ಜ್ಯೋತಿರ್ಲಿಂಗ ಸರಣಿ: ಪರ್ವತದ ಕೋರಿಕೆ ಈಡೇರಿಸಲು ಉದ್ಭವವಾದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ..

By Suvarna NewsFirst Published Jul 25, 2022, 10:28 AM IST
Highlights

ಜ್ಯೋತಿರ್ಲಿಂಗ ಸರಣಿಯಲ್ಲಿ ಮೂರನೇ ದೇವಾಲಯ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜ್ಯೋತಿರ್ಲಿಂಗ. ಶ್ರಾವಣದ ಹೊಸ್ತಿಲಲ್ಲಿ ಈ ದೇವಾಲಯದ ಐತಿಹ್ಯ, ಪುರಾಣ ಪುಣ್ಯಕತೆ ತಿಳಿಯೋಣ. 

ಶ್ರೀಶೈಲದಲ್ಲಿ ಭೇಟಿ ನೀಡಬೇಕಾದ ಪ್ರಮುಖ ಸ್ಥಳವೆಂದರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ. ಶ್ರೀಶೈಲಂ ದೇವಾಲಯ ಮತ್ತು ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇಲ್ಲಿಗೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಭೇಟಿ ನೀಡುತ್ತಾರೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ.

ಮಲ್ಲಿಕಾರ್ಜುನ ಸ್ವಾಮಿ ದೇವಾಲಯವು ಆಂಧ್ರಪ್ರದೇಶದ ಶ್ರೀಶೈಲದಲ್ಲಿರುವ ನಲ್ಲಮಲ ಬೆಟ್ಟದ ತುದಿಯಲ್ಲಿದೆ, ಅದರ ಬಲಭಾಗದಲ್ಲಿ ಕೃಷ್ಣಾ ನದಿ ಹರಿಯುತ್ತದೆ. ಇದೊಂದು ಅದ್ಬುತ ದೃಶ್ಯ ಸೌಂದರ್ಯವನ್ನು ಕಟ್ಟಿಕೊಟ್ಟಿದೆ. ಈ ದೇವಾಲಯವಿರುವ ಬೆಟ್ಟವನ್ನು ಶ್ರೀ ಪರ್ವತ, ಶ್ರೀಗಿರಿ, ಶ್ರೀನಾಗಂ, ಸಿರಿಧಾನ್ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ.
 
ಈ ದೇವಾಲಯದ ಮುಖ್ಯ ದೇವರು ಮಲ್ಲಿಕಾರ್ಜುನ ಸ್ವಾಮಿಯು ಉದ್ಭವ ಲಿಂಗವಾಗಿದೆ. ದೇವಾಲಯದ ಆವರಣದೊಳಗೆ, 18 ಮಹಾಶಕ್ತಿಗಳಲ್ಲಿ ಒಬ್ಬಳಾದ ದೇವಿ ಭ್ರಮರಾಂಬ ದೇವಿ ಇದ್ದಾಳೆ. ಈ ಕಾರಣದಿಂದಾಗಿ, ಇದು ಜ್ಯೋತಿರ್ಲಿಂಗ ಮತ್ತು ಶಕ್ತಿ ಪೀಠವೂ ಆಗಿದೆ. 

ಶ್ರೀ ಶೈಲಂ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಇತಿಹಾಸ
ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಈ ದೇವಾಲಯದ ಉಲ್ಲೇಖಗಳನ್ನು 2ನೇ ಶತಮಾನದಷ್ಟು ಹಿಂದಿನ ವಿವಿಧ ಶಾಸನಗಳು ಮತ್ತು ಐತಿಹಾಸಿಕ ಸಂಶೋಧನೆಗಳಲ್ಲಿ ಕಾಣಬಹುದು. ಚಾಲುಕ್ಯರ ಸಾಮ್ರಾಜ್ಯ (ಕ್ರಿ.ಶ. 624-848), ಮತ್ತು ಕಾಕತೀಯರು (ಕ್ರಿ.ಶ. 953-1323) ಮಲ್ಲಿಕಾರ್ಜುನ ದೇವಾಲಯದ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದ್ದಾರೆ.

ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದೇವಾಲಯವನ್ನು ಬಹಳ ಹಿಂದೆಯೇ ನಿರ್ಮಿಸಲಾಗಿದ್ದರೂ, ಅದರ ಪ್ರಮುಖ ನವೀಕರಣಗಳು ವಿಜಯನಗರ ಆಳ್ವಿಕೆಯಲ್ಲಿ 1336ರಿಂದ 1678ರವರೆಗೆ ನಡೆದವು. ವಿಜಯನಗರ ಆಳ್ವಿಕೆಯಲ್ಲಿ, ಮಲ್ಲಿಕಾರ್ಜುನ ದೇವಾಲಯದ ಮುಖ ಮಂಟಪವನ್ನು ಅದರ ದಕ್ಷಿಣ ಭಾಗದಲ್ಲಿ ಗೋಪುರದೊಂದಿಗೆ ನಿರ್ಮಿಸಲಾಯಿತು.

