Latest Videos

Mount Kailash: ಶಿವನ ಮನೆ ಕೈಲಾಸವೇ ಜಗತ್ತಿನ ಕೇಂದ್ರಬಿಂದು!

By Suvarna NewsFirst Published Mar 1, 2022, 4:57 PM IST
Highlights

ಮೇರು ಪರ್ವತ ಎಂಬ ಹೆಸರಿಗೆ ಪಾತ್ರವಾಗಿರುವ ಕೈಲಾಸ ಪರ್ವತವನ್ನೇರಿದ ಬೌದ್ಧ ಗುರು ಮಿಲರೇಪಾ, ಕೆಳಗಿಳಿದ ಮೇಲೆ 'ಅಲ್ಲಿ ಧ್ಯಾನ ಮಾಡುತ್ತಿರುವ ದೇವರಿಗೆ ಯಾರೂ ತೊಂದರೆ ನೀಡಬೇಡಿ' ಎಂದರಂತೆ. ಅದು ಶಿವನಲ್ಲದೆ ಮತ್ತಾರು ತಾನೇ ಆಗಿರಲು ಸಾಧ್ಯ?

ಕೈಲಾಸ(Mount Kailash) ಪರ್ವತವು ಶಿವನ ನೆಲೆ ಎಂಬುದು ಎಲ್ಲರಿಗೂ ಗೊತ್ತು. ಈ ಮೇರು ಪರ್ವತದ ಕುರಿತ ಅಚ್ಚರಿಗಳು, ನಿಗೂಢಗಳು, ಆಧ್ಯಾತ್ಮಿಕ ಶಕ್ತಿ ವಿಜ್ಞಾನದ ಅಧ್ಯಯನಕ್ಕೆ ನಿಲುಕದ್ದು. ಜಗತ್ತಿನ ಕೇಂದ್ರಬಿಂದು ಎಂದು ಕರೆಸಿಕೊಂಡಿರುವ ಕೈಲಾಸ ಪರ್ವತವು ಟಿಬೆಟ್‌ನ ನೆಲದಲ್ಲಿದೆ. ಸಮುದ್ರ ಮಟ್ಟದಿಂದ 22,000 ಅಡಿ ಎತ್ತರದಲ್ಲಿರುವ ಕೈಲಾಸ ಪರ್ವತವನ್ನು ಏರಿದವರಿಲ್ಲ. ಏರಲೂ ಸಾಧ್ಯವಿಲ್ಲ ಎಂಬ ಮಾತಿದೆ. ಈ ನಿಗೂಢತೆಯ ನೆಲೆವೀಡಿನ ಬಗ್ಗೆ ಕುತೂಹಲಕಾರಿ ಸಂಗತಿಗಳು ಇಲ್ಲಿವೆ. 

ನಾಲ್ಕು ಧರ್ಮಗಳ ಪವಿತ್ರ ಸ್ಥಳ
ಹಿಮಾಲಯ(Himalaya) ಶ್ರೇಣಿಯಲ್ಲಿ ಹಲವಾರು ಪರ್ವತಗಳಿವೆ. ಆದರೆ ಅದೇಕೋ ಈ ಕೈಲಾಸ ಪರ್ವತ ಮಾತ್ರ ಹಿಂದೂ(Hindu), ಬೌದ್ಧ(buddism), ಜೈನ(Jains) ಹಾಗೂ ಭಾನ್ ಧರ್ಮೀಯರಿಗೆ ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ಅತಿ ಪ್ರಮುಖ ತಾಣವಾಗಿದೆ. ಸುತ್ತಲೂ ಅಷ್ಟೊಂದು ಪರ್ವತಗಳಿದ್ದೂ ಎಲ್ಲರಿಗೂ ಇದೇ ಪರ್ವತ ಪವಿತ್ರ ಎಂದರೆ ಇದರಲ್ಲೇನೋ ವಿಶೇಷ ಶಕ್ತಿ ಇರಲೇಬೇಕು. ಹಿಂದೂಗಳಿಗೆ ಇದು ಶಿವಪಾರ್ವತಿಯರ ನೆಲೆ ಎಂಬ ಕಾರಣಕ್ಕೆ ಪವಿತ್ರವಾಗಿದೆ. ಶಿವ(Lord Shiva)ನ ಬಹುತೇಕ ಎಲ್ಲ ಕತೆಗಳಲ್ಲೂ ಆತ ಕೈಲಾಸವಾಸಿಯೇ ಆಗಿದ್ದಾನೆ. ತಾಂತ್ರಿಕ ಬೌದ್ಧರು ಕೈಲಾಸಪರ್ವತವು ಆತ್ಮಾನಂದವನ್ನು ಪ್ರತಿನಿಧಿಸುವ ಡೆಮ್ ಚೋಕ್ ಬುದ್ಧನ ನೆಲೆಯೆಂದು ನಂಬುತ್ತಾರೆ. ಕೈಲಾಸಪರ್ವತವನ್ನು ಅಷ್ಟಪಾದವೆಂದು ಕರೆಯುವ ಜೈನರು ತಮ್ಮ ಧರ್ಮದ ಮೂಲಪುರುಷ ಋಷಭದೇವನು ಈ ಸ್ಥಳದಲ್ಲಿ ನಿರ್ವಾಣ ಹೊಂದಿದನೆಂದು ನಂಬುತ್ತಾರೆ. ಒಟ್ನಲ್ಲಿ ಇದೊಂದು ದೈವಿಕ ಸ್ಥಳ. 

