ಹರಿಯಾಣದಲ್ಲಿ ನಿರೀಕ್ಷೆಯಂತೆ ಬಿಜೆಪಿ-ಜೆಜೆಪಿ ಸರ್ಕಾರ/ ಮನೋಹರ ಲಾಲ್ ಖಟ್ಟರ್ ಎರಡನೇ ಅವಧಿಗೆ ಸಿಎಂ/ ಜನ ನಾಯಕ್ ಜನತಾ ಪಕ್ಷದ ದುಷ್ಯಂತ್ ಚೌಟಾಲಗೆ ಡಿಸಿಎಂ ಹುದ್ದೆ
ಚಂಢೀಗಡ[ಅ. 27] ಹರಿಯಾಣದ ಸಿಎಂ ಆಗಿ ಮನೋಹರ ಲಾಲ್ ಖಟ್ಟರ್ ಹಾಗೂ ಉಪಮುಖ್ಯಮಂತ್ರಿಯಾಗಿ ಜನ ನಾಯಕ್ ಜನತಾ ಪಕ್ಷದ ದುಷ್ಯಂತ್ ಚೌಟಾಲ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದ ಸರಳ ಸಮಾರಂಭದಲ್ಲಿ ಮನೋಹರ ಲಾಲ್ ಖಟ್ಟರ್ ಹಾಗೂ ದುಷ್ಯಂತ್ ಚೌಟಾಲ ಅವರಿಗೆ ಹರಿಯಾಣ ಗವರ್ನರ್ ಸತ್ಯದೇವ್ ನಾರಾಯಣ ಆರ್ಯ ಪ್ರಮಾಣ ವಚನ ಬೋಧಿಸಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ, ಶಿರೋಮಣಿ ಅಕಾಲಿ ದಳ ಮುಖಂಡ ಪ್ರಕಾಶ್ ಸಿಂಗ್ ಬಾದಲ್ ಮತ್ತಿತರರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಹಾಗೂ ಜೆಜೆಪಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಯಿತು.ಸತತ ಎರಡನೇ ಅವಧಿಗೆ ಖಟ್ಟರ್ ಸಿಎಂ ಆಗಿ ಅಧಿಕಾರದ ಹಕ್ಕು ಸ್ಥಾಪನೆ ಮಾಡಿದರು.
90 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 40 ಸ್ಥಾನ ಗೆದ್ದು ಅಧಿಕಾರ ಸ್ಥಾಪನೆಗೆ 6 ಸ್ಥಾನಗಳ ಕೊರತೆ ಅನುಭವಿಸುತ್ತಿತ್ತು. 10 ಸ್ಥಾನ ಗೆದ್ದಿದ್ದ ಜೆಜೆಪಿ ಒಂದು ಹಂತದಲ್ಲಿ ಸಿಎಂ ಸ್ಥಾನಕ್ಕೂ ಬೇಡಿಕೆ ಇಟ್ಟಿತ್ತು.
ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಫಲಿತಾಂಶ ಹೊರಬಂದಿದ್ದು ಬಿಜೆಪಿ ಎರಡು ರಾಜ್ಯಗಳಲ್ಲಿ ಹಕ್ಕು ಸ್ಥಾಪನೆ ಮಾಡಿದೆ. ಆದರೆ ಮಹಾರಾಷ್ಟ್ರದಲ್ಲಿ ಶೀವಸೇನೆಯೊಂದಿನ ಹೊಂದಾಣಿಕೆಯಲ್ಲಿ ಕೆಲವು ಗೊಂದಲ ಮುಂದುವರಿದಿದೆ. ಶಿವಸೇನೆ 50;50 ಸೂತ್ರ ಮುಂದಿಟ್ಟಿದ್ದು ಬಿಜೆಪಿ ನಾಯಕರ ಅಂಗಣದಲ್ಲಿ ಚೆಂಡಿದೆ. ಇನ್ನೊಂದು ಕಡೆ ಶರದ್ ಪವಾರ್ ನೇತೃತ್ವದ ಎನ್ಸಿಪಿ ಶಿವಸೇನೆಗೆ ಬಹಿರಂಗ ಬೆಂಬಲ ಘೋಷಿಸಿದ್ದು, ಶಿವಸೇನೆ ಒಪ್ಪಿದರೆ ಕಾಂಗ್ರೆಸ್ ಜತೆ ಸರ್ಕಾರ ರಚಿಸಲು ಸಿದ್ಧ ಎಂದು ಹೇಳಿದೆ. 29 ವರ್ಷದ ಆದಿತ್ಯ ಠಾಕ್ರೆಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ಎನ್ಸಿಪಿ ಸಿದ್ಧವಾಗಿ ನಿಂತಿದೆ.