ರಾಜ್ಯದಲ್ಲಿ ಕೊರೋನಾ 2ನೇ ಅಲೆ: ಕ್ಲಾಸ್, ಪರೀಕ್ಷೆ ನಡೆಸುವ ಬಗ್ಗೆ ಡಿಸಿಎಂ ಮಹತ್ವದ ಹೇಳಿಕೆ

By Suvarna NewsFirst Published Mar 23, 2021, 4:05 PM IST
Highlights

ದೇಶದಲ್ಲಿ ಕೊರೊನಾ 2ನೇ ಅಲೆ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಏಪ್ರಿಲ್​ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ನಿರ್ಧರಿಸಿದೆ. ಇನ್ನೂ ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಡಿಸಿಎಂ ಮಹತ್ವದ ಸ್ಪಷ್ಟನೆಯೊಂದನ್ನು ಕೊಟ್ಟಿದ್ದಾರೆ.

ಬೆಂಗಳೂರು, (ಮಾ.23): ಕರ್ನಾಟಕದಲ್ಲೂ ಸಹ ಮತ್ತೆ ಕೊರೋನಾ ಪಾಸಿಟಿವ್ ಕೇಸ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಕೊರೋನಾ 2ನೇ ಅಲೆ ಭೀತಿ ಶುರುವಾಗಿದೆ.

ಆದ್ದರಿಂದ ಶಾಲೆ ಹಾಗೂ ಪರೀಕ್ಷೆಗಳನ್ನ ನಡೆಸಬೇಕೋ, ಬೇಡ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇನ್ನೂ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಸಹ ಗೊಂದಲದಲ್ಲಿದ್ದಾರೆ. ಇದಕ್ಕೆ  ಡಿಸಿಎಂ ಅಶ್ವತ್ಥನಾರಾಯಣ ಅವರು ಪ್ರತಿಕ್ರಿಯಿಸಿದ್ದು, ಆಫ್‌ಲೈನ್‌ ತರಗತಿ ನಿಲ್ಲದು, ನಿಗದಿತ ಪರೀಕ್ಷೆಗಳಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬೇಸಿಗೆ ರಜೆ, ಪರೀಕ್ಷೆ ಇಲ್ಲದೇ ಪಾಸ್ ಸುದ್ದಿಗೆ ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್

ಕೋವಿಡ್‌ ಎರಡನೇ ಅಲೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಉನ್ನತ ಶಿಕ್ಷಣ ವಿಭಾಗದ ಪರಿಸ್ಥಿತಿಯನ್ನು ಅವಲೋಕನ ನಡೆಸಿದ ಅವರು, ವಿವಿಧ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳು ನಡೆಯಲಿವೆ. ಸರಕಾರ ಹೊರಡಿಸಿರುವ ಮಾದರಿ ವೇಳಾಪಟ್ಟಿಯಂತೆ ವಿಶ್ವವಿದ್ಯಾಲಯಗಳು ನಿಗದಿಪಡಿಸಿರುವ ವೇಳಾಪಟ್ಟಿ ಅನುಸಾರ ಹಾಲಿ ನಡೆಯುತ್ತಿರುವ ಆಫ್‌ಲೈನ್‌ ತರಗತಿಗಳನ್ನು ಹಾಗೆಯೇ ಮುಂದುವರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಹಾಗೂ ಮಹಾವಿದ್ಯಾಲಯಗಳಿಗೆ ಸೂಚನೆ ನೀಡಲಾಯಿತು ಎಂದು ಡಿಸಿಎಂ ಅವರು ಮಾಹಿತಿ ನೀಡಿದರು.

ಕೊರೋನಾ ಎರಡನೇ ಅಲೆ ಶುರುವಾಗಿದ್ದರಿಂದ ಮತ್ತೆ ಲಾಕ್‌ಡೌನ್ ಆಗುವ ಸಾಧ್ಯತೆಗಳಿದ್ದು, ತರಗತಿ, ಪರೀಕ್ಷೆಗಳ ಮೇಲೆ ಪರಿಣಾಮ ಆಗಲಿದೆ ಎನ್ನುವ ಆತಂಕ ಮನೆಮಾಡಿತ್ತು. ಆದ್ರೆ, ಇದೀಗ ಡಿಸಿಎಂ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ.

ಇನ್ನು ಒಂದು ವೇಳೆ ರಾಜ್ಯದಲ್ಲಿ ಪಾಸಿಟಿವ್ ಕೇಸ್‌ಗಳು ಪ್ರತಿನಿತ್ಯ ಹೆಚ್ಚಾಗುತ್ತಾ ಹೋದರೆ ಸರ್ಕಾರ ಯಾವ ಕ್ರಮಕೈಗೊಳ್ಳುತ್ತೋ ಗೊತ್ತಿಲ್ಲ. ಹಾಗಾಗಿ ಪೊಷಕರು ಮತ್ತು ವಿದ್ಯಾರ್ಥಿಗಳು ಮಾನಸಿಕವಾಗಿ ಸಿದ್ಧರಿರಬೇಕು.

click me!