ಗೊತ್ತೇ, ಪೀನಟ್‌ ಬಟರ್‌ನಿಂದ ವಜ್ರ ತೆಗೆಯಬಹುದು!

By Suvarna NewsFirst Published Jun 24, 2020, 7:11 PM IST
Highlights

ಪೀನಟ್‌ನಿಂದ ವಜ್ರ ತೆಗೆಯಬಹುದು, ವೈಟ್ ಚಾಕೋಲೇಟ್ ಎಂಬುದು ಚಾಕೋಲೇಟೇ ಅಲ್ಲ, ದ್ರಾಕ್ಷಿಹಣ್ಣನ್ನು ಮೈಕ್ರೋವೇವ್ ಓವನ್ನಲ್ಲಿಟ್ಟರೆ ಸ್ಫೋಟವಾಗುತ್ತದೆ... ಇಂಥ ಹತ್ತು ಹಲವು ಗುಟ್ಟುಗಳನ್ನು ನಾವು ಸಾಮಾನ್ಯವಾಗಿ ಬಳಸುವ ಆಹಾರಗಳು ಹೊಂದಿವೆ.

ನೈಸರ್ಗಿಕವಾಗಿ ದೊರೆಯುವ ಆಹಾರವಿರಬಹುದು, ನಾವು ತಯಾರಿಸಿದ ಆಹಾರ ಪದಾರ್ಥಗಳೇ ಇರಬಹುದು, ಅವುಗಳ ಬಳಿ ಜನರಿಗೆ ಹೇಳಲು ಹಲವಷ್ಟು ರೋಚಕ ಕತೆಗಳಿವೆ. ಆಹಾರದ ಕುರಿತು ಇನ್ನಷ್ಟು ತಿಳಿದುಕೊಂಡರೆ ಮನೆಮಂದಿಯೆಲ್ಲ ಡೈನಿಂಗ್ ಟೇಬಲ್‌ನಲ್ಲಿ ಒಟ್ಟಾಗಿ ಕುಳಿತಾಗ ಒಂದೊಂದು ಆಹಾರವನ್ನು ನೋಡಿದಾಗಲೂ ಅವುಗಳ ಬಗ್ಗೆ ಕತೆ ಹೊಡೆದು ಇತರರು ಹುಬ್ಬೇರಿಸುವಂತೆ ಮಾಡಬಹುದು. ಎಲ್ಲ ಒಟ್ಟಾದಾಗ ಮಾತಿಗೆ ತಡಕಾಡುವಾಗ ಇಂಥ ಬಾಣಗಳನ್ನು ಪ್ರಯೋಗಿಸಬಹುದು. 

ಪೀನಟ್ ಬಟರ್‌ನಿಂದ ವಜ್ರ
ಜರ್ಮನಿಯ ಬೇಯೆರಿಶಸ್ ಜಿಯೋಇನ್ಸ್‌ಟಿಟ್ಯೂಟ್‌ನ ವಿಜ್ಞಾನಿಗಳು ಕಂಡುಕೊಂಡಿದ್ದೇನೆಂದರೆ ಪೀನಟ್‌ ಬಟರ್‌ನಲ್ಲಿ ಕಾರ್ಬನ್ ಹೇರಳವಾಗಿರುವುದರಿಂದ ಅದನ್ನು ವಜ್ರವಾಗಿ ಬದಲಿಸಲು ಸಾಧ್ಯ ಎಂಬುದು. ಇದಕ್ಕೆ ಮಾಡಬೇಕಾದುದಿಷ್ಟೇ, ಪೀನಟ್ ಸ್ಪ್ರೆಡ್‌ನಲ್ಲಿರುವ ಕಾರ್ಬನ್ ಡೈಆಕ್ಸೈಡ್‌ನಿಂದ ಆಕ್ಸಿಜನ್ನನ್ನು ಹೊರತೆಗೆದು, ಬಳಿಕ ಅತಿಯಾದ ಒತ್ತಡವನ್ನು ಉಳಿದ ಕಾರ್ಬನ್ ಮೇಲೆ ಪ್ರಯೋಗಿಸಿದರೆ ಸಾಕು. ಸಿಂಪಲ್! ಅಲ್ಲವೇ?

ಕೊರೋನಾಕ್ಕೆ ಔಷಧಿ ಕಂಡುಹಿಡಿದೆವು ಎಂದು ಬೀಗುತ್ತಿದ್ದ ಪತಂಜಲಿಗೆ ಆಯುಷ್ ಶಾಕ್!

