ಶರಾವತಿ ಭೂಗರ್ಭ ಜಲ ವಿದ್ಯುತ್ ಯೋಜನೆಗೆ‌ ವಿರೋಧಿ ಅಲೆ ಶುರು

By Kannadaprabha NewsFirst Published Jun 11, 2020, 8:17 AM IST
Highlights

ರಾವತಿ ಭೂಗರ್ಭ ಜಲವಿದ್ಯುತ್‌ ಸ್ಥಾವರ ಸ್ಥಾಪಿಸುವ ಯೋಜನೆ ಪರಿಸರಕ್ಕೆ ಮಾರಕವಾಗಿದೆ. ಇದನ್ನು ನಾನೂ ವಿರೋಧಿ​ಸುವ ಜೊತೆಗೆ ನಿಮ್ಮ ಹೋರಾಟದಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎಂದು ವೃಕ್ಷಲಕ್ಷ ಆಂದೋಲನ ಸದಸ್ಯರಿಗೆ ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಸಾಗರ(ಜೂ.11): ಶರಾವತಿ ನದಿ ಕಣಿವೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶರಾವತಿ ಭೂಗರ್ಭ ಜಲ ವಿದ್ಯುತ್‌ ಯೋಜನೆಯನ್ನು ಕೈ ಬಿಡುವಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಬುಧವಾರ ವೃಕ್ಷಲಕ್ಷ ಆಂದೋಲನ ಕರ್ನಾಟಕದಿಂದ ಶಾಸಕ ಎಚ್‌.ಹಾಲಪ್ಪನವರಿಗೆ ಮನವಿ ಸಲ್ಲಿಸಲಾಯಿತು.

ಈಗಾಗಲೆ ಉದ್ದೇಶಿತ ಯೋಜನೆ ಸಂಬಂಧ ಸರ್ವೆ ಕಾರ್ಯ ನಡೆಯುತ್ತಿದೆ. ಶರಾವತಿ ಕಣಿವೆ ಪ್ರದೇಶದಲ್ಲಿ ಪರಿಸರಕ್ಕೆ ಮಾರಕವಾದ ಅನೇಕ ಕಾರ್ಯಯೋಜನೆಗಳು ನಡೆದಿವೆ. ಇದರಿಂದ ಅಪಾರ ಪ್ರಮಾಣದ ಪರಿಸರ ನಾಶವಾಗಿದ್ದು, ವನ್ಯಜೀವಿಗಳು ಅತಂತ್ರ ಸ್ಥಿತಿಯಲ್ಲಿವೆ. ಈಗ ಮತ್ತೊಂದು ಯೋಜನೆ ಕೈಗೆತ್ತಿಕೊಳ್ಳುವುದರಿಂದ ಸಾವಿರಾರು ಎಕರೆ ಅರಣ್ಯ ನಾಶವಾಗುವ ಸಾಧ್ಯತೆ ಇದೆ. ತಕ್ಷಣ ಯೋಜನೆ ಸಂಬಂಧ ಕೈಗೆತ್ತಿಕೊಂಡಿರುವ ಸರ್ವೆ ಕಾರ್ಯವನ್ನು ಕೈಬಿಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಹೋರಾಟಕ್ಕೆ ಬೆಂಬಲ:

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಚ್‌.ಹಾಲಪ್ಪ, ಶರಾವತಿ ಭೂಗರ್ಭ ಜಲವಿದ್ಯುತ್‌ ಸ್ಥಾವರ ಸ್ಥಾಪಿಸುವ ಯೋಜನೆ ಪರಿಸರಕ್ಕೆ ಮಾರಕವಾಗಿದೆ. ಇದನ್ನು ನಾನೂ ವಿರೋಧಿ​ಸುವ ಜೊತೆಗೆ ನಿಮ್ಮ ಹೋರಾಟದಲ್ಲಿ ನಾನು ಪಾಲ್ಗೊಳ್ಳುತ್ತೇನೆಂದು ಭರವಸೆ ನೀಡಿದರು.

ಸಾವಿರಾರು ಕುಟುಂಬಗಳ ಅನ್ನದಾತೆ ಶರಾವತಿ ವಿಷಮುಕ್ತಕ್ಕೆ ಚಿಂತನೆ

ಶರಾವತಿ ಭೂಗರ್ಭ ವಿದ್ಯುತ್‌ ಯೋಜನೆಯಿಂದ ಬಹುಹಂತದಲ್ಲಿ ಪರಿಸರ ನಾಶವಾಗುತ್ತದೆ. ಭೂಕುಸಿತ, ವನ್ಯಜೀವಿಗಳ ಮಾರಣಹೋಮ, ಜೀವವೈವಿಧ್ಯತೆ ನಾಶದಂತಹ ಪರಿಣಾಮ ನಿರಂತರವಾಗಿ ಅನುಭವಿಸಬೇಕಾಗುತ್ತದೆ. ಇಂತಹ ಅವೈಜ್ಞಾನಿಕ ಪರಿಸರ ವಿರೋ​ಧಿ ಯೋಜನೆಯನ್ನು ನಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಜೊತೆಗೆ ಅ​ಧಿಕಾರಿಗಳ ಜೊತೆ ಮಾತಕತೆ ನಡೆಸಲಾಗುತ್ತದೆ. ಸದ್ಯದಲ್ಲಿಯೆ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ವೃಕ್ಷಲಕ್ಷ ಆಂದೋಲನ ಕರ್ನಾಟಕ ಸಂಚಾಲಕ ಬಿ.ಎಚ್‌. ರಾಘವೇಂದ್ರ, ಪ್ರಮುಖರಾದ ಕವಲಕೋಡು ವೆಂಕಟೇಶ್‌, ಚಿನ್ಮಯ ಕೆ.ವಿ., ಬಿಜೆಪಿ ಪ್ರಮುಖರಾದ ಟಿ.ಡಿ. ಮೇಘರಾಜ್‌, ಗೌತಮ್‌, ವಿನಾಯಕ ಮನೆಘಟ್ಟ, ಬಿ.ಟಿ.ರವೀಂದ್ರ ಹಾಜರಿದ್ದರು.
 

click me!