Padma Shri: ಕನ್ನಡಿಗ ಮಹಾಲಿಂಗ, ರೈತರತ್ನ ನಡಕಟ್ಟಿನ್‌ಗೆ ಪದ್ಮ ಪ್ರದಾನ

By Girish GoudarFirst Published Mar 29, 2022, 9:22 AM IST
Highlights

*  ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಅಸಾಮಾನ್ಯ
*  ಗಮಕ ಕಲಾವಿದ ಶಿವಮೊಗ್ಗದ ಕೇಶವಮೂರ್ತಿ ಅವರಿಗೂ ಪದ್ಮಶ್ರೀ ಗೌರವ ಪ್ರದಾನ
*  ಪದ್ಮಶ್ರೀ ಗೌರವ ಪ್ರದಾನ ಮಾಡಿದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ 

ನವದೆಹಲಿ(ಮಾ.29): ಕನ್ನಡಪ್ರಭ(Kannada Prabha),ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ(Asianet Suvarna News) ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್‌, ರೈತರತ್ನ ಪ್ರಶಸ್ತಿ ಪುರಸ್ಕೃತ ಅಬ್ದುಲ್‌ ಖಾದರ್‌ ನಡಕಟ್ಟಿನ ಮತ್ತು ಗಮಕ ಕಲಾವಿದ ಎಚ್‌.ಆರ್‌.ಕೇಶವಮೂರ್ತಿ ಅವರಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌(Ram Nath Kovind) ಅವರು ದೆಹಲಿಯಲ್ಲಿ ಸೋಮವಾರ 2022ನೇ ಸಾಲಿನ ಪದ್ಮಶ್ರೀ(Padma Shri) ಗೌರವ ಪ್ರದಾನ ಮಾಡಿದರು.

ಬಂಟ್ವಾಳ(Bantwal) ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿಯಾಗಿರುವ ಮಹಾಲಿಂಗ ನಾಯ್ಕ ಅವರು ಏಕಾಂಗಿಯಾಗಿ ಸುರಂಗಗಳನ್ನು ತೋಡಿ ನೀರಿನ ಚಿಲುಮೆ ಉಕ್ಕಿಸಿ ಬರಡು ಭೂಮಿಯಲ್ಲಿ ಕೃಷಿ(Agriculture) ಮಾಡಿದವರು. ಧಾರವಾಡ(Dharwad) ಜಿಲ್ಲೆ ಅಣ್ಣಿಗೇರಿಯ ಅಬ್ದುಲ್‌ ಖಾದರ್‌ ನಡಕಟ್ಟಿನ(Abdul Khader Nadakattin) ಅವರು ರೈತರಿಗೆ(Farmers) ಉಪಯುಕ್ತವಾದ ಕೃಷಿ ಸಲಕರಣೆ, ಯಂತ್ರಗಳನ್ನು ಆವಿಷ್ಕಾರ ಮಾಡಿ ಹೆಸ​ರು​ಗ​ಳಿ​ಸಿ​ದ​ವರು. ಇನ್ನು ಶಿವಮೊಗ್ಗದ ಎಚ್‌.ಆರ್‌.ಕೇಶವಮೂರ್ತಿ(HR Keshvamurthy) ಅವರು ಗಮ​ಕ ಕಲೆ ಕ್ಷೇತ್ರ​ದಲ್ಲಿ ಖ್ಯಾತಿ​ಗ​ಳಿ​ಸಿ​ದ​ವ​ರು.

"

Padma Shri ಪ್ರಧಾನಿ, ರಾಷ್ಟ್ರಪತಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪದ್ಮಶ್ರೀ ಸ್ವೀಕರಿಸಿದ 125 ವರ್ಷದ ಯೋಗ ಗುರು!

ಈ ನಡುವೆ, ಮಾಜಿ ಮುಖ್ಯಮಂತ್ರಿ ದಿ. ಕಲ್ಯಾಣ್‌ ಸಿಂಗ್‌ಗೆ ಮರಣೋತ್ತರ ಪದ್ಮವಿಭೂಷಣ, ಕೋವ್ಯಾಕ್ಸಿನ್‌ ಲಸಿಕೆ ಅಭಿವೃದ್ಧಿಪಡಿಸಿದ ಭಾರತ್‌ ಬಯೋಟೆಕ್‌ನ ಕೃಷ್ಣಾ ಎಲ್ಲಾ ದಂಪತಿಗೆ ಪದ್ಮಭೂಷಣ, ಕನ್ನಡ ಸೇರಿ ವಿವಿಧ ಭಾಷೆಗಳ ನಟಿ ಸಾಹುಕಾರ್‌ ಜಾನಕಿ, ಗಾಯಕ ಸೋನು ನಿಗಂ ಹಾಗೂ ಒಲಿಂಪಿಕ್‌ ವಿಜೇತ ಕ್ರೀಡಾಪಟು ನೀರಜ್‌ ಚೋಪ್ರಾಗೆ ಪದ್ಮಶ್ರೀ ಸೇರಿದಂತೆ ಒಟ್ಟು 74 ಗಣ್ಯರಿಗೆ ಪದ್ಮ ಪ್ರದಾನ ಮಾಡಲಾಯಿತು.