ವೈಟ್ ಚಾಕೋಲೇಟ್ ಚಾಕೋಲೇಟೇ ಅಲ್ಲ
ಹೆಸರಲ್ಲಿ ಚಾಕೋಲೇಟ್ ಇರಬಹುದು, ಆದರೆ, ವೈಟ್ ಚಾಕೋಲೇಟಿನಲ್ಲಿ ಹೆಸರಿಗೆ ತಕ್ಕ ಯಾವ ಪದಾರ್ಥವೂ ಇರುವುದಿಲ್ಲ. ಇದು ಸಕ್ಕರೆ, ಹಾಲಿನ ಉತ್ಪನ್ನಗಳು, ವೆನಿಲ್ಲ, ಲೆಸಿತಿನ್ ಹಾಗೂ ಕೋಕಾ ಬಟರ್‌ನಿಂದ ಮಾಡಲ್ಪಟ್ಟಿರುತ್ತದೆ. 

ಕ್ಯಾರೆಟ್ ಮೂಲಬಣ್ಣ ನೇರಳೆ
ಇಂದು ಕ್ಯಾರೆಟ್ ಬಹಳಷ್ಟು ಬಣ್ಣಗಳಲ್ಲಿ ಕಾಣಸಿಗುತ್ತದೆ. ಹೆಚ್ಚಾಗಿ ಆರೆಂಜ್ ಬಣ್ಣದಲ್ಲಿರುತ್ತವೆ. ಆದರೆ, ಕ್ಯಾರೆಟ್‌ಗಳ ಮೂಲ ಬಣ್ಣ ನೇರಳೆ. 16ನೇ ಶತಮಾನದಲ್ಲಿ ಈ ಕ್ಯಾರೆಟ್ ಗಿಡಗಳು ಜೆನೆಟಿಕ್ ಮ್ಯುಟೇಶನ್‌ಗೆ ಒಳಗಾಗಿದ್ದು, ಆ ನಂತರದಲ್ಲಿ ಆರೆಂಜ್ ಬಣ್ಣವನ್ನು ಪಡೆದು ಮುಂದುವರಿಯುತ್ತಿವೆ.

ದ್ರಾಕ್ಷಿಹಣ್ಣು ಮೈಕ್ರೋವೇವ್‌ನಲ್ಲಿ ಸ್ಫೋಟವಾಗುತ್ತದೆ
ದ್ರಾಕ್ಷಿಹಣ್ಣುಗಳನ್ನು ಮೈಕ್ರೋವೇವ್‌ನಲ್ಲಿಡುವ ಹುಂಬಧೈರ್ಯ ಮಾಡಬೇಡಿ. ಅದನ್ನು ಎರಡು ಹೋಳಾಗಿಸಿ ಮೈಕ್ರೋವೇವ್‌ನಲ್ಲಿಟ್ಟರೆ, ಅಲ್ಲಿ ಪ್ಲಾಸ್ಮಾದ ಫೈರ್‌ಬಾಲ್ ಸೃಷ್ಟಿಯಾಗಿ ಲೈಟಿಂಗ್ ಕಂಡುಬರುತ್ತದೆ. ಇದು ಸ್ಫೋಟಗೊಳ್ಳಬಲ್ಲದು. ಇದಕ್ಕೆ ಕಾರಣ ಮೈಕ್ರೋವೇವ್ ರೇಡಿಯೇಶನ್ ಮೂಲಕ ಉಷ್ಣತೆ ಉತ್ಪಾದಿಸುತ್ತಿರುತ್ತದೆ. ಅದರೊಳಗೆ ಏನೂ ಇಲ್ಲದಾಗ ಅಥವಾ ಗ್ರೇಪ್‌ನಂಥ ಸಣ್ಣದೊಂದು ಪದಾರ್ಥ ಇಟ್ಟಾಗ ಒಳಗುಂಟಾದ ಉಷ್ಣತೆಯನ್ನು ಹೀರಿಕೊಳ್ಳಲು ಯಾವುದೂ ಇರುವುದಿಲ್ಲ. ಹಾಗಾಗಿ, ಉಷ್ಣತೆಯು ಶೇಖರಗೊಂಡು ಕಡೆಗೆ ಸ್ಫೋಟವಾಗುತ್ತದೆ. 

