ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್, ದಾವುದ್ ಹೆಸರಿನಲ್ಲಿ ಪೊಲೀಸರಿಗೆ ಬಂತು ಆಡಿಯೋ ಕ್ಲಿಪ್ ಬೆದರಿಕೆ!

By Suvarna NewsFirst Published Nov 22, 2022, 7:44 PM IST
Highlights

ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡುವುದಾಗಿ ಆಡಿಯೋ ಕ್ಲಿಪ್ ಬೆದರಿಕೆ ಬಂದಿದೆ. ಮುಂಬೈ ಪೊಲೀಸರ ವ್ಯಾಟ್ಸ್ಆ್ಯಪ್ ಸಹಾಯವಾಣಿಗೆ ಈ ಆಡಿಯೋ ಕ್ಲಿಪ್ ಬಂದಿದೆ.  ದಾವುದ್ ಇಬ್ರಾಹಿಂ ಡಿ ಕಂಪನಿ ಆದೇಶದಂತೆ ಮೋದಿ ಹತ್ಯೆ ಮಾಡುವುದಾಗಿ ಆಡಿಯೋ ಕ್ಲಿಪ್‌ನಲ್ಲಿ ಹೇಳಲಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ.

ಮುಂಬೈ(ನ.22): ಪ್ರಧಾನಿ ನರೇಂದ್ರ ಮೋದಿ ಹಲವು ಉಗ್ರರ ಟಾರ್ಗೆಟ್ ಹಿಟ್‌ಲಿಸ್ಟ್‌ನಲ್ಲಿದ್ದಾರೆ. ಹಲವು ಕಿಡಿಗೇಡಿಗಳ ಗುಂಪು ಕೂಡ ಹಲವು ಬಾರಿ ಮೋದಿಗೆ ಬೆದರಿಕೆ ಹಾಕಿದ ಉದಾಹರಣೆಗಳಿವೆ. ಇದೀಗ ಪ್ರಧಾನಿ ಮೋದಿ ಕೇಂದ್ರ ಸರ್ಕಾರದ ಯೋಜನೆ ಜೊತೆಗೆ ಗುಜರಾತ್ ಚುನಾವಣೆ ಪ್ರಚಾರದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಲಕ್ಷಾಂತರ ಜನರ ಸಮಾವೇಶ, ರ್ಯಾಲಿಯಲ್ಲಿ ಮೋದಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಹತ್ಯೆ ಮಾಡುವುದಾಗಿ ಬೆದರಿಕೆ ಬಂದಿದೆ. ಭೂಗತ ಪಾತಕಿ ದಾವುದ್ ಇಬ್ರಾಹಿಂ ತಂಡದಿಂದ ಈ ಸಂದೇಶ ಕಳುಹಿಸುತ್ತಿರುವುದಾಗಿ ಇಬ್ಬರು ಹೇಳಿದ್ದಾರೆ. ಈ ಕುರಿತು ಆಡಿಯೋ ಕ್ಲಿಪ್‌ನ್ನು ಮುಂಬೈ ಪೊಲೀಸರಿಗೆ ರವಾನಿಸಿದ್ದಾರೆ. ಮುಂಬೈ ಪೊಲೀಸರು ಆಡಿಯೋ ಕ್ಲಿಪ್ ಸ್ವೀಕರಿಸಿದ ಬೆನ್ನಲ್ಲೇ ಅಲರ್ಟ್ ಆಗಿದ್ದಾರೆ. ಈ ಕುರಿತು ಕೇಂದ್ರಕ್ಕೆ ಮಾಹಿತಿ ನೀಡಿ ಮುಂಬೈನಲ್ಲಿ ತನಿಖೆ ಆರಂಭಿಸಿದ್ದಾರೆ.

ಪಾತಕಿ ದಾವುದ್ ಇಬ್ರಾಹಿಂ ಅವರ ಡಿ ಕಂಪನಿಯ ಆದೇಶದಂತೆ ಮೋದಿಯನ್ನು ಹತ್ಯೆ ಮಾಡುವುದಾಗಿ ಈ ಆಡಿಯೋ ಕ್ಲಿಪ್‌ನಲ್ಲಿ ಹೇಳಿದ್ದಾರೆ. ನಾವು ಮುಸ್ತಾಫಾ ಅಹಮ್ಮದ್ ಹಾಗೂ ನವಾಜ್. ಡಿ ಕಂಪನಿಯ ಆದೇಶದಂತೆ ಕೆಲಸ ಮಾಡುತ್ತಿದ್ದೇವೆ. ನಮಗೆ ಮೋದಿಯನ್ನು ಹತ್ಯೆ ಮಾಡುವ ಟಾಸ್ಕ್ ನೀಡಲಾಗಿದೆ. ಇದನ್ನು ನಾವು ಪೂರೈಸುತ್ತೇವೆ ಎಂದು ಆಡಿಯೋ ಕ್ಲಿಪ್‌ನಲ್ಲಿ ಹೇಳಲಾಗಿದೆ. ಹಿಂದಿ ಭಾಷೆಯಲ್ಲಿರುವ ಈ ಆಡಿಯೋ ಕ್ಲಿಪ್‌ನ್ನು ಮುಂಬೈ ಟ್ರಾಫಿಕ್ ಪೊಲೀಸರ ಸಹಾಯವಾಣಿ ವ್ಯಾಟ್ಸ್ಆ್ಯಪ್ ನಂಬರ್‌ಗೆ ಕಳಹಿಸಲಾಗಿದೆ.