ಜ್ಯೋತಿರ್ಲಿಂಗ ಸರಣಿ; ಭೀಮನಿಗೂ ಶಿವನಿಗೂ ಭೀಕರ ಯುದ್ಧ, ಗೆದ್ದೋರ್ಯಾರು?
 
ಶ್ರೀ ಕೃಷ್ಣದೇವರಾಯನ ಆಳ್ವಿಕೆಯಲ್ಲಿ, ಸಾಲು ಮಂಟಪಗಳು ಮತ್ತು ರಾಜಗೋಪುರಗಳನ್ನು ಸಹ ನಿರ್ಮಿಸಲಾಯಿತು. ಈ ಪ್ರಾಚೀನ ದೇವಾಲಯಕ್ಕೆ ಭವ್ಯ ವೈಭವವನ್ನು ಸೇರಿಸಲಾಯಿತು. ನಂತರ 1674ರಲ್ಲಿ, ಮರಾಠ ರಾಜ ಛತ್ರಪತಿ ಶಿವಾಜಿ ದೇವಾಲಯದ ವಿವಿಧ ನವೀಕರಣಗಳಿಗೆ ಮತ್ತು ದೇವಾಲಯದ ಉತ್ಸವದ ಪುನರುಜ್ಜೀವನಕ್ಕೆ ಕಾರಣರಾದರು.
ನಂತರ ಮೊಘಲರು, ನವಾಬರು ಮತ್ತು ಬ್ರಿಟಿಷರು ಈ ಪ್ರದೇಶವನ್ನು ವಶಪಡಿಸಿಕೊಂಡರು ಮತ್ತು ದೇವಾಲಯದ ಆಡಳಿತವೂ ಅವರ ಅಡಿಯಲ್ಲಿ ಬಂದಿತು. 1929ರಲ್ಲಿ, ದೇವಾಲಯದ ನಿರ್ವಹಣೆಗಾಗಿ ಬ್ರಿಟಿಷರು ಒಂದು ಸಮಿತಿಯನ್ನು ಸ್ಥಾಪಿಸಿದರು. ನಂತರ 1949ರಲ್ಲಿ ದೇವಸ್ಥಾನವನ್ನು ದತ್ತಿ ಇಲಾಖೆಯ ಆಡಳಿತಕ್ಕೆ ವರ್ಗಾಯಿಸಲಾಯಿತು.

ಐತಿಹ್ಯ
ವಿವಿಧ ಪ್ರಾಚೀನ ಹಿಂದೂ ಮಹಾಕಾವ್ಯಗಳು ಈ ಜ್ಯೋತಿರ್ಲಿಂಗವನ್ನು ಉಲ್ಲೇಖಿಸಿವೆ. ಉದಾಹರಣೆಗೆ, ಅಗ್ನಿ ಪುರಾಣದಲ್ಲಿ, ರಾಕ್ಷಸ ರಾಜ ಹಿರಣ್ಯಕಶ್ಯಪನು ಇಲ್ಲಿ ತಪಸ್ಸು ಮಾಡಿ ಮಲ್ಲಿಕಾರ್ಜುನ ಸ್ವಾಮಿಗೆ ತನ್ನ ಪ್ರಾರ್ಥನೆಯನ್ನು ಸಲ್ಲಿಸಿದನು ಎಂದು ಹೇಳಲಾಗಿದೆ. ಮತ್ತೊಂದು ಪವಿತ್ರ ಹಿಂದೂ ಗ್ರಂಥವಾದ ಸ್ಕಂದ ಪುರಾಣದ ಪ್ರಕಾರ, ತ್ರೇತಾಯುಗದಲ್ಲಿ ರಾಮ ಮತ್ತು ಸೀತಾದೇವಿಯು ಸಹ ಈ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ದ್ವಾಪರ ಯುಗದಲ್ಲಿ, ವನವಾಸದ ಸಮಯದಲ್ಲಿ ಅರ್ಜುನ ಮತ್ತು ಇತರ ಪಾಂಡವ ಸಹೋದರರು ಇಲ್ಲಿ ಸ್ವಲ್ಪ ಸಮಯ ಕಳೆದರು ಮತ್ತು ಪ್ರಾರ್ಥನೆ ಸಲ್ಲಿಸಿದರು. ಕಲಿಯುಗದಲ್ಲಿಯೂ ಈ ದೇವಾಲಯದ ಮಹತ್ವ ಹಲವು ಪಟ್ಟು ಹೆಚ್ಚಿದೆ. ಸಿದ್ಧ ನಾಗಾರ್ಜುನ, ಆದಿಶಂಕರ, ಶಿವಸರಣಿ ಅಕ್ಕ ಮಹಾದೇವಿ, ವೀರಶೈವ ಸಂತ ಅಲ್ಲಮಪ್ರಭು ಮತ್ತು ಇತರ ಮಹಾನ್ ಸಂತರು ಮತ್ತು ದಾರ್ಶನಿಕರು ಇಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದಾರೆ, ಭಗವಂತನನ್ನು ಆರಾಧಿಸಿದ್ದಾರೆ.

ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಹಿಂದಿನ ದಂತಕಥೆಯ ಪ್ರಕಾರ, ಶಿವನು ಮೂರು ಸ್ಥಳಗಳಲ್ಲಿ ಶಿವಲಿಂಗವಾಗಿ ಕಾಣಿಸಿಕೊಂಡಿದ್ದಾನೆ, ಅವುಗಳಲ್ಲಿ ಒಂದು ಶ್ರೀಶೈಲಂ, ಆದರೆ ಇತರ ಎರಡು ಸ್ಥಳಗಳು ಕಾಳೇಶ್ವರಂ ಮತ್ತು ಭೀಮೇಶ್ವರಂ/ದ್ರಾಕ್ಷಾರಾಮ. ಮತ್ತೊಂದು ದಂತಕಥೆಯ ಪ್ರಕಾರ, ಸಿಲಾದ ಮಹರ್ಷಿಯ ಮಗ, ಪರ್ವತನು ಪ್ರಾಯಶ್ಚಿತ್ತಕ್ಕಾಗಿ ಶಿವನನ್ನು ಪ್ರಾರ್ಥಿಸಿದನು. ಆತನ ಪ್ರಾರ್ಥನೆಯಿಂದ, ಶಿವನು ಅವನ ದೇಹದ ಮೇಲೆ ವಾಸಿಸುವ ಬಯಕೆಯನ್ನು ಪೂರೈಸಿದನು. ಆಗ ಪರ್ವತವು ಶ್ರೀ ಪರ್ವತ ಎಂಬ ಹೆಸರಿನ ಬೆಟ್ಟದ ಆಕಾರವನ್ನು ಪಡೆದುಕೊಂಡಿತು. ಶಿವನು ಶ್ರೀ ಮಲ್ಲಿಕಾರ್ಜುನ ಸ್ವಾಮಿಯಾಗಿ ಬೆಟ್ಟದ ಮೇಲೆ ತಂಗಿದನು.

ಜ್ಯೋತಿರ್ಲಿಂಗ ಸರಣಿ: 6 ಬಾರಿ ದಾಳಿಗೂ ಜಗ್ಗದೆ ನಿಂತ ಸೋಮನಾಥ, ಪುರಾಣ ಪುಣ್ಯ ಕತೆ ಕೇಳಿ..

ಮಲ್ಲಿಕಾರ್ಜುನ ಶ್ರೀಶೈಲ ಸ್ವಾಮಿ ದೇವಸ್ಥಾನದ ಉತ್ಸವಗಳು
ವರ್ಷವಿಡೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗವನ್ನು ಭೇಟಿ ಮಾಡಬಹುದಾದರೂ, ಹಬ್ಬ ಹರಿದಿನಗಳಲ್ಲಿ ಭೇಟಿ ನೀಡುವುದು ದರ್ಶನಕ್ಕೆ ಮತ್ತಷ್ಟು ಚೆಲುವನ್ನು ನೀಡುತ್ತದೆ. ಏಳು ದಿನಗಳ ಉತ್ಸವ, ಮಹಾ ಶಿವರಾತ್ರಿ ಬ್ರಹ್ಮೋತ್ಸವವು ದೇವಾಲಯದ ಅತ್ಯಂತ ಜನಪ್ರಿಯ ಉತ್ಸವಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಆಚರಿಸಲಾಗುತ್ತದೆ. 5 ದಿನಗಳ ಕಾಲ ಆಚರಿಸಲಾಗುವ ಯುಗಾದಿ ಹಬ್ಬವು ಮತ್ತೊಂದು ಜನಪ್ರಿಯ ಹಬ್ಬವಾಗಿದೆ.
ದಸರಾ ಆಚರಣೆಗಳು, ದೇವಿ ಶರನ್ನವರಾತ್ರಿಗಳು, ಇದು ಒಂಬತ್ತು ದಿನಗಳ ಕಾಲ ಆಚರಿಸಲಾಗುವ ಉತ್ಸವವಾಗಿದೆ. ಕುಂಭೋತ್ಸವ, ಸಂಕ್ರಾಂತಿ ಉತ್ಸವಗಳು, ಆರುದ್ರೋತ್ಸವಗಳು, ಕಾರ್ತೀಕ ಮಹೋತ್ಸವಗಳು, ಶ್ರವಣನಾಮೋತ್ಸವಗಳು ದೇವಾಲಯದ ಕೆಲವು ಪ್ರಮುಖ ಹಬ್ಬಗಳಾಗಿವೆ.

click me!