Maha Shivaratri: ನಾಲ್ಕು ಯಾಮಗಳಲ್ಲಿ ಮಾಡಿ ಶಿವನ ಪೂಜೆ

ಪರ್ವತ(mountain) ಹೌದೋ ಅಲ್ಲವೋ?
ಕೈಲಾಸ ಎನ್ನುವಾಗ ಪರ್ವತ ಎನ್ನುವ ಪದ ಜೊತೆಗೆಯೇ ಸೇರಿಬರುತ್ತದೆ. ಪರ್ವತ ಶ್ರೇಣಿಗಳ ನಡುವೆ ಇದ್ದೂ ತನ್ನ ವೈಶಿಷ್ಠ್ಯತೆ ಕಾದುಕೊಂಡಿರುವ ಈ ಸ್ಥಳ ಪರ್ವತವೇ ಅಲ್ಲ, ಇದೊಂದು ಮಾನವ ನಿರ್ಮಿತ ಪಿರಮಿಡ್(pyramid) ಎಂದು ಕೆಲ ರಷ್ಯನ್ ವಿಜ್ಞಾನಿಗಳು ವಾದಿಸುತ್ತಾರೆ. ಏಕೆಂದರೆ 9 ಅಂತಸ್ಥಿನ ಕಟ್ಟಡದಂತೆ ನಾಲ್ಕು ದಿಕ್ಕುಗಳಲ್ಲಿ ಸಾಪಾಟು ಗೋಡೆ ಹೊಂದಿದೆ ಇದು. ಅದರ ಮೇಲೆ ಮೆಟ್ಟಿಲುಗಳ ರಚನೆಯಂತಿವೆ. ತುದಿ ಬಹಳ ಮೊನಚಾಗಿದ್ದು ಒಳಗಿಂದ ಟೊಳ್ಳಾಗಿದೆ. ಇದರ ಆಕಾರವೇ ಇದು ಪ್ರಾಕೃತಿಕವಾದದ್ದಲ್ಲ ಎಂಬುದನ್ನು ಹೇಳುತ್ತದೆ. 

ವಿಶ್ವದ ಕೇಂದ್ರಬಿಂದು(centre of the world)
ವಿಷ್ಣುಪುರಾಣದಲ್ಲೇ ಹೀಗೆ ಹೇಳಲಾಗಿದೆ. ಕೈಲಾಸ ಪರ್ವತ ಜಗತ್ತಿನ ಮಧ್ಯ ಬಿಂದುವಾಗಿದೆ ಎಂದು ವಿಷ್ಣುಪುರಾಣದಲ್ಲಿ ಹೇಳಿದ್ದನ್ನೇ ಗೂಗಲ್ ಮ್ಯಾಪ್ ಕೂಡಾ ಸ್ಪಷ್ಟೀಕರಿಸುತ್ತದೆ. ಈ ಪರ್ವತದ ನಾಲ್ಕು ದಿಕ್ಕಿನಲ್ಲಿ ನಾಲ್ಕು ನದಿಗಳು ಹರಿಯುತ್ತಿವೆ. 

