ಅಬ್ಬಬ್ಬಾ! ಜಗನ್ನಾಥನಿಗೆ ಪ್ರತಿದಿನ 56 ಬಗೆಯ ಭೋಗ! ಇಲ್ಲಿನ ಒಲೆಯ ಬೆಂಕಿ ಆರುವುದೇ ಇಲ್ಲ!

By Suvarna NewsFirst Published Jun 28, 2022, 3:22 PM IST
Highlights

ಪುರಿ ಜಗನ್ನಾಥನ ರಥಯಾತ್ರೆಗೆ ಇನ್ನೆರಡೇ ದಿನ ಬಾಕಿ ಇದೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿವೆ. ಅಂದ ಹಾಗೆ, ಪ್ರತಿ ದಿನ ಜಗನ್ನಾಥನಿಗೆ ಛಪ್ಪನ್ ಭೋಗ್ ನೀಡಲಾಗುತ್ತದೆ ಎಂದು ನಿಮಗೆ ಗೊತ್ತೇ?

ಪುರಿಯ ಪ್ರಸಿದ್ಧ ಜಗನ್ನಾಥ ರತಯಾತ್ರೆ(Jagannath Rathyatra) ಜುಲೈ 1ರಂದು ಆರಂಭವಾಗಲಿದೆ. ಪುರಿ ಜಗನ್ನಾಥ ಎಷ್ಟು ಜಗತ್ಪ್ರಸಿದ್ಧನೋ, ಆತನಿಗೆ ನೀಡುವ ಛಪ್ಪನ್ ಭೋಗ್(Chappan Bhog) ಕೂಡಾ ಅಷ್ಟೇ ಜನಪ್ರಿಯ. 

ಹೌದು, ಸರಿಯಾಗಿ ಕೇಳಿಸಿಕೊಂಡಿರಿ. ಜಗನ್ನಾಥನಿಗೆ ಪ್ರತಿದಿನ ಛಪ್ಪನ್ ಅಂದರೆ 56 ಬಗೆಯ ಆಹಾರವನ್ನು ನೈವೇದ್ಯವಾಗಿ ನೀಡಲಾಗುತ್ತದೆ. ಅದೂ ಎಲ್ಲವನ್ನೂ ಮಡಕೆಯಲ್ಲಿ ಕಟ್ಟಿಗೆ ಒಳೆಗಳ ಮೇಲಿಟ್ಟು ತಯಾರಿಸಿದ್ದು. ಹೀಗೆ ಪ್ರತಿ ದಿನ 56 ಆಹಾರ ಪದಾರ್ಥಗಳನ್ನು ಜಗನ್ನಾಥನಿಗೆ ನೀಡುವುದರ ಹಿಂದೆ ಕುತೂಹಲಕಾರಿಯಾದ ಕತೆಯಿದೆ. ಅದು ಹೀಗಿದೆ;

Latest Videos

ಹಿನ್ನೆಲೆ
ದ್ವಾಪರಯುಗದಲ್ಲಿ ಮಳೆ ದೇವರು ಇಂದ್ರನ ಕೋಪದಿಂದ ತನ್ನ ಗ್ರಾಮವನ್ನು ರಕ್ಷಿಸಲು, ಕೃಷ್ಣ(Krishna)ನು ಗೋವರ್ಧನ ಪರ್ವತವನ್ನು ಎತ್ತಿ ತನ್ನ ಕಿರುಬೆರಳಿನ ತುದಿಯಲ್ಲಿ ಹಿಡಿದು ನಿಂತಿದ್ದು ಎಲ್ಲರಿಗೂ ತಿಳಿದ ಕತೆಯೇ ಆಗಿದೆ.  ಅವನು ತನ್ನ ಹಳ್ಳಿಯ ಎಲ್ಲರಿಗೂ ಪರ್ವತದ ಅಡಿಯಲ್ಲಿ ಆಶ್ರಯ ನೀಡಿದನು. ಇಂದ್ರನಿಗೆ ತನ್ನ ತಪ್ಪಿನ ಅರಿವಾಗುವವರೆಗೆ ಅವನು 7 ದಿನಗಳ ಕಾಲ ಪರ್ವತವನ್ನು ಹಿಡಿದುಕೊಂಡೇ ಇದ್ದನು. 
ಪ್ರತಿ ದಿನ ಕೃಷ್ಣನು 8 ಬಗೆಯ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದನು. ಆದರೆ, ಹೀಗೆ ಗೋವರ್ಧನ ಗಿರಿ ಎತ್ತಿ ಹಿಡಿದು ನಿಂತಾಗ ಕೃಷ್ಣನಿಗೆ ಏನನ್ನೂ ತಿನ್ನಲಾಗಲಿಲ್ಲ.  ಏಳನೆಯ ದಿನದ ಕೊನೆಯಲ್ಲಿ, ತಮ್ಮನ್ನು ರಕ್ಷಿಸಿದ ಪರಮಾತ್ಮನಿಗಾಗಿ ಗೊಲ್ಲರೆಲ್ಲರೂ 7 ದಿನದ್ದೂ ಸೇರಿ(8*7) 56 ಬಗೆಯ ಭಕ್ಷ್ಯಗಳನ್ನು ಮಾಡಿ ತಂದು ತಿನ್ನಿಸಿದರು. ಅದರಿಂದ ಕೃಷ್ಣ ಬಹಳ ಸಂತೋಷಗೊಂಡನು. 

