ಹೊರ ರಾಜ್ಯಗಳಿಂದ ಚಿಕ್ಕಮಗಳೂರು ಜಿಲ್ಲೆಗೆ 536 ಮಂದಿ ಆಗಮನ

By Suvarna NewsFirst Published May 26, 2020, 9:31 AM IST
Highlights

ಗ್ರೀನ್‌ ಝೋನ್‌ನಲ್ಲಿರುವ ಕಾಫಿನಾಡು ಚಿಕ್ಕಮಗಳೂರಿಗೆ ಬೇರೆ ಬೇರೆ ರಾಜ್ಯಗಳಿಂದ 536 ಜನರು ಬಂದಿಳಿದಿದ್ದಾರೆ. ಇವರನ್ನೆಲ್ಲ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಚಿಕ್ಕಮಗಳೂರು(ಮೇ.26): ಆನ್‌ಲೈನ್‌ನಲ್ಲಿ ಪಾಸ್‌ ಪಡೆದು ಹೊರ ರಾಜ್ಯಗಳಿಂದ ಬರಲು ಅವಕಾಶ ನೀಡಿದ ಬಳಿಕ ಕಾಫಿನಾಡಿಗೆ ಮೇ 5ರಿಂದ 23 ರವರೆಗೆ 536 ಮಂದಿ ಆಗಮಿಸಿದ್ದಾರೆ.

ಕರ್ನಾಟಕ ರಾಜ್ಯಾದ್ಯಂತ ಕೊರೋನಾ ಮಹಾಮಾರಿ ಸೋಂಕು ಹಬ್ಬಿಸಿರುವ ಮಹಾರಾಷ್ಟ್ರದಿಂದ ಚಿಕ್ಕಮಗಳೂರು ಜಿಲ್ಲೆಗೆ 317 ಮಂದಿ ಈವರೆಗೆ ಬಂದಿದ್ದಾರೆ. ಹೀಗೆ ಬಂದಿರುವ ಎಲ್ಲರನ್ನೂ ಜಿಲ್ಲಾಡಳಿತ ಕ್ವಾರೆಂಟೈನ್‌ ಮಾಡಿದೆ. ಇವರಲ್ಲಿ ಸಹೋದರರ ಎರಡು ಕುಟುಂಬಗಳಲ್ಲಿನ 9 ಮಂದಿಯಲ್ಲಿ 8 ಜನರಿಗೆ ಸೋಂಕಿರುವುದು ದೃಢಪಟ್ಟಿದೆ.

ಆಂಧ್ರಪ್ರದೇಶದಿಂದ 32, ಗುಜರಾತ್‌ನಿಂದ 11, ಕೇರಳದಿಂದ 31, ರಾಜಸ್ಥಾನ 16, ತಮಿಳುನಾಡಿನಿಂದ 80, ತೆಲಂಗಾಣದಿಂದ 25 ಮಂದಿ ಆಗಮಿಸಿದ್ದಾರೆ. ಇವರೆಲ್ಲರೂ 14 ದಿನಗಳ ಕ್ವಾರೆಂಟೈನ್‌ನಲ್ಲಿ ಇದ್ದಾರೆ. ಮಹಾರಾಷ್ಟ್ರದಿಂದ ಬಂದಿರುವವರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ. ಈಗ ಬಂದಿರುವ 536 ರಲ್ಲಿ ಅತಿ ಹೆಚ್ಚು ಮಂದಿ ಇರುವುದು ಮಹಾರಾಷ್ಟ್ರದಿಂದ, ಹೀಗಾಗಿ ಇನ್ನು ಜನರಲ್ಲಿ ಭೀತಿ ಇದೆ.

ನುಸುಳುಕೋರರ ಮೇಲೆ ಕಣ್ಣು:

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣ ಮಾಡಬೇಕಾದರೆ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ ಪಾಸ್‌ ಪಡೆಯುವುದು ಕಡ್ಡಾಯ. ಆದರೆ, ಕೆಲವು ಮಂದಿ ಪಾಸ್‌ ಪಡೆಯದೇ ಅಡ್ಡದಾರಿಯಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಸೇವಾ ಸಿಂಧು ಪಾಸ್‌ ಇಲ್ಲದೇ ಜಿಲ್ಲೆಗೆ ಆಗಮಿಸಿರುವ ಎರಡು ಪ್ರಕರಣಗಳಲ್ಲಿ 5 ಮಂದಿಯ ವಿರುದ್ಧ ಕಡೂರು ಹಾಗೂ ಸಖರಾಯಪಟ್ಟಣ ಪೊಲೀಸ್‌ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ಲಾರಿ-ಬೈಕ್‌ ಡಿಕ್ಕಿ: ಅಜ್ಜ-ಮೊಮ್ಮಗ ಸಾವು

ರಾಜಸ್ಥಾನದ ಅಹೋರೆಯಿಂದ ಕಡೂರಿಗೆ ಆಗಮಿಸಿದ 3 ಮಂದಿ ಹಾಗೂ ಆಂಧ್ರಪ್ರದೇಶದ ಅಣ್ಣಾವರಂದಿಂದ ಬಂದಿರುವ ಇಬ್ಬರ ವಿರುದ್ಧ ನಿಷೇಧಾಜ್ಞೆ ಉಲ್ಲಂಘಿಸಿರುವ ಕಾರಣಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೋವಿಡ್‌-19 ಕೇಂದ್ರ ಸ್ಥಳಾಂತರಕ್ಕೆ ಆಗ್ರಹ

ಚಿಕ್ಕಮಗಳೂರು: ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಸೇರಿರುವ ಪ್ರಸೂತಿ ಕೇಂದ್ರದಲ್ಲಿ ತೆರೆದಿರುವ ಕೋವಿಡ್‌-19 ಚಿಕಿತ್ಸಾ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ತಾಲೂಕು ಅಧ್ಯಕ್ಷ ಜೆ. ಸತ್ಯನಾರಾಯಣ ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಕೋವಿಡ್‌-19 ಚಿಕಿತ್ಸಾ ಕೇಂದ್ರದ ಆಸುಪಾಸಿನಲ್ಲಿ ಜನವಸತಿ ಪ್ರದೇಶಗಳು ಇವೆ. ಇದರಿಂದ ಜನರಲ್ಲಿ ಆತಂಕ ಎದುರಾಗಿದೆ. ಆಸುಪಾಸಿನಲ್ಲಿ ಖಾಸಗಿ ಆಸ್ಪತ್ರೆಗಳು ಸಹ ಇವೆ. ಇಲ್ಲಿಗೆ ಬರುವ ರೋಗಿಗಳು ಭಯಪಡುವ ಪರಿಸ್ಥಿತಿ ಬಂದಿದೆ. ಜಿಲ್ಲಾಡಳಿತ ಕೋವಿಡ್‌-19 ಚಿಕಿತ್ಸೆ ಕೇಂದ್ರವನ್ನು ಸ್ಥಳಾಂತರ ಮಾಡಬೇಕೆಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
 

click me!