
ಬೆಂಗಳೂರು: ಬೆಂಗಳೂರಿನ ಮೆಟ್ರೋ ಜಾಲ ವಿಸ್ತರಣೆಗೆ ಮಹತ್ವದ ಹೆಜ್ಜೆಯಾಗಿ ಹಳದಿ ಮಾರ್ಗದ ಆರನೇ ರೈಲು ಸೆಟ್ನ ಎಲ್ಲಾ ಆರು ಬೋಗಿಗಳು ಕೊನೆಗೂ ನಗರಕ್ಕೆ ತಲುಪಿವೆ. ಸುಮಾರು 15 ದಿನಗಳ ದೀರ್ಘ ರಸ್ತೆ ಪ್ರಯಾಣದ ನಂತರ ಕೋಲ್ಕತ್ತಾದಿಂದ ಬೋಗಿಗಳು ಬೆಂಗಳೂರು ತಲುಪಿದ್ದು, ಹಬ್ಬಗೋಡಿ ಡಿಪೋಗೆ ಕಳುಹಿಸಲಾಗಿದೆ.
ಬಿಎಂಆರ್ಸಿಎಲ್ನ ಹಿರಿಯ ಅಧಿಕಾರಿ ಮಾಹಿತಿ ನೀಡಿ ವಾರಾಂತ್ಯದಲ್ಲಿ ಮೊದಲ ಮೂರು ಬೋಗಿಗಳು ಹಬ್ಬಗೋಡಿ ಡಿಪೋಗೆ ಬಂದಿದ್ದು, ಉಳಿದ ಮೂರು ಬೋಗಿಗಳು ಅವುಗಳ ನಂತರ ಅಲ್ಪ ವಿರಾಮದೊಂದಿಗೆ ತಲುಪಿವೆ. ಇದರೊಂದಿಗೆ, ಹಳದಿ ಮಾರ್ಗಕ್ಕೆ ಅಗತ್ಯವಿರುವ ಆರನೇ ಸಂಪೂರ್ಣ ರೈಲು ಸೆಟ್ ಈಗ ನಗರದಲ್ಲಿದೆ ಮತ್ತು ಸೇವೆಗೂ ಮುನ್ನ ತಾಂತ್ರಿಕ ದೋಷಗಳ ಚೆಕ್ಕಿಂಗ್ ಮಾಡಲಾಗುತ್ತಿದೆ.
ಸಂಪೂರ್ಣ ತಾಂತ್ರಿಕ ಪರಿಶೀಲನೆಗಳು ಆರಂಭ
ಹೊಸ ರೈಲು ಸೆಟ್ ಅನ್ನು ಪ್ರಯಾಣಿಕರ ಸೇವೆಗೆ ಬಿಡುವ ಮೊದಲು ಬಿಎಂಆರ್ಸಿಎಲ್ ತಾಂತ್ರಿಕ ತಂಡಗಳು ವ್ಯಾಪಕ ಪರೀಕ್ಷಾ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿವೆ. ಈ ಪರೀಕ್ಷೆಗಳು ಎರಡು ವಿಭಾಗಗಳಾಗಿವೆ:
ರೈಲು ನಿಂತಿರುವಾಗ ನಡೆಯುವ ಪರೀಕ್ಷೆಗಳು: ಬ್ರೇಕ್ಗಳು, ದ್ವಾರಗಳ ಕಾರ್ಯ, ವಿದ್ಯುತ್ ವ್ಯವಸ್ಥೆ, ಒಳಾಂಗಣ ನಿಯಂತ್ರಣ ವ್ಯವಸ್ಥೆ ಸೇರಿದಂತೆ ಹಲವು ಮೂಲಭೂತ ತಾಂತ್ರಿಕ ಅಂಶಗಳ ಚೆಕ್ಕಿಂಗ್.
ರೈಲನ್ನು ಹಳಿಗಳ ಮೇಲೆ ಓಡಿಸಿ ಅದರ ಕಾರ್ಯಕ್ಷಮತೆ, ವೇಗ, ಸುರಕ್ಷತಾ ಮಾನದಂಡಗಳನ್ನು ಪರೀಕ್ಷಿಸುವ ಹಂತ ಇರಲಿದೆ. ಪ್ರಯಾಣಿಕರ ಭದ್ರತೆ ಮತ್ತು ವಿಶ್ವಾಸಾರ್ಹತೆಗೆ ಈ ಹಂತ ಅತ್ಯಂತ ಅವಶ್ಯಕ, ಎಲ್ಲಾ ತಾಂತ್ರಿಕ ಹಂತಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಮಾತ್ರ ರೈಲು ಸೇವೆಗೆ ಅನುಮತಿ ಸಿಗಲಿದೆ. ಅಧಿಕಾರಿಗಳ ಪ್ರಕಾರ, ಎಲ್ಲವೂ ಯೋಜನೆಯಂತೆ ನಡೆದರೆ ಡಿಸೆಂಬರ್ ಮೂರನೇ ವಾರದಿಂದ ರೈಲು ಪ್ರಯಾಣಿಕರನ್ನು ಹೊತ್ತೊಯ್ಯಲು ರೆಡಿ ಆಗಲಿದೆ.
