ದಸರಾಗೆ ವಿದ್ಯುತ್‌ ಬೆಳಕಿನ ಸಿಂಗಾರ...! 100 ಕಿ.ಮಿ ದೀಪಾಲಂಕಾರ

By Kannadaprabha NewsFirst Published Oct 4, 2021, 1:45 PM IST
Highlights
  • ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿದ್ಯುತ್‌ ಬೆಳಕಿನಿಂದ ಸಿಂಗಾರ
  • ವಿದ್ಯುತ್‌ ದೀಪಗಳ ತೋರಣಗಳನ್ನು ರಸ್ತೆ, ವೃತ್ತಗಳಲ್ಲಿ ಅಳವಡಿಸಲಾಗುತ್ತಿದೆ. ಈಗಾಗಲೆ ನಗರದ ಹಲವೆಡೆ ವಿದ್ಯುತ್‌ ದೀಪಾಲಂಕಾರ ಕಾರ್ಯವು ಪೂರ್ಣ

ವರದಿ :  ಬಿ. ಶೇಖರ್‌ ಗೋಪಿನಾಥಂ

 ಮೈಸೂರು (ಅ.04):  ನಾಡಹಬ್ಬ ದಸರಾ (Dasara) ಮಹೋತ್ಸವಕ್ಕೆ ವಿದ್ಯುತ್‌ ಬೆಳಕಿನಿಂದ ಸಿಂಗಾರ ಕಾರ್ಯವು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ಭರದಿಂದ ಸಾಗುತ್ತಿದೆ. ವಿದ್ಯುತ್‌ ದೀಪಗಳ ತೋರಣಗಳನ್ನು ರಸ್ತೆ, ವೃತ್ತಗಳಲ್ಲಿ ಅಳವಡಿಸಲಾಗುತ್ತಿದೆ. ಈಗಾಗಲೆ ನಗರದ ಹಲವೆಡೆ ವಿದ್ಯುತ್‌ ದೀಪಾಲಂಕಾರ (Lightings) ಕಾರ್ಯವು ಪೂರ್ಣಗೊಂಡಿದ್ದು, ಕೆಲವೆಡೆ ಮಾತ್ರ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ.

ಕೋವಿಡ್‌ (Covid) ಹಿನ್ನೆಲೆಯಲ್ಲಿ ಸತತ ಎರಡನೇ ವರ್ಷವೂ ಸರಳ ಹಾಗೂ ಸಂಪ್ರದಾಯಿಕ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ದೀಪಾಲಂಕಾರಕ್ಕೆ ಮಾತ್ರ ಸರ್ಕಾರ ವಿನಾಯಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ನಗರಾದ್ಯಂತ ವಿದ್ಯುತ್‌ ಬಲ್ಬ್ಗಳಿಂದ ಸಿಂಗಾರ ಮಾಡಲಾಗುತ್ತಿದೆ.

ಮೈಸೂರು ದಸರಾ : ವಾಹನ ಸಂಚಾರ ನಿಯಮ - ಮಾರ್ಗ ಬದಲಾವಣೆ

ಕೊರೋನಾ ಕಾರಣದಿಂದ ದಸರಾ ಮಹೋತ್ಸವ ಉದ್ಘಾಟನೆ, ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು (cultural Programs), ದಸರಾ ಜಂಬೂಸವಾರಿ ಹೊರತುಪಡಿಸಿದರೇ ಉಳಿದ ಎಲ್ಲಾ ಕಾರ್ಯಕ್ರಮಗಳು ರದ್ದುಗೊಳಿಸಲಾಗಿದೆ. ಈ ಕಾರಣದಿಂದಾಗಿಯೇ ದಸರೆಗಾಗಿ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ, ಮೈಸೂರಿನ ಜನತೆಗೆ ದಸರೆಯ ಸಂಭ್ರಮ ಇಲ್ಲದಿದ್ದರೂ ಕಣ್ಣಿಗೆ ಒಂದಷ್ಟುಆನಂದ ನೀಡುವ ನಿಟ್ಟಿನಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ.

