ನೆರೆ ಸಂತ್ರಸ್ತರ ಖಾತೆಗೆ 169 ಕೋಟಿ ರು. ಅನುದಾನ

By Kannadaprabha NewsFirst Published Dec 21, 2019, 2:48 PM IST
Highlights

ಕಳೆದ ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ಸುರಿದ ಮಳೆಯು ಜನಜೀವನ ಅಸ್ತವ್ಯಸ್ತಗೊಳಿಸಿತ್ತು. ಈ ಸಂದರ್ಭದಲ್ಲಿ ನೆರೆಯಿಂದ ಸಂತ್ರಸ್ತರಾದವರಿಗೆ ಪರಿಹಾರ ಬಿಡುಗಡೆ ಮಾಡಲಾಗಿದೆ. 

ಕಾರವಾರ [ಡಿ.21]:  ಜಿಲ್ಲೆಯಲ್ಲಿ ಕಳೆದ ಆಗಸ್ಟ್‌ನಲ್ಲಿ ನೆರೆಯಿಂದಾಗಿ  ಹಾನಿಗೀಡಾದ ಮನೆಗಳಿಗೆ ಒಟ್ಟು 2,818 ಸಂತ್ರಸ್ತರಿಗೆ 169  ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಬಹುತೇಕ ಕಡೆ ಹೊಸದಾಗಿ ಮನೆ ನಿರ್ಮಾಣ, ದುರಸ್ತಿ ಕಾರ್ಯ ಆರಂಭವಾಗಬೇಕಿದೆ.

ಶೆಡ್ ನಿರ್ಮಾಣಕ್ಕೆ 61 ಕುಟುಂಬಳಿಗೆ 30.50 ಲಕ್ಷ, ಬಾಡಿಗೆ ಕಟ್ಟಡದಲ್ಲಿ ವಾಸಿಸುತ್ತಿರುವ 52 ಕುಟುಂಬಗಳಿಗೆ 16.55 ಲಕ್ಷ, ಸಂಪೂರ್ಣ ಹಾನಿಯಾದ 122 ಮನೆಗೆ 1.8 ಕೋಟಿ ರು., ಮೂಲ ರಚನೆ ಧಕ್ಕೆಯಾದ 587 ಮನೆಗೆ 4.81 ಕೋಟಿ ರು. ಭಾಗಶಃ ಹಾನಿಯಾದ 2109 ಮನೆಗೆ ನಿಗಮದಿಂದ 1.77 ಕೋಟಿ, ಜಿಲ್ಲಾಡಳಿತದಿಂದ 8.76 ಕೋಟಿ ರು., ಅನುದಾನ ಸಂಬಂಧಿಸಿದ ಕುಟುಂಬಕ್ಕೆ ನೀಡಲಾಗಿದೆ. ಪೂರ್ಣ ಹಾನಿಯಾದ ಮನೆಗಳನ್ನು ಎ, ಬಿ ದರ್ಜೆಗೆ, ಭಾಗಶಃ ಹಾನಿಯಾದ ಮನೆಯನ್ನು ಸಿ ದರ್ಜೆಗೆ ಸೇರಿಸಲಾಗಿದೆ.

ಎ, ಬಿ ದರ್ಜೆ ಮನೆಗೆ 5 ಲಕ್ಷ ರು., ಸಿ ದರ್ಜೆ ಮನೆಗೆ 50 ಸಾವಿರ ರು. ಪರಿಹಾರ ಸರ್ಕಾರ ನೀಡಿದ್ದು, ಅದರಲ್ಲಿ 5 ಲಕ್ಷ ಪರಿಹಾರ ನೀಡಬೇಕಾದ ಕುಟುಂಬಕ್ಕೆ 1 ಲಕ್ಷ ಪರಿಹಾರ ಈಗಾಗಲೇ ನೀಡಲಾಗಿದೆ. ಉಳಿದ ಪರಿಹಾರವನ್ನು ಹಂತ ಹಂತವಾಗಿ ಮನೆ ನಿರ್ಮಾಣ ಆಗುತ್ತಿದ್ದಂತೆ ವಿತರಣೆ ಕಾರ್ಯ ನಡೆಯಲಿದೆ. 