ಹಳದಿ ಮಾರ್ಗದಲ್ಲಿ ಪ್ರಸ್ತುತ ರೈಲುಗಳ ಸಂಖ್ಯೆ ಸೀಮಿತವಾಗಿರುವುದರಿಂದ ಪೀಕ್ ಅವರ್ನಲ್ಲಿ ರೈಲುಗಳ ಸಂಖ್ಯೆ ಕಡಿಮೆ ಇರುವುದನ್ನು ಪ್ರಯಾಣಿಕರು ಆಗಾಗ ಟೀಕಿಸುತ್ತಿದ್ದರು. ಈಗ ಹೊಸ ರೈಲು ಸೇರ್ಪಡೆಯೊಂದಿಗೆ ರೈಲುಗಳ ನಡುವೆ ಇರುವ ನಿರೀಕ್ಷಾ ಅವಧಿ ಸುಮಾರು 12 ನಿಮಿಷಗಳಿಗೆ ಕಡಿಮೆಯಾಗುವ ನಿರೀಕ್ಷೆ ಇದೆ. ಬೆಳಗ್ಗೆ ಮತ್ತು ಸಂಜೆ ಗದ್ದಲದ ಸಮಯದಲ್ಲಿ ಪ್ರಯಾಣ ಸುಗಮವಾಗಲಿದೆ. ಹೆಚ್ಚು ಸಂಖ್ಯೆಯ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೆಚ್ಚುತ್ತದೆ. ಇದರೊಂದಿಗೆ, ಹಳದಿ ಮಾರ್ಗದ ಕಾರ್ಯಾಚರಣಾ ಸಾಮರ್ಥ್ಯದಲ್ಲಿ ಮಹತ್ವದ ಸುಧಾರಣೆ ಕಂಡುಬರುವುದು ಖಚಿತವಾಗಿದೆ
ಪ್ರಸ್ತುತ, ಹಳದಿ ಮಾರ್ಗದಲ್ಲಿ ಮೆಟ್ರೋ ಸೇವೆಗಳು ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗುತ್ತವೆ. ಆದರೆ ಪರ್ಪಲ್ ಮತ್ತು ಗ್ರೀನ್ ಮಾರ್ಗಗಳಲ್ಲಿ ಸೇವೆಗಳು ಬೆಳಿಗ್ಗೆ 5 ಗಂಟೆಯೇ ಆರಂಭವಾಗುತ್ತವೆ. ಅಧಿಕಾರಿಗಳ ಪ್ರಕಾರ, ಹೊಸ ರೈಲುಗಳ ಸೇರ್ಪಡೆಯಿಂದ ಬೆಳಗಿನ ಸಮಯದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಈ ಎರಡನ್ನೂ ಗಮನದಲ್ಲಿಟ್ಟುಕೊಂಡು, ಹಳದಿ ಮಾರ್ಗದ ಸೇವೆಗಳನ್ನು ಕೂಡ ಬೆಳಿಗ್ಗೆ 5 ಗಂಟೆಯಿಂದಲೇ ಪ್ರಾರಂಭಿಸುವ ಬಗ್ಗೆ ಬಿಎಂಆರ್ಸಿಎಲ್ ಪರಿಶೀಲನೆ ನಡೆಸುತ್ತಿದೆ. ಅಂತಿಮ ನಿರ್ಧಾರ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆ ಇದೆ.
ಹಳದಿ ಮಾರ್ಗವು ಬೆಂಗಳೂರು ದಕ್ಷಿಣ ಮತ್ತು ಪೂರ್ವ ಭಾಗಗಳ ನಡುವೆ ಪ್ರಮುಖ ಸಂಪರ್ಕ ಕಲ್ಪಿಸುವ ಮಾರ್ಗವಾಗಿದ್ದು, ಹೊಸ ರೈಲುಗಳ ಸೇರ್ಪಡೆಯಿಂದ, ಜನ ದಟ್ಟಣೆ ಕಡಿಮೆ ಆಗಲಿದೆ. ಪ್ರಯಾಣ ಸಮಯದ ಕಡಿತವಾಗಲಿದೆ. ಪೀಕ್ ಅವರ್ಗಳಲ್ಲಿ ಒತ್ತಡ ಕಡಿತಗೊಳ್ಳಲಿದೆ. ನಿರ್ವಹಣಾ ಸಾಮರ್ಥ್ಯ ಹೆಚ್ಚಳ ಎಲ್ಲವೂ ಸಾಧ್ಯವಾಗಲಿವೆ. ಬಿಎಂಆರ್ಸಿಎಲ್ ಅಧಿಕಾರಿಗಳ ಪ್ರಕಾರ, ಈ ಸೇರ್ಪಡೆ ಬೆಂಗಳೂರಿನ ಮೆಟ್ರೋ ಜಾಲವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮತ್ತು ಪ್ರಯಾಣಿಕ ಸ್ನೇಹಿಯಾಗಿ ಮಾಡಲಿದೆ.