೀಲ್‌ಡೌನ್‌

ಬಾಗೇಪಲ್ಲಿ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಬುಧವಾರ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬಾಗೇಪಲ್ಲಿ ನ್ಯಾಯಾಲಯವನ್ನೇ ಸೀಲ್‌ಡೌನ್‌ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸದ್ದಾರೆ. ಸೋಂಕಿತ ವ್ಯಕ್ತಿ ಪ್ರತಿನಿತ್ಯ ಗೌರಿಬಿದನೂರಿನಿಂದ ಬಾಗೇಪಲ್ಲಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ದಾಂಡೇಲಿಯಲ್ಲಿ ಹರಡುತ್ತಿರುವ ಕಾಮಾಲೆ ರೋಗ

ಪ್ರಸ್ತುತ ನ್ಯಾಯಾಲಯ ಸೀಲ್‌ಡೌನ್‌ ಮಾಡಲಾಗಿದ್ದು, ಇವರೊಂದಿಗೆ ಇದ್ದ ಸಂಪರ್ಕಿತರ ಹುಡುಕಾಟದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಿದ್ದು, ಜೊತೆಗೆ ಇವರು ಪ್ರತಿನಿತ್ಯ ಸಂಚರಿಸುತ್ತಿದ್ದ ಬಸ್‌ ಮತ್ತು ಇವರೊಂದಿಗೆ ಪ್ರಯಾಣಿಸಿರುವ ಸಹ ಪ್ರಾಯಣಿಕರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಡಿಕಲ್‌ ಪಿಎಚ್‌ಸಿ ಸೀಲ್‌ಡೌನ್‌

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರಿಗೆ ಸೋಂಕು ದೃಢಪಟ್ಟಿದ್ದು, ಮಂಡಿಕಲ್‌ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲದೆ ಈ ವೈದ್ಯರು ಎಷ್ಟುಮಂದಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ, ಎಷ್ಟುಮಂದಿ ಆರೋಗ್ಯ ಕೇಂದ್ರದ ಸಿಬ್ಬಂದಿಯೊಂದಿಗೆ ಸಂಪರ್ಕ ಬೆಳೆಸಿದ್ದಾರೆ ಮತ್ತು ಯಾವ ಮೂಲದಿಂದ ಸೋಂಕು ಹಬ್ಬಿದೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಆಯುರ್ವೇದಿಕ್‌ ಆಸ್ಪತ್ರೆ ಸೀಲ್‌ಡೌನ್‌

ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಆಯುರ್ವೇದಿಕ್‌ ಆಸ್ಪತ್ರೆ ವೈದ್ಯರಿಗೂ ಕೊರೋನ ಸೋಂಕು ದೃಢಪಟ್ಟಿದ್ದು, ಆಯುರ್ವೇದಿಕ್‌ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯೋಗೇಶ್‌ಗೌಡ ತಿಳಿಸಿದ್ದಾರೆ. ಇವರು ಎಷ್ಟುಮಂದಿಗೆ ಚಿಕಿತ್ಸೆ ನೀಡಿದ್ದಾರೆ, ಯಾವ ಮೂಲದಿಂದ ಇವರಿಗೆ ಸೋಂಕು ಹಬ್ಬಿದೆ ಎಂಬ ಬಗ್ಗೆ ಅಧಿಕಾರಿಗಳು ಇನ್ನೂ ಮಾಹಿತಿ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ.

ಜಿಲ್ಲೆಯಲ್ಲಿ ಬುಧವಾರ 8 ಪ್ರಕರಣ

ಮೂವರ ಜೊತೆಗೆ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸೇರಿ ಜಿಲ್ಲೆಯಾದ್ಯಂತ ಬುಧವಾರ ಒಟ್ಟು 8 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಜಿಲ್ಲಾಕೇಂದ್ರದ ಪಾಲು ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಕಳೆದ ಮೂರು ತಿಂಗಳಿಗೂ ಹೆಚ್ಚು ಕಾಲದಿಂದ ಕೇವಲ 30ರ ಆಸುಪಾಸಿನಲ್ಲಿದ್ದ ಸೋಂಕಿತರು ಇದೀಗ ಏರುಗತಿಯಲ್ಲಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟುವಿಕೋಪಕ್ಕೆ ಹೋಗುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ.

ಕೊರೋನಾ ಜೊತೆಗೆ ಬದುಕಬೇಕು, ಮತ್ತೆ ಲಾಕ್‌ಡೌನ್‌ ಅವಶ್ಯಕತೆ ಇಲ್ಲ: ಕೇಂದ್ರ ಸಚಿವ ಅಂಗಡಿ

ಚಿಕ್ಕಬಳ್ಳಾಪುರ ನಗರದಲ್ಲಿ ಸೋಂಕಿತರ ಸಂಖ್ಯೆ ತೀವ್ರರೂಪ ತಾಳಿದ್ದು, ನಗರದ 17, 31, 26ನೇ ವಾರ್ಡಿನಲ್ಲಿ ತಲಾ ಒಂದೊಂದು ಸೋಂಕಿತ ಪ್ರಕಣಗಳು ಪತ್ತೆಯಾಗಿವೆ, ಜೊತೆಗೆ ಶಿಡ್ಲಘಟ್ಟದಲ್ಲಿಯೂ ಒಂದು ಸೋಂಕಿತ ಪ್ರಕಣ ಬೆಳಕಿಗೆ ಬಂದಿದ್ದು, ಜಿಲ್ಲೆಯಲ್ಲಿ ಒಟ್ಟು 8 ಸೋಂಕಿತ ಪ್ರಕರಣಗಳು ಬುಧವಾರ ದೃಢಪಟ್ಟಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯೋಗೇಶ್‌ಗೌಡ ತಿಳಿಸಿದ್ದಾರೆ.

click me!