ಹುಬ್ಬಳ್ಳಿ-ಧಾರವಾಡದಲ್ಲಿ ಕನ್ನಡ ನಾಮಫಲಕ ಯಾವಾಗ?

By Web DeskFirst Published Nov 14, 2019, 7:37 AM IST
Highlights

ಆದೇಶ ಹೊರಬಿದ್ದು ಎರಡು ವಾರ ಕಳೆದರೂ ಆಂಗ್ಲ, ಹಿಂದಿ ಭಾಷೆಯಲ್ಲೇ ಫಲಕಗಳು | ಹಲವೆಡೆ ಕೊಂಚವೂ ಕನ್ನಡವಿಲ್ಲದೆ ರಾರಾಜಿಸ್ತಿವೆ ಫಲಕಗಳು|

ಹುಬ್ಬಳ್ಳಿ[ನ.14]: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿರುವ ಅಂಗಡಿ ಮುಂಗಟ್ಟುಗಳ ನಾಮಫಲಕ ಕನ್ನಡ ಕಡ್ಡಾಯ ಎಂದು ಘೋಷಣೆ ಮಾಡಲಾಗಿರುವ ಆದೇಶ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಹಲವೆಡೆ ಹಿಂದಿ, ಇಂಗ್ಲಿಷ್‌ನಲ್ಲಿರುವ ಫಲಕಗಳಲ್ಲಿ ಕನ್ನಡ ಅಳವಡಿಕೆಯಾಗಿಲ್ಲ. ಕನ್ನಡ ಪ್ರಧಾನ ಭಾಷೆಯಾಗಿ ಬಳಕೆಯಾಗಬೇಕು ಎಂಬ ಉದ್ದೇಶದ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಕನ್ನಡದಲ್ಲೆ ನಾಮಫಲಕ ಇರಬೇಕೆಂಬ ಸುತ್ತೋಲೆ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪರಿಣಾಮಕಾರಿಯಾಗಿ ಇನ್ನೂ ಅನುಷ್ಠಾನವಾಗಿಲ್ಲ.

ಕನ್ನಡವೇ ಪ್ರಧಾನವಾಗಿರುವ ಹುಬ್ಬಳ್ಳಿಯಲ್ಲೂ ಹಲವು ಪ್ರತಿಷ್ಠಿತ ಶಾಪಿಂಗ್ ಮಾಲ್‌ಗಳು ಸೇರಿದಂತೆ ಸಣ್ಣಪುಟ್ಟ ಅಂಗಡಿಗಳ ನಾಮಫಲಕವೂ ಇಂಗ್ಲಿಷ್-ಹಿಂದಿ-ಉರ್ದುವಿನಲ್ಲಿದೆ. ಬೇರೆ ಭಾಷೆಗಳ ಜೊತೆಗೆ ಈ ಫಲಕಗಳಲ್ಲಿ ಕನ್ನಡ ಪ್ರಧಾನವಾಗಿ ಅಲ್ಲದಿದ್ದರೂ ಕನಿಷ್ಠವೂ ರಾಜ್ಯದ ಮಾತೃಭಾಷೆಯಲ್ಲಿಲ್ಲ. ಎರಡು ವಾರದೊಳಗೆ ಕನ್ನಡದಲ್ಲಿಯೆ ಫಲಕಗಳು ಇರುವಂತೆನೋಡಿ ಕೊಳ್ಳಲಾಗುವುದು ಎಂದು ಪಾಲಿಕೆ ತಿಳಿಸಿದ್ದರೂ ಕಾರ್ಯಗತವಾಗಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯ ಸರ್ಕಾರದ ಆದೇಶದಂತೆ ಅ. 29 ರಂದು ಮಹಾನಗರದಲ್ಲಿನ ಎಲ್ಲ ಉದ್ದಿಮೆ, ಹೋಟೆಲ್, ಲಾಡ್ಜ್,ಕಲ್ಯಾಣಮಂಟಪಗಳ ಮಾಲೀಕರು ಹಾಗೂ ಎಲ್ಲವ್ಯಾಪಾರಸ್ಥರು ಕೆಎಂಸಿ ಕಾಯ್ದೆ 1976 ರ ಅನ್ವಯ ಕಲಂ 342, 353, 354ರ ಅನ್ವಯ ತಮ್ಮ ಉದ್ದಿಮೆಯ ನಾಮಫಲಕವನ್ನು ಕಡ್ಡಾಯವಾಗಿ ಕನ್ನಡದಲ್ಲಿ ಅಳವಡಿಸಿ ಪ್ರದರ್ಶಿಸಬೇಕು ಎಂದು ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದರು. ಆದರೆ, ಇಂದಿಗೂ ನಗರದ ಕೊಪ್ಪಿಕರ ರಸ್ತೆ, ದುರ್ಗದಬೈಲು, ಜನತಾ ಬಜಾರ್, ವಿದ್ಯಾನಗರ, ಮರಾಠಾ ಗಲ್ಲಿ ಸೇರಿದಂತೆ ಹಲವು ಅಂಗಡಿಗಳು ಕೇವಲ ಹಿಂದಿ, ಇಂಗ್ಲಿಷ್‌ನಲ್ಲಿ ತಮ್ಮ ನಾಮಫಲಕ ಅಳವಡಿಸಿವೆ. ಸಣ್ಣಪುಟ್ಟ ಅಂಗಡಿಗಳಲ್ಲದೆ, ಶಾಪಿಂಗ್ ಮಾಲ್,ಮಳಿಗೆಗಳ ಸಂಕೀರ್ಣಗಳ ನಾಮಫಲಕ ಇಂಗ್ಲಿಷ್‌ನಲ್ಲಿವೆ.

