ಆಚಾರ್ಯ ಭವನಕ್ಕೆ ಹೊಸ ಆಯಾಮ ನೀಡಿದ ವರ್ಣಶಿಲ್ಪಿ ಶಿವಲಿಂಗಪ್ಪರಿಗೆ ಅಮೃತ ಗಳಿಗೆ!

By Suvarna NewsFirst Published Mar 27, 2022, 11:34 AM IST
Highlights

ವರ್ಣ-ಶಿಲ್ಪಿಗೆ ಅಮೃತ ಗಳಿಗೆ
ಬಹುಮುಖ ಪ್ರತಿಭೆಯ ಕಲಾವಿದ ಎಲ್‌. ಶಿವಲಿಂಗಪ್ಪ- 75
ಆಚಾರ್ಯ ಚಿತ್ರಕಲಾಭವನವನ್ನು 15 ವರ್ಷ ಮುನ್ನಡೆಸಿದ ಶಿಷ್ಯ
 

ಅಂಶಿ ಪ್ರಸನ್ನಕುಮಾರ್‌

ಮೈಸೂರಿನ ಬಹುಮುಖ ಪ್ರತಿಭೆಯ ಕಲಾವಿದ ಶಿವಲಿಂಗಪ್ಪ ಅವರಿಗೆ ಈಗ 75ರ ಹರೆಯ. ಅವರೊಬ್ಬ ವರ್ಣಚಿತ್ರಕ, ಶಿಲ್ಪಿ ಮತ್ತು ಸಾಹಿತಿ. ತೈಲವರ್ಣ, ಮರಳಚ್ಚು, ಶಿಲ್ಪ, ಥರ್ಮಾಕೋಲ್‌, ಪೋಸ್ಟರ್‌ ಕಲರ್‌, ಪಿವಿಸಿ ಪೈಪ್‌, ಸಿಮೆಂಟ್‌, ಅಕ್ರಾಲಿಕ್‌, ಸ್ಪ್ರೇ ಪೇಟಿಂಗ್‌, ಟೆರ್ರಾಕೋಟ ಬಳಸಿ ನೂರಾರು ಕಲಾಕೃತಿಗಳನ್ನು ತಯಾರಿಸಿದ್ದಾರೆ.

ಕಡುಬಡತನದ ಕುಟುಂಬದಲ್ಲಿ ಜನಿಸಿದ ಶಿವಲಿಂಗಪ್ಪ ಮನೆಮನೆಗೆ ಪತ್ರಿಕೆಗಳನ್ನು ಹಾಕುವ ಕಾಯಕ ಮಾಡುತ್ತಾ ಸರ್ಕಾರಿ ಶಾಲೆಯಲ್ಲಿ ಓದಿದವರು. ಹತ್ತನೇ ವಯಸ್ಸಿನಲ್ಲಿಯೇ ಮೈಸೂರಿನ ಶಿಲ್ಪಿ ಸಿದ್ದಲಿಂಗ ಸ್ವಾಮಿಗಳ ಗುರುಕುಲದಲ್ಲಿ ಚಿತ್ರಕಲೆಯ ಕಲಿಕೆಗೆ ಸೇರಿದವರು. ಸ್ನಾನ, ಧ್ಯಾನ ಪೂರೈಸಿ, ಬಿಳಿಪಂಚೆ, ಮೇಲು ಹೊದಿಕೆ ಧರಿಸಿ, ಮುಂಜಾನೆ ಆರರಿಂದ ಎಂಟವರೆಗೆ ಚಿತ್ರಕಲಾಭ್ಯಾಸ. ನಂತರ ಅಲ್ಲಿನ ಕೆಲಸಗಾರರಿಗೆ ಸಹಾಯ ಮಾಡುತ್ತಾ ಶಿಲ್ಪಕಲೆ ಕಲಿಯಬೇಕು ಎಂಬ ನಿಯಮ ಪಾಲಿಸಿದರು. ಹತ್ತು ವರ್ಷಗಳ ಕಲಿತ ನಂತರ ಬೆಂಗಳೂರಿನ ಬಿಇಎಂಎಲ್‌ನಲ್ಲಿ ಉದ್ಯೋಗಕ್ಕೆ ಸೇರಿದರು. ಆದರೂ ಕಲಾಭ್ಯಾಸ ನಿಲ್ಲಿಸಲು ಅವರು ಮನಸ್ಸು ಒಪ್ಪಲಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಖ್ಯಾತ ಕಲಾವಿದ ಎಂಟಿವಿ ಆಚಾರ್ಯ ಆರಂಭಿಸಿದ ಶಾಲೆಗೆ ಸೇರಿ, ದೂರ ಶಿಕ್ಷಣದ ಮೂಲಕ ವಾಣಿಜ್ಯ ಕಲೆಯಲ್ಲಿ ಡಿಪ್ಲೋಮಾ ಪಡೆದರು. ನಂತರ ಆಚಾರ್ಯ ಕಲಾಭವನದ ಭಾಗವೇ ಆಗಿ ಹೋಗಿ ವರ್ಣಚಿತ್ರ ರಚನೆಯಲ್ಲಿ ಹೆಸರು ಮಾಡಿದರು.

