
ದಾವಣಗೆರೆ (ಆ.12): ನಾಡಗೀತೆಗೆ ಹಾಡುವಾಗ ಕುಳಿತುಕೊಂಡಿದ್ದ ಜಗಳೂರು ತಾಲೂಕು ಅಧಿಕಾರಿಗಳು, ನೌಕರರಿಗೆ ವಿಧಾನಸಾಧದ ಬ್ಯಾಂಕ್ವೆಟ್ ಹಾಲ್ನಿಂದಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಗಳವಾರ ಸಿಎಂ ಡಿ.ಕೆ.ಶಿವಕುಮಾರ್ ವಿಧಾನಸೌಧದಿಂದ ರಾಜ್ಯದ ಸರ್ಕಾರಿ ಅಧಿಕಾರಿ, ನೌಕರರ ವೀಡಿಯೋ ಸಂವಾದ ಹಮ್ಮಿಕೊಂಡಿದ್ದರು. ಸಂವಾದ ಆರಂಭಕ್ಕೂ ಮುನ್ನ ನಾಡಗೀತೆಯನ್ನು ಹಾಡಲಾಯಿತು. ಈ ವೇಳೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಧಿಕಾರಿಗಳು ನಾಡಗೀತೆ ಹಾಡುತ್ತಿದ್ದರೂ ಎದ್ದು ನಿಂತಿರಲಿಲ್ಲ.
ಉಪ ವಿಭಾಗಾಧಿಕಾರಿ ಸಂತೋಷ್, ಜಗಳೂರು ತಹಸೀಲ್ದಾರ್ ಗುರುಬಸಪ್ಪ, ತಾಪಂ ಇಒ ಕೆಂಚಪ್ಪ ಸೇರಿದಂತೆ ಹಲವಾರು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಿಎಂ, ಬಳಿಕ ‘ನನ್ನ ಕಣ್ಣು ಕುರುಡು ಅಂತಾ ಕೆಲವು ಜನ ತಿಳಿದುಕೊಂಡಿರಬಹುದು. ಜಗಳೂರಿನವರಿಗೆ ಪಾಪ ನಿಂತುಕೊಂಡು ನಾಡಗೀತೆಗೆ ಗೌರವ ಸಲ್ಲಿಸಲಾಗುತ್ತಿಲ್ಲ. ನಾಡಗೀತೆ ನಡೆಯಬೇಕಾದರೆ ಇನ್ನೂ ಕುಳಿತುಕೊಂಡೇ ಇದ್ದರು. ನಾನು ನನ್ನ ಮೇಲೆಯೇ ವಾಚ್ ಇಟ್ಟುಕೊಂಡಿದ್ದೇನೆ. ನನಗೆ ಇಲ್ಲಿಂದ ಜಗಳೂರು ಕಾಣುವುದಿಲ್ಲ ಅಂತಾ ಅಂದುಕೊಳ್ಳಬೇಡಿ’ ಎಂದು ಅವರು ಸೂಚ್ಯವಾಗಿ ಎಚ್ಚರಿಸಿದರು.