ಬೆಳಗಾವಿ: ಬುಡಾ ಅವ್ಯವಹಾರ ಪ್ರಕರಣ ಸಿಐಡಿ ತನಿಖೆಗೆ, ಸಚಿವ ಸತೀಶ ಜಾರಕಿಹೊಳಿ

By Kannadaprabha NewsFirst Published May 31, 2023, 12:51 PM IST
Highlights

ಒಂದು ಕೋಟಿ ರು. ಮೌಲ್ಯದ ನಿವೇಶನವನ್ನು 25 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಹರಾಜು ಪ್ರಕ್ರಿಯೆ ನಡೆಸಿ ನಿವೇಶನ ಹಂಚಿಕೆ ಮಾಡಲಾಗಿದೆ. ಈ ಪ್ರಕರಣವನ್ನು ಹಾಗೇ ಬಿಡಲು ಸಾಧ್ಯವಿಲ್ಲ: ಸತೀಶ ಜಾರಕಿಹೊಳಿ 

ಬೆಳಗಾವಿ(ಮೇ.31): ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಪ್ರಕರಣವನ್ನು ಸಿಐಡಿ ಇಲ್ಲವೇ ಸಿಓಡಿ ತನಿಖೆಗೆ ಒಳಪಡಿಸಲಾಗುವುದು ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಕೋಟಿ ರು. ಮೌಲ್ಯದ ನಿವೇಶನವನ್ನು .25 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಹರಾಜು ಪ್ರಕ್ರಿಯೆ ನಡೆಸಿ ನಿವೇಶನ ಹಂಚಿಕೆ ಮಾಡಲಾಗಿದೆ. ಈ ಪ್ರಕರಣವನ್ನು ಹಾಗೇ ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ನಿಷೇಧ ಮಾಡುವ ಬದಲು ಆರೆಸ್ಸೆಸ್‌ನಲ್ಲಿರುವ ಶೂದ್ರ, ದಲಿತರನ್ನ ಸೆಳೆಯಬೇಕು: ಜಾರಕಿಹೊಳಿ

ಎರಡು ಬಾರಿ ನೊಟಿಪಿಕೇಷನ್‌ ಹೊರಡಿಸಿದರೂ ಜನ ಬರಲಿಲ್ಲ. ಹಾಗಾಗಿ, ಹರಾಜು ಮಾಡಲು ಅಧಿಕಾರ ಇರುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅಧಿಕಾರಿಗಳಿಗೆ ಅಧಿಕಾರ ಇದೆ ನಿಜ. ಆದರೆ ಬೇರೆ ಆಸ್ತಿ ಒಂದು ಕೋಟಿ ಬೆಲೆ ಬಾಳುತ್ತದೆ. ಎಂದಾದರೆ ಇದನ್ನೇಕೆ .25 ಲಕ್ಷಕ್ಕೆ ಮಾರಾಟ ಮಾಡಿದ್ದು? ಇದರಿಂದ ಸುಮಾರು .100 ಕೋಟಿ ಹಾನಿಯಾಗಿದೆ. ಈ ಪ್ರಕರಣವನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಸ್ಮಾರ್ಟ್‌ಸಿಟಿ ಕಾಮಗಾರಿ ತನಿಖೆ:

ಬೆಳಗಾವಿ ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳಲ್ಲಿಯೂ ಅವ್ಯವಹಾರ ಕಂಡುಬಂದಿದೆ. ಕಳಪೆ ಕಾಮಗಾರಿ ಮಾಡಲಾಗಿದೆ. ಜನತೆಯ ನಿರೀಕ್ಷೆಯಂತೆ ಕೆಲಸ ಮಾಡಲಾಗಿಲ್ಲ. ಅವಶ್ಯ ಬಿದ್ದರೆ ಬೆಂಗಳೂರಿನಿಂದ ತನಿಖೆ ನಡೆಸಲಾಗುವುದು. ಇದಕ್ಕೆ ಸೂಕ್ತ ದಾಖಲೆ ನೀಡಿದರೆ ಖಂಡತವಾಗಿಯೂ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಕಾಮಗಾರಿ ನಡೆದಿರುವ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾ ವಿಭಜನೆಗೆ ಸಿಎಂ ಮೇಲೆ ಒತ್ತಡ

ಬೆಳಗಾವಿ ಜಿಲ್ಲೆಯನ್ನು ಆಡಳಿತದ ಹಿತದೃಷ್ಟಿಯಿಂದ ಗೋಕಾಕ, ಚಿಕ್ಕೋಡಿ, ಬೆಳಗಾವಿ ಹೀಗೆ ಮೂರು ಜಿಲ್ಲೆಗಳನ್ನಾಗಿ ಮಾಡಲೇಬೇಕು. ಈ ಸಂಬಂಧ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತೇವೆ. ಬೇರೆ ತಾಲೂಕಿನವರೂ ಜಿಲ್ಲೆಯನ್ನಾಗಿಸುವಂತೆ ಬೇಡಿಕೆ ಮಂಡಿಸಲು ಹಕ್ಕಿದೆ. ಈ ಸಂಬಂಧ ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಆಡಳಿತದ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ಮೂರು ಜಿಲ್ಲೆಗಳನ್ನಾಗಿ ವಿಭಜನೆ ಮಾಡಬೇಕು. ಇದರಿಂದ ಅಭಿವೃದ್ಧಿಗೆ ವೇಗ ಸಿಗುತ್ತದೆ. ಮೊದಲಿನಿಂದಲೂ ನಾವು ಜಿಲ್ಲಾ ವಿಭಜನೆಗೆ ಒತ್ತಡ ಹೇರುತ್ತಲೇ ಬಂದಿದ್ದೇವೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

click me!