ಸರ್ಕಾರದ ಆದೇಶದಂತೆ ಮಹಾನಗರದಲ್ಲೂಸುತ್ತೋಲೆ ಹೊರಡಿಸಿದ್ದೇವೆ. ನಗರದಲ್ಲಿರುವ ಇಂಗ್ಲಿಷ್, ಹಿಂದಿ ಬೋರ್ಡ್‌ಗಳ ನಾಮಫಲಕದಲ್ಲಿ ಕನ್ನಡಪ್ರ ಧಾನವಾಗಿರುವಂತೆ ಹಾಗೂ ಶೇ. 60 ರಷ್ಟು ಕನ್ನಡ ಇರುವಂತೆ ಈಗಾಗಲೆ ಅಂಗಡಿಕಾರರಿಗೆ ಮನವರಿಕೆ ಮಾಡಿಕೊಡಲಾಗಿದೆ. ಹಲವು ಅಂಗಡಿಕಾರರಿಗೆ ನೊಟೀಸ್‌ ಕೂಡ ನೀಡಲಾಗಿದೆ. ಈ ಕುರಿತು ಶೀಘ್ರವೆ ಪ್ರಗತಿಪರಿಶೀಲನೆ ಸಭೆ ಕರೆದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಹೇಳಿದರು.

ಕನ್ನಡಪರ ಸಂಘಟನೆಗಳೆಲ್ಲಿ?:

ಅಂಗಡಿ ಮುಂಗಟ್ಟುಗಳ ನಾಮಫಲಕ ಕನ್ನಡದಲ್ಲಿ ಇರುವಂತೆ ಸರ್ಕಾರ ಆದೇಶಿಸಬೇಕು ಎಂದು ಹೋರಾಡಿದ್ದ ಕನ್ನಡ ಸಂಘಟನೆಗಳು ಈಗ ಎಲ್ಲಿವೆ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ. ಸರ್ಕಾರವೆ ಕನ್ನಡವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವ ಈ ವೇಳೆ ಈ ಕುರಿತು ಜಾಗೃತಿ, ವ್ಯಾಪಕ ಚಳವಳಿ ನಡೆಸುವ ಬದಲು ಈ ಬಗ್ಗೆ ಚಕಾರ ಎತ್ತುತ್ತಿಲ್ಲಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಅಂಗಡಿ ಮುಂಗಟ್ಟುಗಳ ನಾಮಫಲ ಕಕನ್ನಡದಲ್ಲಿಯೆ ಇರಬೇಕು. ಕನ್ನಡ ಸಂಘಟನೆಗಳು ಸುಮ್ಮನಿಲ್ಲ, ಈ ಕುರಿತು ಹೋರಾಟ ನಡೆಸುತ್ತೇವೆ. ಖಾಸಗಿ ಮಾತ್ರವಲ್ಲದೆ, ಸರ್ಕಾರಿ ಕೆಲ ಕಚೇರಿಗಳು ಕೂಡ ಮಲ್ಟಿನ್ಯಾಷನಲ್‌ ಕಂಪನಿಗಳ ಜಾಹೀರಾತಿನ ಮೇಲೆ ತಮ್ಮ ಕಚೇರಿಯ ಹೆಸರು ಬರೆಸಿಕೊಂಡಿರುವುದು ಖಂಡನೀಯ ಎಂದು ಕನ್ನಡಪರ ಹೋರಾಟಗಾರ ಮಹೇಶ ಪತ್ತಾರ ಅವರು ಹೇಳಿದ್ದಾರೆ. 

ರಾಜ್ಯ ಸರ್ಕಾರದ ಸೂಚನೆಯಂತೆ ನಾಮಫಲಕದಲ್ಲಿ ಕನ್ನಡ ಕಡ್ಡಾಯಎಂದು ಆದೇಶಿಸಲಾಗಿದ್ದು, ಈಗಾಗಲೆಅಂಗಡಿಕಾರರಿಗೆ ಈ ಕುರಿತು ನೋಟಿಸ್ ಜಾರಿಮಾಡಲಾಗಿದೆ. 16 ರ ಬಳಿಕ ಈ ಬಗ್ಗೆ ಪರಿಶೀಲನಾಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತರು ಡಾ. ಸುರೇಶ ಇಟ್ನಾಳ ಅವರು ಹೇಳಿದ್ದಾರೆ. 

click me!