ಕಾಂಗ್ರೆಸ್‌ ಕಾರ್ಯಕ್ರಮ ರದ್ದಾಗಲು ನಾನು ಕಾರಣನಲ್ಲ: ಶಾಸಕ ದಢೇಸುಗೂರು

By Kannadaprabha NewsFirst Published Sep 20, 2021, 10:52 AM IST
Highlights

*  ಹಾಸ್ಟೆಲ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ದಢೇಸೂಗುರು ಹೇಳಿಕೆ
*  ನಾನು ಅಧಿಕಾರಿಗಳ ಮೇಲೆ ಒತ್ತಡ ಹೇರಿಲ್ಲ
*  ಕನಕಗಿರಿ ಪಟ್ಟಣದಲ್ಲಿ ಎಡಿಎಲ್‌ಆರ್‌ ಕಚೇರಿ ಶೀಘ್ರವೇ ಆರಂಭ 
 

ಕನಕಗಿರಿ(ಸೆ.20):  ಕಾಂಗ್ರೆಸ್‌ ಕಾರ್ಯಕ್ರಮವನ್ನು ಸ್ಥಗಿತಗೊಳಿಸಬೇಕೆನ್ನುವ ಕೆಟ್ಟ ಉದ್ದೇಶ ನನ್ನದಲ್ಲ. ಕಾಂಗ್ರೆಸ್‌ ಕಾರ್ಯಕ್ರಮ ರದ್ದಾಗಲು ನಾನು ಕಾರಣನಲ್ಲ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದ್ದಾರೆ. 

ಪಟ್ಟಣದ ಕಲಕೇರಿ ರಸ್ತೆಯಲ್ಲಿನ ಬಿಸಿಎಂ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 6 ವರ್ಷ ಮಂತ್ರಿಯಾಗಿ ಕೆಲಸ ಮಾಡಿದ ಮಾಜಿ ಸಚಿವರು ಕನಿಷ್ಠ ಜ್ಞಾನವಿಲ್ಲದವರಂತೆ ಪರವಾನಿಗೆ ಪಡೆಯದೇ ಕಾರ್ಯಕ್ರಮ ನಡೆಸಲು ಮುಂದಾಗಿದ್ದರಿಂದ ಅಧಿಕಾರಿಗಳು ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದ್ದಾರೆ. ನಾನು ಯಾವುದೇ ಕಾರಣಕ್ಕೂ ಅಧಿಕಾರಿಗಳ ಮೇಲೆ ಒತ್ತಡ ಹೇರಿಲ್ಲ. 224 ಕ್ಷೇತ್ರಗಳಲ್ಲಿ ಹುಡುಕಿದರೂ ಮಾಜಿ ಸಚಿವ ತಂಗಡಗಿಯಂತಹ ಸುಳ್ಳಿನ ಸರದಾರ ಎಲ್ಲೂ ಸಿಗುವುದಿಲ್ಲ ಎಂದ ಅವರು, ಬಿಜೆಪಿಗರಿಗೆ ಸೋಲಿನ ಭಯ ಕಾಡುತ್ತಿದ್ದರಿಂದ ಕಾರ್ಯಕ್ರಮವನ್ನು ತಡೆದಿದ್ದಾರೆ ಎನ್ನುವ ಕಾಂಗ್ರೆಸಿಗರ ಆರೋಪದಲ್ಲಿ ಹುರುಳಿಲ್ಲ. 2018ರ ಚುನಾವಣೆಯಲ್ಲಿಯೂ ತಂಗಡಗಿ 20 ಸಾವಿರ ಮತಗಳ ಅಂತರದಿಂದ ಗೆಲ್ಲುವುದಾಗಿ ತಿಳಿಸಿ ಸೋತಿದ್ದಾರೆ. 2023 ಚುನಾವಣೆಯಲ್ಲಿ ದೇವರು, ದೈವ ಇರುತ್ತದೆ. ಯಾರನ್ನು ಗೆಲ್ಲಿಸಬೇಕೆಂದು ಅವರೇ ನಿರ್ಧರಿಸುತ್ತಾರೆ ಎಂದರು.

ಅಧಿಕಾರ ನೀಡಿದ ಜನರಿಗೆ ಬಿಜೆಪಿ ಶಾಸಕ ದಢೇಸ್ಗೂರು ಸಾವಿನ ಕಾಣಿಕೆ: ತಂಗಡಗಿ

ಜಿಲ್ಲಾ ಉಪಾಧ್ಯಕ್ಷೆ ಅಶ್ವಿನಿ ದೇಸಾಯಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್‌, ಕಾರ್ಯದರ್ಶಿ ವಾಗೇಶ ಹಿರೇಮಠ, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಸಣ್ಣ ಕನಕಪ್ಪ ಇತರರಿದ್ದರು.

ಕನಕಗಿರಿ ಪಟ್ಟಣದಲ್ಲಿ ಎಡಿಎಲ್‌ಆರ್‌ ಕಚೇರಿಯನ್ನು ಶೀಘ್ರವೇ ಆರಂಭಿಸಲಾಗುವುದು. ಕಲಕೇರಿ ರಸ್ತೆಯ ಖಾಸಗಿ ಶಾಲೆಯಲ್ಲಿ ತಾತ್ಕಾಲಿಕವಾಗಿ ಎಲ್ಲ ಕಚೇರಿಗಳನ್ನು ಆರಂಭಿಸುವ ಪ್ರಕ್ರಿಯೆ ನಡೆದಿದೆ. ತಾಪಂ ಕಚೇರಿಯನ್ನೂ ಅಲ್ಲಿಗೆ ಸ್ಥಳಾಂತರಿಸುವ ಬಗ್ಗೆ ಜಿಪಂ ಸಿಇಒರೊಂದಿಗೂ ಚರ್ಚಿಸಲಾಗಿದೆ ಎಂದು ಶಾಸಕ ಬಸವರಾಜ ದಢೇಸೂಗುರು ತಿಳಿಸಿದ್ದಾರೆ.  
 

click me!