ಕರ್ನಾಟಕ ಸಾರಿಗೆಯಲ್ಲಿ ಮಹಾರಾಷ್ಟ್ರ ಟಿಕೆಟ್ ಹಂಚಿಕೆ ಪ್ರಕರಣ: 6 ಸಿಬ್ಬಂದಿ ಮೇಲೆ ಆಪಾದನಾ ಪತ್ರ

By Girish GoudarFirst Published Oct 7, 2022, 1:00 AM IST
Highlights

ಟಿಕೆಟ್‌ಗಳಲ್ಲಿ ಮಹಾರಾಷ್ಟ್ರ ಸಾರಿಗೆ ಪರಿವಾಹನ ಎಂದು ಮುದ್ರಿಸಿದ ಟಿಕೆಟ್‌ ವಿತರಿಸಿದ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಸಾರಿಗೆ ಇಲಾಖೆ 

ಗದಗ(ಅ.07):  ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಗದಗ ಘಟಕದ ಸಾರಿಗೆ ಬಸ್‌ಗಳಲ್ಲಿ ನೀಡುವ ಟಿಕೆಟ್‌ಗಳಲ್ಲಿ ಮಹಾರಾಷ್ಟ್ರ ಸಾರಿಗೆ ಪರಿವಾಹನ ಎಂದು ಮುದ್ರಿಸಿದ ಟಿಕೆಟ್‌ಗಳನ್ನು ವಿತರಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಸ್ತೆ ಸಾರಿಗೆ ಇಲಾಖೆ ಆರು ಜನ ಸಿಬ್ಬಂದಿಗೆ ಆಪಾದನಾ ಪಟ್ಟಿ ಜಾರಿ ಮಾಡಿದೆ.

ಗದಗ ಡಿಪೋದ ಈರಮ್ಮ ಅಂಗಡಿ, ಕಿರಿಯ ಸಹಾಯಕ ಎಸ್. ಬಿ. ಸೋಮಣ್ಣನವರ್, ಡ್ರೈವರ್ ಕಮ್ ಕಡೆಕ್ಟರ್ ಎಮ್. ಟಿ. ಸವವಾದಿ ಹಾಗೂ ರೋಣ ಡಿಪೋದ ಕಿರಿಯ ಸಹಾಯಕ ವಿ.ಆರ್. ಹೀರೇಮಠ, ಕಿರಿಯ ಸಹಾಯಕ ಎಚ್. ವೈ. ಉಮಚಗಿ, ಕಿರಿಯ ಸಹಾಯಕ ಎಮ್. ಎಸ್. ವಿರಕ್ತಮಠ ಅನ್ನೋರಿಗೆ ಆಪಾದನಾ ಪಟ್ಟಿ ಜಾರಿಗೊಳಿಸಲಾಗಿದೆ. ಈ ನೌಕರರಿಂದ ವರದಿ ಪಡೆದು ಕ್ರಮ ಜರುಗಿಸಲಾಗುವದೆಂದು ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶೀನಯ್ಯ ಏಷ್ಯ ನೆಟ್ ಸುವರ್ಣ ನ್ಯೂಸ್ ವೆಬ್‌ಗೆ ತಿಳಿಸಿದ್ದಾರೆ.

ನಾಡಹಬ್ಬದ ದಿನವೇ ಸಾರಿಗೆ ಸಂಸ್ಥೆಯಲ್ಲಿ ನಾಡಿಗೆ ಅಪಮಾನ!

ಮುಂಡರಗಿ ತಾಲೂಕನ ಅತ್ತಿಕಟ್ಟಿ, ಡೋಣಿ, ಡೋಣಿ ತಾಂಡಾಗಳಿಂದ ಗದಗಕ್ಕೆ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಮಹಾರಾಷ್ಟ್ರ ಸಾರಿಗೆ ಪರಿವಾಹನ್ ಹಾಗೂ ಜಯ್ ಮಹಾರಾಷ್ಟ್ರ ಮೊಹರು ಹೊಂದಿದ್ದ ಟಿಕೆಟ್ ವಿತರಿಸಿದ್ದು ಕನ್ನಡಿಗರು, ಕನ್ನಡ ಸಂಘ ಸಂಸ್ಥೆಗಳ ಅಕ್ರೋಶಕ್ಕೆ ಕಾರಣವಾಗಿತ್ತು. ಆಗಿರುವ ಲೋಪವನ್ನು ಸರಿಪಡಿಸಿಕೊಳ್ಳಲು ಪ್ರಕರಣ ಬೆಳಕಿಗೆ ಬಂದ ಕೂಡಲೇ ಸಾರಿಗೆ ಸಂಸ್ಥೆ ಟಿಕೆಟ್ ರೋಲ್‌ಗಳನ್ನು ವಾಪಸ್ಸು ಪಡೆದಿತ್ತು. ಮಹಾರಾಷ್ಟ್ರದ ಟಿಕೆಟ್ ರೋಲ್ ಬಳಕೆ ಮಾಡಿದ ಕ್ರಮವನ್ನು ವಿರೋಧಿಸಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಧರಣಿ ನಡೆಸಿದ್ರು.
 

click me!