ಕೆ.ಆರ್‌. ವೃತ್ತ, ಚಾಮರಾಜ ವೃತ್ತ, ಹಾರ್ಡಿಂಜ್‌ ವೃತ್ತ, ಗನ್‌ಹೌಸ್‌ ಬಳಿಯ ವೃತ್ತ, ಅರಮನೆಯ ಸುತ್ತಮುತ್ತಲಿನ ರಸ್ತೆಗಳು, ಸಯ್ಯಾಜಿ ರಾವ್‌ ರಸ್ತೆ, ಡಿ. ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಇರ್ವಿನ್‌ ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್‌ಬಿ ರಸ್ತೆ ಸೇರಿದಂತೆ ಪ್ರಮುಖ ವೃತ್ತ, ರಸ್ತೆಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ.

ಅಲ್ಲದೆ, ಹುಣಸೂರು ರಸ್ತೆ, ಕೆ.ಆರ್‌. ಬುಲ್‌ವಾರ್ಡ್‌ ರಸ್ತೆ ಸೇರಿದಂತೆ ವಿವಿಧೆಡೆ ರಸ್ತೆ ಮಧ್ಯಭಾಗ, ರಸ್ತೆಬದಿಯಲ್ಲಿರುವ ಮರಗಳಲ್ಲೂ ಪರಿಸರ ಸ್ನೇಹಿ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುತ್ತಿದೆ. ಒಟ್ಟಿನಲ್ಲಿ ದಸರಾ ಸಂಭ್ರಮದ ಕಾರ್ಯಕ್ರಮಗಳು ಇಲ್ಲದಿದ್ದರೂ ಕಣ್ಣಿಗೆ ಒಂದಷ್ಟುರೋಮಾಂಚನ ನೀಡವ ಬೆಳಕಿನ ವೈಭೋಗವನ್ನು ನಗರಾದ್ಯಂತ ಸೃಷ್ಟಿಸಲಾಗುತ್ತಿದೆ.

100 ಕಿ.ಮೀ. ದೀಪಗಳ ವೈಭವ

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು (Cesc) ಈ ಬಾರಿ ಸುಮಾರು 100 ಕಿ.ಮೀ. ದೀಪಾಲಂಕಾರ ಮಾಡುತ್ತಿದೆ. ನಗರದ 102 ವೃತ್ತಗಳಲ್ಲಿ ದೀಪಾಲಂಕಾರ, ಜೊತೆಗೆ 41 ದೀಪಾಲಂಕಾರದ ಪ್ರತಿಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವ, ಒಲಂಪಿಕ್‌ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ, ಶ್ರೀಕೃಷ್ಣ ರಥ, ಚಾಮುಂಡೇಶ್ವರಿ, ಬುದ್ಧ, ಬಸವ, ಅಂಬಾರಿ, ವಿಧಾನಸೌಧ, ಕೆಆರ್‌ಎಸ್‌, ಅರಮನೆ, ರಾಜವಂಶಸ್ಥರ ಭಾವಚಿತ್ರಗಳು, ಸಿದ್ಧಗಂಗಾ ಶ್ರೀಗಳು, ಇಂಡಿಯಾ ಗೇಟ್‌ ಮೊದಲಾದ ದೀಪಾಲಂಕಾರದಲ್ಲಿ ಪ್ರತಿಕೃತಿ ಮೂಡಿಸಲಾಗುತ್ತಿದೆ. ಪ್ರತಿ ದಿನ ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ದೀಪಾಲಂಕಾರ ಇರಲಿದೆ.

ಈ ಬಾರಿಯ ವಿದ್ಯುತ್‌ ದೀಪಾಲಂಕಾರಕ್ಕೆ ಅಂದಾಜು 3.11 ಮೆಗಾ ವ್ಯಾಟ್‌ ವಿದ್ಯುತ್‌ ಬೇಡಿಕೆಯಿದ್ದು, 135495 ಯೂನಿಟ್‌ಗಳಷ್ಟುಬಳಕೆಯಾಗಲಿದೆ ಎಂದು ಸೆಸ್ಕ್‌ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್‌ ಬಗ್ಗೆ ಎಚ್ಚರ ಎಚ್ಚರ

ವಿದ್ಯುತ್‌ ದೀಪಾಲಂಕಾರ ನೋಡಲು ಬೈಕ್‌, ಕಾರು, ಆಟೋಗಳಲ್ಲಿ ಆಗಮಿಸುವ ಜನ ರಸ್ತೆಗಳಲ್ಲಿ ನಿಲ್ಲಿಸಿಕೊಂಡು ನೋಡುವುದರಿಂದ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಹೀಗಾಗಿ, ಒಂದೆಡೆ ವಾಹನ ನಿಲ್ಲಿಸಿ ದೀಪಾಲಂಕಾರವನ್ನು ವೀಕ್ಷಿಸಿದರೇ ಉತ್ತಮ.