JLF 2022: ಯೌವನ ಉಕ್ಕುವ ಕಾವ್ಯದ ಸುತ್ತ ,ಕವಿತೆಗಿದು ಕಾಲವಲ್ಲ ಎನ್ನುವುದು ತರವಲ್ಲ

ಎಂಟಿಎ ಆಚಾರ್ಯರ ಹೆಗಲಿಗೆ ಹೆಗಲುಕೊಟ್ಟು ದುಡಿಯುತ್ತಾ ಆಚಾರ್ಯ ಕಲಾಭವನದ ಕಾರ್ಯದರ್ಶಿಯಾಗಿ ಖಾದ್ರಿ ಶಾಮಣ್ಣ, ಹಾ.ವೆಂ. ನಾಗರಾಜರಾವ್‌, ಜಯಶೀಲರಾವ್‌, ಸೀತಾರಾಂ, ಬಿ. ಶ್ರೀನಿವಾಸಮೂರ್ತಿ, ನಿಟ್ಟೂರು ಶ್ರೀನಿವಾಸರಾವ್‌, ಪ್ರೊ.ಎಸ್‌.ಕೆ. ರಾಮಚಂದ್ರರಾವ್‌, ಡಾ.ಎಚ್‌. ನರಸಿಂಹಯ್ಯ, ಜಿ. ನಾರಾಯಣ, ಡಾ.ಜಿ. ರಾಮಕೃಷ್ಣ, ಪಿ.ಆರ್‌. ತಿಪ್ಪೇಸ್ವಾಮಿ, ಎಚ್‌.ಎಸ್‌. ಇನಾಮತಿ, ಅ.ನ. ಸುಬ್ಬರಾವ್‌ ಮೊದಲಾದವರ ಸಂಪರ್ಕಕ್ಕೆ ಬಂದರು. ನೈಜಕಲೆಯಿಂದ ನವ್ಯ ಕಲೆಯವರೆಗೆ ನೂರಾರು ಚಿತ್ರ ಹಾಗೂ ಶಿಲ್ಪಗಳನ್ನು ರಚಿಸಿ, ಪ್ರದರ್ಶಿಸಿದರು. ನಂತರ ಸಾಹಿತ್ಯ ಪರಿಚಾರಕರು, ನಮ್ಮ ಕಲಾವಿದರು. ಕಲರವ, ಅರಮನೆ ಚಿತ್ರ ಪರಂಪರೆ- ಹೀಗೆ ಸಾವಿರಾರು ಲೇಖನ, ಅಂಕಣ ಬರಹಗಳನ್ನು ಬರೆದರು. ಕಲಾ ಪ್ರಾತ್ಯಕ್ಷಿಕೆ, ಶಿಬಿರ, ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡರು. ವಚನಗಳನ್ನು ಆಧರಿಸಿದ ಚಿತ್ರಗಳ ಪುಸ್ತಕ ರಚಿಸಿದರು. ಇದು ನಾಡಿನಲ್ಲಿಯೇ ಮೊದಲೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಶಿಲ್ಪಗಳ ರಚನೆಯಲ್ಲಿ ಹೊಸ ಹಾದಿ ತುಳಿದು, ಮರಳಚ್ಚು, ಥರ್ಮಾಕೋಲ್‌, ಪಿವಿಸಿ ಪೈಪ್‌- ಇಂತಹ ಸಾಮಾನ್ಯ ವಸ್ತುಗಳನ್ನು ಬಳಸಿ, ಕಲಾಜಗತ್ತಿಗೆ ಹೊಸ ಆಯಾಮ ನೀಡಲು ಪ್ರಯತ್ನಿಸಿದರು.

