
ನವದೆಹಲಿ(ಏ.13): ಮಾರಕ ಕೊರೋನಾ ವೈರಸ್ ನಿಗ್ರಹಕ್ಕೆ ದೇಶವ್ಯಾಪಿ ಜಾರಿಯಲ್ಲಿರುವ 21 ದಿನಗಳ ಲಾಕ್ಡೌನ್ ಏ.15ಕ್ಕೆ ಮುಕ್ತಾಯವಾಗಲಿದ್ದು ಇದನ್ನು ಇನ್ನೂ 2 ವಾರ ವಿಸ್ತರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಈ ಕುರಿತಂತೆ ಕೆಲವೊಂದು ಮಾರ್ಗಸೂಚಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಸಂಪೂರ್ಣ ಸ್ತಬ್ಧವಾಗಿರುವ ಆರ್ಥಿಕ, ಕೈಗಾರಿಕಾ ಚಟುವಟಿಕೆಗಳಿಗೆ ಹಂತಹಂತವಾಗಿ ಅವಕಾಶ ಕಲ್ಪಿಸಲು ಕಾರ್ಯಯೋಜನೆಯೊಂದನ್ನು ರೂಪಿಸುತ್ತಿದೆ ಎಂದು ತಿಳಿದುಬಂದಿದೆ.
"
ಲಾಕ್ಡೌನ್ ವಿಸ್ತರಿಸಬೇಕು, ಆದರೆ ಕೆಲವೊಂದು ವಿನಾಯಿತಿಗಳನ್ನು ನೀಡಬೇಕು ಎಂಬ ಬೇಡಿಕೆ ಮುಖ್ಯಮಂತ್ರಿಗಳಿಂದ ಬಂದಿದೆ. ಈ ಹಿನ್ನೆಲೆಯಲ್ಲಿ ಇಡೀ ದೇಶವನ್ನು ಕೆಂಪು (ರೆಡ್), ಆರೆಂಜ್ (ಕಿತ್ತಳೆ) ಹಾಗೂ ಹಸಿರು (ಗ್ರೀನ್) ವಲಯಗಳಾಗಿ ವರ್ಗೀಕರಿಸಿ, ಲಾಕ್ಡೌನ್ ಅನ್ನು ಹಂತಹಂತವಾಗಿ ಸಡಿಲಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಹೇಳಲಾಗಿದೆ. ಇದರ ಪರಿಣಾಮವಾಗಿ ದೇಶದ ಕೆಲವು ಭಾಗಗಳಲ್ಲಿ ಕೈಗಾರಿಕೆ, ವ್ಯಾಪಾರ- ವಾಣಿಜ್ಯ ಚಟುವಟಿಕೆ ನಿಧಾನವಾಗಿ ಆರಂಭವಾಗುವ ನಿರೀಕ್ಷೆ ಇದೆ. ಮದ್ಯದ ಮಾರಾಟವೂ ಪುನಾರಂಭವಾಗುವ ಸಂಭವವಿದೆ. ಆದರೆ ಶಾಲಾ- ಕಾಲೇಜು ರಜೆ ಮುಂದುವರಿಯಲಿದೆ. ರೈಲು, ವಿಮಾನ ಹಾಗೂ ಅಂತಾರಾಜ್ಯ ಬಸ್ ಸಂಚಾರ ಆರಂಭವಾಗುವ ಯಾವುದೇ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.
ದೇಶದಲ್ಲಿ 9000 ದಾಟಿದ ಕೊರೋನಾ ಸೋಂಕು, ಮೃತರ ಸಂಖ್ಯೆ 327ಕ್ಕೆ!