ಹೆಣ್ಣಿನ ಮನಸು ಅರಿಯಬಹುದು, ಮೀನಿನ ಹೆಜ್ಜೆ ಗುರುತಿಸಬಹುದು; ಈರುಳ್ಳಿ ಬೆಲೆ ಮರ್ಮ ಕಷ್ಟ.

ತಾಲೂಕಾವಾರು: ಪೂರ್ಣ ಪ್ರಮಾಣದಲ್ಲಿ  ಹಾನಿಗೊಳಗಾದ ಮನೆಗಳಲ್ಲಿ ಅಂಕೋಲಾದಲ್ಲಿ 13 ಮನೆಯಿದ್ದು, 13 ಲಕ್ಷ ರು., ಭಟ್ಕಳದಲ್ಲಿ 4 ಮನೆಗೆ 3.4 ಲಕ್ಷ ರು., ಹಳಿಯಾಳ 14 ಮನೆಗಳಿಗೆ 9.24 ಲಕ್ಷ ರು., ಹೊನ್ನಾವರ 4 ಮನೆ 47 ಸಾವಿರ ರು., ಕಾರವಾರ 58 ಲಕ್ಷ ರು., ಕುಮಟಾ 2 ಮನೆ 2 ಲಕ್ಷ ರು., ಮುಂಡಗೋಡ 12 ಮನೆ 8.66 ಲಕ್ಷ ರು., ಸಿದ್ದಾಪುರ 13 ಮನೆ 4.38 ಲಕ್ಷ, ಶಿರಸಿ 8 ಮನೆ 7.4 ಲಕ್ಷ ರು., ಯಲ್ಲಾಪುರ 24 ಮನೆ 2 ಲಕ್ಷ ರು. ಪರಿಹಾರ ನೀಡಲಾಗಿದೆ.

ಭಾಗಶಃ ಹಾನಿಗೊಳಗಾದ ಮನೆಗಳಲ್ಲಿ ಅಂಕೋಲಾ 45 ಮನೆ  45 ಲಕ್ಷ ರು., ಭಟ್ಕಳ 39 ಮನೆ 31.87 ಲಕ್ಷ ರು., ಹಳಿಯಾಳ 156 ಮನೆ 1.26 ಕೋಟಿ, ಹೊನ್ನಾವರ 33 ಮನೆ 20.6 ಲಕ್ಷ, ಜೋಯಿಡಾ 26 ಮನೆ 19 ಲಕ್ಷ, ಕಾರವಾರ 85 ಲಕ್ಷ, ಕುಮಟಾ 37 ಮನೆ 24.16 ಲಕ್ಷ, ಮುಂಡಗೋಡ 52 ಮನೆ 41.01 ಲಕ್ಷ ರು., ಸಿದ್ದಾಪುರ 23 ಮನೆ 19.92 ಲಕ್ಷ ರು., ಶಿರಸಿ 93 ಮನೆ 87.53 ಲಕ್ಷ ರು., ಯಲ್ಲಾಪುರ 96 ಮನೆ 54 ಲಕ್ಷ ರು., ದಾಂಡೇಲಿ, ಜಾಲಿ ತಲಾ 3 ಮನೆ 3 ಲಕ್ಷ ಪರಿಹಾರ ನೀಡಲಾಗಿದೆ. ಪೂರ್ಣ 152, ಭಾಗಶಃ 664 ಮನೆಗಳು ಹಾನಿಯಾಗಿದೆ.

ಉಸುಕಿನ ಸಮಸ್ಯೆ ಒಳಗೊಂಡು ವಿವಿಧ ಕಾರಣದಿಂದ ಮನೆ ನಿರ್ಮಾಣ ಬಹುತೇಕ ಕಡೆ ವಿಳಂಬವಾಗುತ್ತಿದೆ. ಹಾಲಿ ಪರಿಸ್ಥಿತಿಯಲ್ಲಿ 5 ಲಕ್ಷ ರು. ಮೊತ್ತದಲ್ಲಿ ಪೂರ್ಣ ಮನೆ ಕಟ್ಟಲು ಕಷ್ಟಸಾಧ್ಯವಾಗಿದ್ದು, ಇದರಿಂದ ಕೂಡಾ ಮನೆಯ ಮಾಲೀಕರು ಕೆಲಸ ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ. 

click me!