ಎಂಟಿವಿ ಆಚಾರ್ಯರು 1992 ರಲ್ಲಿ ನಿಧನರಾದ ನಂತರ ಆಚಾರ್ಯ ಚಿತ್ರಕಲಾ ಭವನ ಮುಚ್ಚೆ ಹೋಯಿತು ಎನ್ನುತ್ತಿದ್ದವರು ಹಾಯಿ ಮುಚ್ಚಿಸುವಂತೆ ಶಿವಲಿಂಗಪ್ಪ ಅವರೇ ಪ್ರಾಚಾರ್ಯರಾಗಿ 15 ವರ್ಷಗಳ ಕಾಲ ಮುನ್ನಡೆಸಿದರು. ಹಿಂದೆ ಚಿತ್ರಕಲಾವಿದರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಪರಿಪಾಠ ಇರಲಿಲ್ಲ. ಎಂಟಿವಿ ಆಚಾರ್ಯರ ಹೆಸರಿನಲ್ಲಿ ಇದನ್ನು ಆರಂಭಿಸಿದವರು ಶಿವಲಿಂಗಪ್ಪ. ಎಂ.ಜೆ. ಶುದ್ಧೋದನ- ಮೈಸೂರು, ಎಂ.ಎ. ಚಿಟ್ಟೆ- ಗದಗ್‌, ಪಿ.ಆರ್‌. ತಿಪ್ಪೇಸ್ವಾಮಿ- ಧರ್ಮಸ್ಥಳ, ಸಿ.ಪಿ. ನಾಕೋಡ್‌- ಬೆಳಗಾವಿ, ಆರ್‌. ಸೀತಾರಾಂ- ಶ್ರೀರಂಗಪಟ್ಟಣ, ಸುಭಾಷಿಣಿದೇವಿ- ನಂಜನಗೂಡು, ಎಂ. ರಾಮನರಸಯ್ಯ, ಜೆಎಲ್‌ಎನ್‌ ಸಿಂಹ, ಮೌಲ್ಡರ್‌ ರಾಜಣ್ಣ- ಮೈಸೂರು, ಜಿ.ಎಂ. ಹೆಗಡೆ- ಶಿರಸಿ, ಎಂ.ಬಿ. ಪಾಟೀಲ್‌- ಬಿಜಾಪುರ, ಯು.ಎಸ್‌. ವೆಂಕಟರಾಮನ್‌, ರಾಮಕೃಷ್ಣಪ್ಪ- ಬೆಂಗಳೂರು ಅವರಿಗೆ ಎಂಟಿವಿ ಆಚಾರ್ಯ ಪ್ರಶಸ್ತಿ ನೀಡಲಾಗಿದೆ. ನಂತರ ರಾಜ್ಯ ಸರ್ಕಾರ ವೆಂಕಟಪ್ಪ, ಕೆ.ಕೆ. ಹೆಬ್ಬಾರ್‌ ಹೆಸರಿನ ಪ್ರಶಸ್ತಿ ಸ್ಥಾಪಿಸಿತು.

ನಿರ್ಲಿಪ್ತ ಊರಿನ ಅಚ್ಚರಿಯ ಮನುಷ್ಯ, ನಾಗೇಶ ಹೆಗಡೆ ಕುರಿತು ಹೀಗೊಂದು ನುಡಿನಮನ

ಬೆಮೆಲ್‌ ಕಾರ್ಖಾನೆಯ ಉದ್ಯೋಗದಿಂದ ನಿವೃತ್ತಿಯಾದ ನಂತರ ಹಾಗೂ ಆರೋಗ್ಯದ ಸಮಸ್ಯೆಯಿಂದಾಗಿ ಹುಟ್ಟೂರಿಗೆ ಹಿಂದಿರುಗಿದ ಶಿವಲಿಂಗಪ್ಪ ಅವರು ರಾಮಾನುಜ ರಸ್ತೆಯಲ್ಲಿ ಮೈಸೂರು ಆರ್ಟ್‌ ಗ್ಯಾಲರಿ ಆರಂಭಿಸಿದರು. ಅಲ್ಲಿ ಉಚಿತವಾಗಿ ಕಲಾ ಪ್ರದರ್ಶನಕ್ಕೆ ಅವಕಾಸ ಮಾಡಿಕೊಡುತ್ತಿದ್ದಾರೆ. ಅಲ್ಲದೇ ಪ್ರತಿ ತಿಂಗಳ ಎರಡನೇ ಶನಿವಾರ ಸಾಧಕರೊಂದಿಗೆ ಸಂವಾದ ಮೂಲಕ ಎಲೆಮರೆಯ ಕಾಯಿಯಂತಿರುವ ಪ್ರತಿಭಾವಂತರಿಗೆ ವೇದಿಕೆ ಒದಗಿಸಿ, ಗೌರವಿಸುತ್ತಾ ಬರುತ್ತಿದ್ದಾರೆ.

ಚಿತ್ರ ರಚನೆಗಳಲ್ಲಿ ಕಲಾ ವ್ಯಾಕರಣ, ಬಣ್ಣಗಳ ಬಳಕೆ, ದ್ವಿಮಾನ, ತ್ರಿಮಾನವನ್ನು ರೂಪಿಸುವ ಕ್ರಮ, ನೆಳಲು ಬೆಳಕಿನಾಟ, ಸಂಯೋಜನೆ ಮುಖ್ಯ. ಸಮಕಾಲೀನ ಸ್ಪಂದನೆಯನ್ನು ಬಿಂಬಿಸುವುದು ಸಹ ಮುಖ್ಯ ಎನ್ನುತ್ತಾರೆ ಶಿವಲಿಂಗಪ್ಪ.

ಈವರೆಗೆ 26 ಕೃತಿಗಳನ್ನು ರಚಿಸಿದ್ದಾರೆ. ನಾಲ್ಕು ಕೃತಿಗಳನ್ನು ಸಂಪಾದಿಸಿದ್ದಾರೆ. ಇವರ ಬದುಕು- ಬರಹ ಕುರಿತು ಎರಡು ಕೃತಿಗಳು ಪ್ರಕಟವಾಗಿವೆ. ಇವರ ಬಗ್ಗೆ ಎಂ.ಫಿಲ್‌ ಮಹಾಪ್ರಬಂಧ ಕೂಡ ಪ್ರಕಟವಾಗಿದೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪ್ರಶಸ್ತಿ ಪಡೆದಿದ್ದಾರೆ. ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾಗಿದ್ದಾರೆ.

click me!