ದೇವರಿಗೇಕೆ ಈರುಳ್ಳಿ, ಬೆಳ್ಳುಳ್ಳಿ ಹಾಕಿರೋ ಪ್ರಸಾದ ಮಾಡೋಲ್ಲ?

ಈ ಕತೆ ಹಿನ್ನೆಲೆಯಲ್ಲಿ ಇಂದಿಗೂ, ಪುರಿಯ ಜಗನ್ನಾಥ ದೇವಾಲಯದ ಅಡುಗೆಮನೆಯಲ್ಲಿ ಪ್ರತಿದಿನ 56 ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಅವೆಲ್ಲವನ್ನೂ ಕೃಷ್ಣ ಅಂದರೆ ಜಗನ್ನಾಥನಿಗೆ ನೈವೇದ್ಯ ಮಾಡಲಾಗುತ್ತದೆ. ಪ್ರತಿ ದಿನ ಮುಂಜಾನೆಯಿಂದ ರಾತ್ರಿವರೆಗೆ 6 ಬಾರಿ ಜಗನ್ನಾಥನಿಗೆ ನೈವೇದ್ಯ ಸಲ್ಲಿಸಲಾಗುತ್ತದೆ. ಆ ಭೋಗಗಳ ಸಮಯ ಇಂತಿದೆ..
ಗೋಪಾಲ ವಲ್ಲಭ ಭೋಗ (8.30 AM)
ಸಕಲ ಧೂಪ (10.00 AM)
ಭೋಗ ಮಂಟಪ ಭೋಗ (11.00 AM)
ಮಧ್ಯಾನ್ಹ ಧೂಪ (12.30 ರಿಂದ ಮಧ್ಯಾಹ್ನ 1.00)
ಸಂಧ್ಯಾ ಧೂಪ (7.00 PM ರಿಂದ 8.00 PM)
ಬಡ ಶೃಂಗಾರ ಭೋಗ (11.00 PM)

ಲಕ್ಷ್ಮೀಯ ಮೇಲ್ವಿಚಾರಣೆ
ಪ್ರತಿ ದಿನ 56 ತಿನಿಸುಗಳನ್ನು ಮಾಡುವುದು ಸುಲಭದ ಮಾತೇನಲ್ಲ. ಏಕೆಂದರೆ ಲಕ್ಷ್ಮಿ ದೇವಿ(Lakshmi devi)ಯು ಭೋಜನವನ್ನು ಮೇಲ್ವಿಚಾರಣೆ ಮಾಡುತ್ತಾಳೆ ಮತ್ತು ಅದನ್ನು ಅತ್ಯಂತ ಭಕ್ತಿ ಮತ್ತು ಕಾಳಜಿಯಿಂದ ತಯಾರಿಸಲಾಗುತ್ತಿದೆಯೇ ಎಂದು ನೋಡುತ್ತಾಳೆ. ಅಲ್ಲದೆ, ಈ 56 ಬಗೆಯನ್ನೂ ಮಣ್ಣಿನ ಪಾತ್ರೆಗಳಲ್ಲಿ ಮತ್ತು ಕಟ್ಟಿಗೆಯ ಬೆಂಕಿಯಲ್ಲಿ ಮಾತ್ರ ಬೇಯಿಸಲಾಗುತ್ತದೆ. ಇದನ್ನು  ಸಿದ್ಧಪಡಿಸಲೆಂದೇ  ಸುಮಾರು 500   ಸಂಖ್ಯೆಯ  ಅಡುಗೆಯವರು,  ಅವರಿಗೆ 300 ಸಹಾಯಕರು ಮತ್ತು 200 ಕೆಲಸಗಾರರು ಸಿದ್ದರಿರುತ್ತಾರೆ. ಇಲ್ಲಿನ ಒಲೆ ಆರುವುದೇ ಇಲ್ಲ. ಹೀಗೆ ನೈವೇದ್ಯ ಮಾಡಿದ ಆಹಾರ(food)ವನ್ನು ಮಹಾಪ್ರಸಾದ ಎಂದು ಕರೆಯಲಾಗುತ್ತದೆ. 

ಮುಟ್ಟಾದ ಮಹಿಳೆಯರೇಕೆ ಮೂಲೆಯಲ್ಲಿ ಕೂರಬೇಕು?

ಮಹಾಪ್ರಸಾದ ಅಥವಾ ಛಪಾನ್ ಭೋಗ್ ಅನ್ನು ಮೊದಲು ಜಗನ್ನಾಥ, ಭಗವಾನ್ ಬಲಭದ್ರ ಮತ್ತು ದೇವಿ ಸುಭದ್ರಾಗೆ ಅರ್ಪಿಸಲಾಗುತ್ತದೆ. ನಂತರ ಅದನ್ನು ಬಿಮಲಾ ದೇವಿಗೆ ಅರ್ಪಿಸಲಾಗುತ್ತದೆ ಮತ್ತು ನಂತರ ಅದನ್ನು ಮಹಾಪ್ರಸಾದ ಎಂದು ಪರಿಗಣಿಸಿ ಭಕ್ತರಿಗೆ ನೀಡಲಾಗುತ್ತದೆ. ಈ ಮಹಾಪ್ರಸಾದವನ್ನು ಯಾವುದೇ ಭೇದಭಾವವಿಲ್ಲದೆ ಎಲ್ಲಾ ಜಾತಿ-ಮತದ ಜನರು ಮುಕ್ತವಾಗಿ ನೀಡಲಾಗುತ್ತದೆ. ಈ ದೇವಸ್ಥಾನದ ಅಡುಗೆ ಕೋಣೆಯು ದಿನಕ್ಕೆ ಒಂದು ಲಕ್ಷ ಭಕ್ತರಿಗೆ ಅಡುಗೆ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. 

ಪ್ರಸಾದ ಪರಿಮಳ ಪವಾಡ!
ದಂತಕಥೆಯ ಪ್ರಕಾರ, ಹಬೆಯಿಂದ ಬೇಯಿಸಿದ ಆಹಾರವನ್ನು ಭಗವಂತನಿಗೆ ಮಣ್ಣಿನ ಮಡಕೆಗಳ ಜೋಲಿಗಳಲ್ಲಿ ಕೊಂಡೊಯ್ದಾಗ ಆಹಾರದಿಂದ ಯಾವುದೇ ಪರಿಮಳ ಬರುವುದಿಲ್ಲ. ಆದರೆ ಅದನ್ನು ಭಗವಂತನಿಗೆ ಅರ್ಪಿಸಿದ ನಂತರ ತಂಗಾಳಿಯಲ್ಲಿ ರುಚಿಕರವಾದ ವಾಸನೆಯು ಭಕ್ತರ ಮೂಗಿಗೆ ಬಡಿಯುತ್ತದೆ. ಇದು ಆಹಾರವು ಭಗವಂತನಿಂದ ಆಶೀರ್ವದಿಸಲ್ಪಟ್ಟಿದೆ ಎಂಬುದನ್ನು ತೋರುತ್ತದೆ.

ಹಠಮಾರಿ, ಕೋಪಿಷ್ಠ ಎನಿಸಿದರೂ ಈ ನಾಲ್ಕು ರಾಶಿಗಳ ಮನಸ್ಸು ಮಾತ್ರ ಮಕ್ಕಳಂತೆ!

56 ಬಗೆಯ ಆಹಾರಗಳ್ಯಾವುವು?
ಅನ್ನ, ತರಕಾರಿ ಮೇಲೋಗರ, ಸಿಹಿ ತಿನಿಸುಗಳು, ಕೇಕ್‌ಗಳು, ಅಕ್ಕಿ, ತುಪ್ಪದ ಅನ್ನ, ಮಿಶ್ರ ಅನ್ನ, ಜೀರಿಗೆ ಮತ್ತು ಉಪ್ಪು ಮಿಶ್ರಿತ ಇಂಗು-ಶುಂಠಿ ಅನ್ನ, ಸಿಹಿ ಬೇಳೆ, ತರಕಾರಿಗಳೊಂದಿಗೆ ಬೆರೆಸಿದ ಸಾದಾ ದಾಲ್, ವಿವಿಧ ರೀತಿಯ ಮಿಶ್ರ ಮೇಲೋಗರಗಳು, ಸಾಗಾ ಭಜ, ಖಟ್ಟ, ಗಂಜಿ, ಒಣ ಸಿಹಿತಿಂಡಿಗಳು ಮುಂತಾದ ಭಕ್ಷ್ಯಗಳನ್ನು ಒಳಗೊಂಡಿದೆ. 
 

click me!