Mahashivratri 2022: ಶಿವನ ಕೃಪೆಗೆ ರಾಶಿಯನುಸಾರ ಮಾಡಿ ರುದ್ರಾಭಿಷೇಕ

ಕೈಲಾಸ ಏರಿದವರೊಬ್ಬರೇ
ಜಗತ್ತಿನ ಅತಿ ಎತ್ತರದ ಪರ್ವತವೆನಿಸಿಕೊಂಡ ಮೌಂಟ್ ಎವರೆಸ್ಟನ್ನು ಛಲದಿಂದ ಏರಿದವರಿದ್ದಾರೆ. ಆದರೆ, ಕೈಲಾಸ ಪರ್ವತ ಏರಿದವರು ಮಾತ್ರ ಒಬ್ಬರೇ ಒಬ್ಬರು. ಅವರೇ ಬೌದ್ಧಗುರು ಮಿಲರೇಪಾ(Milarepa). ಪರ್ವತದ ಆಕಾರ, ಹವಾಮಾನ, ಪ್ರಾಕೃತಿಕ ವಿಷಯಗಳನ್ನು ಗಮನಿಸಿದರೆ ಅದನ್ನು ಸಾಮಾನ್ಯ ಮನುಷ್ಯರಾರೂ ಏರುವುದೂ ಸಾಧ್ಯವಿಲ್ಲ. ಈಗಂತೂ ಹಿಂದೂ, ಬೌದ್ಧ, ಬಾನ್ ಹಾಗೂ ಜೈನರಿಗೆ ಈ ಪರ್ವತ ಪವಿತ್ರವಾದ ಸ್ಥಳವಾಗಿರುವುದರಿಂದ ಹತ್ತಲು ಅನುಮತಿ(permission), ಅವಕಾಶಗಳೂ ಸಿಗುವುದಿಲ್ಲ. ಆದರೆ, ತಾಂತ್ರಿಕ ವಿದ್ಯಾ ಪಾರಂಗತನಾಗಿದ್ದ ಮಿಲರೇಪ ಕೈಲಾಸ ಏರಿದ ಕುರಿತ ಕತೆಗಳಿವೆ. ಅವರು ಅಲ್ಲಿಂದ ಕೆಳಗಿಳಿದು ಬಂದ ಮೇಲೆ ಹೇಳಿದ ಮಾತೊಂದು ಬಹಳ ಅಚ್ಚರಿ ಹುಟ್ಟಿಸುತ್ತದೆ. ಅವರು ಹಿಂತಿರುಗಿದಾಗ, ಅಲ್ಲಿ ಧ್ಯಾನಾಸಕ್ತನಾಗಿರುವ ದೇವರಿಗೆ ತೊಂದರೆ ನೀಡಬೇಡಿ ಎಂದು ಎಲ್ಲರನ್ನೂ ಎಚ್ಚರಿಸಿದರಂತೆ. ಆ ದೇವರು ಶಿವನಲ್ಲದೆ ಮತ್ಯಾರು ತಾನೇ ಆಗಿರಲು ಸಾಧ್ಯ ಅಲ್ಲವೇ?

ದೇವತೆ ಹಾಗೂ ರಾಕ್ಷಸರ ಕೊಳಗಳು(lakes)
ಹಿಂದೂ ಪುರಾಣ ಕತೆಗಳಲ್ಲಿ ಬರುವಂತೆಯೇ ಇಲ್ಲಿ ಸಿಹಿ ನೀರಿನ ಹಾಗೂ ಉಪ್ಪು ನೀರಿನ ಕೊಳಗಳೆರಡೂ ಇರುವುದು ಗಮನಾರ್ಹ. ದೇವತೆಗಳ ಕೊಳವಾಗಿ ಇಲ್ಲಿನ ಮಾನಸ ಸರೋವರ(Manasa sarovara) ಗುರುತಿಸಿಕೊಂಡಿದ್ದರೆ, ಮತ್ತೊಂದು ಬದಿಯಲ್ಲಿ ರಾಕ್ಷಸ್ ತಲ್ ಎಂಬ ಉಪ್ಪುನೀರಿನ ಕೊಳವಿದೆ. ಇದು ಹೆಸರಿಗೆ ತಕ್ಕಂತೆ ಯಾವ ಜೀವಚರಕ್ಕೂ ಆಶ್ರಯವಾಗಿಲ್ಲ. 

Maha Shivarathri: ಶಿವರಾತ್ರಿ ವ್ರತದ ಆಚರಣೆ ಏಕೆ, ಹೇಗೆ?

ಕೈಲಾಸ ಯಾತ್ರೆ
ಕೈಲಾಸ ಯಾತ್ರೆ ಹಿಂದೂ ಭಕ್ತರ ಕನಸು. ಏಕೆಂದರೆ ಶಿವನ ನೆಲೆಯಾದ ಇದೇ ನಿಜವಾದ ಶಿವಾಲಯವಾಗಿದೆ. ಹೀಗಾಗಿ, ಕೈಲಾಸ ಪರ್ವತಕ್ಕೆ ಸುತ್ತು ಬಂದರೆ ನಿಜವಾಗಿಯೂ ಶಿವಾಲಯಕ್ಕೆ ಸುತ್ತಿಬಂದ ಅನುಭೂತಿ ದೊರೆಯುತ್ತದೆ. ಇಲ್ಲಿ ಶಿವ ಪರ್ವತದೊಳಗೆ 21,000 ವರ್ಷಗಳಿಂದ ಧ್ಯಾನಮಗ್ನನಾಗಿದ್ದಾನೆ ಎಂಬ ನಂಬಿಕೆ ಇದೆ. ಪರ್ವತಕ್ಕೆ ಒಂದು ಸುತ್ತು ಬರಬೇಕು ಎಂದರೆ 52 ಕಿಲೋಮೀಟರ್ ಕಠಿಣ ಹಾದಿ ಸವೆಸಬೇಕು. 

click me!