ನಾಳೆ ಬೆಂಗಳೂರಿಗೆ ಜಲಸಂಕಟ: ನಗರದ ಪ್ರಮುಖ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆ ಸ್ಥಗಿತ!

Published : Feb 25, 2026, 03:48 PM IST
BWSSB Cauvery water supply disruption

ಸಾರಾಂಶ

ಫೆಬ್ರವರಿ 26 ರಂದು ಬೆಂಗಳೂರಿನ ಹಲವು ಬಡಾವಣೆಗಳಲ್ಲಿ 24 ಗಂಟೆಗಳ ಕಾಲ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾವೇರಿ 5ನೇ ಹಂತದ ಕಾಮಗಾರಿಯಿಂದಾಗಿ ಈ ಸ್ಥಗಿತ ಅನಿವಾರ್ಯವಾಗಿದ್ದು, ಇದೇ ದಿನ ಜಲಮಂಡಳಿಯು ಸಾರ್ವಜನಿಕರ ಕುಂದುಕೊರತೆಗಳಿಗಾಗಿ 'ನೀರಿನ ಅದಾಲತ್' ಆಯೋಜಿಸಿದೆ.

ಬೆಂಗಳೂರು (ಫೆ.25): ಸಿಲಿಕಾನ್ ಸಿಟಿಯ ಕಾವೇರಿ ನೀರಿನ ಗ್ರಾಹಕರಿಗೆ ಪ್ರಮುಖ ಸೂಚನೆಯೊಂದು ಬಂದಿದೆ. ಫೆಬ್ರವರಿ 26ರ ಗುರುವಾರದಂದು ನಗರದ ಹಲವು ಪ್ರಮುಖ ಬಡಾವಣೆಗಳಲ್ಲಿ 24 ಗಂಟೆಗಳ ಕಾಲ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಇದೇ ಸಮಯದಲ್ಲಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಜಲಮಂಡಳಿಯು ಅಂದೇ 'ನೀರಿನ ಅದಾಲತ್' ಅನ್ನು ಹಮ್ಮಿಕೊಂಡಿದೆ.

ನೀರು ಪೂರೈಕೆ ಸ್ಥಗಿತಕ್ಕೆ ಕಾರಣವೇನು?

ಕಾವೇರಿ 5ನೇ ಹಂತದ ಯೋಜನೆಯಡಿ ಗೊಟ್ಟಿಗೆರೆ ಜಲಸಂಗ್ರಹಗಾರದ ಸಮೀಪ ಅತ್ಯಾಧುನಿಕ ಇಎಂಎಫ್ (EMF) ಮೀಟರ್‌ಗಳನ್ನು ಅಳವಡಿಸುವ ಕಾಮಗಾರಿಯನ್ನು ಜಲಮಂಡಳಿ ಕೈಗೆತ್ತಿಕೊಂಡಿದೆ. ಈ ತಾಂತ್ರಿಕ ಕೆಲಸದ ಹಿನ್ನೆಲೆಯಲ್ಲಿ ಜಲರೇಚಕ ಯಂತ್ರಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ. ಫೆಬ್ರವರಿ 26ರ ಗುರುವಾರ ಬೆಳಿಗ್ಗೆ 6:00 ಗಂಟೆಯಿಂದ ಫೆಬ್ರವರಿ 27ರ ಶುಕ್ರವಾರ ಬೆಳಿಗ್ಗೆ 6:00 ಗಂಟೆಯವರೆಗೆ (ಒಟ್ಟು 24 ಗಂಟೆಗಳು).

ವ್ಯತ್ಯಯವಾಗುವ ಪ್ರದೇಶಗಳು:

ವೈಟ್‌ಫೀಲ್ಡ್, ನೆಲ್ಲೂರಹಳ್ಳಿ, ಸಿದ್ದಾಪುರ, ನಾಗೊಂಡನಹಳ್ಳಿ, ರಾಮಗೊಂಡನಹಳ್ಳಿ, ಚನ್ನಸಂದ್ರ, ಹೂಡಿ, ಗರುಡಾಚಾರ್ ಪಾಳ್ಯ, ದೊಡ್ಡನೆಕುಂದಿ, ಮುನೆಕೊಳಲು, ಕುಮಾರಸ್ವಾಮಿ ಲೇಔಟ್, ಪೂರ್ಣಪ್ರಜ್ಞಾ ಲೇಔಟ್, ಬನಶಂಕರಿ, ಕೊಲ್ಲಹಳ್ಳಿ, ಅಂಜನಾಪುರ, ಗೊಟ್ಟಿಗೆರೆ, ಬೇಗೂರು, ಕೊಡಿಚಿಕ್ಕನಹಳ್ಳಿ, ಕೂಡ್ಲು, ಕಾಡುಗೋಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ಮುಂಜಾಗ್ರತೆಯಾಗಿ ಅಗತ್ಯವಿರುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.

