ಮನೆ ಕಟ್ಟಿಕೊಳ್ಳಲು ಹೋರಾಟ, ಮಗಳ ಸಾವಿಗೂ ನ್ಯಾಯ ಸಿಗದ ದುರಂತ, ಹೈಕೋರ್ಟ್ ಆದೇಶಕ್ಕೆ ಪೊಲೀಸರು ಡೋಂಟ್ ಕೇರ್!

Published : Feb 04, 2026, 12:04 PM IST

ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ, ಮನೆ ಕಟ್ಟಲು ಯತ್ನಿಸಿದ ಬಡ ಕುಟುಂಬಕ್ಕೆ ಸಂಬಂಧಿಕರಿಂದ ಕಿರುಕುಳ ಮತ್ತು ಪೊಲೀಸ್ ನಿರ್ಲಕ್ಷ್ಯ ಎದುರಾಗಿದೆ. ಹೈಕೋರ್ಟ್ ಆದೇಶವಿದ್ದರೂ ನ್ಯಾಯ ಸಿಗದ ಕಾರಣ ಉಂಟಾದ ಮಾನಸಿಕ ಒತ್ತಡದಿಂದ ಕುಟುಂಬದ ಮಗಳು ಸಾವನ್ನಪ್ಪಿದ್ದು, ಇದೀಗ ಕುಟುಂಬ ನ್ಯಾಯಕ್ಕಾಗಿ ಹೋರಾಟ ಮುಂದುವರೆಸಿದೆ.

PREV
15
ಬಡ ಕುಟುಂಬ ನ್ಯಾಯಕ್ಕಾಗಿ ಹೋರಾಟ

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಬಡ ಕುಟುಂಬವೊಂದು ನ್ಯಾಯಕ್ಕಾಗಿ ಕಳೆದ ಎರಡು ವರ್ಷಗಳಿಂದ ಪೊಲೀಸ್ ಠಾಣೆಗಳ ಮೆಟ್ಟಿಲೇರಿದರೂ ಸ್ಪಂದನೆ ಸಿಗದೆ ತೀವ್ರ ದುರಂತಕ್ಕೆ ತಲುಪಿದ ಘಟನೆ ಬೆಳಕಿಗೆ ಬಂದಿದೆ. ಮನೆ ಕಟ್ಟಿಕೊಳ್ಳುವ ವಿಚಾರದಲ್ಲಿ ಕುಟುಂಬದೊಳಗಿನ ತಕರಾರಿನಿಂದ ಆರಂಭವಾದ ಈ ಪ್ರಕರಣ, ಕೊನೆಗೆ ಒಬ್ಬ ಯುವತಿಯ ಸಾವಿಗೂ ಕಾರಣವಾಗಿದೆ.

ಬಂಕಾಪುರ ಪಟ್ಟಣದ ಗುಡ್ಡಪ್ಪ ಎಂಬ ಬಡ ವ್ಯಕ್ತಿ ಈ ದುರಂತದ ಕೇಂದ್ರಬಿಂದು. 2021ರಲ್ಲಿ ಸಂಭವಿಸಿದ ಭಾರೀ ಅತಿವೃಷ್ಟಿಯಿಂದಾಗಿ ಗುಡ್ಡಪ್ಪ ಅವರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಮನೆ ಪುನರ್ ನಿರ್ಮಾಣಕ್ಕಾಗಿ ₹5 ಲಕ್ಷ ಪರಿಹಾರವನ್ನು ಮಂಜೂರು ಮಾಡಲಾಗಿದ್ದು, ಮೊದಲ ಹಂತವಾಗಿ ₹1 ಲಕ್ಷ ಹಣವೂ ಅವರ ಖಾತೆಗೆ ಜಮೆಯಾಗಿದೆ.

25
ದೊಡ್ಡಪ್ಪನ ಮಕ್ಕಳಿಂದ ಬೆದರಿಕೆ

ಆದರೆ, ಮನೆ ಕಟ್ಟಿಕೊಳ್ಳಲು ಮುಂದಾದಾಗಲೇ ಸಮಸ್ಯೆಗಳು ಆರಂಭವಾಗಿವೆ. ಒಂದೇ ಮನೆಯಲ್ಲಿ ವಾಸವಾಗಿದ್ದ ಗುಡ್ಡಪ್ಪ ಹಾಗೂ ಅವರ ದೊಡ್ಡಪ್ಪ ನೀಲಪ್ಪ ಮತ್ತು ಅವರ ಮಕ್ಕಳು, “ನೀನು ಮನೆ ಕಟ್ಟಿದರೆ ನಾವು ಓಡಾಡಲು ದಾರಿ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ, ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಮನೆ ನಿರ್ಮಾಣಕ್ಕೆ ತಕರಾರು ಸೃಷ್ಟಿಸಿ, ಗುಡ್ಡಪ್ಪನ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪವೂ ಇದೆ.