ಅಣ್ಣಿಗೇರಿಯ ಕೃಷಿ ಯಂತ್ರ ಸಂಶೋಧಕ ನಡಕಟ್ಟಿನಗೆ ‘ಪದ್ಮಶ್ರೀ’ ಗೌರವ

ಆತ ನಾಲ್ಕನೇ ತರಗತಿ ವಿದ್ಯಾರ್ಥಿ. ಎಷ್ಟೇ ಪ್ರಯತ್ನಪಟ್ಟರೂ ಬೆಳಗ್ಗೆ ನಿದ್ರೆಯಿಂದ ಎದ್ದು ಓದಿಕೊಳ್ಳಲು ಆಗುತ್ತಿರಲಿಲ್ಲ. ಹುಡುಗ ಯೋಚಿಸಿದ, ಅಲಾರಾಂ ಆದ ತಕ್ಷಣ ಮುಖದ ಮೇಲೆ ನೀರು ಬೀಳುವಂತೆ ಗಡಿಯಾರ ರೂಪಿಸಿಕೊಂಡ! ಇವತ್ತು ಇವರ ಸಂಶೋಧನೆಗೆ ‘ಪದ್ಮಶ್ರೀ ಪ್ರಶಸ್ತಿ’ ಒಲಿದಿದೆ. ಅವರೇ ಧಾರವಾಡ ಜಿಲ್ಲೆ ಅಣ್ಣಿಗೇರಿಯ ಅಬ್ದುಲ್‌ಖಾದರ್‌ ಇಮಾಮಸಾಬ ನಡಕಟ್ಟಿನ

ಇವತ್ತು ರೈತರ ಬಲಗೈ ಎನ್ನಿಸಿಕೊಳ್ಳುವಷ್ಟರ ಮಟ್ಟಿಗೆ 24 ಕೃಷಿ ಸಲಕರಣೆಗಳನ್ನು(Farm Equipments) ರೂಪಿಸಿ ನಡಕಟ್ಟಿನ ಸಾಹೇಬ್ರು ಎನ್ನಿಸಿಕೊಂಡಿದ್ದಾರೆ. ರೈತನ ಮಗ ಅಬ್ದುಲ್‌ಖಾದರ್‌ ಇಮಾಮಸಾಬ ನಡಕಟ್ಟಿನ ಉತ್ತರ ಕರ್ನಾಟಕದ(North Karnataka) ಕೃಷಿ ಚಟುವಟಿಕೆ ಯಂತ್ರೋಪಕರಣದ ಸಂಶೋಧನೆಯ ಕೇಂದ್ರ ಇದ್ದಂತೆ. ದುಬಾರಿ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಿ ಹೆಚ್ಚಿನ ಬೆಳೆ ಆದಾಯ ತರುವಲ್ಲಿ ಕೃಷಿ ಉಪಕರಣ ಸಂಶೋಧಿಸಿ, ಕೃಷಿಕರಿಗೆ ಕೈಗುಟುಕುವ ದರದಲ್ಲಿ ತಯಾರಿಕೆ ಮಾಡುವಲ್ಲಿ ಇವರು ಸಿದ್ಧಹಸ್ತರು.

ಸಾಧನೆಯದ್ದು ಮುಳ್ಳಿನ ಹಾದಿ

ಕಳೆದ 40 ವರ್ಷಗಳಿಂದ ಕೃಷಿ ಉಪಕರಣಗಳ ಸಂಶೋಧನೆಯಲ್ಲಿ ತೊಡಗಿರುವ ನಡಕಟ್ಟಿನ ಅವರು ಯಶಸ್ಸಿನ ಉತ್ತುಂಗಕ್ಕೆ ಏರಲು ಮುಳ್ಳಿನ ಹಾದಿ ಸವೆಸಿದ್ದಾರೆ. ಸಾವು-ಬದುಕಿನ ಮಧ್ಯೆ ಹೋರಾಟ ಮಾಡಿದ್ದಾರೆ. ಹೊಲ ಮನೆ ಅಡವಿಟ್ಟು ಲಕ್ಷಾಂತರ ರು. ಸಾಲ ಮಾಡಿ ಕೃಷಿ ಸಂಶೋಧನೆ ಉಪಕರಣಗಳ ಖರ್ಚುವೆಚ್ಚಕ್ಕೆ ವಿನಯೋಗಿಸಿದ್ದಾರೆ. ಸಾಲದ ಹೊರೆಯಿಂದ ಬೀದಿಗೆ ಬರುವ ಪ್ರಸಂಗ ಎದುರಿಸಿದವರು. ಆತ್ಮಹತ್ಯೆಯ ಯೋಚನೆಯನ್ನೂ ಮಾಡಿದ್ದರು. ಅಂಥವರು ಇವತ್ತು ಕೋಟ್ಯಂತರ ರು. ವ್ಯವಹಾರ ಮಾಡುತ್ತಿದ್ದಾರೆ.

ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಖ್ಯಾತ ಗಮಕ ಕಲಾವಿದ ಕೇಶವಮೂರ್ತಿ 

ಖ್ಯಾತ ಗಮಕ ಕಲಾವಿದರಾದ ಹೊಸಳ್ಳಿ ಹೆಚ್. ಆರ್. ಕೇಶವಮೂರ್ತಿಯವರು ಭಾರತ ಸರ್ಕಾರ ಕೊಡಮಾಡುವ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ಹಲವಾರು ದಶಕಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿರುವ ಇವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಹೊಸಳ್ಳಿ ಕೇಶವಮೂರ್ತಿ ಎಂದೊಡನೆ ನಮಗೆ ನೆನಪಿಗೆ ಬರುವುದು ಮತ್ತೂರು ಕೃಷ್ಣಮೂರ್ತಿ ಜೊತೆಗೂಡಿ ಖಾಸಗಿ ವಾಹಿನಿಯೊಂದರಲ್ಲಿ ನಿತ್ಯ ಬೆಳಗ್ಗೆ ಗಮಕ ವಾಚನದ ದೃಶ್ಯಗಳು. ಕಣ್ಣಲ್ಲಿ ನೀರು ತರಿಸುವ, ರೋಷಾಗ್ನಿ ಹುಟ್ಟಿಸುವ, ತಾವೇ ಘಟನೆಯ ಒಂದು ಭಾಗವಾಗಿರುವಂತೆ ಸಂದರ್ಭವನ್ನು ವ್ಯಾಖ್ಯಾನಿಸುವ ಮತ್ತೂರು ಕೃಷ್ಣಮೂರ್ತಿ ಜೊತೆಗೆ ಗಮಕ ವಾಚನ ಮಾಡುತ್ತಿದ್ದ ಕೇಶವಮೂರ್ತಿಗಳು..

ಇದು ಕನ್ನಡ ನಾಡಿನ ಬಹುತೇಕರ ಮನಸ್ಸಿನಲ್ಲಿರುವ ದೃಶ್ಯಗಳು. ಗಮಕಕ್ಕೆ ತಮ್ಮದೇ ರೀತಿಯಲ್ಲಿ ನ್ಯಾಯ ಒದಗಿಸಿದ ಕೇಶವಮೂರ್ತಿಗಳು ಗಮಕವನ್ನು ರಾಜ್ಯದಲ್ಲಿ ಪ್ರಚುರಪಡಿಸುವ ವ್ಯವಸ್ಥೆಯನ್ನು ಉತ್ತುಂಗ ಸ್ಥಿತಿಗೆ ಕರೆದೊಯ್ದವರು.
ಯಾವುದೇ ಪ್ರಸಂಗವಿರಲಿ, ಅದರ ಗಮಕ ವ್ಯಾಖ್ಯಾನ ಮಾಡಲಾರಂಭಿಸಿದರೆ ಆ ಕತೆಗೆ ವಿಶೇಷ ಆಯಾಮ ದೊರಕುತ್ತಿತ್ತು. ಸಾಮಾನ್ಯ ಕತೆಯೂ ಅಸಾಮಾನ್ಯವಾಗಿ ಕೇಳುಗರ ಮನಸ್ಸನ್ನು ಹೊಕ್ಕುತ್ತಿತ್ತು. ಶ್ರೋತೃಗಳು ಭಾವುಕರಾಗಿ ಆ ಕತೆಯ ಒಂದು ಭಾಗವಾಗಿ ಮಾರ್ಪಾಡುತ್ತಿದ್ದರು. ತಾವೇ ಕತೆಯ ಪಾತ್ರದಾರಿ ಎಂಬಂತೆ ಜನರು ಮರುಳಾಗುತ್ತಿದ್ದರು. ಆ ಗಮಕ ವ್ಯಾಖ್ಯಾತನಕ್ಕೆ ತಲೆದೂಗುತ್ತಾಾ ಪಾತ್ರದಾರಿಯಾಗುತ್ತಿದ್ದರು.

