ಸಿಎಂ ಟೆಂಪಲ್ ರನ್: ಅವ್ರನ್ನೇ ಕೇಳಿ ಎಂದ ಬಿಎಸ್ ವೈ!

By Web DeskFirst Published Sep 1, 2018, 4:05 PM IST
Highlights

ಸಿಎಂ ಟೆಂಪಲ್ ರನ್ ವಿಷಯ ಅವ್ರಿಗೇ ಕೇಳಿ! ಮಾಜಿ ಸಿಎಂ ಯಡಿಯೂರಪ್ಪ ವ್ಯಂಗ್ಯ! ಸಿದ್ದು ಮತ್ತೆ ಸಿಎಂ ಆಗೋ ವಿಚಾರ! ಅಧಿಕಾರದ ಆಸೆ ರಾಜಕಾರಣಿಗಳಲ್ಲಿ ಸಾಮಾನ್ಯ! ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ! ಚುನಾವಣೆಗಳಲ್ಲಿ ಬಿಜೆಪಿ ಜಯ ದಾಖಲಿಸುವ ವಿಶ್ವಾಸ

ವಿಜಯಪುರ(ಸೆ.1): ಸಿಎಂ ಕುಮಾರಸ್ವಾಮಿ ಪದೇ ಪದೇ ಟೆಂಪಲ್ ರನ್ ಮಾಡುತ್ತಿರುವ ಕುರಿತು ಅವರನ್ನೇ ಕೇಳಿ ಮಾಹಿತಿ ಪಡೆಯವುದು ಒಳ್ಳೆಯದು ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ತಾವೂ ಸಿಎಂ ಆಗಿದ್ದಾಗ ಗುಡಿ ಗುಂಡಾಂತರಗಳಿಗೆ ಓಡಾಡಿದ್ದೇನೆ. ಅಲ್ಲದೇ ಮಠಗಳಿಗೆ ತಮ್ಮ ಸರ್ಕಾರದಲ್ಲಿ ನೀಡಿದಷ್ಟು ಸಹಾಯಧನ ಇನ್ಯಾವ ಸರ್ಕಾರವೂ ನೀಡಿಲ್ಲ ಎಂದು ಹೇಳಿದರು.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕುರಿತು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಬಿಎಸ್ ವೈ, ಉನ್ನತ ಸ್ಥಾನಕ್ಕೇರಬೇಕು ಎಂಬ ಅಪೇಕ್ಷೆ ಪ್ರತಿಯೊಬ್ಬ ರಾಜಕಾರಣಿಯಲ್ಲೂ ಇರುತ್ತದೆ. ಅದರಂತೆ ಸಿದ್ದು ಕೂಡ ಅಪೇಕ್ಷೆ ಪಟ್ಟರೆ ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು. ಸದ್ಯ ಸಮನ್ವಯ ಸಮಿತಿ ಸಭೆ ಸೇರುವುದೇ ದೊಡ್ಡ ವಿಷಯವಾಗಿದ್ದು, ಸರ್ಕಾರ ಇನ್ನಾದರೂ ಅಭಿವೃದ್ಧಿ ವಿಷಯಗಳತ್ತ ಗಮನಹರಿಸಬೇಕು ಎಂದು ಬಿಎಸ್ ವೈ ಸಲಹೆ ನೀಡಿದರು.

ಸರ್ಕಾರ 100 ದಿನ ಪೂರೈಸಿದರೂ ಸಿಎಂ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಿಎಂ, ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯಗಳತ್ತ ಸಿಎಂ ಗಮನಹರಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ರಾಹುಲ ಗಾಂಧಿ ವಿಮಾನ ಘಟನೆಯನ್ನು ಪ್ರಸ್ತಾಪಿಸಿದ ಅವರು, ಕೇಂದ್ರ ಸರ್ಕಾರವಾಗಲಿ, ವಿಮಾನಯಾನ ಸಚಿವಾಲಯವಾಗಲಿ ಯಾವ ವಿಷಯವನ್ನೂ ಮುಚ್ಚಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಕುರಿತು ರಾಹುಲ್ ಗಾಂಧಿ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಒತ್ತಾಯಿಸಿದ ಬಿಎಸ್ ವೈ, ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಅಲ್ಲಿಯವರೆಗೆ ಪ್ರತಿಕ್ರಿಯೆ ನೀಡದಿರುವುದು ಒಳ್ಳೆಯದು ಎಂದು ನುಡಿದರು. ಇದೇ ವೇಳೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ವಿಧಾನ ಪರಿಷತ್ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಬಿಎಸ್ ವೈ, ಬಿಜೆಪಿ ಪಕ್ಷ ವಿಧಾನ ಪರಿಷತ್ ಉಪಚುನಾವಣೆ ಮತ್ತು ಸ್ಥಳೀಯ ಸಂಸ್ತೆ ಚುನಾವಣೆ ಎರಡರಲ್ಲೂ ಭರ್ಜರಿ ಜಯ ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!