ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರು ಜೆಡಿಎಸ್‌ ಸೇರ್ಪಡೆ

By Kannadaprabha NewsFirst Published Apr 1, 2021, 12:29 PM IST
Highlights

ಪಕ್ಷ, ಜಾತಿ, ಧರ್ಮದ ಭೇದಭಾವ ನಮಗಿಲ್ಲ| ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ| ಪ್ರಗತಿ ಕಾರ್ಯಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಮಾರ್ಗದರ್ಶನ ನೀಡಿದರೂ ಸಹ ಅದನ್ನು ಸ್ವೀಕರಿಸುತ್ತೇನೆ| ರಾಜಕೀಯ ಕೇವಲ ಚುನಾವಣೆಗೆ ಮಾತ್ರ ಸೀಮಿತ: ಶರಣಗೌಡ ಕಂದಕೂರ| 

ಯಾದಗಿರಿ(ಏ.01): ಗುರುಮಠಕಲ್‌ ಮತಕ್ಷೇತ್ರದ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ಎಂದು ಜೆಡಿಎಸ್‌ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ಹೇಳಿದ್ದಾರೆ.

ಸಮೀಪದ ಮಾಧವಾರ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷ ತೊರೆದು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಬರಮಾಡಿಕೊಂಡು ಮಾತನಾಡಿದ ಅವರು, ಪಕ್ಷ, ಜಾತಿ, ಧರ್ಮದ ಭೇದಭಾವ ನಮಗಿಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ, ಪ್ರಗತಿ ಕಾರ್ಯಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಮಾರ್ಗದರ್ಶನ ನೀಡಿದರೂ ಸಹ ಅದನ್ನು ಸ್ವೀಕರಿಸುತ್ತೇನೆ. ರಾಜಕೀಯ ಕೇವಲ ಚುನಾವಣೆಗೆ ಮಾತ್ರ ಸೀಮಿತ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದಾಗೊಮ್ಮೆ ಪ್ರಗತಿಯ ಹೊಳೆ ಹರಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆ, ಮಹಿಳಾ ಮೀಸಲಾತಿ, ಸಾಲ ಮನ್ನಾ, ಜನತಾ ದರ್ಶನ ನಮ್ಮ ಪಕ್ಷದ ಮಹಾತ್ವಾಕಾಂಕ್ಷೆಯ ಯೋಜನೆಗಳಾಗಿವೆ ಎಂದರು.

'ಬಿಜೆಪಿ ಸರ್ಕಾರದ ಜನವಿರೋಧಿ​ ನೀತಿಗಳಿಂದ ಬದುಕು ದುರ್ಬರ'

ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆದಿದ್ದರೆ ಯಾವುದೇ ಕೊರತೆ ಇಲ್ಲದೆ ಗುರುಮಠಕಲ್‌ ಕ್ಷೇತ್ರ ಸಮಗ್ರ ಅಭಿವೃದ್ಧಿ ಆಗುತ್ತಿತ್ತು. ಆದರೆ, ಸಮ್ಮಿಶ್ರ ಸರ್ಕಾರ ನಂತರ ಅಧಿಕಾರಕ್ಕೆ ಬಂದ ಆಡಳಿತ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸೇರಿದಂತೆ ಮಾಧವಾರ, ಗುಡ್ಲಗುಂಟ, ವಂಕಸಂಬರ ಹಾಗೂ ಜಿನಕೇರಾ ಗ್ರಾಮದ ನೂರಾರು ಯುವಕರು ಕಾಂಗ್ರೆಸ್‌ ಮತ್ತು ಬಿಜೆಪಿ ತೊರೆದು ಜೆಡಿಎಸ್‌ ಸೇರ್ಪಡೆಯಾದರು.ಬದ್ದೇಪಲ್ಲಿ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಸುದರ್ಶನ ಪಾಟೀಲ್‌, ಯುವ ಮುಖಂಡರಾದ ಶ್ರೀನಿವಾಸ, ನರಸಪ್ಪ, ಬನ್ನಪ್ಪ, ಸಿದ್ರಾಮರೆಡ್ಡಿ, ಚಂದ್ರುಗೌಡ, ಭೀಮರೆಡ್ಡಿ, ಪ್ರಕಾಶ, ಶರಣಗೌಡ, ಶಿವರೆಡ್ಡಿ, ವೀರೇಂದ್ರಗೌಡ, ಆನಂದರೆಡ್ಡಿ, ರಮೇಶ, ಆನಂದ, ಬಸ್ಸುಗೌಡ, ವೆಂಕಟಪ್ಪ, ರಘುನಾಥರೆಡ್ಡಿ, ಡಾ. ಬಾಬು, ಆಶಪ್ಪ ಸೇರಿದಂತೆ ಇತರರಿದ್ದರು.

ಗುರುಮಠಕಲ್‌ ಜೆಡಿಎಸ್‌ನಲ್ಲಿ ಯುವ ಸೈನ್ಯ ಕಟ್ಟಬೇಕೆಂಬ ನನ್ನ ಬಯಕೆ ಬಹುತೇಕ ಈಡೇರಿದಂತಾಗಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್‌ ಧ್ಜಜ ಹಿಡಿಯುವ ಮೂಲಕ ನಾಗನಗೌಡ ಕಂದಕೂರ ಅವರು ಶಾಸಕರಾಗಿ ಆಯ್ಕೆಯಾಗಲು ಪ್ರಮುಖ ಪಾತ್ರ ವಹಿಸಿದ್ದರು. ಅದರ ಜತೆಗೆ ಇತ್ತೀಚಿನ ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತರು ಯುವಕರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ತಿಳಿಸಿದ್ದಾರೆ.
 

click me!