ಜೇನುತುಪ್ಪ ಎಂದೂ ಹಾಳಾಗುವುದಿಲ್ಲ
ಜೇನುತುಪ್ಪ ಶುದ್ಧವಾಗಿದ್ದಾಗ ಅದರಲ್ಲಿ ಮಾಯಿಶ್ಚರ್ ಬಹಳ ಕಡಿಮೆ ಇರುತ್ತದೆ. ಅಷ್ಟೇ ಅಲ್ಲ ಅದು ಬಹಳ ಅಸಿಡಿಕ್ ಆಗಿರುತ್ತದೆ. ಇವೆರಡೂ ಆಹಾರ ಕೆಡದಂತಿರಲು ಕಾರಣವಾಗುತ್ತವೆ. ಇಂಥ ವಾತಾವರಣದಲ್ಲಿ ಬ್ಯಾಕ್ಟೀರಿಯಾಗಳು ಬದುಕಲಾರವು. ಸಾವಿರಾರು ವರ್ಷಗಳ ಹಿಂದೆ ಶೇಖರಿಸಿಟ್ಟ ಜೇನುತುಪ್ಪ ಇಂದಿಗೂ ತಾಜಾ ಸ್ಥಿತಿಯಲ್ಲಿರುವಂಥದ್ದು ಪುರಾತತ್ವ ಅಧಿಕಾರಿಗಳಿಗೆ ಸಿಕ್ಕ ಉದಾಹರಣೆಗಳಿವೆ. ಜೇನುತುಪ್ಪ ಒಂದೇ ಅಲ್ಲ, ಉಪ್ಪು, ಸಕ್ಕರೆ ಹಾಗೂ ಹಸಿ ಅಕ್ಕಿ ಕೂಡಾ ಶಾಶ್ವತವಾಗಿ ಕೆಡದಂತಿರಬಲ್ಲವು. 

ಮಳೆಗಾಲದ ರೋಗಗಳಿಂದ ಮಕ್ಕಳ ರಕ್ಷಣೆ ಹೀಗಿರಲಿ!

ಆಲೂಗಡ್ಡೆಗಳು ವೈಫೈ ಸಿಗ್ನಲ್ ಪ್ರತಿಫಲಿಸಬಲ್ಲವು!
2012ರಲ್ಲಿ ಬೋಯಿಂಗ್ ತನ್ನ ಹೊಸ ವಿಮಾನಗಳಲ್ಲಿ ವೈಫೈ ಸಿಗ್ನಲ್‌ಗಳನ್ನು ಪರೀಕ್ಷಿಸಬೇಕಿದ್ದಾಗ, ಸೀಟ್‌ಗಳ ಮೇಲೆ ಆಲೂಗಡ್ಡೆ ರಾಶಿ ಹರಡಿ ಪರೀಕ್ಷಿಸಿತ್ತು. ಇದಕ್ಕೆ ಕಾರಣ, ಆಲೂಗಡ್ಡೆಗಳಲ್ಲಿ ಹೆಚ್ಚು ನೀರಿರುವುದು ಹಾಗೂ ಅವುಗಳ ಕೆಮಿಕಲ್ ಕಂಪೋಸಿಶನ್‌ನಿಂದಾಗಿ ಅವು ವೈಫೈ ಸಿಗ್ನಲ್ ಹಾಗೂ ರೇಡಿಯೋ ಸಿಗ್ನಲ್‌ಗಳನ್ನು ಹೀರಿಕೊಂಡು ಹೊರಬಿಡಬಲ್ಲವು. 

ಕ್ರ್ಯಾನ್‌ಬೆರಿ ಹಣ್ಣು ಪುಟಿಯಬಲ್ಲದು
ಕ್ರ್ಯಾನ್‌ಬೆರಿಯು ಹಣ್ಣಾಗಿದೆ ಎಂದು ಪರೀಕ್ಷಿಸುವುದು ಹೇಗೆ ಗೊತ್ತಾ? ಅವನ್ನು ನೆಲಕ್ಕೆ ಬಡಿದು ನೋಡಲಾಗುತ್ತದೆ. ಅವು ರಬ್ಬರ್ ಬಾಲ್‌ನಂತೆ ಪುಟಿದಾಡಿದರೆ ಅವು ಹಣ್ಣಾಗಿದೆ ಎಂದರ್ಥ. ಹೌದು, ಅದೇ ಕಾರಣಕ್ಕೆ ಇವಕ್ಕೆ ಬೌನ್ಸಿಂಗ್ ಬೆರೀಸ್ ಎಂದೂ ಹೇಳಲಾಗುತ್ತದೆ. 

 

click me!