
ಬೆಂಗಳೂರು: ರಂಜಾನ್ ಹಬ್ಬದ ಶಾಪಿಂಗ್ಗೆ ತೆರಳಿದ ಒಂದು ಕುಟುಂಬಕ್ಕೆ ದಿನನಿತ್ಯದ ಕ್ಯಾಬ್ ಪ್ರಯಾಣವೇ ದೊಡ್ಡ ನಷ್ಟಕ್ಕೆ ಕಾರಣವಾದ ಘಟನೆ ನಗರದಲ್ಲಿ ನಡೆದಿದೆ. ಕ್ಯಾಬ್ ಚಾಲಕನೇ ಪ್ರಯಾಣದ ವೇಳೆ ಕುಟುಂಬದ ಮಧ್ಯೆ ನಡೆದ ಮಾತುಕತೆಯನ್ನು ದುರುಪಯೋಗಪಡಿಸಿಕೊಂಡು ಮನೆ ಕಳ್ಳತನ ನಡೆಸಿದ್ದಾನೆ.
ಭುವನೇಶ್ವರಿನಗರದಲ್ಲಿರುವ ಬೀಗ ಹಾಕಿದ ಮನೆಗೆ ನುಗ್ಗಿ ಸುಮಾರು ₹25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದ ಆರೋಪದ ಮೇಲೆ 40 ವರ್ಷದ ಅಬ್ದುಲ್ ರೆಹಮಾನ್ ಎಂಬಾತನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 180 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕದ್ದ ಚಿನ್ನದ ಒಂದು ಭಾಗವನ್ನು ಶಿವಾಜಿನಗರ ಮತ್ತು ಕೆ.ಜಿ.ಹಳ್ಳಿ ಪ್ರದೇಶಗಳಲ್ಲಿನ ಅಂಗಡಿಗಳಲ್ಲಿ ಅಡವಿಟ್ಟಿದ್ದರೆ, ಉಳಿದ ಭಾಗವನ್ನು ತಮಿಳುನಾಡಿನ ವೆಲ್ಲೂರಿನ ಪರಿಚಯಸ್ಥರಿಗೆ ಮಾರಾಟ ಮಾಡಿದ್ದಾನೆ.
ಕಳ್ಳತನಕ್ಕೊಳಗಾದ ಕುಟುಂಬದ ಮುಖ್ಯಸ್ಥರಾದ 67 ವರ್ಷದ ಸೈಯದ್ ಅಕ್ರಮ್, ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ನಲ್ಲಿ ಬಳೆ ಅಂಗಡಿ ನಡೆಸುತ್ತಿದ್ದು, ತಮ್ಮ ಮಗ, ಸೊಸೆ ಮತ್ತು ಮೊಮ್ಮಗನೊಂದಿಗೆ ಭುವನೇಶ್ವರಿನಗರದಲ್ಲಿ ವಾಸಿಸುತ್ತಿದ್ದಾರೆ. ರಂಜಾನ್ ಹಬ್ಬದ ಹಿನ್ನೆಲೆ ಫೆಬ್ರವರಿ 11ರಂದು ಖರೀದಿಗಾಗಿ ಕುಟುಂಬ ಸಮೇತ ಮುಂಬೈಗೆ ತೆರಳಲು ಅವರು ಮನೆಗೆ ಬೀಗ ಹಾಕಿ ಅಗ್ರಿಗೇಟರ್ ಆಪ್ ಮೂಲಕ ಕ್ಯಾಬ್ ಬುಕ್ ಮಾಡಿಕೊಂಡು ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದರು. ಆ ಪ್ರಯಾಣಕ್ಕೆ ಕ್ಯಾಬ್ ಚಾಲಕನಾಗಿ ಅಬ್ದುಲ್ ರೆಹಮಾನ್ ಬಂದಿದ್ದ.
ಕುಟುಂಬವನ್ನು ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋಗುವ ವೇಳೆ ಸೈಯದ್ ಅಕ್ರಮ್ ಮತ್ತು ಅವರ ಮಗ ಮುಂಬೈ ಪ್ರಯಾಣ ಯೋಜನೆಗಳನ್ನು ಚರ್ಚಿಸುತ್ತಿರುವುದನ್ನು ಪ್ರವಾಸದ ಕುರಿತು ಹಾಗೂ ಕೆಲವು ದಿನಗಳು ಹೊರಗೇ ಇರುವ ಬಗ್ಗೆ ಮಾತನಾಡಿದ್ದನ್ನು ಚಾಲಕ ರೆಹಮಾನ್ ಕೇಳಿಕೊಂಡಿದ್ದಾನೆ. ಇದರಿಂದ ಕುಟುಂಬವು ಕನಿಷ್ಠ ಎರಡು ಅಥವಾ ಮೂರು ದಿನಗಳವರೆಗೆ ಮನೆಗೆ ಮರಳುವುದಿಲ್ಲ ಎಂಬ ಮಾಹಿತಿ ಅವನಿಗೆ ಸಿಕ್ಕಿದೆ.
ಇದೇ ಸಮಯವನ್ನು ದುರುಪಯೋಗಪಡಿಸಿಕೊಂಡ ಆರೋಪಿಯು ಅಂದೇ ಮಧ್ಯರಾತ್ರಿ ಭುವನೇಶ್ವರಿನಗರಕ್ಕೆ ಹಿಂತಿರುಗಿ, ಮನೆಯ ಕಿಟಕಿಯ ಗ್ರಿಲ್ ಒಡೆದು ಒಳನುಗ್ಗಿದ್ದಾನೆ. ಬಳಿಕ ಮಲಗುವ ಕೋಣೆಯಲ್ಲಿದ್ದ ಕಪಾಟಿನ ಬೀಗ ಒಡೆದು ಅದರಲ್ಲಿ ಇರಿಸಿದ್ದ ಚಿನ್ನಾಭರಣಗಳನ್ನು ಕದ್ದುಕೊಂಡು ಪರಾರಿಯಾಗಿದ್ದಾನೆ.
ಫೆಬ್ರವರಿ 16ರಂದು ಮುಂಬೈಯಿಂದ ಮರಳಿದ ಕುಟುಂಬ ಮನೆಗೆ ಬಂದಾಗ, ಮನೆ ಬೀಗ ಮುರಿದು ಕಳ್ಳತನವಾಗಿರುವುದನ್ನು ಕಂಡು ಬೆಚ್ಚಿಬಿದ್ದರು. ತಕ್ಷಣವೇ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಪ್ರಕರಣದ ತನಿಖೆಯನ್ನು ಇನ್ಸ್ಪೆಕ್ಟರ್ ಭೈರಾ ಅವರ ನೇತೃತ್ವದ ತಂಡ ಕೈಗೊಂಡಿದ್ದು, ತಾಂತ್ರಿಕ ಸಾಕ್ಷ್ಯಗಳು ಹಾಗೂ ಮಾಹಿತಿ ಸಂಗ್ರಹದ ಆಧಾರದ ಮೇಲೆ ಆರೋಪಿಯನ್ನು ಫೆಬ್ರವರಿ 22ರಂದು ಪತ್ತೆಹಚ್ಚಿ ಬಂಧಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಬಂಧಿತ ಅಬ್ದುಲ್ ರೆಹಮಾನ್ ಈ ಹಿಂದೆ ಕೂಡ ಮೂರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.