
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ Iran–Israel conflict ಉದ್ವಿಗ್ನತೆಯ ಪರಿಣಾಮ ಈಗ ಭಾರತದಲ್ಲಿಯೂ ಕಾಣಿಸಿಕೊಳ್ಳಲು ಆರಂಭವಾಗಿದೆ. ಈ ಜಾಗತಿಕ ಅಸ್ಥಿರತೆಯ ಹಿನ್ನೆಲೆ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಆತಂಕ ಹೆಚ್ಚಿದ್ದು, ಅದರ ಪರಿಣಾಮವಾಗಿ ಹಲವು ನಗರಗಳಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆ ಅಸ್ತವ್ಯಸ್ತವಾಗಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿರುವುದರಿಂದ ಹೋಟೆಲ್ ಮಾಲೀಕರು ಮತ್ತು ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಗರದ ಹಲವಾರು ಹೋಟೆಲ್ಗಳಲ್ಲಿ ಕಳೆದ ಕೆಲವು ದಿನಗಳಿಂದ ಗ್ಯಾಸ್ ಸಿಲಿಂಡರ್ ದೊರೆಯದ ಕಾರಣ ಅಡುಗೆ ಕಾರ್ಯವೇ ಸ್ಥಗಿತಗೊಂಡಿದೆ. ಕೆಲ ಹೋಟೆಲ್ಗಳು ಮೂರು ದಿನಗಳಿಂದಲೂ ಗ್ಯಾಸ್ ಸಿಗದೇ ತಮ್ಮ ಕಿಚನ್ಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಿಸುತ್ತಿವೆ. ಕೆಲವರು ಪರ್ಯಾಯ ವ್ಯವಸ್ಥೆ ಸೌದೆ ಒಲೆಯ ಕಡೆಗೆ ಮುಖ ಮಾಡಿದ್ದಾರೆ. ಇನ್ನೂ ಕೆಲವು ಹೋಟೆಲ್ಗಳು ಗ್ರಾಹಕರಿಗೆ ಸೇವೆ ನೀಡಲು ಕಷ್ಟಪಡುತ್ತಿವೆ. ಹೋಟೆಲ್ ಸಿಬ್ಬಂದಿ ಸದ್ಯ ಟೀ ಮತ್ತು ಕಾಫಿ ತಯಾರಿಸಲು ಇಂಡಕ್ಷನ್ ಸ್ಟವ್ಗಳನ್ನು ಬಳಸುತ್ತಿದ್ದಾರೆ. ಆದರೆ ಇಡ್ಲಿ, ವಡೆ, ಪಲಾವ್, ಚಿತ್ರಾನ್ನ, ಸಾಂಬಾರ್ ಸೇರಿದಂತೆ ಹೆಚ್ಚಿನ ಅಡುಗೆಗಳನ್ನು ಸೌದೆ ಒಲೆಯಲ್ಲಿ ಮಾಡುವ ಪರಿಸ್ಥಿತಿ ಎದುರಾಗಿದೆ.
ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಹಲವು ಹೋಟೆಲ್ ಮಾಲೀಕರು ಹಳೆಯ ಪದ್ಧತಿಯಾದ ಸೌದೆ ಒಲೆಗಳತ್ತ ಮುಖ ಮಾಡುತ್ತಿದ್ದಾರೆ. ಕೆಲವರು ತಮ್ಮ ಹೋಟೆಲ್ ಮುಂಭಾಗದಲ್ಲೇ ಶಾಮಿಯಾನ ಹಾಕಿ ರಸ್ತೆಯಲ್ಲೇ ಅಡುಗೆ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮುಖ್ಯ ರಸ್ತೆಗಳಲ್ಲೇ ಅಡುಗೆ ನಡೆಯುತ್ತಿರುವ ದೃಶ್ಯಗಳು ಜನರ ಗಮನ ಸೆಳೆಯುತ್ತಿವೆ. ಗೊಟ್ಟಿಗೆರೆ ಹಾಗೂ ಬನ್ನೇರುಗಟ್ಟ ಸಮೀಪದ ಪ್ರದೇಶಗಳಲ್ಲಿ ಈಗ ಎಲ್ಲೆಡೆ ಸೌದೆ ಒಲೆಗಳದ್ದೇ ಹವಾ ಕಾಣಿಸುತ್ತಿದೆ. ಗ್ಯಾಸ್ ಸಿಗದ ಕಾರಣ ಕೆಲವು ಹೋಟೆಲ್ಗಳು ತಮ್ಮ ಕಿಚನ್ಗಳನ್ನು ಸಂಪೂರ್ಣವಾಗಿ ಮುಚ್ಚಿ ಹೊರಗಡೆ ತಾತ್ಕಾಲಿಕ ಅಡುಗೆ ಮಾಡಿಕೊಳ್ಳಲು ಸೌದೆ ಒಲೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಕೆಲವು ಹೋಟೆಲ್ ಮಾಲೀಕರು ಸೌದೆ ಒಲೆಗಳ ಜೊತೆಗೆ ಇತರ ಪರ್ಯಾಯ ವ್ಯವಸ್ಥೆಗಳತ್ತ ಗಮನ ಹರಿಸುತ್ತಿದ್ದಾರೆ. ಸ್ಟೀಮ್ ಬಾಯ್ಲರ್, ಎಲೆಕ್ಟ್ರಿಕ್ ಸ್ಟವ್, ಇಂಡಕ್ಷನ್ ಸ್ಟವ್ ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಡುಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೂ ಈ ವ್ಯವಸ್ಥೆಗಳು ಸಂಪೂರ್ಣವಾಗಿ ಗ್ಯಾಸ್ ಸಿಲಿಂಡರ್ಗೆ ಪರ್ಯಾಯವಾಗಲು ಸಾಧ್ಯವಾಗುತ್ತಿಲ್ಲ ಎಂಬುದು ಹೋಟೆಲ್ ಮಾಲೀಕರ ಅಭಿಪ್ರಾಯವಾಗಿದೆ.
ಗ್ಯಾಸ್ ಕೊರತೆಯಿಂದ ಸೌದೆ ಒಲೆಗಳ ಬಳಕೆ ಹೆಚ್ಚುತ್ತಿರುವುದು ಪರಿಸರ ತಜ್ಞರಲ್ಲಿ ಆತಂಕ ಹುಟ್ಟಿಸಿದೆ. ಸೌದೆ ಒಲೆ ಬಳಸಲು ಕಟ್ಟಿಗೆ ಬೇಕಾಗುತ್ತದೆ. ಅದಕ್ಕಾಗಿ ಮರಗಳನ್ನು ಕಡಿದರೆ ಪರಿಸರಕ್ಕೆ ಮತ್ತಷ್ಟು ಹಾನಿಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಬಗ್ಗೆ ಪರಿಸರ ಕಾರ್ಯಕರ್ತ ಮಂಜು ಮಾತನಾಡಿ, ಈಗಾಗಲೇ ಬೆಂಗಳೂರು ನಗರವನ್ನು ‘ಪೋಲ್ಯೂಷನ್ ಸಿಟಿ’ ಎಂದು ಕರೆಯಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮರಗಳನ್ನು ಕಡಿದು ಸೌದೆ ಒಲೆಗಳನ್ನು ಬಳಸುವುದು ಪರಿಸರಕ್ಕೆ ಇನ್ನಷ್ಟು ಹಾನಿ ಉಂಟುಮಾಡಬಹುದು ಎಂದು ಹೇಳಿದ್ದಾರೆ. ಗ್ಯಾಸ್ ಸಿಲಿಂಡರ್ ಕೊರತೆಯನ್ನು ತಕ್ಷಣ ಪರಿಹರಿಸುವಂತೆ ಪರಿಸರವಾದಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ಸಾರ್ವಜನಿಕರು ಮತ್ತು ಹೋಟೆಲ್ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕದಂತೆ ಆದಷ್ಟು ಬೇಗ ಗ್ಯಾಸ್ ಸಿಲಿಂಡರ್ ಪೂರೈಕೆ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪರಿಸರವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಮರಗಳ ಕಡಿತವನ್ನು ತಪ್ಪಿಸಿ ಪರ್ಯಾಯ ಪರಿಹಾರ ಕಂಡುಹಿಡಿಯಬೇಕು ಎಂದು ಪರಿಸರ ತಜ್ಞರು ಸಲಹೆ ನೀಡಿದ್ದಾರೆ. ಒಟ್ಟಾರೆ, ಗ್ಯಾಸ್ ಸಿಲಿಂಡರ್ ಕೊರತೆ ನಗರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಹೋಟೆಲ್ ಉದ್ಯಮಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರಿಯಾದ ಸಮಯದಲ್ಲಿ ಸರ್ಕಾರ ಕ್ರಮ ಕೈಗೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.