ಯಾವುದು ಈ ವಲಯಗಳು?:
ಈವರೆಗೆ ಯಾವುದೇ ಕೊರೋನಾ ಪ್ರಕರಣ ದಾಖಲಾಗಿಲ್ಲದ 400 ಜಿಲ್ಲೆಗಳು ದೇಶದಲ್ಲಿವೆ. ಅವನ್ನು ಹಸಿರು ವಲಯವಾಗಿ ಪರಿಗಣಿಸುವ ಉದ್ದೇಶವಿದೆ. ಅಂತಹ ಜಿಲ್ಲೆಗಳಲ್ಲಿ ಇಲ್ಲಿ ಉದ್ದಿಮೆ, ಕಾರ್ಖಾನೆ, ಅಂಗಡಿ, ಸಾರಿಗೆ ವ್ಯವಸ್ಥೆ, ಮದ್ಯದಂಗಡಿ ಪುನಾರಂಭಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಶಾಲಾ-ಕಾಲೇಜು ಬಂದ್ ಮುಂದುವರಿಯಲಿದೆ ಎನ್ನಲಾಗಿದೆ.
ಈವರೆಗೂ ಒಂದೂ ಸೋಂಕು ಪತ್ತೆಯಾಗಿರದ ಅಥವಾ ಕಡಿಮೆ ಸೋಂಕು ಇರುವ ಪ್ರದೇಶಗಳಲ್ಲಿ ಉದ್ಯಮ ಹಾಗೂ ಮಾರುಕಟ್ಟೆತೆರೆಯಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಕೈಗಾರಿಕಾ ಟೌನ್ಶಿಪ್ಗಳಲ್ಲಿ ಪ್ರವೇಶ ಹಾಗೂ ನಿರ್ಗಮನ ನಿಯಮಗಳನ್ನು ಬಿಗಿಗೊಳಿಸಿ, ಆಂತರಿಕವಾಗಿ ನೌಕರರ ಸಾರಿಗೆಗೆ ಅವಕಾಶ ಕಲ್ಪಿಸುವ ಚಿಂತನೆಯೂ ಇದೆ. ಕೆಲವೊಂದು ಮಾರುಕಟ್ಟೆಗಳಲ್ಲಿ ದಿನ ತಪ್ಪಿ ದಿನ ತೆರೆಯುವ ಉದ್ದೇಶವನ್ನೂ ಸರ್ಕಾರ ಹೊಂದಿದೆ. ಇದೇ ವೇಳೆ, ಕೈಗಾರಿಕೆಗಳು ತಮ್ಮ ಕ್ಯಾಂಪಸ್ನಲ್ಲೇ ನೌಕರರಿಗೆ ಒಂದಷ್ಟುದಿನ ವಸತಿ ಅವಕಾಶ ಕಲ್ಪಿಸುವಂತೆ ಮಾಡುವ ಚಿಂತನೆಯೂ ನಡೆಯುತ್ತಿದೆ.
ರಾಜ್ಯ ಸರ್ಕಾರಗಳು ನೇರವಾಗಿ ರೈತರಿಂದ ಉತ್ಪನ್ನ ಖರೀದಿಸುವುದು, ಸೀಮಿತವಾಗಿ ಜಿಲ್ಲೆ ಹಾಗೂ ನಗರದೊಳಗಡೆ ಸಾರಿಗೆ ಸಂಚಾರ ಆರಂಭಿಸುವುದು, ಅಂತರ ರಾಜ್ಯ ಸಾರಿಗೆ ಸಂಚಾರವನ್ನು ನಿರ್ಬಂಧಿಸುವುದನ್ನು ಕೂಡ ಸರ್ಕಾರ ಪರಿಶೀಲಿಸುತ್ತಿದೆ.
ದೇಶದಲ್ಲಿ 9000 ದಾಟಿದ ಕೊರೋನಾ ಸೋಂಕು, ಮೃತರ ಸಂಖ್ಯೆ 327ಕ್ಕೆ!
15 ಹಾಗೂ ಅದಕ್ಕಿಂತ ಕಡಿಮೆ ಪ್ರಮಾಣದ ಸೋಂಕು ವರದಿಯಾಗಿ, ಸಂಪೂರ್ಣ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ಆರೆಂಜ್ ವಲಯ ಎಂದು ಪರಿಗಣಿಸುವ ಚಿಂತನೆ ಇದೆ. ಅಲ್ಲಿ ಸೀಮಿತ ಪ್ರಮಾಣದಲ್ಲಿ ಸಾರಿಗೆ ಸೇವೆ, ರೈತರ ಉತ್ಪನ್ನ ಸಾಗಣೆ ಆರಂಭಕ್ಕೆ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ.
