
ಚಿಕ್ಕಮಗಳೂರು (ಮಾ.17): 11 ತಿಂಗಳಿನಿಂದ ಸಂಬಳ ಕೊಡದ್ದಕ್ಕೆ ಗ್ರಾಮ ಪಂಚಾಯಿತಿ ನೀರುಗಂಟಿ ಡೆತ್ನೋಟ್ ಬರೆದಿಟ್ಟು ಆತ್ಮ೧ಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಮಕ್ಕಿ ಗ್ರಾಮದಲ್ಲಿ ನಡೆದಿದೆ.
ಆಣೂರು ಗ್ರಾಪಂ ನೀರುಗಂಟಿ ರಮೇಶ್ (47) ಮೃತ. 11 ತಿಂಗಳಿನಿಂದ ಸಂಬಳ ನೀಡಿಲ್ಲ. ಸಾಲಗಾರರ ಕಾಟ ಇದೆ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದು, ಭಾನುವಾರ ತಮ್ಮ ಮನೆಯಲ್ಲಿಯೇ ನೇಣು ಹಾಕಿಕೊಂಡಿದ್ದಾರೆ. ಮೃತರಿಗೆ ಪತ್ನಿ, ಮಗ, ಮಗಳು ಇದ್ದಾರೆ. ಆಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ವಿಚಾರಿಸಿದಾಗ ಕಳೆದ ಫೆಬ್ರವರಿವರೆಗೆ ವೇತನ ಪಾವತಿ ಮಾಡಲಾಗಿದೆ ಎಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನನ್ನ ಸಾವಿಗೆ ನಾನೇ ನೇರ ಕಾರಣ ಎಂದು ಮೊದಲ ಸಾಲಿನಲ್ಲಿಯೇ ಬರೆಯಲಾಗಿದೆ. ಮುಂದುವರೆದು, ಹಲವು ವರ್ಷದಿಂದ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, 11 ತಿಂಗಳ ವೇತನ ಕೊಟ್ಟಿಲ್ಲ. ಸಂಘದವರು ಮನೆಗೆ ಬಂದು ಹಣ ಕಟ್ಟುವಂತೆ ನನಗೆ ಮತ್ತು ನಮ್ಮ ಮನೆಯವರಿಗೆ ತೊಂದರೆ ಕೊಡುತ್ತಿದ್ದಾರೆ. ಹಾಗಾಗಿ ನನಗೆ ತುಂಬಾ ಮನಸ್ಸಿಗೆ ಬೇಜಾರಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಫೈನಾನ್ಸ್ನಲ್ಲಿ ಸಾಲ ಮಾಡಿರುವೆ. ಸಂಬಳ ನೀಡದಿದ್ದಕ್ಕೆ ಸಾಲಕಟ್ಟಲು ಆಗುತ್ತಿಲ್ಲ. ಆರ್ಬಿಎಲ್, ಎಸ್ಕೆಎಸ್ ಗ್ರಾಮೀಣ ಕೂಟ, ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ಮನೆಗೆ ಬಂದು ಮನೆಯವರಿಗೂ ಕಿರುಕುಳ ನೀಡುತ್ತಿದ್ದಾರೆ. ಇನ್ನು ಗ್ರಾಪಂ ಕಚೇರಿಯಲ್ಲೂ ಕೆಲವರು ಕೆಲಸ ಮಾಡಲು ಬಿಡುತ್ತಿಲ್ಲವೆಂದು ಅವರ ಹೆಸರನ್ನು ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದೆ.