ಭಜಗೋವಿಂದಂ ಶ್ಲೋಕ ಸೃಷ್ಟಿಯಾದ ಪವಿತ್ರ ಕ್ಷೇತ್ರ ಪ್ರಯಾಗ್ ರಾಜ್

By Suvarna NewsFirst Published Jul 21, 2023, 5:09 PM IST
Highlights

ವಟವೃಕ್ಷ. ಪುರಾಣಗಳಲ್ಲಿ ಬರುವ ಈ ವೃಕ್ಕೆ ತನ್ನದೇ ಆದ ವಿಶೇಷವಿದೆ. ಬಹಳ ಪೌರಾಣಿಕ ಘಟನೆಗಳಿಗೆ ಸಾಕ್ಷಿಯಾದ ಈ ಮರ ಇರುವುದು ಪ್ರಯಾಗ್‌ರಾಜ್‌ನಲ್ಲಿ.

- ಸೌಮ್ಯಾ ಹೇಮಂತ್ 
ಸತ್ಯಯುಗದಿಂದ ಕಲಿಯುಗದವರೆಗೂ ಪ್ರತಿ ಯುಗದ ಬದಲಾವಣೆಗೆ ಸಾಕ್ಷಿಯಾಗಿ ನಿಂತಿದೆ ವಟವೃಕ್ಷ. ವನವಾಸದ ಸಮಯದಲ್ಲಿ ಸೀತಾ ಲಕ್ಷ್ಮಣ ಸಮೇತ ಶ್ರೀರಾಮ ತಂಗಿದ್ದು ಇದೇ ಮರದ ಕೆಳಗೆ! ಶಂಕರರು ಭಜಗೋವಿಂದ ರಚಿಸಿದ್ದು ಇದೇ ಜಾಗದಲ್ಲಿ! ಯಾವುದು ಈ ಮರ, ಎಲ್ಲಿದೆ ಅನ್ನುವ ಕುತೂಹಲ ಇದ್ರೆ ಈ ಅಂಕಣ ಓದಿ...

ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಪ್ರಯಾಗ್ ರಾಜ್. ಹಿಂದೂಗಳಿಗೆ ಬಹಳ ಪರಮ ಪವಿತ್ರ ಕ್ಷೇತ್ರ. ಹಲವು ಮಹಾತ್ಮರು, ಸಾಧು ಸಂತರು, ಋಷಿಮುನಿಗಳ ಬೀಡು. ಇದೆ ಪ್ರಯಾಗ್ರಾಜ್‌ನಲ್ಲಿ ಋಷಿ ಭಾರಧ್ವಜ ಮಹರ್ಷಿಗಳ ಆಶ್ರಮವೂ ಇದೆ. ಅಯೋಧ್ಯಯಿಂದ ವನವಾಸಕ್ಕೆ ಹೊರಡುವ ಶ್ರೀರಾಮಚಂದ್ರ ತನ್ನ ಪತ್ನಿ ಮತ್ತು ತಮ್ಮನ ಸಮೇತ ಋಷಿಗಳ ಆಶ್ರಮದಲ್ಲೊಂದು ದಿನ ಆಶ್ರಯ ಪಡೀತಾರೆ. ವನವಾಸಕ್ಕೆ ಒಂದು ಯೋಗ್ಯ ಸ್ಥಾನವನ್ನು ತಿಳಿಸಬೇಕು ಅಂತ ಕೇಳಿ ಕೊಳ್ತಾರೆ. ಆಗ ಭಾರದ್ವಾಜರು ಸೂಚಿಸುವುದು ಪ್ರಕೃತಿ ಸೌಂದರ್ಯದಿಂದ ಭೂಮಿಯನ್ನು ಸ್ವರ್ಗವಾಗಿಸಿದ್ದ, ಸಜ್ಜನರಿಂದ ತುಂಬಿದ್ದ ಚಿತ್ರಕೂಟಕ್ಕೆ ಹೋಗುವಂತೆ ಸಲಹೆ ನೀಡ್ತಾರೆ.

ಕಾಶಿಗೂ ಮುನ್ನ ಪ್ರಯಾಗಕ್ಕೆ... ಇದು ಸಾಧು ಸಂತರ ಬೃಹತ್ ಸಂಗಮ - ಸಮಾವೇಶ

Latest Videos

ಭಾರಧ್ವಜರ ಅದೇಶದಂತೆ ಅವರು ಚಿತ್ರಕೂಟದ ಕಡೆ ತಮ್ಮ ಪ್ರಯಾಣ ಮುಂದುವರಿಸುತ್ತಾರೆ. ಅದೇ ಸಂದರ್ಭ ಸಂಗಮದ ಪಕ್ಕದಲ್ಲಿರುವ ಅಕ್ಷಯ್ ವಟವೃಕ್ಷದ ಕೆಳಗೆ ಒಂದು ದಿನ ಆಶ್ರಯ ಪಡೆಯುತ್ತಾರೆ.  ಈ ಅಕ್ಷಯ್ ವಟ್ ಇರುವುದು ಸಂಗಮಕ್ಕೆ ಹೊಂದಿಕೊಂಡತೆ ಇರುವ ಅಕ್ಬರ್ ಜೋದಾಬಾಯಿಗಾಗಿ ನಿರ್ಮಿಸಿರುವ ಕೋಟೆಯೊಳಗೆ. ಪ್ರಸ್ತುತ ಕೋಟೆ ಸಂಪೂರ್ಣ ನಾಶವಾಗಿದ್ದು ಹೊರಗಿನ ಗೋಡೆಗಳಷ್ಟೆ ಉಳಿದುಕೊಂಡಿದೆ. ಇದೇ ಕೋಟೆಯ ಒಳಗೆ ನಾಲ್ಕು ಯುಗಕ್ಕೆ ಸಾಕ್ಷಿಯಾಗಿ ನಿಂತಿದೆ ಅಕ್ಷಯ್ ವಟವೃಕ್ಷ. ನಂಬಲು ಅಸಾಧ್ಯ ಎನಿಸಿದ್ರೂ ಇದು ಸತ್ಯ. ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ಪತ್ನಿ ಸಮೇತ ವನವಾಸಕ್ಕೆ ಹೊರಟು ತಂಗುವ ಈ ವೃಕ್ಷದ ಮಹಿಮೆಯನ್ನು ತಮ್ಮ ಅಂತ:ದೃಷ್ಟಿಯಿಂದ ಶಂಕರಾಚಾರ್ಯರು ಕಂಡು ಕೊಳ್ಳುತ್ತಾರೆ. ದೇಶ ಪರ್ಯಟನೆ ಮೂಲಕ ಸನಾತನ ಧರ್ಮವನ್ನು ದೇಶದ ದಿಕ್ಕು ದಿಕ್ಕಿಗೆ ಪ್ರಸರಿಸುವ ಕಾರ್ಯದಲ್ಲಿದ್ದ ಶಂಕರರು ತಮ್ಮ ಶಿಷ್ಯರ ಜೊತೆ ಇದೆ ವೃಕ್ಷರಾಜನ ನೆರಳಿನಲ್ಲಿ ನೆಲೆ ಪಡೆಯುತ್ತಾರೆ. ಹಾಗೆ ಒಂದು ದಿನ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ವಾಪಸ್ ಬರುವ ವೇಳೆಯಲ್ಲಿ ವೃದ್ದ ವ್ಯಕ್ತಿಯೊಬ್ಬರು ವ್ಯಾಕರಣ ಅಭ್ಯಾಸ ಮಾಡುವುದನ್ನು ನೋಡ್ತಾರೆ. ಆಗ ಅವರ ಬಾಯಿಂದ ಹೊರಟ ಶ್ಲೋಕವೆ

'ಭಜಗೋವಿಂದಂ ಭಜಗೋವಿಂದ ಗೋವಿಂದ ಭಜೆ ಮೂಢಮತೆ..
ಸಂಪ್ರಪ್ತೆ ಸನ್ನಿಹಿತೆ ಕಾಲೇ ನಹಿ ನಹಿ ರಕ್ಷತಿ ದೂಕೃಂಕಾರಣೆ '

ಮಾನವ ಗೋವಿಂದನನ್ನು ಭಜಿಸು, ನಮ್ಮ ಜೀವನದ ಅಂತಿಮ ಸಮಯದಲ್ಲಿ ಈ  ವ್ಯಾಕರಣ ನಮ್ಮನ್ನು ರಕ್ಷಿಸುವುದಿಲ್ಲ ಎಂಬುದು ಈ ಹಾಡಿನ ನಾಲ್ಕು ಸಾಲುಗಳ ಅರ್ಥ.

ವಾರಣಾಸಿಯಲ್ಲಿದೆ ಇಡೀ ದೇಶವೇ ಮೆಚ್ಚುವ ಅಖಂಡ ಭಾರತ್‌ ಮಾತಾ ಮಂದಿರ!

ಕೋಟೆಯ ಪಕ್ಕದಲ್ಲೇ ದೊಡ್ಡ ಹನುಮಾನ್ ಮಂದಿರಿವಿದೆ. ಇದು ಬಹಳ ಪುರಾತನವಾಗಿದ್ದು, ಸಾವಿರಾರು ಜನರು ಪ್ರತಿದಿನ ಈ ಮಂದಿರಕ್ಕೆ ಭೇಟಿ ನೀಡ್ತಾರೆ. ಸಂಗಮದಿಂದ 5 ಕಿಲೋ ಮೀಟರ್ ಅಂತರದಲ್ಲಿದೆ ಮಾ ಅಲೋಪಿ ಮಂದಿರ. ಇದು ಒಂದು ಶಕ್ತಿ ಮತ್ತು ಸಿದ್ದಿಪೀಠವೂ ಹೌದು. ವಿಷ್ಣುವಿನ ಸುದರ್ಶನ ಚಕ್ರಕ್ಕೆ ಸಿಕ್ಕಿ ಛಿದ್ರವಾಗುವ ಸತಿಯ ದೇಹದ ಬಲಗಡೆ ಹಸ್ತ ಬಿದ್ದ ಜಾಗವಿದು. ಆದ್ರೆ ಆ ಕೈಗಳು ಅದೃಶ್ಯವಾಗುವ ಕಾರಣ ಇಲ್ಲಿ ಯಾವುದೇ ವಿಗ್ರಹವಿಲ್ಲ. ತೊಟ್ಟಿಲನ್ನು ಈ ಮಂದಿರದಲ್ಲಿ ಪೂಜೀಸುವುದು ವಿಶೇಷ. ಹಸ್ತ ಅದೃಶ್ಯವಾದ ಕಾರಣ ಇದಕ್ಕೆ ಅಲೋಪಿ (ಅದೃಶ್ಯ) ಎಂದು ಕರೆಯಲಾಗುತ್ತದೆ. ಭಕ್ತರ ಎಲ್ಲ ಅಭೀಷ್ಟಗಳನ್ನು ಈಡೇರಿಸುವುದರಿಂದ ಇದು ಸಿದ್ದಿಪೀಠ 

ಪ್ರಯಾಗ್ ರಾಜ್ ನೋಡಲು ಒಂದು ದಿನದ ಕಾಲಾವಕಾಶ ಇದ್ರೆ ಸಾಕು. ಇಲ್ಲಿ ಉಳಿದುಕೊಳ್ಳಲು ಬಜೆಟ್‌ಗೆ ತಕ್ಕಂತೆ ಹೊಟೇಲ್‌ಗಳು ಸಿಗುತ್ತೆ. ಸಾಮಾನ್ಯವಾಗಿ ಕಾಶಿಗೆ ಬರುವ ಪ್ರತಿಯೊಬ್ಬರೂ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡ್ತಾರೆ. ಪಿಂಡ ಪ್ರಧಾನ ಮತ್ತು ತರ್ಪಣಕ್ಕೆ ಈ ಕ್ಷೇತ್ರ ಬಹಳ ಪ್ರಸಿದ್ದವಾಗಿದೆ. ಕುಂಭ ಮೇಳದ ಸಂದರ್ಭ ಲಕ್ಷಾಂತರ ಜನರಿಗೆ ಆಶ್ರಯ ನೀಡುವ ಈ ಕ್ಷೇತ್ರ ಇಂದಿಗೂ ತನ್ನ ಪವಿತ್ರತೆಯನ್ನು ಉಳಿಸಿಕೊಂಡು ಬಂದಿದೆ. 

 

 

click me!