G 20 ಅಧ್ಯಕ್ಷರಾಗಿ ಭಾರತಕ್ಕಿರುವ ಅವಕಾಶ ಹಾಗೂ ಸವಾಲುಗಳೇನು..?

ಕೇಂದ್ರಕ್ಕೆ ಮಾಹಿತಿ ನೀಡಿರುವ ಮುಂಬೈ ಪೊಲೀಸರು ಮುಂಬೈನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಸೈಬರ್ ಕ್ರೈಮ್ ನೆರವಿನ ಮೂಲಕ ತನಿಖೆ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿಗೆ ಬೆದರಿಕೆ ಕರೆಗಳು, ಪತ್ರಗಳು ಬರವುದು ಇದು ಹೊಸದಲ್ಲ. ಆದರೆ ದೇಶದಲ್ಲಿ ಮೂಲೆ ಮೂಲೆಯಲ್ಲಿ ವಿದ್ವಂಸಕ ಕೃತ್ಯಕ್ಕೆ ಉಗ್ರರು ಪ್ಲಾನ್ ನಡೆಸುತ್ತಿರುವ ಬೆನ್ನಲ್ಲೇ ಈ ರೀತಿಯ ಬೆದರಿಕೆ ಕರೆ ಆತಂಕ ಸೃಷ್ಟಿಸಿದೆ.

ಆರ್‌ಡಿಎಕ್ಸ್‌ ಬಳಸಿ ಪ್ರಧಾನಿ ಮೋದಿ ಹತ್ಯೆ ಬೆದರಿಕೆ
ಸುಧಾರಿತ ಆರ್‌ಡಿಎಕ್ಸ್‌ ಸ್ಫೋಟಕಗಳನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ ಮುಂಬೈನಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಇ ಮೇಲ್‌ ಒಂದನ್ನು ರವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆದರಿಕೆ ಹಾಕಿದ ವ್ಯಕ್ತಿಯ ಪತ್ತೆಗಾಗಿ ಎನ್‌ಐಎ ಜೊತೆಗೆ ಸೈಬರ್‌ ಭದ್ರತಾ ವಿಭಾಗದ ಅಧಿಕಾರಿಗಳೂ ಕೈಜೋಡಿಸಿದ್ದಾರೆ.

Gujarat Election 2022: ರಾಹುಲ್‌ ಪಾದಯಾತ್ರೆ ವಿರುದ್ಧ ಮೋದಿ ವಾಗ್ದಾಳಿ

ಎನ್‌ಐಎಗೆ ರವಾನಿಸಿರುವ ಇ ಮೇಲ್‌ನಲ್ಲಿ ‘ನನ್ನ ಬಳಿ 20 ಕೇಜಿ ಆರ್‌ಡಿಎಕ್ಸ್‌ ಇದ್ದು, ದೇಶದ 20 ಮಹಾ ನಗರಗಳಲ್ಲಿ ಬಾಂಬ್‌ ಸ್ಫೋಟ ನಡೆಸಲು ಸಿದ್ಧವಾಗಿಟ್ಟಿದ್ದೇನೆ. ನಾನು ಮೋದಿಯವರನ್ನು ಸಾಧ್ಯವಾದಷ್ಟುಬೇಗ ಹತ್ಯೆ ಮಾಡಲು ಬಯಸುತ್ತೇನೆ. ಪ್ರಧಾನಿ ನನ್ನ ಜೀವನವನ್ನೇ ನಾಶ ಮಾಡಿದ್ದಾರೆ. ಹೀಗಾಗಿ ನಾನೇ ಇವರನ್ನು ಮೊದಲು ಬಾಂಬ್‌ ಹಾಕಿ ಹತ್ಯೆಗೈಯುತ್ತೇನೆ’ ಎಂದು ಎಚ್ಚರಿಕೆ ನೀಡಲಾಗಿದೆ.

ಜೊತೆಗೆ ‘ನಾನು ಕೆಲವು ಉಗ್ರರ ಸಹಾಯದಿಂದ ಸ್ಫೋಟಕ ಪಡೆದಿದ್ದೇನೆ. ದಾಳಿಗಾಗಿ ಫೆ.28ರಿಂದಲೇ ಸ್ಲೀಪರ್‌ ಸೆಲ್‌ಗಳನ್ನು ಸಕ್ರಿಯಗೊಳಿಸಿದ್ದೇನೆ. ಜನರು ಹೇಗೂ ಸಾಯುತ್ತಿದ್ದಾರೆ, ಅದರ ಬದಲು ಬಾಂಬ್‌ ದಾಳಿಯಲ್ಲೇ ಸಾಯಲಿ. ನಾನು ಯಾರನ್ನೂ ಜೀವಂತ ಉಳಿಸುವುದಿಲ್ಲ, ನಾನು ಕನಿಷ್ಠ 2 ಕೋಟಿ ಜನರನ್ನು ಸಾಯಿಸುತ್ತೇನೆ. ಸಾಧ್ಯವಾದರೆ ನನ್ನನ್ನು ತಡೆದು ತೋರಿಸಿ’ ಎಂದು ತನಿಖಾ ಏಜೆನ್ಸಿಗೆ ಸವಾಲು ಕೂಡಾ ಹಾಕಿದ್ದಾನೆ.

click me!