ಅಂದೇ 'ನೀರಿನ ಅದಾಲತ್' ಆಯೋಜನೆ:

ಒಂದೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದರೆ, ಇನ್ನೊಂದೆಡೆ ಜಲಮಂಡಳಿಯು ತನ್ನ ವಿವಿಧ ಉಪವಿಭಾಗಗಳಲ್ಲಿ ಫೆ. 26ರ ಗುರುವಾರ ಬೆಳಿಗ್ಗೆ 9:30 ರಿಂದ 11:00 ಗಂಟೆಯವರೆಗೆ 'ನೀರಿನ ಅದಾಲತ್' ನಡೆಸಲಿದೆ. ನೀರಿನ ಬಿಲ್ಲಿನ ಸಮಸ್ಯೆ, ಸಂಪರ್ಕ ಕಲ್ಪಿಸುವಲ್ಲಿ ವಿಳಂಬ, ಹಾಗೂ ಮನೆ ಬಳಕೆಯಿಂದ ವಾಣಿಜ್ಯ ಬಳಕೆಗೆ ಪರಿವರ್ತನೆ ಮಾಡುವಲ್ಲಿ ಆಗುತ್ತಿರುವ ವಿಳಂಬದಂತಹ ದೂರುಗಳನ್ನು ಇಲ್ಲಿ ಬಗೆಹರಿಸಲಾಗುವುದು.

ಅದಾಲತ್ ನಡೆಯುವ ಪ್ರಮುಖ ಕೇಂದ್ರಗಳು:

ಆಗ್ನೇಯ-3: ಅರಳೂರು, ಕಸವನಹಳ್ಳಿ ವ್ಯಾಪ್ತಿ (ದೂರವಾಣಿ: 9448839868)

ಪಶ್ಚಿಮ-1-3: ರಾಜಾಜಿನಗರ, ಕಮಲಾನಗರ, ಮಹಾಲಕ್ಷ್ಮಿ ಲೇಔಟ್ (ದೂರವಾಣಿ: 9845444073)

ವಾಯುವ್ಯ-5: ಅಬ್ಬಿಗೆರೆ, ಚಿಕ್ಕಸಂದ್ರ, ಶೆಟ್ಟಿಹಳ್ಳಿ (ದೂರವಾಣಿ: 9845967847)

ಉತ್ತರ-2-3: ಯಲಹಂಕ, ಮಾನ್ಯತಾ ಟೆಕ್ ಪಾರ್ಕ್ ವ್ಯಾಪ್ತಿ (ದೂರವಾಣಿ: 9590595245)

ನೈಋತ್ಯ: ಬನಶಂಕರಿ, ಗಿರಿ ನಗರ, ಜಯನಗರ ವ್ಯಾಪ್ತಿ.

ಸಾರ್ವಜನಿಕರು ಯಾವುದೇ ತುರ್ತು ಸಮಸ್ಯೆಗಳಿಗೆ ಜಲಮಂಡಳಿಯ 24/7 ಸಹಾಯವಾಣಿ 1916 ಕ್ಕೆ ಕರೆ ಮಾಡಬಹುದು ಅಥವಾ ವಾಟ್ಸಾಪ್ ಸಂಖ್ಯೆ 8762228888 ಮೂಲಕ ದೂರು ದಾಖಲಿಸಬಹುದು.

PREV
Read more Articles on
click me!

Recommended Stories

ಡ್ರೋನ್ ಕ್ಯಾಮೆರಾ ಕಣ್ಣಿಗೂ ಬೀಳದ ಕಾಡಾನೆಗಳಿಗೆ ಸಿಂಹ ಸ್ವಪ್ನವಾದ ನಾಯಿಗಳು; ಅರಣ್ಯ ಇಲಾಖೆಗೆ ರೋಸಿ-ಸಿಂಧು ಫೇವರೇಟ್!
ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!