35
ಹೈಕೋರ್ಟ್ ಆದೇಶಕ್ಕೆ ಕ್ಯಾರೇ ಅನ್ನದ ಪೊಲೀಸರು

ಈ ಅನ್ಯಾಯದ ವಿರುದ್ಧ ಗುಡ್ಡಪ್ಪ ನ್ಯಾಯಾಲಯದ ಮೊರೆ ಹೋಗಿದ್ದು, ಧಾರವಾಡ ಹೈಕೋರ್ಟ್ ಕೂಡ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಸ್ಪಷ್ಟ ಸೂಚನೆ ನೀಡಿತ್ತು. ಆದರೂ, ಹೈಕೋರ್ಟ್ ಆದೇಶವಿದ್ದರೂ ಬಂಕಾಪುರ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

45
ಚಿಂತೆಗೆ ಒಳಗಾಗಿ ಮಗಳ ಸಾವು

ಪೊಲೀಸ್ ಠಾಣೆಗೆ ಪದೇಪದೆ ಅಲೆದಾಡಿದರೂ ನ್ಯಾಯ ಸಿಗದ ಕಾರಣ, ಮನೆ ಕಟ್ಟಿಕೊಳ್ಳಲು ಸಾಧ್ಯವಾಗದ ಆತಂಕ ಮತ್ತು ಕುಟುಂಬದ ಮೇಲಿನ ಹಲ್ಲೆಗಳ ನೋವು ಗುಡ್ಡಪ್ಪನ ಮನಸ್ಸನ್ನು ಕಾಡುತ್ತಿತ್ತು. ಈ ಎಲ್ಲ ಒತ್ತಡಗಳ ನಡುವೆ, ಗುಡ್ಡಪ್ಪ ಅವರ ಪುತ್ರಿ ಭಾರತಿ ಮಾನಸಿಕವಾಗಿ ತೀವ್ರ ಚಿಂತೆಗೆ ಒಳಗಾಗಿದ್ದು, ಅನಾರೋಗ್ಯದಿಂದ ಸಾವನ್ನಪ್ಪಿದ್ದಾಳೆ. ಮಗಳ ಸಾವಿಗೆ ಈ ನಿರಂತರ ಕಿರುಕುಳ ಮತ್ತು ನ್ಯಾಯದ ಕೊರತೆಯೇ ಪರೋಕ್ಷ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. “ನನ್ನ ಮಗಳ ಸಾವಿಗೆ ಕಾರಣರಾದವರ ಮೇಲೆ ಕ್ರಮ ಜರುಗಿಸಬೇಕು. ನಮಗೆ ರಕ್ಷಣೆ ನೀಡಿ, ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಿ” ಎಂದು ಗುಡ್ಡಪ್ಪ ಮತ್ತೆ ಪೊಲೀಸರ ಮೊರೆ ಹೋಗಿದ್ದಾರೆ. ಆದರೆ, ಈವರೆಗೆ ಬಂಕಾಪುರ ಪೊಲೀಸ್ ಠಾಣೆಯವರು ಅವರ ಮನವಿಗೆ ಸ್ಪಂದಿಸಿಲ್ಲ ಎಂಬುದು ಕುಟುಂಬದ ನೋವಿನ ಮತ್ತೊಂದು ಅಧ್ಯಾಯವಾಗಿದೆ.

55
ಪೊಲೀಸ್ ವ್ಯವಸ್ಥೆಯ ವಿರುದ್ಧ ಸ್ಥಳೀಯರ ಅಸಮಾಧಾನ

ನ್ಯಾಯಾಲಯದ ಆದೇಶವನ್ನೇ ನಿರ್ಲಕ್ಷ್ಯ ಮಾಡುತ್ತಿರುವ ಪೊಲೀಸ್ ವ್ಯವಸ್ಥೆಯ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಬಡ ವ್ಯಕ್ತಿಯೊಬ್ಬನ ಮನೆ ಕಟ್ಟಿಕೊಳ್ಳುವ ಹಕ್ಕಿಗೂ, ಮಗಳ ಸಾವಿಗೂ ನ್ಯಾಯ ಸಿಗದೆ ಉಳಿದಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯವಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಈ ಪ್ರಕರಣದಲ್ಲಿ ತಕ್ಷಣ ನ್ಯಾಯಯುತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಗುಡ್ಡಪ್ಪನ ಕುಟುಂಬಕ್ಕೆ ರಕ್ಷಣೆ ಒದಗಿಸಿ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

Read more Photos on
click me!

Recommended Stories