ಬೆಂಗಳೂರಿನ ಫ್ಲೈಓವರ್ ಮೇಲೆ ನಡೆದ ಭೀಕರ ಅಪಘಾತದಲ್ಲಿ ದೊಡ್ಡಬಳ್ಳಾಪುರದ ಐವರು ಯುವಕರು ಸಾವನ್ನಪ್ಪಿದ್ದಾರೆ. ಅತಿಯಾದ ವೇಗದಿಂದ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರು ಫ್ಲೈಒವರ್ ಮೇಲೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಐವರು ಯುವಕರು ಸಾವನ್ನಪ್ಪಿದ್ದು, ನೆಲಮಂಗಲದ ಶವಾಗರದ ಮುಂದೆ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ. ಮೃತರನ್ನು ದುರ್ಗಾ ಪ್ರಸಾದ್ (20), ಕೇಶವ್ (19), ಲಲಿತ್ (22), ಹರ್ಷಿತ್ (20) ಮತ್ತು ಧನುಷ್ (21) ಎಂದು ಗುರುತಿಸಲಾಗಿದೆ.
26
ಮಕ್ಕಳ ಶವ ನೋಡಿ ಪೋಷಕರ ಕಣ್ಣೀರು
ಒಬ್ಬನೇ ಮಗನನ್ನು ಕಳೆದುಕೊಂಡ ದುರ್ಗಾ ಪ್ರಸಾದ ತಾಯಿ ಮಂಜುಳಾ, ಪಿಯುಸಿ ಮುಗಿಸಿಕೊಂಡು ಕೆಲಸ ಮಾಡಿಕೊಂಡಿದ್ದನು. ಹತ್ತೇ ನಿಮಿಷದಲ್ಲಿ ಬರ್ತೀನಿ ಅಂತ ಹೋದವನು ಶವವಾಗಿ ಬಂದಿದ್ದಾನೆ. ಒಂದೊಂದೇ ಮಕ್ಕಳಿರೋ ನಾವು ಏನು ಮಾಡಬೇಕು ಎಂದು ಕಣ್ಣೀರು ಹಾಕಿದ್ದಾರೆ. ದಯವಿಟ್ಟು ಯಾವ ಮಕ್ಕಳು ಈ ರೀತಿ ಮಾಡಿಕೊಳ್ಳಬೇಡಿ ಎಂದು ದುರ್ಗಾಪ್ರಸಾದ್ ತಂದೆ ಗುರುರಾಜ್ ಮನವಿ ಮಾಡಿಕೊಂಡಿದ್ದಾರೆ.
36
ಧನುಷ್ ತಂದೆಯ ಕಣ್ಣೀರು
ಧನುಷ್ ತಂದೆ ಮಾತನಾಡಿ, ಮಗ ರಾತ್ರಿ ಮನೆಗೆ ಬಂದಿದ್ದನು. ಅಮ್ಮ ಮತ್ತು ತಮ್ಮನನ್ನು ಬೇಕರಿಗೆ ಕರೆದುಕೊಂಡು ಹೋಗಿ ಸ್ವೀಟ್ ಕೊಡಿಸಿ, 10 ನಿಮಿಷದಲ್ಲಿ ಬರ್ತಿನಿ ಅಂತ ಹೇಳಿ ಹೋಗಿದ್ದನು. ಫೋನ್ ಬಂದಾಗ ಮಗನ ಕೈ ಮೇಲೆ ಪುನೀತ್ ರಾಜ್ಕುಮಾರ್ ಟ್ಯಾಟೂ ಇದೆಯಾ ಅಂತ ಕೇಳಿದೆ. ಟ್ಯಾಟೂ ಇತ್ತು ಅಂತ ಹೇಳಿದಾಗ ಬರಸಿಡಿಲು ಬಡಿದಂತಾಯ್ತು. ಮಗನಿಗೆ ಈ 17 ವರ್ಷ ಅಂತ ಕಣ್ಣೀರು ಹಾಕಿದ್ದಾರೆ.
ಮಗ ಲಲಿತ್ ಬಿಕಾಂ ಮುಗಿಸಿಕೊಂಡು ಸಿಸಿಟಿವಿ ಕ್ಯಾಮೆರಾ ರಿಪೇರಿ ಕೆಲಸ ಮಾಡಿಕೊಂಡಿದ್ದನು. ದೇವಸ್ಥಾನಕ್ಕೆ ಹೋಗಿ ಬರ್ತಿನಿ ಅಂತ ಹೇಳಿದಷ್ಟೆ. ಆನಂತರ ಸಾವಿನ ಸುದ್ದಿಯೇ ಬಂದಿದೆ. ಇಬ್ಬರು ಮಕ್ಕಳಲ್ಲಿ ಇವನು ದೊಡ್ಡವನು ಎಂದು ಲಲಿತ್ ತಾಯಿ ಕಣ್ಣೀರು ಹಾಕಿದ್ದಾರೆ.
56
ಸೆಕೆಂಡ್ ಹ್ಯಾಂಡ್ ಟಾಟಾ ಇಂಡಿಕಾ ಕಾರ್
ಇತ್ತೀಚೆಗಷ್ಟೇ ಲಲಿತ್ ಸೆಕೆಂಡ್ ಹ್ಯಾಂಡ್ ಟಾಟಾ ಇಂಡಿಕಾ ಕಾರ್ ಖರೀದಿಸಿದ್ದನು. ಗೆಳೆಯರೊಂದಿಗೆ ರಾತ್ರಿ ಹೊರಗೆ ಬಂದಿದ್ದನು. ಮೃತರೆಲ್ಲರೂ ದೊಡ್ಡಬಳ್ಳಾಪುರದ ನಿವಾಸಿಗಳು ಎಂದು ತಿಳಿದು ಬಂದಿದೆ. ಬಸ್ಗೆ ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಸ್ಥಳದಲ್ಲಿ ಸಾವನ್ನಪ್ಪಿದ್ದರು. ಓರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.
ಅಪಘಾತಕ್ಕೆ ಅತಿಯಾದ ವೇಗವೇ ಕಾರಣ ಎಂದು ಹೇಳಲಾಗುತ್ತಿದೆ. ತುಮಕೂರಿನ ಕಡೆಯಿಂದ ಬರ್ತಿದ್ದ ಕಾರ್ ಡಿವೈಡರ್ ಹಾರಿ KSRTC ಬಸ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರ್ ನಜ್ಜುಗುಜ್ಜಾದ್ರೆ, ಬಸ್ ಮುಂಭಾಗದ ಗ್ಲಾಸ್ ಒಡೆದಿದೆ. ಬಸ್ ಮುಂಭಾಗದ ಆಸನದಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ಗಾಯಳಾಗಿವೆ.ಚಿಕ್ಕಬಾಣವಾರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.