ಅತಿ ಹೆಚ್ಚು ಪ್ರಮಾಣದಲ್ಲಿ ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿರುವ ಹಾಟ್ಸ್ಪಾಟ್ ಪ್ರದೇಶಗಳನ್ನು ರೆಡ್ಜೋನ್ ಎಂದು ಪರಿಗಣಿಸಿ ಅಲ್ಲಿ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಪ್ರಸ್ತಾಪವಿದೆ. ಅಲ್ಲಿ ಯಾವುದೇ ಆರ್ಥಿಕ, ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಎಂದು ಹೇಳಲಾಗುತ್ತಿದೆ.
ಹಸಿರು ವಲಯ
ಯಾವ ಕೇಸೂ ಪತ್ತೆಯಾಗದ ಜಿಲ್ಲೆಗಳು ಹಸಿರುವಲಯ ವ್ಯಾಪ್ತಿಗೆ. ಇಲ್ಲಿ ಉದ್ದಿಮೆ, ಕಾರ್ಖಾನೆ, ಅಂಗಡಿ, ಸಾರಿಗೆ ವ್ಯವಸ್ಥೆ, ಮದ್ಯದಂಗಡಿ ಪುನಾರಂಭಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಶಾಲಾ-ಕಾಲೇಜು ಬಂದ್ ಮುಂದುವರಿಯಲಿದೆ.
ರಾಜ್ಯದ ಗ್ರೀನ್ ಜಿಲ್ಲೆಗಳು
ಶಿವಮೊಗ್ಗ, ಯಾದಗಿರಿ, ರಾಮನಗರ, ಕೋಲಾರ, ಚಿತ್ರದುರ್ಗ, ಕೊಪ್ಪಳ, ಹಾವೇರಿ, ಹಾಸನ, ಚಾಮರಾಜನಗರ, ರಾಯಚೂರು
ಕಿತ್ತಳೆ ವಲಯ
15 ಹಾಗೂ ಅದಕ್ಕಿಂತ ಕಡಿಮೆ ಪ್ರಮಾಣದ ಸೋಂಕು ವರದಿಯಾಗಿ, ಸಂಪೂರ್ಣ ನಿಯಂತ್ರಣದಲ್ಲಿರುವ ಪ್ರದೇಶಗಳು ಆರೆಂಜ್ ವಲಯದಲ್ಲಿ. ಅಲ್ಲಿ ಸೀಮಿತ ಪ್ರಮಾಣದಲ್ಲಿ ಸಾರಿಗೆ ಸೇವೆ, ರೈತರ ಉತ್ಪನ್ನ ಸಾಗಣೆ ಆರಂಭಕ್ಕೆ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ.
ಹೆರಿಗೆ ರಜೆ ಕ್ಯಾನ್ಸಲ್, ಕಂದನನ್ನೆತ್ತಿ ಕರ್ತವ್ಯಕ್ಕೆ ಹಾಜರಾದ IAS ಆಫೀಸರ್!
ರಾಜ್ಯದ ಆರೆಂಜ್ ಜಿಲ್ಲೆಗಳು
ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಉಡುಪಿ ಕೊಡಗು, ಧಾರವಾಡ, ತುಮಕೂರು, ಗದಗ, ಮಂಡ್ಯ
ಕೆಂಪು ವಲಯ
ಅತಿ ಹೆಚ್ಚು ಪ್ರಮಾಣದಲ್ಲಿ ಕೊರೋನಾ ಕೇಸ್ಗಳಿದ್ದು ಹಾಟ್ಸ್ಪಾಟ್ ಎನಿಸಿರುವ ಜಿಲ್ಲೆಗಳು ಕೆಂಪು ವಲಯದಲ್ಲಿ. ಇಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಿ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಲಾಗುತ್ತದೆ.
ರಾಜ್ಯದ ಕೆಂಪು ಜಿಲ್ಲೆಗಳು
ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಬೀದರ್, ಉತ್ತರ ಕನ್ನಡ, ಬಾಗಲಕೋಟೆ, ಕಲಬುರಗಿ, ಬೆಳಗಾವಿ, ವಿಜಯಪುರ, ಬಳ್ಳಾರಿ
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