Padma Awards 2022: ನಿಸ್ವಾರ್ಥ ಸೇವಕರ ಗುರುತಿಸಿದ ಕೇಂದ್ರ: ಈ ಸಲವೂ ತೆರೆಮರೆ ಸಾಧಕರಿಗೆ ಪದ್ಮ ಗೌರವ!

ಹೀಗೆ ಗಮಕವನ್ನು ಸಾಮಾನ್ಯರ ಮಟ್ಟಕ್ಕೆ ತಂದವರು ಕೇಶವಮೂರ್ತಿಗಳು. ಗಮಕ ವ್ಯಾಖ್ಯಾನವನ್ನೂ ಹೀಗೂ ಮಾಡಬಹುದು ಎಂದು ತೋರಿಸಿದವರು. ಗಮಕ ಕಲೆಯಲ್ಲಿ ಮೇರು ಪ್ರವೃತ್ತಿಯನ್ನು ತೋರಿದ ಮತ್ತೂರು ಕೃಷ್ಣಮೂರ್ತಿಗಳಿಗೆ ಸರಿಸಾಟಿಯಾಗಿ ವಾಹಿನಿಗಳಲ್ಲಿ ಮಿಂಚಿದವರು. ತಮ್ಮದೇ ಆದ ವೀಕ್ಷಕ ಬಳಗವನ್ನು ಸೃಷ್ಟಿಸಿಕೊಂಡವರು.

ಕರ್ನಾಟಕದ 70 ವರ್ಷದ ಮಹಾಲಿಂಗ ಅವರಿಗೆ ಪದ್ಮಶ್ರೀ

ದಕ್ಷಿಣ ಕನ್ನಡ (Dakshina Kannada)ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮೈ ಮಹಾಲಿಂಗ ನಾಯ್ಕ ಸದ್ಯ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಬೋಳುಗುಡ್ಡೆಯಲ್ಲಿ ಸುರಂಗ ನಿರ್ಮಿಸಿ, ನೀರು ಹರಿಸಿ ಪುಟ್ಟ ಪುಟ್ಟ ಗಿಡಗಳ ನೆಟ್ಟು ಚಂದದ ಬೆಳೆದ ತೆಗೆದ ಅಪ್ಪಟ ಮಣ್ಣಿನ ಮಗ ಇವರು. ಶಾಲೆ, ಕಾಲೇಜುಗಳಿಗೆ ಹೋಗದಿದ್ದರೂ, ನೀರನೆಮ್ಮದಿಯನ್ನು ಇತರರಿಗೂ ಮಾದರಿಯಾಗಿದ್ದಾರೆ. ಮಹಾಲಿಂಗ ನಾಯ್ಕರ ಸಾಧನೆ ಗಮನಿಸಿ ಅವರನ್ನು ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಒಲಿದಿದೆ.

'ದೇಶದ ದೊಡ್ಡ ಪ್ರಶಸ್ತಿ ಬಂದಿರುವುದು ನಮಗೆ ಖುಷಿ ಕೊಟ್ಟಿದೆ. ಪ್ರಶಸ್ತಿ ಬರುತ್ತದೆ ಎಂದು ನಾವು ಕೆಲಸ ಮಾಡಲಿಲ್ಲ. ನಮ್ಮ ಕೆಲಸ ನಾವು ಮಾಡಿದೆವು. ನಮ್ಮ ಮನೆಯಲ್ಲಿ, ಊರಿನಲ್ಲಿ ಎಲ್ಲರೂ ಖುಷಿಪಟ್ಟರು. ದೆಹಲಿಗೆ ಇನ್ನೂ ಕರೆದಿಲ್ಲ, ಕರೆದಾಗ ಹೋಗುತ್ತೇನೆ' ಎಂದು ಮಹಾಲಿಂಗ ನಾಯ್ಕರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿದ್ದಾರೆ. ಇದೀಗ ಅವರ ಮನೆ, ತೋಟಕ್ಕೆ ಬಹಳಷ್ಟು ಜನ ಬಂದು ಭೇಟಿ ನೀಡಿ ಹೋಗುತ್ತಿದ್ದಾರೆ. ಇವರ ಸುರಂಗ ಜಲ ಸಮೃದ್ಧ ಜಾಗದಲ್ಲಿ ಓಡಾಡಿ ಅಲ್ಲಿನ ಪರಿಸರವನ್ನು ಆನಂದಿಸುತ್ತಿದ್ದಾರೆ. 
 

click me!