
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಏ.22): ಬೇಸಿಗೆ ರಜೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ಆಟ-ಪಾಠಗಳಿಂದ ಬಿಡುವು ಪಡೆದು ಎಂಜಾಯ್ ಮಾಡಬೇಕಾದ ಈ ಸಮಯದಲ್ಲಿ ಮಲೆನಾಡಿನ ಜಿಲ್ಲೆ ಚಿಕ್ಕಮಗಳೂರಿನಲ್ಲಿ ಶೋಕದ ಛಾಯೆ ಆವರಿಸಿದೆ. ಕಾಫಿನಾಡಿನ ಏರುತ್ತಿರುವ ಬಿಸಿಲ ತಾಪದಿಂದ ತಂಪು ಪಡೆಯಲು ಜಲಮೂಲಗಳತ್ತ ತೆರಳುತ್ತಿರುವ ಮಕ್ಕಳು ಮತ್ತು ಯುವಕರು ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ಕಳೆದ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಜಿಲ್ಲೆಯ ವಿವಿಧೆಡೆ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
ತಾಜಾ ದುರಂತವು ಮಂಗಳವಾರ ಕಡೂರು ತಾಲೂಕಿನ ಐತಿಹಾಸಿಕ ಅಯ್ಯನಕೆರೆಯಲ್ಲಿ ಸಂಭವಿಸಿದೆ. ಬೇಸಿಗೆಯ ಸೆಕೆ ತಾಳಲಾರದೆ ಈಜಲು ಹೋದ 13 ವರ್ಷದ ಬಾಲಕ ಪೃಥ್ವಿರಾಜ್, ನೀರಿನ ಆಳ ತಿಳಿಯದೆ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದ ಬಾಲಕನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ರಜೆಯ ಖುಷಿಯಲ್ಲಿದ್ದ ಬಾಲಕ ಹೀಗೆ ಹೆಣವಾಗಿ ಮನೆಗೆ ಮರಳುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ.
ಜಿಲ್ಲೆಯಲ್ಲಿ ಕಳೆದ ಶನಿವಾರದಿಂದ ಮಂಗಳವಾರದವರೆಗೆ ಜಲಸಮಾಧಿಯಾದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಶನಿವಾರ: ನರಸಿಂಹರಾಜಪುರ (NR Pura) ತಾಲೂಕಿನ ಸಿದ್ದರಾಮಯ್ಯ ಸೇತುವೆ ಬಳಿ ಭದ್ರಾ ಹಿನ್ನೀರಿನಲ್ಲಿ ಈಜಲು ತೆರಳಿದ್ದ ನಿತಿನ್ ಎಂಬ ಯುವಕ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದ.
ಭಾನುವಾರ: ಆಲ್ದೂರು ಸಮೀಪದ ಹಾಗಲ ಎಂಬ ಗ್ರಾಮದಲ್ಲಿ ಮೀನು ಹಿಡಿಯಲು ಹೋದ ಮಹೇಶ್ ಹಾಗೂ ರಮೇಶ್ ಎಂಬ ಇಬ್ಬರು ಯುವಕರು ನೀರಿನ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದರು.
ಮಂಗಳವಾರ: ಕಡೂರಿನ ಅಯ್ಯನಕೆರೆಯಲ್ಲಿ ಬಾಲಕ ಪೃಥ್ವಿರಾಜ್ ಬಲಿಯಾಗಿದ್ದಾನೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಕೆರೆ, ಹಳ್ಳಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿರುತ್ತದೆ. ಆದರೆ, ಮೇಲ್ನೋಟಕ್ಕೆ ನೀರು ಕಡಿಮೆ ಎನಿಸಿದರೂ ತಳಭಾಗದಲ್ಲಿ ಕೆಸರು ಹೆಚ್ಚಾಗಿರುತ್ತದೆ. ಈಜಲು ಹೋದಾಗ ಅಥವಾ ಮೀನು ಹಿಡಿಯಲು ಇಳಿದಾಗ ಈ ಕೆಸರಿನಲ್ಲಿ ಕಾಲು ಹೂತುಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ, ನೀರಿನ ಆಳ ಮತ್ತು ಸುಳಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ದುಸ್ಸಾಹಸಕ್ಕೆ ಕೈ ಹಾಕುವುದು ಸಾವಿಗೆ ನೇರ ಆಹ್ವಾನ ನೀಡಿದಂತಾಗುತ್ತದೆ.
ಶಾಲೆಗಳಿಗೆ ಈಗ ಬೇಸಿಗೆ ರಜೆ ಇರುವುದರಿಂದ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ. ಮಕ್ಕಳು ಮನೆಯಿಂದ ಹೊರಗೆ ಹೋದಾಗ ಎಲ್ಲಿಗೆ ಹೋಗುತ್ತಿದ್ದಾರೆ? ಯಾರ ಜೊತೆಗಿದ್ದಾರೆ? ಎಂಬುದರ ಮೇಲೆ ನಿಗಾ ಇಡಬೇಕು. ಕೆರೆ, ಬಾವಿ, ಹಳ್ಳ ಅಥವಾ ನದಿಗಳತ್ತ ಮಕ್ಕಳು ಆಟವಾಡಲು ಹೋಗದಂತೆ ಎಚ್ಚರಿಸಬೇಕು.
ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಅಪಾಯಕಾರಿ ಜಲಮೂಲಗಳ ಬಳಿ ಈಗಾಗಲೇ ಎಚ್ಚರಿಕೆ ಫಲಕಗಳನ್ನು ಅಳವಡಿಸಿದೆ. ಆದರೆ, ಪ್ರವಾಸಿಗರು ಮತ್ತು ಸ್ಥಳೀಯರು ಇಂತಹ ಎಚ್ಚರಿಕೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ. 'ಒಂದು ಕ್ಷಣದ ಮೋಜು, ಜೀವನವಿಡೀ ಶೋಕ' ತರಬಲ್ಲದು ಎಂಬ ಅರಿವು ಎಲ್ಲರಲ್ಲೂ ಇರಲಿ. ಕಾಫಿನಾಡಿನ ಈ ಸರಣಿ ಸಾವುಗಳು ನಮಗೆ ದೊಡ್ಡ ಪಾಠವಾಗಬೇಕಿದೆ.