ನವರಾತ್ರಿಯಲ್ಲಿ ಪವಿತ್ರವೆನಿಸಿದ ಒಂಬತ್ತು ಬಣ್ಣಗಳ ಮಹತ್ವ ನಿಮಗೆ ಗೊತ್ತೆ?

ಇನ್ನೂ ವಿದ್ಯುತ್‌ ದೀಪಾಲಂಕಾರವನ್ನು ನೋಡುತ್ತಿದ್ದಂತೆ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸುವವರು, ಸೆಲ್ಫಿ ತೆಗೆದುಕೊಳ್ಳುವವರು ವಿದ್ಯುತ್‌ ಬಲ್‌್ಬಗಳನ್ನು, ವೈರ್‌ಗಳನ್ನು ಯಾವುದೇ ಭಯವಿಲ್ಲದೇ ಮುಟ್ಟುವುದುಂಟು. ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಹೀಗಾಗಿ, ಸ್ವಲ್ಪ ದೂರದಲ್ಲೇ ನಿಂತು ಫೋಟೋ ಕ್ಲಿಕ್ಕಿಸಿಕೊಂಡರೇ ಜೀವಕ್ಕೆ ಯಾವುದೇ ಅಪಾಯ ಉಂಟಾಗುವುದಿಲ್ಲ.

ಸರಳ ದಸರೆಗೆ ಊರ್‌ ತುಂಬಾ ಲೈಟ್‌ ಯಾಕೆ?

ಕೋವಿಡ್‌-19 ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ಬಾರಿ ಕೂಡ ದಸರೆಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಚಾಮಂಡಿಬೆಟ್ಟದಲ್ಲಿ ಉದ್ಘಾಟನೆ, ಅರಮನೆಯಲ್ಲಿ ಜಂಬೂ ಸವಾರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶವಿದೆ. ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಜನಜಂಗುಳಿ ಆಗಬಾರದು ಎಂಬ ಕಾರಣದಿಂದ ವಸ್ತು ಪ್ರದರ್ಶನ, ಕುಸ್ತಿ ಪಂದ್ಯಾವಳಿ, ಫಲ ಪುಷ್ಪ ಪ್ರದರ್ಶನ ಆಹಾರ ಮೇಳ, ಯುವ ದಸರಾ, ಕ್ರೀಡಾಕೂಟ, ಚಲನಚಿತ್ರೋತ್ಸವ, ರೈತ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಲ್ಲ. ಹೀಗಿದ್ದರೂ ಊರ್‌ ತುಂಬಾ ಲೈಟ್‌ ಹಾಕುತ್ತಿರುವುದು ಯಾಕೆ? ಎಂಬುದು ಜನರ ಪ್ರಶ್ನೆ.

ಅರಮನೆ ಸುತ್ತಮುತ್ತ ಮಾತ್ರವಲ್ಲದೇ ವರ್ತುಲ ರಸ್ತೆಯಿಂದ ಹಿಡಿದು ಎಲ್ಲೆಂದರಲ್ಲಿ ಈ ಬಾರಿ ದೀಪಾಲಂಕಾರ ಮಾಡಲಾಗುತ್ತಿದೆ. ದೀಪಾಲಂಕಾರ ಮಾಡುತ್ತಿರುವುದು ಪ್ರವಾಸಿಗರನ್ನು ಸೆಳೆಯಲೆಂದೇ?. ಈ ರೀತಿ ಮಾಡುವ ಬದಲು ಹಾಲಿ ಇರುವ ರಾತ್ರಿ ಕಫä್ರ್ಯ ರದ್ದು ಮಾಡಿ, ಅದ್ಧೂರಿಯಾಗಿ ಮಾಡಿಬಿಡಿ. ಪ್ರವಾಸೋದ್ಯಮವಾದರೂ ಉದ್ಧಾರವಾಗುತ್ತದೆ!.

click me!